ವಿಜಯಪುರ: ಜಲ ಸಂಪನ್ಮೂಲ ಇಲಾಖೆ ಅಧೀನದಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಆಲಮಟ್ಟಿಗೆ ವಾಸ್ತವಿಕವಾಗಿ ಹಾಗೂ ಸಂಪೂರ್ಣವಾಗಿ ಸ್ಥಳಾಂತರ ಆಗುವವರೆಗೂ ಹೋರಾಟದಿಂದ ವಿರಮಿಸುವುದಿಲ್ಲ ಎಂದು ಉತ್ತರ ಕರ್ನಾಟಕ ರೈತ ಅಭಿವೃದ್ಧಿ ಸಂಘದ ಅಧ್ಯಕ್ಷ ಯಾಸೀನ್ ಜವಳಿ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಾಸೀನ್ ಜವಳಿ, 2018ರಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಕೆಲವು ಕಚೇರಿಗಳ ಸ್ಥಳಾಂತರ ಮಾಡುವ ಆದೇಶ ಹೊರಡಿಸಿದ್ದು ಕಾಗದದಲ್ಲಿ ಮಾತ್ರ ಇತ್ತು. ಅದರಲ್ಲಿ ಆಲಮಟ್ಟಿಗೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸ್ಥಳಾಂತರವೂ ಸೇರಿತ್ತು ಎಂದು ವಿವರಿಸಿದರು.
ಸರ್ಕಾರ ಹೊರಡಿಸಿದ ಆದೇಶ ಪಾಲನೆ ಆಗದ ಕಾರಣ ನಾನು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಸರ್ಕಾರ ನ್ಯಾಯಾಲಯದ ಪ್ರಕರಣಕ್ಕೆ ಸಂಬಂ ಧಿಂತೆ ಅಫಿಡವಿಟ್ ಸಲ್ಲಿಸುವ ಹೆದರಿಕೆಯಿಂದ ವಾರದಲ್ಲಿ ಕಚೇರಿ ಸ್ಥಳಾಂತರಕ್ಕೆ ವಾರದ ಗಡುವು ನೀಡಿ ತುರ್ತು ಆದೇಶ ನೀಡಲಾಗಿದೆ ಎಂದು ಸರ್ಕಾರ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ವರ್ತನೆಗೆ ಹರಿಹಾಯ್ದರು.
ಸರ್ಕಾರ ಉತ್ತರ ಕರ್ನಾಟಕಕ್ಕೆ ಕಚೇರಿಗಳ ಸ್ಥಳಾಂತರ ಆದೇಶದಂತೆ ಹಂಪಿ ಪುರಾತತ್ವ, ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ನಿರ್ದೇಶಕರ ಕಚೇರಿ, ಬೆಳಗಾವಿಗೆ ಸಕ್ಕರೆ ನಿರ್ದೇಶಕರು ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಚೇರಿ ಸೇರಿದಂತೆ ಕೆಲವೇ ಕೆಲ ಕಚೇರಿಗಳು ಮಾತ್ರ ಹಾಗೂ ಭಾಗಶಃ ಸ್ಥಳಾಂತರ ಆಗಿವೆ ಎಂದು ದೂರಿದರು.
Related Articles
ಬೆಂಗಳೂರು ಕೇಂದ್ರಿತ ಕಚೇರಿ, ಆಡಳಿತ ಶಾಹಿ ವ್ಯವಸ್ಥೆಯಿಂದ ನಿರ್ಲಕ್ಷದಿಂದಾಗಿ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಹಿಂದುಳಿದಿದೆ. ಇದನ್ನು ಮನಗಂಡು ನಾನು ಜನತೆಯ ಪರವಾಗಿ ಪಾದಯಾತ್ರೆ ಮಾಡಿದ್ದೆ. ಆದರೆ ಸದರಿ ಕಚೇರಿಯನ್ನು ನಾನೇ ಸ್ಥಳಾಂತರ ಮಾಡಿಸಿದೆ ಎಂದು ಭವಿಷ್ಯದಲ್ಲಿ ಕೆಲವು ರಾಜಕೀಯ ನಾಯಕರು ತಮ್ಮನ್ನು ತಾವು ಬೆನ್ನು ತಟ್ಟಿಕೊಂಡರೂ ಆಚ್ಚರಿ ಇಲ್ಲ ಎಂದು ಯಾಸೀನ್ ವ್ಯಂಗ್ಯವಾಡಿದರು.
ಪಾದಯಾತ್ರೆ ಮೂಲಕ ನರಗುಂದ, ನವಲಗುಂದ ಭಾಗದ ರೈತರು ನನ್ನನ್ನು ಭೇಟಿ ಮಾಡಿ ಇಂಥ ಹೋರಾಟದಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿಲ್ಲ. ಕಾನೂನು ಹೋರಾಟ ಮಾಡಿ ಎಂದು ಸಲಹೆ ನೀಡಿದ್ದರಿಂದ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿದ್ದೆ ಎಂದು ಜವಳಿ ವಿವರಿಸಿದರು.
ಸೋಮವಾರದಿಂದ ಆಲಮಟ್ಟಿಗೆ ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಸ್ಥಳಾಂತರ ಪ್ರಕ್ರಿಯೆ ಅವಲೋಕಿಸುವ ಕೆಲಸ ಮಾಡುತ್ತೇವೆ. ವಾಸ್ತವವಾಗಿ ಎಲ್ಲ ಕಛೇರಿಗಳು ಸಿಬ್ಬಂದಿ ಸಮೇತ ಸ್ಥಳಾಂತರ ಆಗದಿದ್ದರೆ ಮುಂದಿನ ಹೋರಾಟದ ಕುರಿತು ನಿರ್ಧರಿಸುತ್ತೇವೆ ಎಂದರು.
ವಕೀಲ ಇನಾಯತ್ ರೋಜೆವಾಲೆ ಮಾತನಾಡಿ, ಪ್ರಭಾಕರ ಎಂಬ ಅಧಿಕಾರಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರ ಮಾಡಿದ್ದಾಗಿ ಹೈಕೋರ್ಟಿಗೆ ಸುಳ್ಳು ಮಾಹಿತಿಯ ಅಫಿಡವಿಡ್ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಹೇಳಿದರು.
ಆಲಮಟ್ಟಿಗೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಸ್ಥಳಾಂತರ ಅಗಿದ್ದರೂ ಕಚೇರಿ ಸ್ಥಳಾಂತರ ಆಗಿದೆ ಎಂದು ಸುಳ್ಳು ಮಾಹಿತಿ, ದಾಖಲೆ ನೀಡಲಾಗಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೂ ದಾಖಲೆ ಅವಲೋಕಿಸುವ ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.
ಇದೀಗ ನ್ಯಾಯಾಲಯಕ್ಕೆ ವಾಸ್ತವಿಕ ಅಫಿಡವಿಟ್ ಸಲ್ಲಿಸುವ ಅನಿವಾರ್ಯತೆಯ ಭೀತಿಯಿಂದಾಗಿ ಜಲಸಂಪನ್ಮೂಲ ಇಲಾಖೆ ಅಧಿಕಾರಿ ಮಂಜುನಾಥ ಎಂಬವರ ಮೂಲಕ ನಾವು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಉಲ್ಲೇಖೀಸಿ ವಾರದಲ್ಲಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಸ್ಥಳಾಂತರಕ್ಕೆ ತುರ್ತು ಅದೇಶ ಮಾಡಿದ್ದಾರೆ ಎಂದು ದೂರಿದರು. ಪ್ರೇಮ್ ಚಲವಾದಿ ಸೇರಿದಂತೆ ಇತರರು ಇದ್ದರು.