Advertisement

ಜಾವಡೇಕರ್‌ ಮೀಟಿಂಗ್‌ ಇಂದಿನಿಂದ; ಸರಣಿ ಸಭೆಗೆ ವೇದಿಕೆ ಸಜ್ಜು

09:57 AM Sep 04, 2017 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಆಡಳಿತಾರೂಢ ಕಾಂಗ್ರೆಸ್‌ಗೆ ಸೂಕ್ತ ತಿರುಗೇಟು ನೀಡಲು ಪ್ರಮುಖ ಪ್ರತಿಪಕ್ಷ ಬಿಜೆಪಿ ಮುಂದಾಗಿದ್ದು, ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ನೇತೃತ್ವದಲ್ಲಿ ಸೋಮವಾರ ಚುನಾವಣಾ ಸಿದ್ಧತೆಗೆ ಅಧಿಕೃತ ಚಾಲನೆ ನೀಡಲಿದೆ.

Advertisement

ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಕಾಶ್‌ ಜಾವಡೇಕರ್‌ ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರ ಕೋರ್‌ ಕಮಿಟಿ, ರಾಜಕೀಯ ವ್ಯವಹಾರಗಳ ಸಮಿತಿ ಜತೆ ಸಭೆ ನಡೆಸಲಿದ್ದಾರೆ.  ಬಿಜೆಪಿ ರಾಜ್ಯ ಘಟಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಪಡೆದಿರುವ ಜಾವಡೇಕರ್‌, ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಜತೆ ಈಗಾಗಲೇ ಒಂದು ಸುತ್ತು ಸಭೆ ನಡೆಸಿದ್ದಾರೆ. ಶಾ ಅವರೂ ಕೆಲವು ಸೂಚನೆಗಳನ್ನು ನೀಡಿದ್ದು, ಅದರಂತೆ ಜಾವಡೇಕರ್‌ ಅವರು ಮೊದಲು ಪಕ್ಷದ ಕೋರ್‌ ಕಮಿಟಿ ಸದಸ್ಯರ ಜತೆ ಚರ್ಚಿಸಿ ರಾಜ್ಯ ರಾಜಕಾರಣದ ಕುರಿತು ಸಮಗ್ರ ಮಾಹಿತಿ ಪಡೆಯಲಿದ್ದಾರೆ. ಇದಾದ ಬಳಿಕ ರಾಜಕೀಯ ವ್ಯವಹಾರಗಳ ಸಮಿತಿ ಜತೆಗೂ ಮಾತುಕತೆ ನಡೆಸಲಿದ್ದಾರೆ.

ಈ ವೇಳೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಯಾವ ರೀತಿಯ ಕಾರ್ಯತಂತ್ರ ರೂಪಿಸಬೇಕು? ಸಂಘಟನೆಯನ್ನು ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳೇನು? ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಲಿರುವ ಅವರು, ಅದನ್ನು ಆಧರಿಸಿ ರಣತಂತ್ರಗಳನ್ನು ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. 

ಕೆಲಸ ಸುಲಭಗೊಳಿಸಿದ ಭಿನ್ನಮತ ಶಮನ:
ಭಿನ್ನಮತೀಯ ಚಟುವಟಿಕೆ ನಡೆಸಿದವರಿಗೆ ಇನ್ನುಮುಂದೆ ಪಕ್ಷದಲ್ಲಿ ಅವಕಾಶವಿಲ್ಲ ಎಂಬ ಅಮಿತ್‌ ಶಾ ಅವರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸಂಪೂರ್ಣ ಸ್ತಬ್ಧಗೊಂಡಿದೆ. ಯಾವೊಬ್ಬ ನಾಯಕರೂ ಧ್ವನಿ ಎತ್ತುತ್ತಿಲ್ಲ. ಹೀಗಾಗಿ ಎಲ್ಲರನ್ನೂ ಒಟ್ಟಾಗಿ ಕುಳ್ಳಿರಿಸಿ ಚುನಾವಣಾ ರಣತಂತ್ರಗಳನ್ನು ರೂಪಿಸುವ ಜಾವಡೇಕರ್‌ ಅವರ ಕೆಲಸವನ್ನು ಸುಲಭಗೊಳಿಸಿದೆ ಎನ್ನಲಾಗಿದೆ.  ಅಮಿತ್‌ ಶಾ ಅವರು ರಾಜ್ಯಕ್ಕೆ ಬಂದಿದ್ದಾಗ ನೀಡಿದ ಸೂಚನೆಗಳನ್ನು ಆಧರಿಸಿ ಪಕ್ಷ ಕೈಗೊಂಡಿರುವ ಕಾರ್ಯಕ್ರಮ, ಹೋರಾಟಗಳ ಬಗ್ಗೆ ಜಾವಡೇಕರ್‌ ಅವರಿಗೆ ವಿವರ ನೀಡಲು ಸಿದ್ಧತೆ ನಡೆಸಿರುವ ರಾಜ್ಯ ನಾಯಕರು, ಚುನಾವಣೆ ದೃಷ್ಟಿಯಲ್ಲಿ ಮುಂದಿನ ಹೋರಾಟಗಳ ಬಗ್ಗೆಯೂ ಕೆಲವೊಂದು ಯೋಜನೆಗಳನ್ನು ರೂಪಿಸಿರುವ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ. ಇದನ್ನು ಆಧರಿಸಿ ಹೋರಾಟದ ರೂಪುರೇಷೆಗಳನ್ನು ಸಿದ್ಧಗೊಳಿಸುವ ಕಾರ್ಯ ಸೋಮವಾರದ ಸಭೆಯಲ್ಲಿ ಆಗಲಿದೆ ಎಂದು ತಿಳಿದುಬಂದಿದೆ.

ಜಿಲ್ಲಾ ಘಟಕಗಳ ಬಗ್ಗೆಯೂ ಗಮನ: ಪ್ರಕಾಶ್‌ ಜಾವಡೇಕರ್‌ ಅವರು ಚುನಾವಣಾ ಸಿದ್ಧತೆಗಳ ಬಗ್ಗೆ ಕೇವಲ ರಾಜ್ಯ ಘಟಕದ ಜತೆ ಮಾತುಕತೆ ನಡೆಸುವುದರ ಜತೆಗೆ ಜಿಲ್ಲಾ ಘಟಕಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಈಗಾಗಲೇ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ತರಿಸಿಕೊಂಡಿರುವ ಅವರು, ಸೋಮವಾರ ಬೆಂಗಳೂರು ಮಹಾನಗರ, ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಪದಾಧಿಕಾರಿಗಳ ಜತೆಗೂ ಮಾತುಕತೆ ನಡೆಸುತ್ತಾರೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುವಾಗ ಇತರೆ ಜಿಲ್ಲಾ ಘಟಕಗಳೊಂದಿಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next