Advertisement

ಮಧ್ಯಂತರ ಚುನಾವಣೆ ಕನವರಿಕೆ: “ಕೈ”ಕೊಟ್ಟ ಲೆಕ್ಕಾಚಾರ

12:05 PM Jul 28, 2021 | Team Udayavani |

ಬೆಂಗಳೂರು:ಯಡಿಯೂರಪ್ಪ ನಿರ್ಗಮನ ಬೆನ್ನಲ್ಲೇ ಮಧ್ಯಂತರ ಚುನಾವಣೆ ಕನವರಿಕೆಯಲ್ಲಿದ್ದ ಕಾಂಗ್ರೆಸ್‌ಗೆ ಬಸವರಾಜ ಬೊಮ್ಮಾಯಿ ಆಯ್ಕೆ ಅನಿರೀಕ್ಷಿತವಾಗಿದ್ದು ಲೆಕ್ಕಾಚಾರ ತಪ್ಪಿದಂತಾಗಿದೆ. ಯಡಿಯೂರಪ್ಪ ಅವರು ಇಲ್ಲದೆ ಯಾರೇ ಮುಖ್ಯಮಂತ್ರಿಯಾದರೂ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ. ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾಗಬಹುದು ಎಂದು ಕಾರ್ಯತಂತ್ರಕ್ಕೆ ಮುಂದಾಗಿದ್ದ ಕಾಂಗ್ರೆಸ್‌ ಸ್ವಲ್ಪ ಯೋಚಿಸುವಂತಾಗಿದೆ.

Advertisement

ಇದನ್ನೂ ಓದಿ: ಕಂದಾಹಾರ್ ಜನಪ್ರಿಯ ಹಾಸ್ಯ ನಟನ ಬರ್ಬರ ಹತ್ಯೆ: ತಾಲಿಬಾನ್ ವಿರುದ್ಧ ಆಕ್ರೋಶ

ವಲಸಿಗರಿಗೆ ಸಚಿವಗಿರಿ ಹಾಗೂ ಬಯಸಿದ ಖಾತೆ ಸಿಗದೆ ಅತೃಪ್ತಿ ಎದ್ದರೆ ಅವರನ್ನು ಮತ್ತೆ ಕಾಂಗ್ರೆಸ್‌ಗೆ ಕರೆ ತರುವಯೋಚನೆಮಾಡಲಾಗಿತ್ತು.ಆದರೆ, ಬಸವರಾಜ ಬೊಮ್ಮಾಯಿ ಆಯ್ಕೆಯಿಂದ ಘರ್‌ವಾಪ್ಸಿ ಪ್ರಯತ್ನ ಫ‌ಲಿಸುತ್ತಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ, ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪೂರ್ವಾಶ್ರಮದ ಒಡನಾಡಿ.

ಈಗಲೂ ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ ನಡುವೆ ಉತ್ತಮ ಬಾಂಧವ್ಯ ಇದೆ. ಹೀಗಾಗಿ, ಕಾಂಗ್ರೆಸ್‌ ಅಥವಾ ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ಬಿಜೆಪಿ ಅಥವಾ ಹೊಸ ಮುಖ್ಯಮಂತ್ರಿ ವಿರುದ್ಧ ಮುಗಿಬೀಳಬಹುದು ಎಂಬುದು ಕಾದು ನೋಡಬೇಕಾಗಿದೆ. ಲಿಂಗಾಯತ ಸಮುದಾಯದ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವುದರಿಂದ ಪಕ್ಷದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ.

ಬದಲಾದ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಮುಂದೆ ನಡೆಯಲಿರುವ ಬೆಳವಣಿಗೆಗಳ ಆಧಾರದ ಮೇಲೆ ಕಾಂಗ್ರೆಸ್‌ ಸಹ ಕಾರ್ಯತಂತ್ರ ರೂಪಿಸಿ ಹೆಜ್ಜೆ ಇಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

Advertisement

ಜೆಡಿಎಸ್‌ನಲ್ಲೂ ಚರ್ಚೆ: ಮತ್ತೂಂದೆಡೆ ಯಡಿಯೂ ರಪ್ಪ ಅವರ ನಿರ್ಗಮನದಿಂದ ಜೆಡಿಎಸ್‌ ವಲಯದಲ್ಲೂ ಆಸೆಚಿಗುರೊಡೆದಿತ್ತು. ಯಡಿಯೂರಪ್ಪ ಅವರು ಬಯಸಿದಂತೆ ಹೊಸ ಮುಖ್ಯಮಂತ್ರಿ ಆಗಲಿಲ್ಲ ಎಂದರೆ ಅವರ ಬೆಂಬಲಿಗರು ಸಿಡಿದೇಳಬಹುದು. ಆಗ ಬಿಜೆಪಿಗೆ ಜೆಡಿ ಎಸ್‌ ಸಖ್ಯ ಬೇಕಾಗಬಹುದು ಎಂಬ ಲೆಕ್ಕಾಚಾರವಿತ್ತು. ವಿಧಾನಸಭೆಯಲ್ಲಿ ಜೆಡಿಎಸ್‌ 32 ಸಂಖ್ಯಾಬಲ ಹೊಂದಿದ್ದು,ಅನಿವಾರ್ಯತೆಎದುರಾದರೆಮತ್ತೂಂದು ರಾಜಕೀಯ ಧ್ರುವೀಕರಣವೂ ನಡೆಯಬಹುದು.

ಸರ್ಕಾರಕ್ಕೆ ಆತಂಕ ಎದುರಾದರೆ ಜೆಡಿಎಸ್‌ ಬೆಂಬಲ ಪಡೆಯಬಹುದು ಎಂದು ಜೆಡಿಎಸ್‌ನ ಶಾಸಕರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಬಿಜೆಪಿ ಸರ್ಕಾರಕ್ಕೆ ಆತಂಕ ಎದುರಾದರೆ ಜೆಡಿಎಸ್‌ ಬೆಂಬಲ ಗಳಿಸುವ ನಿಟ್ಟಿನಲ್ಲಿ ಬಿಜೆಪಿಯ ನಾಯಕರೊಬ್ಬರು ಕುಮಾರಸ್ವಾಮಿ ಜತೆ ಮಾತನಾಡಿದ್ದರು. ಎಚ್‌.ಡಿ.ರೇವಣ್ಣ ಅವರು ದೆಹಲಿಯಲ್ಲಿ ಆ ಬಿಜೆಪಿ ನಾಯಕರ ಜತೆ ಚರ್ಚಿಸಿದ್ದರು ಎಂಬ ಮಾತುಗಳು ಇವೆ. ಆದರೆ, ಅಚ್ಚರಿ ಬೆಳವಣಿಗೆಯಲ್ಲಿ ವಿದ್ಯಮಾನ ಬದಲಾಗಿದೆ. ಯಡಿಯೂರಪ್ಪ ಅವರ ಕೈ ಮೇಲಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಜೆಡಿಎಸ್‌ ಸಹ ಇದೀಗ ತನ್ನಕಾರ್ಯತಂತ್ರ ಬದಲಿಸಿಕೊಳ್ಳಬೇಕಾಗಿದೆ.

ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿಯವರ ಜತೆಯೂ ಬಸವರಾಜ ಬೊಮ್ಮಾಯಿ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಹೀಗಾಗಿ, ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್‌ನ ಹೋರಾಟ ಯಾವ ಸ್ವರೂಪದಲ್ಲಿ ಇರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕೈ, ತೆನೆ ನಾಯಕರೊಂದಿಗೆ ಉತ್ತಮ ಬಾಂಧವ್ಯ
ಬಿಜೆಪಿ ಸರ್ಕಾರ ಅವಧಿ ಪೂರೈಸಲು ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಜತೆ ಉತ್ತಮ ಸಂಬಂಧ ಹೊಂದಿರುವ ಬಸವರಾಜ  ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಇದೂ ಒಂದು ರೀತಿಯಲ್ಲಿ ಬಿಜೆಪಿಯ ಕಾರ್ಯತಂತ್ರವೇ ಎಂದೂ ಹೇಳಲಾಗುತ್ತಿದೆ. ಯಡಿಯೂರಪ್ಪ ಅವರ ಪರ ಅನುಕಂಪ ತೋರಿ ರಾಜಕೀಯ ಲಾಭ ಪಡೆದುಕೊಳ್ಳಲು ಯೋಚಿಸುತ್ತಿದ್ದ ಕಾಂಗ್ರೆಸ್‌ ಪ್ರಯತ್ನ ಸಫ‌ಲವಾಗದಂತೆ ನೋಡಿಕೊಂಡಿದ್ದಾರೆ ಎಂಬ ಮಾತುಗಳು ಇವೆ.

*ಎಸ್.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next