ಈಗ ಕಾಲ ಬದಲಾಗಿದೆ. ವಯಸ್ಸು, ಅನುಭವ ಅನ್ನೋದು ಇಲ್ಲಿ ಮುಖ್ಯವಾಗಲ್ಲ. ಸ್ಪರ್ಧಿಯನ್ನು ಮಣಿಸಲು ನೀವು ಎಂಥ ಯೋಚನೆಗಳನ್ನು ಹೊಂದಿದ್ದೀರಿ, ಅವುಗಳನ್ನು ಎಷ್ಟು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುತ್ತೀರಿ ಎಂಬುದಷ್ಟೇ ಮುಖ್ಯವಾಗುತ್ತದೆ…
ಇವತ್ತಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕುದುರೆಯ ಮೇಲೆ ಕುಳಿತ ಜಾಕಿಗಳೇ ಆಗಿದ್ದಾರೆ. ಎಲ್ಲರಿಗೂ ಗುರಿತಲುಪುವ ಹುಮ್ಮಸ್ಸು ಮತ್ತು ಉತ್ಸಾಹ. ಎಲ್ಲರಿಗೂ ಅವಸರ. ಆದರೆ ಇಲ್ಲಿ ಕುದುರೆಯ ಮೇಲೆ ಕುಳಿತು, ಆ ಬಿರುಗಾಳಿಯ ವೇಗವನ್ನು ಬ್ಯಾಲೆನ್ಸ್ ಮಾಡಲು ಗೊತ್ತಿದ್ದರೆ ಮಾತ್ರ ಸವಾರಿ ಮಾಡಲು ಸಾಧ್ಯ. ಅಪ್ಪಿತಪ್ಪಿ ಮೈಮರೆತರೆ ಮುಗಿಯಿತು. ಹಿಂದೆ ಇದ್ದವರು, ನೀವು ಮೇಲೇಳುವ ಮುನ್ನವೇ ನಿಮ್ಮನ್ನು ಹಿಂದಿಕ್ಕಿ, ಓಡಿಬಿಡುತ್ತಾ ರೆ. ಹಾಗಾಗಿ, ಯಾವ ಸಂದರ್ಭದಲ್ಲೂ ವೇಗ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು.
ಕುದುರೆಯ ಬೆನ್ನೇರಲು ಯೋಜನೆಗಳನ್ನು ರೂಪಿಸುತ್ತೀರಿ ಎಂದಾ ದರೆ, ಅವು ನೂತನವೇ ಆಗಿರಬೇಕು. ಇನ್ನೊಬ್ಬರ ತಲೆಯಲ್ಲಿ ಆ ಯೋಚನೆ ಹೊಳೆಯುವ ಮುನ್ನವೇ ಅದನ್ನು ಕಾರ್ಯರೂಪಕ್ಕೆ ತಂದಿರಬೇಕು. ಹಳೆಯ ಯೋಜನೆಗಳು, ಚಿಂತನೆಗಳು, ನಿಧಾನಗತಿಯ ಕಾರ್ಯ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಈಗ, ಕಾಲ ಬದಲಾಗಿದೆ. ವಯಸ್ಸು, ಅನುಭವ ಅನ್ನೋದು ಈಗ ಮುಖ್ಯವಾಗೋಲ್ಲ. ಸ್ಪರ್ಧಿಯನ್ನು ಮಣಿಸಲು ಆ ಸಮಯದಲ್ಲಿ ಎಂಥ ಯೋಚನೆ ಹಾಗೂ ಕಾರ್ಯತಂತ್ರಗಳನ್ನು ಹೊಂದಿದ್ದೀರಿ, ಅವುಗಳನ್ನು ಎಷ್ಟು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುತ್ತೀರಿ ಎಂಬುದಷ್ಟೇ ಮುಖ್ಯವಾಗುತ್ತದೆ.
ನಿಮಗೊಂದು ಕಥೆ ಹೇಳ್ತೀನಿ. ಅದೊಂದು ದೊಡ್ಡ ಕಾರು ತಯಾರಿಕಾ ಘಟಕ. ಹೊಸ ಕಾರು ಮಾರುಕಟ್ಟೆಗೆ ಬರಲು ಸಿದಟಛಿಗೊಳ್ಳುತ್ತಿದೆ. ಅದನ್ನು ಉತ್ಪಾದನಾ ಘಟಕದಿಂದ ಆಚೆಗೆ ತರಲು ಮುಂದಾದಾಗ, ಮುಂಬಾಗಿಲಿನ ಎತ್ತರ, ಕಾರಿನ ಎತ್ತರಕ್ಕಿಂತಲೂ ಒಂದು ಇಂಚಿನಷ್ಟು ಕಡಿಮೆ ಇತ್ತು. ಹೊರತೆಗೆಯಲು ಸಾಧ್ಯವಾಗಲಿಲ್ಲ. ಬಾಗಿಲಿನ ಬಳಿಯೇ ನಿಂತು ಚರ್ಚೆ ಶುರುಮಾಡಿದ ಆ ಘಟಕದ ಮ್ಯಾನೇಜರ್ ಗಳು, ಕಾರನ್ನು ಹೊರತೆಗೆಯುವುದು ಹೇಗೆಂದು ಬಹಳ ತಲೆ ಕೆಡಿಸಿಕೊಳ್ಳುತ್ತಾರೆ.
ಅಲ್ಲಿದ್ದ ಕಾವಲುಗಾರ ನಡುವೆ ಬಾಯಿ ಹಾಕಿ, ಏನೋ ಹೇಳಲು ಮುಂದಾಗುತ್ತಾನೆ. ಆದರೆ, ಮ್ಯಾನೇಜರ್ಗಳು ಅವನ ಮಾತು ಕೇಳಿಸಿಕೊಳ್ಳುವ ವ್ಯವಧಾನ ತೋರದೇ ಸುಮ್ಮನಾಗಿಸುತ್ತಾರೆ. ಕೊನೆಗೆ, ಈ ಕಾರು ಹಾಗೂ ಮುಂದೆ ಉತ್ಪಾದನೆ ಮಾಡುವ ಎಲ್ಲಾ ಕಾರುಗಳ ಎತ್ತರವನ್ನೂ, ಒಂದು ಇಂಚಿನಷ್ಟು ಕಡಿಮೆ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಇದನ್ನೆಲ್ಲಾ ಗಮನಿಸುತ್ತಿದ್ದ ಕಾವಲುಗಾರ, ಗಟ್ಟಿ ಮನಸ್ಸು ಮಾಡಿ- “ಸರ್, ನಿಮ್ಮ ನಿರ್ಧಾರವನ್ನು ಬದಲಿಸಿ. ಕಾರಿನ ಎತ್ತರವನ್ನು ತಗ್ಗಿಸಬೇಕಾದ ಅವಶ್ಯಕತೆಯಿಲ್ಲ.
ಕಾರಿನ ಟೈರ್ನಲ್ಲಿನ ಅರ್ಧದಷ್ಟು ಗಾಳಿಯನ್ನು ಹೊರತೆಗೆದರೆ, ಕಾರಿನ ಎತ್ತರ ತಾನಾಗಿಯೇ ತಗ್ಗಿ ಸಲೀಸಾಗಿ ಆಚೆ ಬರುತ್ತದೆ. ಆನಂತರ ಗಾಳಿ ತುಂಬಿಸಿದರಾಯಿತು’ ಅಂತ ಐಡಿಯಾ ಕೊಟ್ಟ. ಕಾರು ಆಗ ಆಚೆ ಬಂತು. ಇಲ್ಲಿ ಆತ ಮಾಡುವ ಕೆಲಸ, ಕೆಲಸದ ಜಾಗ, ಹೊಂದಿರುವ ಪದವಿ, ಇದ್ಯಾವುದೂ ಗಣನೆಗೆ ಬರುವುದಿಲ್ಲ. ಆ ಸಂದರ್ಭಕ್ಕೆ ನೀಡುವ ಐಡಿಯಾಗಳು ಮುಖ್ಯ. ಇವತ್ತಿನ ಕಾರ್ಪೊರೇಟ್ ಜಗತ್ತು ಕೇಳುತ್ತಿರುವುದು ಇದನ್ನೇ. ಹೀಗಾಗಿ, ಅದೇ ಹಳೆಯ ಚಿಂತನೆಗಳೊಂದಿಗೆ ಬದುಕುತ್ತಿದ್ದರೆ ಔಟ್ ಡೇಟೆಡ್ ಆಗಿಬಿಡುತ್ತೀರಿ. ಅಪ್ಡೇಟ್ ಅಗಿ. ಯಶಸ್ಸಿನ ಕೊಯಿಲು ಕೊಯ್ಯಬೇಕೆಂದರೆ ಹೊಸ ಚಿಂತನೆಗಳ ಬೀಜ ಬಿತ್ತಲೇಬೇಕು.
* ಸುಂಡ್ರಳ್ಳಿ ಶ್ರೀನಿವಾಸಮೂರ್ತಿ