Advertisement

ಕಿರುಕುಳ ಆರೋಪದ ಅಸಲಿಯತ್ತು; ಫಿಕ್ಸರ್‌ಗಳ ಕರಾಮತ್ತು

04:32 AM May 08, 2019 | mahesh |

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ‌ (ನ್ಯಾ| ರಂಜನ್‌ ಗೊಗೊಯ್‌) ವಿರುದ್ಧವೇ ಹೊರಿಸಿದ್ದ ಲೈಂಗಿಕ ಕಿರುಕುಳದ ಆರೋಪವನ್ನು ಸುಪ್ರೀಂ ಕೋರ್ಟಿನ ಮೂವರು ನ್ಯಾಯಮೂರ್ತಿಗಳೇ ಇದ್ದ ಆಂತರಿಕ ತನಿಖಾ ಸಮಿತಿ ತಿರಸ್ಕರಿಸಿದ ಹೊತ್ತಿನಲ್ಲಿ ಅಷ್ಟೇ ಗಂಭೀರ ವಿಚಾರವೊಂದರ ಕುರಿತಾಗಿಯೂ ವಿಚಾರ ಮಾಡಲು ಸಕಾಲವೆನಿಸುತ್ತಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಕೆಲವು ‘ಫಿಕ್ಸರ್‌’ಗಳು ಸಕ್ರಿಯರಾಗಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯೇ.

Advertisement

ಮುಖ್ಯ ನ್ಯಾಯಮೂರ್ತಿಗಳ‌ ಮೇಲಿನ ಆರೋಪವು ಅವರ ವಿರುದ್ಧ ನಡೆಯುತ್ತಿರುವ ಸಂಚಿನ ಒಂದು ಭಾಗವೇ ಎಂಬುದರ ಕುರಿತಾಗಿ ತನಿಖೆ ಮಾಡಲು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌ ಅವರನ್ನು ನೇಮಿಸಲಾಗಿತ್ತು. ನ್ಯಾಯವಾದಿ ಉತ್ಸವ್‌ ಸಿಂಗ್‌ ಬೈನ್ಸ್‌ ಅವರು ಸಲ್ಲಿಸಿದ ಅಫಿದವಿತ್‌ ಸಹಿತ ಹಲವು ವಿಚಾರಗಳನ್ನು ಪರಿಶೀಲಿಸುವಂತೆ ಅವರಿಗೆ ಮನವಿ ಮಾಡಲಾಗಿತ್ತು. ಮುಖ್ಯ ನ್ಯಾಯಮೂರ್ತಿಗಳ‌ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳದ ದೂರು ಸುಳ್ಳು. ಅದು ನ್ಯಾ| ಗೊಗೊಯ್‌ ವಿರುದ್ಧ ನ್ಯಾಯಾಲಯದ ಕೆಲವು ಮಾಜಿ ನೌಕರರು, ಪ್ರಭಾವಶಾಲಿ ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಸಂಚು ಎಂದು ಬೈನ್ಸ್‌ ಅವರು ಆರೋಪಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಗೊಗೊಯ್‌ ಅವರ ವಿರುದ್ಧ ಮಾಡಿದ್ದ ಆರೋಪಗಳನ್ನು ಗಮನಿಸಿದರೆ ವಕೀಲರ ಸಮುದಾಯ ಹಾಗೂ ದೇಶದ ಜನರು ಕೂಡ ನಿವೃತ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ವರ್ಮಾ ಅವರಿಗೆ ಋಣಿಯಾಗಿರಬೇಕಾಗುತ್ತದೆ. ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳ‌ ದುರ್ನಡತೆ ವಿಚಾರವನ್ನು ಬಗೆಹರಿಸಲು ಆಂತರಿಕ ವ್ಯವಸ್ಥೆಯೊಂದನ್ನು ಜಾರಿಗೆ ತಂದ ಶ್ರೇಯ ಅವರಿಗೆ ಸಲ್ಲುತ್ತದೆ. 1977ರಲ್ಲೇ ಅವರು ‘ರಿಸ್ಟೇಟ್ಮೆಂಟ್ ಆಫ್ ವ್ಯಾಲ್ಯೂಸ್‌ ಆಫ್ ಜ್ಯುಡಿಶಿಯಲ್ ಲೈಫ್’ ಎಂಬ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದ್ದರು. ನ್ಯಾಯಮೂರ್ತಿಗಳ‌ ವರ್ತನೆ ಹೇಗಿರಬೇಕು ಎಂಬುದಕ್ಕೆ ಅದು ಮಾರ್ಗದರ್ಶಿಯಾಗಿತ್ತು. ಮುಂದೆ 1999ರಲ್ಲಿ ಇಂತಹ ದೂರುಗಳ ವಿಲೇವಾರಿಗಾಗಿ ಆಂತರಿಕ ವ್ಯವಸ್ಥೆಯೊಂದನ್ನು ನ್ಯಾಯಾಂಗವೇ ಜಾರಿಗೆ ತಂದಿತು. ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳ ವಿರುದ್ಧದ ಗಂಭೀರ ಪ್ರಕರಣಗಳ ವಿಚಾರದಲ್ಲಿ ಸಂಸತ್ತು ಮಾತ್ರ ವ್ಯವಹರಿಸಬಹುದು, ವಾಗ್ಧಂಡನೆ ವಿಧಿಸಬಹುದು ಎಂಬುದು ಅಲ್ಲಿಯವರೆಗಿನ ನಂಬಿಕೆಯಾಗಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ವಿರುದ್ಧ ವ್ಯಕ್ತವಾದ ಆರೋಪಗಳ ತನಿಖೆಗೂ ಇದೇ ಆಂತರಿಕ ವಿಧಾನವನ್ನು ಅನುಸರಿಸಲಾಯಿತು. ಇಲ್ಲದಿದ್ದರೆ ಈ ವಿಚಾರ ಸಂಸತ್ತಿನ ಸದನ ಸಮಿತಿಗೆ ವರ್ಗಾವಣೆಯಾಗುತ್ತಿತ್ತು. ಅಲ್ಲಿ ರಾಜಕೀಯ ಪ್ರವೇಶವೂ ಆಗುತ್ತಿತ್ತು ಎಂಬುದು ಸ್ಪಷ್ಟ. ಈ ಹಿಂದೆ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್‌ ಮಿಶ್ರಾ ಅವರ ವಿರುದ್ಧ ವಾಗ್ಧಂಡನೆಯ ಪ್ರಯತ್ನವೊಂದು 2018ರ ಏಪ್ರಿಲ್ ತಿಂಗಳಲ್ಲಿ ನಡೆದಿರುವುದನ್ನು ನಾವು ಮರೆಯುವಂತಿಲ್ಲ. ಕಾಂಗ್ರೆಸ್‌ ವರಿಷ್ಠರ ಕುಟುಂಬಕ್ಕೆ ಸಂಬಂಧಿಸಿದವೂ ಸಹಿತ ಕೆಲವು ಸೂಕ್ಷ್ಮ ಪ್ರಕರಣಗಳನ್ನು ನ್ಯಾಯಮೂರ್ತಿಗಳು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುವಂತೆ ಮಾಡುವ ಉದ್ದೇಶದಿಂದ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ನೇತೃತ್ವದಲ್ಲಿ ವಾಗ್ಧಂಡನೆಯ ಪ್ರಯತ್ನ ನಡೆದಿತ್ತೆಂಬುದು ಗಮನಾರ್ಹ.

ಇನ್ನೊಂದು ವಿಚಾರವೆಂದರೆ ನ್ಯಾ| ಗೊಗೊಯ್‌ ಅವರು ತಪ್ಪಿತಸ್ಥರೆಂದು ಭಾವಿಸಿದ್ದ ಜನರಿಗೆ ಈ ತೀರ್ಪಿನಿಂದ ನಿರಾಶೆಯಾಗಿದ್ದೀತು. ನ್ಯಾಯಾಲಯದ ವಜಾಗೊಂಡ ಸಿಬ್ಬಂದಿಯೊಬ್ಬರು ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹೊರಿಸಿರುವ ಆರೋಪ ಎಷ್ಟು ಸಾಚಾ ಎಂಬುದನ್ನೂ ಗಮನಿಸಬೇಕು. ತನಿಖೆಗೆ ನೇಮಕಗೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಆಂತರಿಕ ಸಮಿತಿ ಜಸ್ಟೀಸ್‌ ಎಸ್‌.ಎ. ಬೋಬ್ಡೆ ಹಾಗೂ ಇಬ್ಬರು ಮಹಿಳಾ ನ್ಯಾಯಮೂರ್ತಿಗಳಾದ ಇಂದೂ ಮಲೊØೕತ್ರಾ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡಿತ್ತು. ಇಬ್ಬರು ಮಹಿಳೆಯರ ಉಪಸ್ಥಿತಿ ನ್ಯಾಯಪೀಠ ನಿಷ್ಪಕ್ಷಪಾತವಾಗಿ ವರ್ತಿಸುವುದೇ ಎಂಬ ಅನುಮಾನವನ್ನು ಬಗೆಹರಿಸಲು ಶಕ್ತವಾಗಿತ್ತು. ದೇಶದಲ್ಲಿ ಪುರುಷರು ಮಹಿಳೆಯರನ್ನು ಪಕ್ಷಪಾತದಿಂದ ಕಾಣುತ್ತಾರೆ, ಅವರನ್ನು ತುಳಿಯಲು ನೋಡುತ್ತಾರೆ ಎಂಬ ಪ್ರಗತಿಪರ ಚಿಂತನೆಯ ಕೂಗು ಇದೆ. ಆದರೆ, ಈಗ ಸುಪ್ರೀಂ ಕೋರ್ಟ್‌ನಲ್ಲಿ ಗರಿಷ್ಠ ಸಂಖ್ಯೆಯ ಮಹಿಳಾ ನ್ಯಾಯಮೂರ್ತಿಗಳಿದ್ದಾರೆ – ಆರ್‌. ಭಾನುಮತಿ, ಇಂದು ಮಲೊØೕತ್ರಾ ಹಾಗೂ ಇಂದಿರಾ ಬ್ಯಾನರ್ಜಿ.

ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಕೂಡ ನ್ಯಾಯಮೂರ್ತಿಗಳ ವಿರುದ್ಧದ ಆರೋಪದ ಪ್ರಕರಣಗಳಲ್ಲಿ ವಾಗ್ಧಂಡನೆಯ ಹೊರತಾಗಿ ಬೇರೆ ಶಿಸ್ತುಕ್ರಮಗಳಿಲ್ಲ. ಅಲ್ಲಿಯೂ ನ್ಯಾಯಮೂರ್ತಿಗಳ ನಡತೆ ಹೇಗಿರಬೇಕೆಂಬುದಕ್ಕೆ ಸಂಹಿತೆ ಇದೆ. ಅಮೆರಿಕನ್ನರಿಗಿಂತ ಹೆಚ್ಚು ಪ್ರಗತೀಶೀಲರು ಎಂದು ನಾವು ಬೆನ್ನು ತಟ್ಟಿಕೊಳ್ಳಲು ಅಡ್ಡಿಯಿಲ್ಲ. ಕಳೆದ ವರ್ಷ ಅಮೆರಿಕದ ಸೆನೆಟ್ ಜಸ್ಟೀಸ್‌ ಬ್ರೆಟ್ ಕೆವನಾಟ್ ಅವರನ್ನು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಮೂರು ಸಹಿತ ಹಲವು ಪ್ರಕರಣಗಳು ಇರುವ ಹೊರತಾಗಿಯೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಿಸಲು ಸಮ್ಮತಿಸಿತು. ಈ ಪ್ರಕರಣಗಳ ತನಿಖೆಗೆ ನೇಮಕಗೊಂಡಿದ್ದ ಸಮಿತಿ, ಸುಪ್ರೀಂ ಕೋರ್ಟ್‌ಗೆ ನೇಮಕಗೊಳ್ಳುತ್ತಿರುವ ನ್ಯಾಯಮೂರ್ತಿಗಳ ವಿರುದ್ಧ ತನಿಖೆಕೈಗೊಳ್ಳಲು ತನಗೆ ಅಧಿಕಾರವಿಲ್ಲವೆಂದು ಹೇಳಿ, ಪ್ರಕರಣದಿಂದ ಹಿಂದೆ ಸರಿಯಿತು. 1991ರಲ್ಲಿ ಅಮೆರಿಕದ ಎರಡನೇ ಆಫ್ರೋ-ಅಮೆರಿಕನ್‌ ನ್ಯಾಯಾಧೀಶರಾಗಿದ್ದ ಕ್ಲೆರೆನ್ಸ್‌ ಥಾಮಸ್‌ ಅವರ ವಿರುದ್ಧ ಇಂತಹ ಗಂಭೀರ ಆರೋಪವಿತ್ತು. ಬ್ರಾಂಡೈಸ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದ ಆನಿಟಾ ಹಿಲ್ (ಅವರೂ ಆಫ್ರೋ-ಅಮೆರಿಕನ್‌) ಅವರು ಜಸ್ಟೀಸ್‌ ಬ್ರೆಟ್ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದರು. ಅಮೆರಿಕದ ಸೆನೆಟ್ ಬ್ರೆಟ್ ಅವರ ನೇಮಕಾತಿಯನ್ನು ಅಂಗೀಕರಿಸಿತು. ಅವರು ಸಂಪ್ರದಾಯವಾದಿ ನ್ಯಾಯಮೂರ್ತಿಯಾಗಿ ಹೆಸರಾಗಿದ್ದರು. ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್ ಅವರನ್ನು ಹೊರತುಪಡಿಸಿದರೆ ಅವರೇ ಹಿರಿಯ ನ್ಯಾಯಮೂರ್ತಿಯೂ ಆಗಿದ್ದರು.

Advertisement

ಮಹಿಳೆಯ ದಿಟ್ಟತನ

ಮುಖ್ಯ ನ್ಯಾಯಮೂರ್ತಿ ಗೊಗೊಯ್‌ ವಿರುದ್ಧ ದೂರಿತ್ತ ಮಹಿಳೆಯೂ ‘ಲೈಂಗಿಕವಾಗಿ ದುರ್ಬಲ ವರ್ಗದ’ ಸಾಮಾನ್ಯ ಸದಸ್ಯೆಯೇನಲ್ಲ. ಆಕೆಯಲ್ಲಿ ಧೈರ್ಯ, ಮನೋಬಲ ಇದ್ದಂತಿದೆ. ಬಾಹ್ಯ ಬೆಂಬಲವೂ ಇರುವಂತಿದೆ. ಆಂತರಿಕ ಸಮಿತಿಯ ಸದಸ್ಯರು ಯಾರಾಗಬೇಕು ಎಂಬುದನ್ನು ಅವರು ಅಕ್ಷರಶಃ ನಿರ್ದೇಶಿಸಿದರು. ಹಿರಿಯ ನ್ಯಾಯಮೂರ್ತಿ ಎನ್‌.ವಿ. ರಮಣ್‌ ಅವರನ್ನು ಸಮಿತಿಯನ್ನು ಸೇರಿಸಿಕೊಳ್ಳುವುದನ್ನು ಈ ಮಹಿಳೆ ಆರಂಭದಲ್ಲೇ ವಿರೋಧಿಸಿದರು. ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಅವರು ಆಗಾಗ ಭೇಟಿ ನೀಡುತ್ತಾರೆ ಎಂಬುದೇ ಇದಕ್ಕೆ ಕಾರಣವಾಗಿತ್ತು. ಹೀಗಾಗಿ ಜಸ್ಟೀಸ್‌ ರಮಣ್‌ ಅವರು ನ್ಯಾಯಪೀಠದಲ್ಲಿ ಕೂರಲು ನಿರಾಕರಿಸಿದರು. ವಕೀಲರು ಪ್ರತಿನಿಧಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಈ ಮಹಿಳೆ ನ್ಯಾಯಪೀಠದ ವಿಚಾರಣೆಯಿಂದಲೂ ಹೊರನಡೆದರು. ಒಬ್ಬ ಮುನ್ಸಿಫ್ ಅಥವಾ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಅವರನ್ನು ಎದುರು ಹಾಕಿಕೊಳ್ಳಲು ದೂರುದಾರರು ಅಥವಾ ವಕೀಲರು ಹಿಂದೇಟು ಹಾಕುತ್ತಿರುವ ಸನ್ನಿವೇಶದಲ್ಲಿ ಈ ಮಹಿಳೆ ಭಾರತದ ಮುಖ್ಯ ನ್ಯಾಯಮೂರ್ತಿಗಳ ಜತೆಗೇ ಸಂಘರ್ಷಕ್ಕೆ ಇಳಿದರು!

ಬೆಂಕಿಯೊಂದಿಗೆ ಸರಸ
ಸುಪ್ರೀಂ ಕೋರ್ಟ್‌ ನಲ್ಲಿರುವ ‘ಫಿಕ್ಸರ್‌’ಗಳ ಕುರಿತು ಮಾತನಾಡುವಾಗ ನ್ಯಾ| ಅರುಣ್‌ ಮಿಶ್ರಾ ಅವರು ಇತ್ತೀಚೆಗೆ ಆಡಿದ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ‘ಶ್ರೀಮಂತರು ಹಾಗೂ ಬಲಾಡ್ಯರು ನ್ಯಾಯಾಲಯವನ್ನು ತಮ್ಮಿಚ್ಛೆಯಂತೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅವರು ಬೆಂಕಿಯೊಂದಿಗೆ ಸರಸ ಆಡುತ್ತಿದ್ದಾರೆ’ ಎಂದಿದ್ದರು. ಶ್ರೀಮಂತರು ಹಾಗೂ ಪ್ರಭಾವಿಗಳು ಅತಿ ಹೆಚ್ಚು ಫೀಸ್‌ ಪಡೆಯುವ ವಕೀಲರನ್ನೇ ನೇಮಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ದಾಷ್ಟ್ಯರ್ದ ಮೂಲಕವೇ ಕೆಲವಾದರೂ ನ್ಯಾಯಮೂರ್ತಿಗಳ‌ನ್ನು ‘ನೋಡಿಕೊಳ್ಳುವಲ್ಲಿ’ ಯಶಸ್ವಿಯಾಗುತ್ತಾರೆ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ಮೂಡಿದೆ. ಬೆಂಗಳೂರಿನ ಉದ್ಯಮಿಯೊಬ್ಬರು ನನ್ನನ್ನು ಭೇಟಿಯಾಗಿದ್ದರು. ಅವರು ತಮಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳೂ ತಮ್ಮ ವಿರುದ್ಧ ತೀರ್ಪು ನೀಡಲಾರರು ಎಂದು ಬಹಿರಂಗವಾಗಿಯೇ ಹೇಳುತ್ತಿದ್ದರು. ಮುಂದೆ ನ್ಯಾಯಾಲಯವೂ ಅವರ ಪ್ರಕರಣವನ್ನು ವಜಾಗೊಳಿಸಿತು! ನ್ಯಾಯಮೂರ್ತಿಗಳ‌ ಘನತೆಯ ವಿಚಾರದಲ್ಲಿ ಕೆಲವು ನ್ಯಾಯವಾದಿಗಳೇ ಜನರ ಮನಸ್ಸನ್ನು ಎಲ್ಲ ಹಂತಗಳಲ್ಲೂ ಕಲುಷಿತಗೊಳಿಸುತ್ತಿದ್ದಾರೆ. ನ್ಯಾಯಾಂಗದ ಅಧಿಕಾರಿಗಳ ವಿರುದ್ಧ ಹೇರಳವಾಗಿ ಬರುವ ಬೇನಾಮಿ ದೂರುಗಳನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳ‌ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಅದೇ ರೀತಿ, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ‌ನ್ನೂ ಗುರಿಯಾಗಿಸಿ ಆರೋಪಗಳನ್ನು ಮಾಡಲಾಗುತ್ತದೆ.

ಕಹಿಗುಳಿಗೆ
ನಮ್ಮದು ಮಧ್ಯವರ್ತಿಗಳ ದೇಶ. ಇದಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯವೂ ಹೊರತಾಗಿಲ್ಲ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ರಾಜೀವ್‌ ಗಾಂಧಿ ಅವರು ಹೇಳಿದಂತೆ ರಾಜಕಾರಣದಲ್ಲಿ ಕೆಲವು ಪ್ರಖ್ಯಾತ ಫಿಕ್ಸರ್‌ಗಳು ಹಾಗೂ ಪವರ್‌ ಬ್ರೋಕರ್‌ಗಳು ಇರುತ್ತಾರೆ. ಅವರು ಮಂತ್ರಿಗಳಿಗೂ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಸರಕಾರಗಳ ರಚನೆ ಮತ್ತು ಕೆಡವಲು ಶಕ್ತರಾಗಿರುತ್ತಾರೆ. ವಿಧಾನಸೌಧದಲ್ಲಿ ಮಂತ್ರಿಗಳ ಅಥವಾ ಸಂಸತ್ತಿನಲ್ಲಿ ಕೇಂದ್ರ ಸಚಿವರ ಕೋಣೆಗಳಿಗೂ ಅವರಿಗೆ ಸುಲಭವಾಗಿ ಪ್ರವೇಶ ಸಿಗುತ್ತದೆ. ಹಲವು ಕಾರ್ಪೊರೇಟ್ ಕಂಪನಿಗಳು ಮಂತ್ರಿಗಳ ಮೇಲೆ ಪ್ರಭಾವ ಬೀರಲೆಂದೇ ಕೆಲವರನ್ನು ನೇಮಿಸಿಕೊಳ್ಳುತ್ತವೆ. ಇತ್ತೀಚೆಗೆ ರಿಲಯನ್ಸ್‌ ಸಂಸ್ಥೆಯ ಉದ್ಯಮಿ ಅನಿಲ್ ಅಂಬಾನಿ ಅವರು ಟೆಲಿಕಾಂ ಕಂಪನಿಯೊಂದಕ್ಕೆ ಬಾಕಿ ಇರಿಸಿಕೊಂಡಿದ್ದ ದೊಡ್ಡ ಮೊತ್ತವನ್ನು ಪಾವತಿಸುವಂತೆ ನಿರ್ದೇಶನ ನೀಡಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಹಣದ ಮೂಲಕ ಏನನ್ನಾದರೂ ಖರೀದಿಸಬಹುದು ಎಂಬ ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಈ ಮೂಲಕ ಕಹಿಗುಳಿಗೆ ತಿನ್ನಿಸಿದೆ. ಜಸ್ಟೀಸ್‌ ಎ.ಕೆ. ಪಟ್ನಾಯಕ್‌ ಅವರ ನೇತೃತ್ವದ ಸಮಿತಿಯ ತನಿಖೆ ಕುರಿತು ತೀವ್ರ ಕುತೂಹಲವಿದೆ. ಆಂತರಿಕ ಸಮಿತಿ ಈ ಸೂಕ್ಷ್ಮ ವಿಚಾರದಲ್ಲಿ ತನ್ನ ಕೆಲಸವನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನೂ ನೋಡಬೇಕಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ವಿರುದ್ಧದ ಆರೋಪಗಳ ತನಿಖೆಗೂ ಆಂತರಿಕ ವಿಧಾನವನ್ನು ಅನುಸರಿಸಲಾಯಿತು. ಇಲ್ಲದಿದ್ದರೆ ಈ ವಿಚಾರ ಸದನ ಸಮಿತಿಗೆ ವರ್ಗಾವಣೆ ಆಗುತ್ತಿತ್ತು. ಅಲ್ಲಿ ರಾಜಕೀಯ ಪ್ರವೇಶವೂ ಆಗುತ್ತಿತ್ತು ಎಂಬುದು ಸ್ಪಷ್ಟ.

Advertisement

Udayavani is now on Telegram. Click here to join our channel and stay updated with the latest news.

Next