Advertisement

ಭಲೇ ಭಗವದ್ಗೀತೆ 

02:38 AM Nov 17, 2018 | |

ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ ಭಾರತೀಯರಿಗಿತ್ತ ದೀಪಾವಳಿಯ ಉಡುಗೊರೆ ಅತ್ಯದ್ಭುತವಾಗಿದೆ. ಮೊದಲು ಭಗವದ್ಗೀತೆಯನ್ನು ತಿರಸ್ಕರಿಸುತ್ತಿದ್ದ ಸಹೋದರ ಜಲಾಲುದ್ದೀನ್‌ ಅನಂತರ ಕ್ರಮೇಣ ಗೀತೆಯೆಡೆ ಆಕರ್ಷಿತರಾದದ್ದು, ಗೀತೆ ಆತನ ಬದುಕನ್ನೇ ಬದಲಿಸಿದ್ದು ಒಂದು ರೋಚಕ ಸಂಗತಿ. 

Advertisement

ನಾವು “ಧರ್ಮಗ್ರಂಥ’ ಎಂದು ನಂಬಿಕೊಂಡು ಬಂದಿರುವ ಭಗವದ್ಗೀತೆಗೆ ಸಮಾಜವನ್ನೇ ಪರಿವರ್ತಿಸುವ ಶಕ್ತಿ ಇದೆ. ಆದರೆ ಅದರ ಆಧ್ಯಾತ್ಮಿಕ ಮೌಲ್ಯಗಳು ಸಮಾಜದ ಮುಖ್ಯವಾಹಿನಿಯಲ್ಲಿ ಹರಿದು ಬಾರದಿರುವುದು ದುರದೃಷ್ಟ. ಕೇವಲ ಪೂಜೆಮಾಡಿ ಸಂತೃಪ್ತಿಗೊಳ್ಳುವವರು ಮತ್ತು ಭಗವದ್ಗೀತೆಯನ್ನು ಸಾರಾಸಗಟಾಗಿ ತಿರಸ್ಕರಿಸುವವರ ಮಧ್ಯೆ ಆ ಗ್ರಂಥದ ಮಹತ್ವ ಜನಸಾಮಾನ್ಯರಿಂದ ದೂರವಾಗಿಯೇ ಉಳಿದಿದೆ. ಭಾರತಕ್ಕೆ ಆಮದು ಆಧ್ಯಾತ್ಮದ ಅಗತ್ಯವಿಲ್ಲ. ಭಗವದ್ಗೀತೆಯ ತತ್ವ ಮತ್ತು ಸತ್ವ ಮನಸ್ಸು ಮನಸ್ಸುಗಳ ಒಳಗಿಳಿದರೆ ಇಡೀ ದೇಶವೇ ಬದಲಾಗಬಹುದು. 

 ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಡಿ.ವಿ.ಜಿ ಅವರ ಭಗವದ್ಗೀತೆ. ಹೆಚ್ಚಿನ ಧಾರ್ಮಿಕ ನಾಯಕರಿಗೆ ಭಗವದ್ಗೀತೆ ಮೋಕ್ಷಶಾಸ್ತ್ರವಾದರೆ ಡಿ.ವಿ.ಜಿ ಅವರಿಗೆ ಅದು ಜೀವನ ಧರ್ಮಯೋಗ. ಮತತ್ರಯ ವಿಚಾರಗಳನ್ನೂ ಅವರು ಆ ಗ್ರಂಥದಲ್ಲಿ ಪರಾಮರ್ಶಿಸಿದ್ದಾರೆ. ಆದರೆ ಇಡೀ ಕರ್ನಾಟಕದ ಪ್ರಜೆಗಳಿಗೆ ಆ ಗ್ರಂಥ ತಲುಪಲಿಲ್ಲವೆಂಬುದೇ ವಿಷಾದನೀಯ ವಿಚಾರ. ಸಂಸ್ಕೃತಿ ಇಲಾಖೆ ಆ ಪುಸ್ತಕ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದೆ. ಅಷ್ಟೇ ಸಾಲದು ಅವರ “ಜೀವನಧರ್ಮಯೋಗ’ದ ಎರಡೆರಡು ಅಧ್ಯಾಯಗಳು ಕ್ರಮವಾಗಿ ಆರನೇ ತರಗತಿಯಿಂದ ಪದವಿಪೂರ್ವ ಶಿಕ್ಷಣದ ತನಕ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು. ವಿಜ್ಞಾನದ ವಿದ್ಯಾರ್ಥಿಗಳಿಗೆ ಅನಾವಶ್ಯಕವಾಗಿ ಕನ್ನಡದ ಇತರ ಪಾಠಗಳನ್ನು ತುರುಕುವುದಕ್ಕಿಂತ ಡಿ.ವಿ.ಜಿ ಅವರ ಜೀವನಧರ್ಮಯೋಗ ಮತ್ತು ಮಂಕುತಿಮ್ಮನ ಕಗ್ಗವನ್ನು ಓದಿಸಿ ಅರ್ಥ ಮಾಡಿಸಿದರೆ ಸಾಕು ಇಡೀ ಕರ್ನಾಟಕವೇ ಬದಲಾಗಬಹುದು.

ಭಾರತೀಯ ಆಡಳಿತ ಸೇವಾಧಿಕಾರಿಯಾಗಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡುವುದು ಅನಿವಾರ್ಯ. ಕಾರಣ ಆತನಿಗೆ ಆಡಳಿತಾತ್ಮಕವಾದ ಎಲ್ಲಾ ವಿಚಾರಗಳ ಪರಿಚಯಬೇಕಾಗುತ್ತದೆ. ಈ ನಿಯಮ ನಮ್ಮ ಧರ್ಮಬೋಧಕರಿಗೂ ಅನ್ವಯವಾಗಬೇಕು. ಅವರಿಗೆ ಎಲ್ಲಾ ಧರ್ಮಗಳ ವಿಷಯದಲ್ಲಿ ಅರಿವು ಇರುವುದನ್ನು ತಿಳಿಯಲು ಕಡ್ಡಾಯ ಪರೀಕ್ಷೆಯ ವ್ಯವಸ್ಥೆ ಮತ್ತು ಪದವಿ ಪ್ರಮಾಣಪತ್ರದ ವ್ಯವಸ್ಥೆಯಾಗಬೇಕು. ಧರ್ಮಬೋಧಕನು ಭಾರತದ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡದಿದ್ದರೆ ಮನಸ್ಸು-ಮನಸ್ಸುಗಳ ನಡುವಣ ಕಂದಕ ದೊಡ್ಡದಾಗುತ್ತಾ ಹೋಗಬಹುದು. ಏಕೆಂದರೆ ಆಧ್ಯಾತ್ಮ ಮನಸ್ಸಿಗೆ ಸಂಬಂಧಿಸಿದ ವಿಜ್ಞಾನ. ಮನಸ್ಸು ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ. ಮನಸ್ಸೆಂದರೆ ಏನೆಂಬುದನ್ನು ತಿಳಿಯಲು ಮನಶಾÏಸ್ತ್ರಜ್ಞರೂ ಸಂಪೂರ್ಣ ಯಶಸ್ವಿಯಾಗಲಿಲ್ಲ. ಮನಸ್ಸನ್ನು ಪಳಗಿಸುವ ಶಕ್ತಿ ಆಧ್ಯಾತ್ಮಿಕತೆಗೆ ಮಾತ್ರ ಇದೆ. ಆ ಶಕ್ತಿ ಬೆಳಗಬೇಕು. ಆಗ ಮಾತ್ರ ಸಮಾಜದಲ್ಲಿ ಕೋಮು ಸಾಮರಸ್ಯ ಕಾಪಾಡಲು ಸಾಧ್ಯ. ಅರ್ಜುನನ ಮನಸ್ಸನ್ನು ಬದಲಿಸಿದ ಭಗವದ್ಗೀತೆ ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ನ ಮನಸ್ಸನ್ನು ಬದಲಿಸಿತು. ಅದು ಇನ್ನಷ್ಟು ಜನರ ಮನಃಪರಿವರ್ತನೆ ಮಾಡಲಿ.

ತಾರಾನಾಥ ವರ್ಕಾಡಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next