ಶಿರಸಿ: ಸರಕಾರವೇ ಅಬಕಾರಿ ಇಲಾಖೆಗೆ ಆದಾಯದ ಮೇಲೆ ಗುರಿ ನಿಗದಿ ಮಾಡುತ್ತದೆ. ಜಿಲ್ಲೆಯಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವುದನ್ನು ಅಧಿಕಾರಿಗಳು ಹಿಡಿದರೆ ಫೋನ್ ಮಾಡಿಸಿ ವರ್ಗಾವಣೆ ಭೀತಿ ಉಂಟು ಮಾಡುತ್ತಾರೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮಾಡಿದರು.
ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸಾಧನಾ ಸಮಾವೇಶದಲ್ಲಿ ಮಾತನಾಡಿದರು. ಅಕ್ರಮ ಸಾರಾಯಿ ಮಾರಾಟ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾಗಿದೆ. ಮದ್ಯಪಾನ ಖಾಲಿ ಇರುವ ಸ್ಥಳದಲ್ಲಿ ನಡೆಯುತ್ತಿದೆ. ಮಕ್ಕಳೂ ಉಳೀದ ಹನಿಯ ರುಚಿ ನೋಡುವಂತೆ ಆಗಿದೆ. ನಾನು ಈವರೆಗೆ ಒಂದೇ ಒಂದು ಹನಿ ಮದ್ಯಪಾನ ಮಾಡಿಲ್ಲ. ಶಿರಸಿ ಕ್ಷೇತ್ರದಲ್ಲೀ ಯಾರ್ಯಾರ ಅಂಗಡಿ ಎಷ್ಟೆಷ್ಟು ಎಲ್ಲೆಲ್ಲಿ ಇದೆ ಎಂಬುದೂ ಗೊತ್ತು ಎಂದ ಅವರು, ಸರಕಾರ ಮದ್ಯ ನಿಷೇಧ ಮಾಡುವುದಾದರೆ ನಾನು ಬೆಂಬಲಕ್ಕಿದ್ದೇನೆ. ಮದ್ಯಪಾನ ಮುಕ್ತ ಸಮಾಜ ನಿರ್ಮಾಣ ಮಾಡುವ ಧರ್ಮಸ್ಥಳದ ಗುರಿ ನಾಡಿಗೇ ಮಾದರಿ ಎಂದರು.
ಕೇವಲ ರಾಜ್ಯ ಸರಕಾರಕ್ಕಲ್ಲ, ಇಡೀ ದೇಶಕ್ಕೇ ಧರ್ಮಸ್ಥಳದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಯೋಜನೆಗಳು, ಆಶಯಗಳು ಮಾದರಿ ಆಗಿದೆ. ಸ್ವಾವಲಂಬಿ ಸಮಾಜ ನಿರ್ಮಾಣ, ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಶ್ಲಾಘಿಸಿದ್ದಾರೆ. ನಗದು ರಹಿತ ವ್ಯವಹಾರವನ್ನು 12 ಲಕ್ಷ ಸ್ವ ಸಹಾಯ ಸಂಘದ ಸದಸ್ಯರು ಮಾಡಲು ಪ್ರೇರೇಪಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಉಪೇಂದ್ರ ಪೈ ಮಾತನಾಡಿ, ಧರ್ಮಸ್ಥಳ ಯೋಜನೆಯ ಕಾರ್ಯಗಳು ಮಾದರಿಯಾಗಿವೆ. ಇನ್ನಷ್ಟು ರಚನಾತ್ಮಕ ನಡೆ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಯೋಜನಾ ನಿರ್ದೇಶಕ ಲಕ್ಷ್ಮಣ ಎಂ., ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ವೆಂಕಟೇಶ ನಾಯ್ಕ, ಉದ್ದಿಮೆದಾರ ಶಿವಾನಂದ ಶಿವನಂಚಿ, ಸತೋಷ ಶೆಟ್ಟಿ, ಎಸ್.ಎನ್. ಹೆಗಡೆ, ಜನ ಜಾಗೃತಿ ವೇದಿಕೆ ಸದಸ್ಯ ವಿವೇಕಾನಂದ ರಾಯ್ಕರ್, ಉಮೇಶ ಪಟಗಾರ, ರಮೇಶ ನಾಯ್ಕ, ಸತೀಶ ಗಾಂವಕರ್ ಇದ್ದರು.
3 ಕೋಟಿ. ಉಳಿತಾಯ
ಧರ್ಮಸ್ಥಳ ಯೋಜನೆಯ ಶಿರಸಿ ಎ ವಲಯದ ಸದಸ್ಯರು ಮಾಡಿದ ಉಳಿತಾಯ 3 ಕೋ.ರೂ. ಆಗಿದೆ. ಮಹಿಳೆ ಮನಸ್ಸು ಮಾಡಿದರೆ ಎಂಥ ಸಾಧನೆ ಮಾಡಬಹುದು ಎಂಬುದಕ್ಕೆ ಇದೂ ಉದಾಹರಣೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ