Advertisement

ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ವಿಫ‌ಲ; ಹಸಿರು ಸೇನೆ

01:45 PM Jul 22, 2022 | Team Udayavani |

ದೇವನಹಳ್ಳಿ: ರೈತ ವಿರೋಧಿ ಕಾನೂನು ಸರ್ಕಾರ ತರುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುತ್ತಿಲ್ಲ. ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ತಿಳಿಸಿದರು.

Advertisement

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ವತಿಯಿಂದ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿ, 43 ವರ್ಷದ ಹಿಂದೆ ನಡೆದ ನರಗುಂದ-ನವಿಲುಗುಂದ ಹಾವೇರಿ ಹಾಗೂ ಹಾಸನ ಜಿಲ್ಲೆ ದುದ್ದದಲ್ಲಿ ರೈತರ ಮೇಲೆ ನಡೆಸಿದ ಆಗಿನ ಸರ್ಕಾರದ ಅಮಾನುಷ ದೌರ್ಜನ್ಯದ ವಿರುದ್ಧ ಸಿಡಿದೆದ್ದ ರೈತ ಸಮುದಾಯ ಸಂಘಟಿಗರಾಗಿ ನಿರಂತರ ಹೋರಾಟ ಮಾಡುತ್ತಲೇ ಬಂದಿದೆ.

ರೈತರ ನೋವು, ಕಷ್ಟ, ಸಂಕಷ್ಟ ಈಡೇರಿಸಲು ಚಳುವಳಿ ಮಾಡಿದಾಗ್ಯೂ ನಮ್ಮನ್ನಾಳಿದ ಎಲ್ಲಾ ಸರ್ಕಾರಗಳ ಬೇಜವಾಬ್ದಾರಿ ಆಡಳಿತದಿಂದ ರೈತನ ಆತ್ಮಹತ್ಯೆ  ಯನ್ನು ನಿಲ್ಲಿಸಲಾಗಿಲ್ಲ. 153 ರೈತರನ್ನು ನೇರವಾಗಿ ಗುಂಡು ಹೊಡೆದು ಸಾಯಿಸಿದ ಸರ್ಕಾರಗಳು ಈ ದೇಶದಲ್ಲಿ ಯಾವುದೇ ಗುಂಡು ಹಾರಿಸದೇ 7 ಲಕ್ಷ ರೈತರನ್ನು ಆತ್ಮಹತ್ಯೆಗೆ ವ್ಯವಸ್ಥಿತವಾಗಿ ಕೊಲೆ ಮಾಡಿವೆ ಎಂದು ಆರೋಪಿಸಿದರು.

ಸಾಲದ ಹೊರೆಯಿಂದ ಆತ್ಮಹತ್ಯೆ: ಕರ್ನಾಟಕ ರಾಜ್ಯ ರೈತ ಸಂಘ ಗ್ಯಾಟ್‌ ಒಪ್ಪಂದಕ್ಕೆ ಒಪ್ಪಿಕೊಳ್ಳಬಾರದೆಂದು ಜಾಗತೀಕರಣ, ಉದಾರೀಕರಣ, ಖಾಸಗೀಕರಣವನ್ನು ಮೊದಲಿನಿಂದಲೂ ವಿರೋಧಿಸಿ ನಿರಂತರ ಚಳುವಳಿ ಮಾಡುತ್ತಾ ಬಂದಿದೆ. ಕೃಷಿಯನ್ನು ವಿಶ್ವ ವ್ಯಾಪಾರ ಕ್ಷೇತ್ರದಿಂದ ಹೊರಗಿಡಬೇಕೆಂದು ಒತ್ತಾಯಿಸಿದಾಗ್ಯೂ ರೈತರು ಬೆಳೆದ ಬೆಳೆಗೆ ಉತ್ಪಾದನಾ ವೆಚ್ಚ ಸಹ ಸಿಗದೇ ವೈಜ್ಞಾನಿಕ ಬೆಲೆ ಬೆಳೆ ನಷ್ಟ ಪರಿಹಾರ, ಬರಗಾಲಕ್ಕೆ ಬೆಳೆವಿಮೆ, ವೈಜ್ಞಾನಿಕ ಬೆಳೆ ಸಿಗದೇ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಹಳ್ಳಿಗಳು ವೃದ್ಧಾಶ್ರಮವಾಗಿ ಮಾರ್ಪಟ್ಟಿವೆ. 1947ರ ದಶಕದಲ್ಲಿ ಈ ದೇಶದ 37 ಕೋಟಿ ಜನರಿಗೆ ಆಹಾರ ಇರಲಿಲ್ಲ. ಈಗ 127 ಕೋಟಿ ಜನರಿಗೆ ಹೊಟ್ಟೆ ತುಂಬ ರೈತರು ಆಹಾರ ಬೆಳೆದು ಕೊಟ್ಟಿದ್ದಾರೆ ಎಂದರು.

Advertisement

ಹುತಾತ್ಮ ರೈತರನ್ನು ಸ್ಮರಿಸುವ ಕಾರ್ಯ: ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಗಳನ್ನು ಸರ್ಕಾರ ಘೋಷಣೆ ಮಾಡಬೇಕು. ರೈತ ಈ ದೇಶದ ಬೆನ್ನೆಲುಬು ಆಗಿದ್ದಾನೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರೈತವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಹುತಾತ್ಮರಾದ ರೈತರನ್ನು ಸ್ಮರಿಸುವ ಕಾರ್ಯ ರೈತ ಸಂಘ ಮಾಡುತ್ತಿದೆ ಎಂದು ಹೇಳಿದರು.

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ: ರೈತ ಸಂಘದ ಜಿಲ್ಲಾಧ್ಯಕ್ಷ ಭುವನಹಳ್ಳಿ ವೆಂಕಟೇಶ್‌ ಮಾತನಾಡಿ, ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಫ‌ಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಲು ಮುಂದಾಗಿದೆ. ಹರಳೂರು, ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇದೇ ಹೋಬಳಿಯಲ್ಲಿ 7 ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ಕಸಿದುಕೊಂಡಿದೆ. ಕೃಷಿಯನ್ನೇ ನಂಬಿ ಬದುಕುತ್ತಿರುವ 13ಹಳ್ಳಿಗಳ ರೈತರ ಜೀವನಾಧಾರ ವಾಗಿರುವ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದು, ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಡಾ.ಮಲ್ಲೇಶ್‌, ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ(ನಾಣಿ), ಗೌರವಾಧ್ಯಕ್ಷ ವಿನೋದ್‌ ಗೌಡ, ತಾಲೂಕು ಅಧ್ಯಕ್ಷ ಜಯಶಂಕರ್‌, ಉಪಾಧ್ಯಕ್ಷ ಗಯಾಜ್‌ ಭಾಷ, ಮಹಿಳಾ ಘಟಕದ ಆಧ್ಯಕ್ಷೆ ಚೈತ್ರಾ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next