Advertisement

ವಿಮ್ಸ್‌ ಘಟನೆ ತನಿಖೆಗೆ ಸರಕಾರ ಒಪ್ಪಿಗೆ

09:10 PM Sep 15, 2022 | Team Udayavani |

ಬೆಂಗಳೂರು: ಬಳ್ಳಾರಿಯ ವಿಮ್ಸ್‌ನಲ್ಲಿ ಬುಧವಾರ ರಾತ್ರಿ ಮೂವರು ಮೃತಪಟ್ಟ ಘಟನೆ ವಿಧಾನಸಭೆಯಲ್ಲಿ ಸದ್ದು ಮಾಡಿತು. ಪ್ರಕರಣ ಸಂಬಂಧ ತನಿಖೆ ನಡೆಸುವುದಾಗಿ ಸರಕಾರ ಹೇಳಿದೆ.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಳ್ಳಾರಿಯ ವಿಮ್ಸ್‌ನಲ್ಲಿ ವಿದ್ಯುತ್‌ ಕೊರತೆಯಿಂದ ವೆಂಟಿಲೇಟರ್‌ ಕೆಲಸ ಮಾಡದೆ ಮೂವರು  ಪ್ರಾಣ ತೆತ್ತಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಘಟನೆಗೆ  ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ನೀಡಿದ್ದ ನೊಟೀಸ್‌ನಲ್ಲಿ “ಇದು ಸರಕಾರಿ ಪ್ರಾಯೋಜಿತ ಕೊಲೆ’ ಎಂಬ ಪದ ಬಳಕೆಗೆ ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಆಕ್ಷೇಪ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಚಕಮಕಿಗೂ ಕಾರಣವಾಯಿತು.

ವಿದ್ಯುತ್‌ ಕೊರತೆ ಇಲ್ಲ, ಜನರೇಟರ್‌ ಕೆಲಸ ಮಾಡುತ್ತಿತ್ತು ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಆದರೂ ಪ್ರಕರಣದ ತನಿಖೆ ಮಾಡಿಸುವುದಾಗಿ ಮಾಧುಸ್ವಾಮಿ ಭರವಸೆ ನೀಡಿದರು.

ಸರಕಾರದ ಪರವಾಗಿ ಉತ್ತರ ನೀಡಿದ ಶ್ರೀರಾಮುಲು, ಪ್ರಕರಣಕ್ಕೆ ವಿದ್ಯುತ್‌ ಪೂರೈಕೆ ಸಮಸ್ಯೆ ಕಾರಣವಲ್ಲ ಎಂದರು. ಇದಕ್ಕೆ  ಸಿಟ್ಟಾದ ಸಿದ್ದರಾಮಯ್ಯ, ಸಾವಿನಲ್ಲಿ ಚೆಲ್ಲಾಟ ಆಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೈಫ‌ಲ್ಯ ಇದ್ದರೆ ತನಿಖೆ ನಡೆಸೋಣ. ಆದರೆ ಸರಕಾರಿ ಪ್ರಾಯೋಜಿತ ಕೊಲೆ ಎಂದರೆ ಹೇಗೆ ಎಂದು ಶ್ರೀರಾಮುಲು ಪ್ರಶ್ನಿಸಿದರು. ಅದಕ್ಕೆ ಸಿದ್ದರಾಮಯ್ಯ, ಹೌದು, ಅವರ ಸಾವಿಗೆ ಸರಕಾರವೇ ಕಾರಣ ಎಂದು ವಾದಿಸಿದರು. ಸ್ಪೀಕರ್‌ ಮಧ್ಯಪ್ರವೇಶಿಸಿ ತನಿಖೆ ನಡೆಸುವುದಾಗಿ ಸರಕಾರ ಹೇಳಿದೆ. ವರದಿ ಬರಲಿ ಎಂದು ಹೇಳಿ ವಿಷಯಕ್ಕೆ ತೆರೆ ಎಳೆದರು.

Advertisement

ಪರಿಹಾರ ಘೋಷಣೆ:

ಬುಧವಾರ ರಾತ್ರಿ ಬಳ್ಳಾರಿಯ ವಿಮ್ಸ್‌ನಲ್ಲಿ ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿರುವ ಮೂವರು ರೋಗಿಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next