Advertisement

ಸೇನೆ ಬಲಕ್ಕೆ ಅಗ್ನಿಪಥ: ಸೇನೆಯ ಮೂರು ವಿಭಾಗದ ಮುಖ್ಯಸ್ಥರ ಪ್ರತಿಪಾದನೆ

12:34 AM Jun 15, 2022 | Team Udayavani |

ಕೇಂದ್ರ ಸರಕಾರ ಮಂಗಳವಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯಿಂದ ಭೂಸೇನೆಯ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದಲಾವಣೆಯಾಗದು. ಪಾಕಿಸ್ಥಾನ ಮತ್ತು ಚೀನ ನಡುವೆ ದೇಶ ಹೊಂದಿರುವ ಅಂತಾರಾಷ್ಟ್ರೀಯ ಗಡಿ ಪ್ರದೇಶವನ್ನು ಮತ್ತಷ್ಟು ಸದೃಢ ರೀತಿಯಲ್ಲಿ ಕಾಯಲು ಸಾಧ್ಯವಾಗಲಿದೆ ಎಂದು ಭೂಸೇನಾ ಮುಖ್ಯಸ್ಥ ಜ. ಮನೋಜ್‌ ಪಾಂಡೆ ಹೇಳಿದ್ದಾರೆ. ಇದರ ಜತೆಗೆ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌, ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ವಿ.ಆರ್‌.ಚೌಧರಿ ಕೂಡ ಕೇಂದ್ರ ಸರಕಾರದ ನಿರ್ಧಾರವನ್ನು ಬಲವಾಗಿಯೇ ಸಮರ್ಥಿಸಿಕೊಂಡಿದ್ದಾರೆ. ಭೂಸೇನೆ, ನೌಕಾಪಡೆ ಮತ್ತು ಐಎಎಫ್ನ ಮುಖ್ಯಸ್ಥರು ಈ ಅಂಶಗಳನ್ನು ಪ್ರತಿಪಾದಿಸಿದ್ದಾರೆ.

Advertisement

ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಆಗದು
ಹೊಸ ನಿರ್ಧಾರದಿಂದಾಗಿ ಭೂಸೇನೆಯ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದಲಾವಣೆ
ಯಾಗುವುದಿಲ್ಲ ಎಂದು ಭೂಸೇನಾ ಮುಖ್ಯಸ್ಥ ಜ| ಮನೋಜ್‌ ಪಾಂಡೆ ಹೇಳಿದ್ದಾರೆ. ಭೂಸೇನೆಯಲ್ಲಿ 26-32 ವರ್ಷ ವಯೋಮಿತಿಯ ಯೋಧರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಸಿಗಲಿದೆ. ಐಟಿಐ ಮತ್ತು ಇತರ ತಾಂತ್ರಿಕ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭೂಸೇನೆಗೆ ನೇಮಕ ಮಾಡಿ ಕೊಳ್ಳು ವುದರಿಂದ ಹೆಚ್ಚಿನ ಸಂಖ್ಯೆ ಯಲ್ಲಿ ತಾಂತ್ರಿಕ ಪರಿಣತರು ಲಭ್ಯರಾಗಲಿದ್ದಾರೆ ಎಂದಿದ್ದಾರೆ.

ದೇಶದ ಎಲ್ಲ ಭಾಗದ ಯುವಜನರಿಗೆ ಭೂಸೇನೆಗೆ ಸೇರ್ಪಡೆಯಾಗಲು ಹೊಸ ಅವಕಾಶ ಲಭ್ಯವಾಗಲಿದೆ ಎಂದು ಜ| ಪಾಂಡೆ ಪ್ರತಿಪಾದಿಸಿದ್ದಾರೆ. ಪಾಕಿಸ್ಥಾನ ಮತ್ತು ಚೀನಾ ಜತೆಗೆ ದೇಶ ಪ್ರಧಾನವಾಗಿ ಗಡಿ ಹಂಚಿಕೆ ಮಾಡಿಕೊಂಡಿರುವುದರಿಂದ ಸರಕಾರದ ಈ ಕ್ರಮ ನೆರವಾಗಲಿದೆ. ಜತೆಗೆ ಹೊಸ ವಿಶ್ವಾಸ ಮತ್ತು ಚೈತನ್ಯ ಲಭ್ಯವಾಗಲಿದೆ ಎಂದರು.

ಪಾರದರ್ಶಕ: ಅಗ್ನಿಪಥ ಯೋಜನೆಯ ಅನ್ವಯ ಯೋಧರ ನೇಮಕ ಪಾರದರ್ಶಕವಾಗಿಯೇ ಇರಲಿದೆ. ಸಮಗ್ರವಾಗಿ ಮೌಲ್ಯಮಾಪನ ನಡೆಸಿ ಎಲ್ಲ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ ಎಂದರು. “ಆಲ್‌ ಇಂಡಿಯಾ ಆಲ್‌ ಕ್ಲಾಸ್‌’ ಧ್ಯೇಯ ವಾಕ್ಯದಲ್ಲಿ ನೇಮಕ ಕಾರ್ಯ ನಡೆಯಲಿದೆ. ಈಗಾಗಲೇ ಸೇನೆಯಲ್ಲಿ ಶೇ. 75ರಷ್ಟು ನೇಮಕ ಇದೇ ಮಾದರಿಯಲ್ಲಿ ನಡೆಯುತ್ತದೆ ಎಂದಿದ್ದಾರೆ ಭೂಸೇನಾ ಮುಖ್ಯಸ್ಥರು.

ಮೌಲ್ಯ ಮತ್ತಷ್ಟು ವೃದ್ಧಿ
ಐಎಎಫ್ ಮುಂದಿನ ದಿನಗಳಲ್ಲಿ ಯುವಜನರಿಗೆ ಆದ್ಯತೆ ನೀಡಲಿದೆ ಎಂದು ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ವಿ.ಆರ್‌.ಚೌಧರಿ ಹೇಳಿದ್ದಾರೆ. ಕೇಂದ್ರ ಸರಕಾರದ ಹೊಸ ನಿರ್ಧಾರ ಐಎಎಫ್ನ ಮೌಲ್ಯ ಮತ್ತಷ್ಟು ವೃದ್ಧಿ ಕಾರಣವಾಗಲಿದೆ ಹಾಗೂ ದೃಢ ವಾದ ಮತ್ತು ಎಂಥ ಸವಾಲನ್ನು ಎದುರಿಸುವ ಯೋಧರನ್ನು ಹೊಂದಲು ನೆರವಾಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. “ವಾಯುಪಡೆಗೆ ಮುಂದಿನ ದಿನ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ನೇಮಕ ಮಾಡಿ ಕೊಳ್ಳಲಾಗುತ್ತದೆ. ಅವರಿಗೆ ಉನ್ನತ ರೀತಿಯ ತಂತ್ರಜ್ಞಾನದ ಪರಿಸರದಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ಉದ್ಯೋಗ ಕೌಶಲ ವೃದ್ಧಿಸಿಕೊಳ್ಳಲು ನೆರವು ನೀಡಲಾಗುತ್ತದೆ. ಅಗ್ನಿವೀರರಿಗೆ ಐಎಎಫ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಗ್ಗೆ ಪರಿಚಯ ನೀಡಿ, ತರಬೇತಿ ನೀಡಲಾಗುತ್ತದೆ ಎಂದರು. ನಾಲ್ಕು ವರ್ಷಗಳ ಬಳಿಕ ಅವರಿಗೆ ಹೆಚ್ಚಿನ ಉದ್ಯೋಗದ ಅವಕಾಶ ಸಿಗಲಿದೆ ಎಂದರು.

Advertisement

ಬಹುಸ್ತರದ ಬದಲಾವಣೆ ನಿರೀಕ್ಷೆ: ಹರಿಕುಮಾರ್‌
ಅಗ್ನಿಪಥ ಯೋಜನೆಯಿಂದ ನೌಕಾಪಡೆಯಲ್ಲಿ ಬಹುಸ್ತರದ ಬದಲಾವಣೆ ಉಂಟಾಗಲಿದೆ ಎಂದು ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ಪ್ರತಿಪಾದಿಸಿದ್ದಾರೆ. ದೇಶದ ಯುವಜನರಿಗೆ ಹೆಚ್ಚಿನ ರೀತಿಯಲ್ಲಿ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಲಭ್ಯವಾಗಲಿದೆ. ಈ ಯೋಜನೆಯಿಂದ ನೇಮಕಗೊಳ್ಳಲಿರುವ ಅಗ್ನಿವೀರರು ನೌಕಾಪಡೆಗೆ ಹೆಚ್ಚಿನ ಶಕ್ತಿಯನ್ನು ತಂದು ಕೊಡಲಿದ್ದಾರೆ. ಯೋಧರಲ್ಲಿ ನಿರಂತರ ದೇಶಕ್ಕಾಗಿ ಸೇವೆ ಸಲ್ಲಿಸುವ ಹುರುಪು ತಂದುಕೊಡಲಿದೆ ಎಂದು ಹೇಳಿದ್ದಾರೆ. ಇದೊಂದು ಹೊಸ ಕಾಲದ ಹೊಸ ಯೋಜನೆ ಎಂದಿದ್ದಾರೆ. ಅದನ್ನು ದೇಶದ ಸೇನೆಯ ವ್ಯವಸ್ಥೆಯನ್ನು ಪರಿಗಣಿಸಿಯೇ ಅದನ್ನು ಜಾರಿ ಗೊಳಿಸಲಾಗಿದೆ ಎಂದಿದ್ದಾರೆ. ಕಾರ್ಗಿಲ್‌ ಸಮಿತಿಯ ಶಿಫಾರಸಿನ ಪ್ರಕಾರ ಯುವಕರೇ ಸೇನಾ ಪಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕು ಎಂದಿದೆ. ಅದರ ಅನ್ವಯ ಹೊಸ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

ಸಿಡಿಸಿ ನೇಮಕ ಪ್ರಕ್ರಿಯೆ ಶುರುವಾಗಿದೆ: ರಾಜನಾಥ್‌ ಸಿಂಗ್‌
ದೇಶದ ರಕ್ಷಣ ಪಡೆಗಳ ಮುಖ್ಯಸ್ಥರ ನೇಮಕಕ್ಕೆ ಪ್ರಕ್ರಿಯೆಗಳು ಶುರುವಾಗಿವೆ ಎಂದು ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಜ.ಬಿಪಿನ್‌ ರಾವತ್‌ ನಿಧನದಿಂದ ತೆರವಾಗಿರುವ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡಲಾಗುತ್ತದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರಕಾರ ಈ ಹುದ್ದೆಯ ನೇಮಕದ ನಿಯಮದಲ್ಲಿ ಕೆಲವೊಂದು ಬದಲಾವಣೆಯನ್ನೂ ಮಾಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next