ಬೆಂಗಳೂರು: ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿರುವುದನ್ನು ಕೇಂದ್ರ ಸಚಿವ ಅಮಿತ್ ಶಾ, ಶ್ರೀರಾಮನಿಗೆ ಆದ ಅವಮಾನ ಎಂದಿದ್ದಾರೆ. ಇದೇನು ಅವರ ಮೂರ್ಖತನವೋ? ಹತಾಶೆಯೋ ಅರ್ಥವಾಗುತ್ತಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಎಐಸಿಸಿಯ ತಮಿಳುನಾಡು ಹಾಗೂ ಗೋವಾ ರಾಜ್ಯಗಳ ಉಸ್ತುವಾರಿ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಇದು ಎಲ್ಲಿಂದೆಲ್ಲಿಯ ಸಂಬಂಧ? ಬಿಜೆಪಿಯವರಿಗೆ ರಾಮ, ಧರ್ಮ ಹಿಂದುತ್ವ ಮತ್ತು ಪಾಕಿಸ್ತಾನವನ್ನು ಕನವರಿಸದಿದ್ದರೆ ತಿಂದ ಅನ್ನ ಮೈಗೆ ಹತ್ತುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಬೆಲೆಯೇರಿಕೆಯಿಂದ ಜನರ ಸಂಕಷ್ಟವನ್ನು ಕಾಂಗ್ರೆಸ್ ಪ್ರತಿಭಟನೆಯ ಮೂಲಕ ವ್ಯಕ್ತಪಡಿಸುತ್ತಿದೆ. ಬೆಲೆಯೇರಿಕೆ ಬಿಸಿ ರಾಮನ ಭಕ್ತರಿಗೂ ತಟ್ಟಿದೆ, ರಹೀಂನ ಭಕ್ತರಿಗೂ ತಟ್ಟಿದೆ. ಜನರ ಧ್ವನಿಯಾಗಿ ಕಾಂಗ್ರೆಸ್ ಮಾಡುತ್ತಿರುವ ಹೋರಾಟ ಅಮಿತ್ ಶಾ ಅವರಿಗೆ ನಡುಕ ತಂದಿದೆ. ಹಾಗಾಗಿ ಬೆಲೆಯೇರಿಕೆ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಶ್ರೀರಾಮನ ಮೊರೆ ಹೋಗಿದ್ದಾರೆ ಎಂದು ದೂರಿದ್ದಾರೆ.
ಅಮಿತ್ ಶಾ ಅವರೇ, ಬೆಲೆಯೇರಿಕೆಯ ವಿರುದ್ಧದ ಪ್ರತಿಭಟನೆ ಶ್ರೀರಾಮನಿಗೆ ಹೇಗೆ ಅವಮಾನ ಮಾಡಿದಂತೆ ಆಗುತ್ತದೆ? ಇಂತಹ ಅವಿವೇಕದ ಥಿಯರಿಗಳು ನಿಮ್ಮ ತಲೆಯಲ್ಲಿ ಹುಟ್ಟುವುದಾದರೂ ಹೇಗೆ? ಬೆಲೆಯೇರಿಕೆಯಿಂದ ಜನರು ಅನುಭವಿಸುತ್ತಿರುವ ನೋವು ನಿಮಗಿನ್ನು ಗೊತ್ತಿಲ್ಲ. ಮೂರ್ಖತನದ ಹೇಳಿಕೆ ಕೊಡುವುದು ಬಿಟ್ಟು,ಮೊದಲು ಬೆಲೆಯೇರಿಕೆ ನಿಯಂತ್ರಿಸಿ ಆಗ ರಾಮನು ಕೂಡ ಮೆಚ್ಚುತ್ತಾನೆ ಎಂದಿದ್ದಾರೆ.