Advertisement

ರೈತರ ಸಮಸ್ಯೆಯಲ್ಲೇ ವಿಪಕ್ಷಗಳ ಅಸ್ತಿತ್ವ

12:43 AM Nov 20, 2021 | Team Udayavani |

ಮಹೋಬಾ (ಉತ್ತರ ಪ್ರದೇಶ): ಈ ದೇಶದ ವಿಪಕ್ಷಗಳು ರೈತರನ್ನು ಸದಾ ಸಮಸ್ಯೆಗಳಲ್ಲಿ ಇಡುವುದನ್ನೇ ಪಾಲಿಸಿ­ಕೊಂಡು ಬಂದಿದ್ದು, ಆ ಮೂಲಕವೇ ತಮ್ಮ ಅಸ್ತಿತ್ವವನ್ನು ಕಾಪಾಡಿ­ಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದು­ಗೊಳಿಸುವುದಾಗಿ ಘೋಷಿಸಿದ 3 ಗಂಟೆಗಳ ಅನಂತರ ಪ್ರಧಾನಿ­ಯವ­ರಿಂದ ಈ ಆರೋಪ ಹೊರಬಂದಿರು­ವುದು ಗಮನಾರ್ಹ.

Advertisement

ಉತ್ತರ ಪ್ರದೇಶದ ಮಹೋ­ಬಾದಲ್ಲಿ ಆಯೋಜಿಸ­ಲಾಗಿದ್ದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, “ಕುಟುಂಬ ರಾಜಕಾರಣದ ಮೂಲಕವೇ ಆಡಳಿತ ನಡೆಸಿರುವ ಹಾಗೂ ನಡೆಸುತ್ತಿರುವ ಪಕ್ಷಗಳು, ರೈತರನ್ನು ಸದಾ ಸಮಸ್ಯೆಗಳಲ್ಲೇ ಉಳಿಯುವಂತೆ ನೋಡಿ­ಕೊಂಡು ಬಂದಿವೆ. ಇಂಥ ನಾಯಕರು ರೈತರಿಗಾಗಿ ಭಾರೀ ಘೋಷಣೆಗಳನ್ನು ಮಾಡುತ್ತಾರಾದರೂ ಅದರಲ್ಲಿ ನಯಾ ಪೈಸೆಯೂ ರೈತರಿಗೆ ಸಿಕ್ಕಿಲ್ಲ. ಆದರೆ ನಮ್ಮ ಸರ ಕಾ ರ ಹಾಗೆ ಮಾಡಲಿಲ್ಲ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ 1.62 ಕೋಟಿ ರೂ.ಗಳಷ್ಟು ಪಿಂಚಣಿಯನ್ನು ನಾವು ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಹಾಕಿದ್ದೇವೆ’ ಎಂದು ಹೇಳಿದರು. ವಿಪಕ್ಷಗಳು ಎಂದಿಗೂ “ಪ್ರಾಬ್ಲಿಮ್ಸ್‌ ಪಾಲಿಟಿಕ್ಸ್‌’ ಆಡುತ್ತಾ ಬಂದಿರುವಂಥವೇ ಎಂದು ಆರೋಪಿಸಿದರು.

ಗೆಲುವಿನ ಮೆಟ್ಟಿಲು: ಬಿಜೆಪಿ ಆಶಯ
ಕೃಷಿ ಕಾಯ್ದೆಗೆ ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಆ ವಿರೋಧವಿಟ್ಟುಕೊಂಡು ಚುನಾವಣೆ ಗೆಲ್ಲುವುದು ಕಷ್ಟವೆಂದು ಅರ್ಥ ಮಾಡಿಕೊಂಡಿದ್ದ ಬಿಜೆಪಿ ಇದೀಗ ರೈತರು ನಿಟ್ಟುಸಿರು ಮಾಡುವಂತೆ ಮಾಡಿದೆ. ಇದರಿಂದಾಗಿ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ಸಿಗಬಹುದೆಂದು ಬಿಜೆಪಿಯ ನಾಯಕರು ನಂಬಿದ್ದಾರೆ. ಬಹುಮುಖ್ಯವಾಗಿ ಪಂಜಾಬ್‌ನಲ್ಲಿ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರ ಹೊಸ ಪಕ್ಷದೊಂದಿಗೆ ಮೈತ್ರಿಗೆ ಅವಕಾಶ ಸಿಗಬಹುದು. ಬಿಜೆಪಿಯ ಮೈತ್ರಿ ಪಕ್ಷವಾಗಿದ್ದ ಶಿರೋಮಣಿ ಅಕಾಲಿದಳವೂ ಈ ಕಾಯ್ದೆಗಳನ್ನು ವಿರೋಧಿಸಿ, ಮೈತ್ರಿ ಮುರಿದುಕೊಂಡಿತ್ತು. ಇದೀಗ ಕಾಯ್ದೆಯೇ ಇಲ್ಲದಿರುವುದರಿಂದ ಮೈತ್ರಿ ಮತ್ತೆ ಸಾಧ್ಯವಾಗಬಹುದು ಎಂದೂ ಹೇಳಲಾಗುತ್ತಿದೆ.

ಚಳವಳಿ ನಡೆದ ಹಾದಿ
ಜೂ. 5, 2020- ಸರಕಾರದಿಂದ 3 ಅಧ್ಯಾದೇಶ.
ಸೆ. 14, 2020- ಸಂಸತ್ತಿನಲ್ಲಿ 3 ಕೃಷಿ ಮಸೂದೆ ಪ್ರಸ್ತಾವ
ಸೆ.17, 2020- ಲೋಕಸಭೆಯಲ್ಲಿ ಅಂಗೀಕಾರ
ಸೆ.20, 2020- ಧ್ವನಿ ಮತದ ಮೂಲಕ ರಾಜ್ಯಸಭೆಯಲ್ಲಿ ಅಂಗೀಕಾರ
ಸೆ.24, 2020- ಪಂಜಾಬ್‌ನಲ್ಲಿ ರೈತರಿಂದ 3 ದಿನಗಳ “ರೈಲ್‌ ರೋಕೋ’ ಚಳವಳಿ
ಸೆ.25, 2020- ದೇಶಾದ್ಯಂತ ರೈತರಿಂದ ಪ್ರತಿಭಟನೆ
ಸೆ.26, 2020- ಮಸೂದೆ ವಿರೋಧಿಸಿ, ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ಶಿರೋಣಿ ಅಕಾಲಿದಳ
ಸೆ.27, 2020- ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕು ಕಾಯ್ದೆಯಾಗಿ ಬದಲು
ನ.25, 2020- ಪಂಜಾಬ್‌ ಮತ್ತು ಹರಿಯಾಣ ರೈತರಿಂದ “ಹೊಸ ದಿ ಲ್ಲಿ ಚಲೋ’ ಚಳವಳಿಗೆ ಕರೆ
ನ.26, 2020- ಹೋರಾಟನಿರತ ರೈತರ ಮೇಲೆ ಅಂಬಾಲಾದಲ್ಲಿ ಪೊಲೀಸರಿಂದ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗ
ಜ.12, 2021 – ಕೃಷಿ ಕಾಯ್ದೆ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ ತಡೆ
ಜ.26, 2021- ಕೆಂಪುಕೋಟೆ ಬಳಿ ರೈತರು ಮತ್ತು ಪೊಲೀಸರ ಘರ್ಷಣೆ
ಜ.29, 2021- ಒಂದೂವರೆ ವರ್ಷದ ಕಾಲದ ಕಾಯ್ದೆ ಅಮಾನತಿಗೆ ಸರ ಕಾ ರದ ಪ್ರಸ್ತಾವ, ಶಾಸನವನ್ನು ಚರ್ಚಿಸಲು ಜಂಟಿ ಸಮಿತಿ ಸ್ಥಾಪನೆ
ಫೆ.5, 2021- ರೈತರ ಪ್ರತಿಭಟನೆ ಕುರಿತು ಟೂಲ್‌ಕಿಟ್‌ ರಚಿಸಿದವರ ವಿರುದ್ಧ ಎಫ್ಐಆರ್‌
ಫೆ.6, 2021- ರಾಷ್ಟ್ರಾದ್ಯಂತ ರೈತರಿಂದ 3 ಗಂಟೆಗಳ ಕಾಲ ರಸ್ತೆ ತಡೆ
ಮಾ.6, 2021- ಹೊಸ ದಿ ಲ್ಲಿ ಗಡಿಯಲ್ಲಿ 100 ದಿನಗಳ ಹೋರಾಟ ಪೂರ್ಣ
ಮಾ.8, 2021- ಸಿಂಘು ಗಡಿಯ ಹೋರಾಟ ಸ್ಥಳದಲ್ಲಿ ಗುಂಡಿನ ದಾಳಿ, ಯಾರಿಗೂ ಗಾಯವಿಲ್ಲ
ಮೇ 27, 2021- ಹೋರಾಟದ ಆರು ತಿಂಗಳ ನೆನಪಿಗೆ ರೈತರಿಂದ ಕಪ್ಪು ದಿನ ಆಚರಣೆ
ಜೂ.5, 2021- ಕಾಯ್ದೆಗೆ ಘೋಷಣೆಗೆ ವರ್ಷವಾದ ಹಿನ್ನೆಲೆಯಲ್ಲಿ ರೈತರಿಂದ ಸಂಪೂರ್ಣ ಕ್ರಾಂತಿಕಾರಿ ದಿವಸ್‌ ಆಚರಣೆ
ಜು.22, 2021- ಸಂಸತ್‌ ಭವನದ ಬಳಿ ಹೋರಾಟ ನಿರತ ರೈತರ ಕಿಸಾನ್‌ ಸಂಸತ್‌ನಲ್ಲಿ ಸಮನಾಂತರ ಮುಂಗಾರು ಅಧಿವೇಶನ
ಆ.7, 2021- 14 ವಿಪಕ್ಷಗಳ ಸಭೆ ನಡೆದು, ಕಿಸಾನ್‌ ಸಂಸತ್‌ಗೆ ಭೇಟಿ ನೀಡಲು ನಿರ್ಧಾರ
ಅ.22, 2021- ಪ್ರತಿಭಟನಕಾರರಿಗೆ ರಸ್ತೆ ತಡೆ ನಡೆಸದಿರುವಂತೆ ಸುಪ್ರೀಂ ಸೂಚನೆ
ಅ.29, 2021- ರೈತರು ಹೋರಾಟ ನಡೆಸುತ್ತಿದ್ದ ಘಾಜಿಪುರ ಗಡಿಯಿಂದ ಪೊಲೀಸರು ಬ್ಯಾರಿಕೇಡ್‌ ತೆಗೆಯಲು ಆರಂಭಿಸಿದರು.
ನ.19, 2021- ಮೂರು ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ

ಇದನ್ನೂ ಓದಿ:ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ: ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

Advertisement

ಕೃಷಿ ಕಾಯ್ದೆಗಳಲ್ಲೇನಿತ್ತು? ವಿರೋಧ ಏಕೆ ಬಂತು?
1 ಕೃಷಿ ಉತ್ಪಾದನೆ ಮತ್ತು ವ್ಯವಹಾರ ಮಸೂದೆ (2020)
ಉಲ್ಲೇಖ: ರೈತರು ತಮ್ಮ ಬೆಳೆಗಳನ್ನು ತಮಗೆ ಸಮೀಪವಿರುವ ಎಪಿಎಂಸಿಯಲ್ಲಿ ಮಾತ್ರ ಮಾರಾಟ ಮಾಡುವ ನಿಬಂಧನೆಯಿಂದ ರೈತರಿಗೆ ವಿನಾಯಿತಿ. ರೈತರು ತಮ್ಮ ಬೆಳೆಗಳನ್ನು ದೂರದ ಊರುಗಳ ಮಾರುಕಟ್ಟೆಗೂ ಕೊಂಡೊಯ್ದು ಮಾರಾಟ ಮಾಡುವ ಅವಕಾಶ.
ವಿರೋಧ: ಇದನ್ನು ಎಪಿಎಂಸಿ ಬೈಪಾಸ್‌ ಬಿಲ್‌ ಎಂದು ಕರೆದ ರೈತರು, ಈ ಮಸೂದೆಯಿಂದ ಕೃಷಿ ಮಾರುಕಟ್ಟೆಗಳು ಸೊರಗುತ್ತವೆ ಎಂಬುದು ರೈತರ ಅಸಮಾಧಾನವಾಗಿತ್ತು.

2 ಬೆಂಬಲ ಬೆಲೆ ಹಾಗೂ ಹೊಲಗಳಿಗೆ ಸೇವಾ ಖಾತ್ರಿಮಸೂದೆ (2020)
ಉಲ್ಲೇಖ: ರೈತರು, ಬೆಳೆ ಖರೀದಿದಾರ ಸಂಸ್ಥೆಗಳೊಂದಿಗೆ ತಮ್ಮ ಬೆಳೆ ಮಾರಾಟ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲು ಅವಕಾಶ. ಬಿತ್ತನೆ ಶುರುವಾಗುವ ಮುನ್ನವೇ ಬೀಜ, ಕೀಟನಾಶಕ ಹಾಗೂ ಬೆಳೆ ನಿರ್ವಹಣ ಸೌಲಭ್ಯಗಳಿಗಾಗಿ ಖಾಸಗಿ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ.
ವಿರೋಧ: ಈ ಕಾಯ್ದೆಯಿಂದ ಕೃಷಿ ವಲಯವನ್ನು ಕಾರ್ಪೋರೆಟ್‌ ವಲಯವಾಗಿಸುವ ಹುನ್ನಾರ. ಮಧ್ಯವರ್ತಿಗಳ ಹೆಸರಿನಲ್ಲಿ ಖಾಸಗಿ ಕಂಪೆನಿಗಳು ಮಾತ್ರ ಬಲಿಯುತ್ತವೆಂಬ ಆರೋಪ.

3 1955ರ ಅಗತ್ಯ ಸಾಮಗ್ರಿಗಳ ಸಂಗ್ರಹಣ ಕಾಯ್ದೆಗೆ ತಿದ್ದುಪಡಿ (2020)
ಉಲ್ಲೇಖ: 1955ರ ಈ ಕಾಯ್ದೆಯಡಿ, ಕೆಲವು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲು ದಾಸ್ತಾನುದಾರರಿಗೆ ಅವಕಾಶವಿಲ್ಲ. ಆದರೆ 2020ರ ತಿದ್ದುಪಡಿ­ಯಲ್ಲಿ ಆ ನಿರ್ಬಂಧವನ್ನು ತೆಗೆದುಹಾಕಲಾಗಿತ್ತು.
ವಿರೋಧ: ಅಗತ್ಯ ಧವಸ ಧಾನ್ಯಗಳು ದುಬಾರಿ. ಜನಸಾಮಾನ್ಯರಿಗೆ ಹೊರೆ. ಅಗತ್ಯ ಆಹಾರ ಸಾಮಗ್ರಿಗಳ ಕೃತಕ ಅಭಾವ ಸೃಷ್ಟಿಸಿ ಅದರ ಲಾಭ ಪಡೆಯಲು ವರ್ತಕರಿಗೆ ಅವಕಾಶ.

ಜಮೀನಿನಿಂದ ಸಾಮಾಜಿಕ ಜಾಲತಾಣದವರೆಗೆ…
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹೋರಾಟಕ್ಕೇನೋ ಇಳಿದಿದ್ದರಾದರೂ ಆ ವಿಚಾರ ವಿಶ್ವ ಮಟ್ಟದಲ್ಲಿ ಸುದ್ದಿಯಾಗುವುದಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣ. ಆಸ್ಟ್ರೇಲಿಯಾದ ಐಟಿ ಉದ್ಯಮಿ, ಲುಧಿಯಾ ನಾದ ವೈದ್ಯ ಮತ್ತು ಮನ್ಸ ಎಂಬ ಸಣ್ಣ ನಗರದ ಕೃಷಿ ಉದ್ಯಮಿ – ಈ ಮೂವರೂ ಸೇರಿ ಮಾಡಿದ “ಟ್ರ್ಯಾಕ್ಟರ್‌ 2 ಟ್ವಿಟರ್‌’ (‘ಖrಚcಠಿಟ್ಟ 2 ಖಡಿಜಿಠಿಠಿಛಿr’) ಟ್ವಿಟರ್‌ ಹ್ಯಾಂಡಲ್‌ ರೈತರ ಹೋರಾಟವನ್ನು ದಿನನಿತ್ಯ ವರದಿ ಮಾಡಿತ್ತು. ಇದೇ ರೈತರ ಚಳವಳಿಯು ಹೆಚ್ಚಾಗಲು ಬೆಂಬಲ ಕೊಟ್ಟಿತು ಎನ್ನಲಾಗಿದೆ.

ಕಾರ್ಯಕಾರಿಣಿಯಲ್ಲೇ ನಿರ್ಧಾರ?
ಇದೇ ತಿಂಗಳ 7ರಂದು ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೇ ಕೃಷಿ ಕಾಯ್ದೆ ಬಗ್ಗೆ ಚರ್ಚೆ ನಡೆದು, ಆಗಲೇ ಕಾಯ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಚರ್ಚಿಸಲಾಗಿತ್ತು ಎಂದು ಕೆಲವು ಮೂಲಗಳು ತಿಳಿಸಿವೆ. ಈ ಹಿಂದೆ ಫೆಬ್ರವರಿಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿನ ನಿರ್ಣಯದಲ್ಲಿ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಷ್ಟೇ ಅಲ್ಲದೆ ಅದನ್ನು ಪ್ರಶಂಶಿಸಲಾಗಿತ್ತು. ಆದರೆ ನವೆಂಬರ್‌ನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಣಯಗಳ ಪಟ್ಟಿಯಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌, ಕೃಷಿ ರೈಲು ಸೇರಿ ಅನೇಕ ಕೃಷಿ ವಿಚಾರಗಳನ್ನು ಉಲ್ಲೇಖೀಸಲಾಗಿತ್ತಾದರೂ ಕೃಷಿ ಕಾಯ್ದೆಗಳ ಉಲ್ಲೇಖವಿಲ್ಲ. ಆಗಲೇ ಕಾಯ್ದೆಗಳು ರದ್ದಾಗುವ ಸಾಧ್ಯತೆಗಳು ದಟ್ಟವಾಗಿ ಆವರಿಸಿದ್ದವು ಎನ್ನಲಾಗಿದೆ.

ರೈತರ ವಿರುದ್ಧ ಅಧಿಕಾರದಲ್ಲಿರುವವರು ರೂಪಿಸಿದ್ದ ಷಡ್ಯಂತ್ರ ಸೋತಿದೆ. ಸರ್ವಾಧಿಕಾರ ಆಡಳಿತಗಾರರ ದುರಹಂಕಾರವೂ ಸೋತಿದೆ. ಅನ್ನದಾತರು ಗೆದ್ದಿದ್ದಾರೆ. ನಿರ್ಧಾರ ತೆಗೆದುಕೊಳ್ಳ ಬೇಕಿದ್ದರೆ, ಎಲ್ಲರೊಂದಿಗೆ ಚರ್ಚಿಸಿ ತೆಗೆದುಕೊಳ್ಳಬೇಕು. ಮೋದಿ ಸರ ಕಾ ರ ಪಾಠ ಕಲಿತಿದೆ ಎಂದುಕೊಳ್ಳುತ್ತೇನೆ.
-ಸೋನಿಯಾ ಗಾಂಧಿ, ಕಾಂಗ್ರೆಸ್‌ ಮುಖ್ಯಸ್ಥೆ

ಪ್ರತೀ ಪಂಜಾಬಿಯ ಬೇಡಿಕೆಗೆ ಸಮ್ಮತಿಸಿ, ಗುರುನಾನಕ್‌ ಜಯಂತಿಯಂದು ಮೂರು ಕಪ್ಪು ಕಾನೂನುಗಳನ್ನು ತೆಗೆದುಹಾಕಿದ್ದಕ್ಕೆ ಧನ್ಯವಾದಗಳು. ಕೇಂದ್ರ ಸರಕಾರವು ರೈತರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆಂಬ ಖಾತ್ರಿಯಿದೆ.
-ಅಮರೀಂದರ್‌ ಸಿಂಗ್‌, ಪಂಜಾಬ್‌ ಮಾಜಿ ಸಿಎಂ

ಕೃಷಿ ಕಾಯ್ದೆಗಳ ಬಗ್ಗೆ ಹೋರಾಡಿ ಹುತಾತ್ಮರಾದ 700ಕ್ಕೂ ಅಧಿಕ ರೈತರ ಹುತಾತ್ಮತೆ ಇಂದು ಅಮರವಾಗಿದೆ. ಕೃಷಿ ಮತ್ತು ರೈತನ ಉಳಿವಿಗಾಗಿ ಈ ದೇಶದ ಜನರು ಜೀವನವನ್ನೇ ಮುಡಿಪಾಗಿಟ್ಟಿದ್ದನ್ನು ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುತ್ತದೆ.
-ಅರವಿಂದ ಕೇಜ್ರಿವಾಲ್‌, ಹೊಸದಿಲ್ಲಿ ಮುಖ್ಯಮಂತ್ರಿ

ಚಳವಳಿಯ ಪ್ರತೀ ಹಂತದಲ್ಲೂ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಲು ಸರಕಾರ ಪ್ರಯತ್ನಿಸಿದೆ. ಕೆಲವು ಸಂವಹನ ಕೊರತೆಗಳಿಂದಾಗಿ ರೈತರ ಮನವೊಲಿಸುವಲ್ಲಿ ವಿಫ‌ಲರಾಗಿದ್ದೇವೆ. ಕೃಷಿ ಕಾಯ್ದೆಗಳನ್ನು ಹಿಂಪಡೆದ ಪ್ರಧಾನಿಯವರ ನಿರ್ಧಾರವನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇವೆ.
-ಯೋಗಿ ಆದಿತ್ಯನಾಥ, ಉ.ಪ್ರ. ಮುಖ್ಯಮಂತ್ರಿ

ಒಂದು ವರ್ಷದಿಂದ ರೈತರ ಹೋರಾಟದಲ್ಲಿ ಕೊನೆಗೂ ಜಯ ಸಿಕ್ಕಿದೆ. ಹೋರಾಟದ ಇತಿಹಾಸ ದಲ್ಲಿ ಭಾರತದ ರೈತರು ಪ್ರಕಾಶಮಾನ ಅಧ್ಯಾಯ ಬರೆದಿದ್ದಾರೆ. ಸಾಟಿಯಿಲ್ಲದ ದೃಢಸಂಕಲ್ಪ ಮತ್ತು ಅವಿಶ್ರಾಂತ ಮನೋಭಾವದಿಂದ ಹೋರಾಡಿದ ಹುತಾತ್ಮರು, ರೈತರು ಮತ್ತು ಸಂಘಟನೆಗಳಿಗೆ ನನ್ನ ನಮನಗಳು.
-ಪಿಣರಾಯಿ ವಿಜಯನ್‌, ಕೇರಳ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next