Advertisement

“ಸಂಜೀವಿನಿ”ಸಂಸಾರದ ಸಾರ –ಇದು ಹೆಣ್ಣೊಂದು ಕಣ್ಣಾದ ಕಥೆ

10:56 AM Oct 16, 2021 | Team Udayavani |

ಅದು ರಾಜರು ಆಳುತ್ತಿದ್ದ ಕಾಲ. ಆಧುನಿಕತೆಯ ನೆರಳು ಬೀಳುತ್ತಿತ್ತು ಅಷ್ಟೇ, ಅದೊಂದು ಪುಟ್ಟ ಹಳ್ಳಿ ಸುರಪುರ , ಅಲ್ಲೊಂದು ಮನೆ ಅದು ಹಿರಿಯ ತಲೆಮಾರಿನಿಂದ ಬದುಕುತ್ತಿದ್ದ ಮನೆತನ.

Advertisement

ಆ ಮನೆಯ ದಂಪತಿಗಳಿಗೆ ಒಬ್ಬನೇ ಸುಪುತ್ರ, ಆತನಿಗೆ ಮದುವೆಯು ಆಗಿದೆ , ಈ ಇರ್ವರು ಅಜ್ಜ ಅಜ್ಜಿಯಾಗಲು ಕಾಯುತ್ತಿದ್ದಾರೆ…

ಆ ಸುಪುತ್ರನ ನಾಮಧೇಯ ‘ರಾಜು’ ಅವನ ಹೆಂಡತಿ ‘ತ್ರಿವೇಣಿ’.ಸಾಧಾರಣ ಮಧ್ಯಮವರ್ಗದ ಕುಟುಂಬ. ಕೆಲವು ವರ್ಷಗಳ ನಂತರ ತ್ರಿವೇಣಿ ತಾಯಿಯಾದಳು, ರಾಜು ಒಂದು ಗಂಡು ಒಂದು ಹೆಣ್ಣು ಮಕ್ಕಳಿಗೆ ತಂದೆಯಾದ ಖುಷಿಯಲ್ಲಿದ್ದಾನೆ. ಯಾಕೋ ರಾಜು ಅವರ ತಂದೆ  ತಾಯಿಗೆ ಮೊಮ್ಮಗಳನ್ನು ನೋಡಲು ಬರಲೇ ಇಲ್ಲ, ಮೊಮ್ಮಗನನ್ನೇ ಮುದ್ದಾಡುತ್ತಿದ್ದಾರೆ. ಹಳ್ಳಿಯ ವೈದ್ಯರ ಮನೆಯಿಂದ ಇವರ ಸ್ವಗ್ರಹಕ್ಕೆ ಬಂದದ್ದಾಯಿತು, ಕಳೆಗಟ್ಟುವ ಬದಲು ಕಳೆ ಗುಂದಿದ ಛಾಯೆ ಅಜ್ಜ ಅಜ್ಜಿಯ ಮುಖದಲ್ಲಿ.

ಮನೆಗೆ ಬಂದು ಸ್ವಲ್ಪ ಹೊತ್ತಾಗಿದೆ, ಒಳಗೆ ಮಲಗಿದಲ್ಲಿಗೆ ಮಾತಿನ ಚಕಮಕಿ ಜೋರಾಗಿಯೆ ಕೇಳಿಸುತ್ತಿದೆ ತ್ರಿವೇಣಿ ಮೆಲ್ಲನೆ ಎದ್ದು ಮಗುವನ್ನು ಎತ್ತಿಕೊಂಡು ಎನಿದು ನೋಡುತ್ತಿದ್ದಾಳೆ…, ಹಿರಿತಲೆಗಳಿಗೆ ಮೊಮ್ಮಗಳು ಬೇಡವಂತೆ, ಇನ್ನೂ ಸರಿ ಕಣ್ಬಿಡದ ಆ ಕಂದನಿಗೆ ಒಟ್ಟಾರೆ ಬಯ್ಯುತ್ತಿದ್ದಾರೆ, ಹೆಣ್ಣು ಖರ್ಚಂತೆ, ಇನ್ನೂ ಎನೇನೊ …..! ಬಾಯಿಗೆ ಬಂದಂತೆ ಒದರುತ್ತಿದ್ದಾರೆ.

ದಿನ ಕಳೆದಂತೆ ಕಣ್ಣು ಬಿಡದ ಕಂದನ ಬಗ್ಗೆ ಮನೆಯಲ್ಲಿ ಈ ಕಿರಿಕಿರಿ ಜೋರಾಯಿತು, ಯಾಕೆಂದರೆ ಆ ಹಿರಿತಲೆಗಳಿನ್ನೂ ಕಣ್ಬಿಟ್ಟಿರಲಿಲ್ಲ (ಒಳಗಣ್ಣು). ಗಂಡು ಮಗುವನ್ನು ಮುದ್ದಾಗಿ ಸಾಕುತ್ತಿದ್ದರು. ಈ ಗಲಾಟೆ ನಿಲ್ಲದೆ ಕೊನೆಗೆ ಊರ ಹೊರಗಿನ ಶಿವದೇವಾಲಯದಲ್ಲಿ ಈ ಹೆಣ್ಣು ಮಗುವನ್ನು ಯಾರೂ ಇಲ್ಲದ ವೇಳೆ ನೋಡಿ ಗರ್ಭಗುಡಿಯ ಎದುರಿನ ಅಂಗಣದಲ್ಲಿ ಬಿಟ್ಟು ಬಂದರು…, ಈ ಘಟನೆ ನಡೆದು…

Advertisement

*ಸುಮಾರು ೧೯ (19) ವರ್ಷಗಳ ನಂತರ…

ಆ ರಾಜ್ಯದ ರಾಜ ಮಹೇಂದ್ರ ವರ್ಮ ಆಳುತ್ತಿದ್ದ ಕಾಲ. ಪ್ರಜೆಗಳಿಂದ ಬಹಳ ದೂರು ಕೇಳಿ ಬರುತ್ತಿದ್ದ ಕಾರಣ, ರಾಜ್ಯ, ಪ್ರಾಂತ್ಯಗಳ ಪ್ರತಿನಿಧಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ, ಕಳ್ಳತನ, ಸುಲಿಗೆ ಯಾಕೆ ಹೆಚ್ಚಾಗಿದೆ?, ಎನ್ನುವುದನ್ನು ತಾನೆ ಪ್ರತ್ಯಕ್ಷ ತಿಳಿಯಲು ಮಾರುವೇಷದಲ್ಲಿ ಹೊರಟ ರಾಜನಿಗೆ ಮಧ್ಯಾಹ್ನದ ಸುಡುಬಿಸಿಲು ತಡೆದುಕೊಳ್ಳುವುದು ಕಷ್ಟವಾಯಿತು, ಹೊಟ್ಟೆಯು ತಾಳಹಾಕುತ್ತಿತ್ತು.

ಈ ಒಂದು ಗುಡಿಸಲು ಬಿಟ್ಟರೆ ಸುತ್ತೆಲ್ಲೂ ಮನೆ  ಮಠಗಳಿಲ್ಲ, ಬಿಸಿಲ ತಾಪ ತಣಿಸಲು ಗುಡಿಸಲು ಹೊಕ್ಕ ರಾಜನಿಗೆ ಅಲ್ಲೊಬ್ಬರು ಹಣ್ಣು  ಹಣ್ಣು ಅಜ್ಜನನ್ನು ನೋಡಿ ‘ನಾನೊಬ್ಬ ರೈತನ ಮಗ ಸಂತೆಗೆ ಬಂದಿದ್ದೆ ಮಧ್ಯಾಹ್ನ ಆದದ್ದು ತಿಳಿಯಲೇ ಇಲ್ಲ, ಹೊರಗೆ ಬಹಳ ಬಿಸಿಲು ಹಾಗೆ ಇಲ್ಲಿಗೆ ಬಂದೆ’ ಅಂತ ,ಅಜ್ಜ ಕೇಳೋ ಮುಂಚೆಯೇ ಹೇಳಿ ಬಿಟ್ಟ. ಅಜ್ಜ ಕುಳಿತಲಿಂದ ಎದ್ದು ನೀರು ಕೊಟ್ಟು ಮಾತಾಡುತ್ತಾ…

ಮಧ್ಯಾಹ್ನದ ಊಟದ ಹೊತ್ತು ಊಟ ಮಾಡಿ ಹೋಗಿ ಎಂದ ಅಜ್ಜ. ಮೊದಲೆ ಹಸಿವಾಗಿತ್ತು, ತಲೆ ತನ್ನಿಂದ ತಾನೆ ಅಲುಗಾಡಿತ್ತು, ಒಪ್ಪಿಗೆ ಎಂಬಂತೆ. ಆ ಸಣ್ಣ ಗುಡಿಸಲಿನ ಪುಟ್ಟ ಕೋಣೆಗೆ ಹೋದ ಅಜ್ಜ ನೀರು ತಂದು ಕೈ ಕಾಲು, ಮುಖ ತೊಳೆದುಕೊಳ್ಳಿ ಅಂದ. ಒಳಗಿನಿಂದ ಒರ್ವ ಚೆಲುವೆ ಊಟ ತಂದಳು.

ರಾಜನಿಗಾಶ್ಚರ್ಯ ಇವಳ್ಯಾರು ? ಅಬ್ಬಬ್ಬ! ಅದೆಂತಹ ಸೌಂದರ್ಯ…

ಚಂದನದ ಗೊಂಬೆಗಯೊ, ಉರ್ವಶಿ ರಂಬೆಯೊ

ಆಹಾ! ಅಧರದ(ತುಟಿ) ಅಂದವೊ ಚಂದವೋ

ಶಿರಮುಡಿಯ ಜಡೆಯೊ, ಹಾವಿನ ಹೆಡೆಯೋ,

ಬಾಗಿ ಬಳುಕುವ ಮೈಯೋ, ಬೀಸಿ ಕರೆಯುವ ಕೈಯೋ.

ರಾಜ ಕುಳಿತಲ್ಲೇ ಕಳೆದುಹೋದ. ಊಟ ಮಾಡುತ್ತಾ ಈಕೆ ಯಾರು ಎಂಬುದಾಗಿ ಅಜ್ಜನಲ್ಲಿ ಕುತೂಹಲ ತಾಳದೆ ಪ್ರಶ್ನಿಸಿದ. ಕೆದಕಿ ಮತ್ತೆ ವಿಚಾರಿಸಿದ…

” ಈಕೆ ನನ್ನ ಮಗಳು, ನಾನು ಪ್ರತೀ ದಿನ ಶಿವಾದೇವಾಲಯಕ್ಕೆ ಹೋಗುತ್ತಿದ್ದೆ, ಯಾಕೆಂದರೆ ನನಗೆ ಬೇರೆ ಯಾರು ಇರಲಿಲ್ಲ, ನಮ್ಮ ಊರಲ್ಲಿ ಪ್ರವಾಹ ಬಂದು ಎಲ್ಲಾ ನಾಶವಾಗಿತ್ತು ನನ್ನ ಕುಟುಂಬದವರು ಎಲ್ಲಿದ್ದಾರೆ ಏನು ಕಥೆ ನನಗೆ ಗೊತ್ತಿಲ್ಲ, ನಾನು ಅನಿವಾರ್ಯವಾಗಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಊರು ಬಿಟ್ಟು ಈ ಊರಿಗೆ ಬಂದು ನೆಲೆಸಿದೆ, ಅವತ್ತು ಒಂದು ದಿನ ಎಂದಿನಂತೆ ನನ್ನ ಒಂಟಿತನ ಮರೆಸಲು ದೇವಾಲಯಕ್ಕೆ ಬೇಗನೆ ಹೋಗಿದ್ದೆ. ಅಂಗಣದಲ್ಲಿ ಯಾರು ಇರಲಿಲ್ಲ. ಒಂದು ಮಗುವನ್ನು ಬಟ್ಟೆಯಲ್ಲಿ ಮಲಗಿಸಿದ್ದರು, ಆ ಆಳುತ್ತಿದ್ದ ಮುದ್ದಾದ ಮಗುವನ್ನು ಎತ್ತಿಕೊಳ್ಳೊ ಮುಂಚೆ ಬಹಳ ಹುಡುಕಿದೆ, ಕರೆದೆ ಯಾರೂ ಇರಲಿಲ್ಲ.

ಆ ಶಿವನೆ ಕೊಟ್ಟ ಪ್ರಸಾದವೇನೋ ಎಂಬಂತೆ ಧೈರ್ಯ ಮಾಡಿ ನನ್ನ ಗುಡಿಸಲಿಗೆ ತಂದೆ. ಆಕೆಗೆ ತಂದೆ ತಾಯಿ ಎಲ್ಲವೂ ನಾನೆ ಆಗಿ ಸಾಕಿದೆ. ಹಳ್ಳಿ ಮದ್ದು, ಅಡುಗೆ ಎಲ್ಲವನ್ನೂ ಕಲಿಸಿದೆ. ಈಗ ಸುಮಾರು ೨೦ ವರ್ಷದ ಒಡನಾಟದ ನನ್ನ ಬದುಕಲ್ಲಿ ಇವಳಿಲ್ಲದೆ ನಾನಿಲ್ಲ ಎಂಬಂತಾಗಿದೆ, ನನ್ನ ಆರಾಧ್ಯ ದೇವನ ದೇವಾಲಯಕ್ಕೆ ನಿತ್ಯ ಹೊಗುತ್ತಿದ್ದವ ಈಗ ವಾರಕ್ಕೊಮ್ಮೆ ಹೋಗುತ್ತಿದ್ದೇನೆ ಯಾಕೆಂದರೆ ನನ್ನ ದೇವರು ಈ ನನ್ನ ಮಗಳು. ನನ್ನ ಜೀವನಕ್ಕೆ ಮರು ಚೈತನ್ಯ ಕೊಟ್ಟ “ಸಂಜೀವಿನಿ”.

ಇಷ್ಟೆಲ್ಲಾ ಕೇಳಿದ ರಾಜ, ಅಜ್ಜನಲ್ಲಿ ನಿಜ ವಿಷಯ ಅರುಹಿದ, ನಾನು ಈ ನಾಡಿನ ರಾಜ ಮಹೇಂದ್ರ ವರ್ಮ. ರಾಜಕೀಯ ಕಾರಣಕ್ಕಾಗಿ ಮಾರುವೇಷದಲ್ಲಿದ್ದೇನೆ ಎಂದು ಮುಖದ ವೇಷ ತೆಗೆದ. ಅಜ್ಜನಿಗೆ ಜೀವ ಬಾಯಿಗೆ ಬಂದಂತಾಯಿತು, ಅವಕ್ಕಾಗಿ ನೋಡುತ್ತಾ ಕೂತ ಅಜ್ಜನನ್ನು ರಾಜ ಎಚ್ಚರಿಸಿದ , ತಿಳಿಯದೆ ರಾಜನೊಟ್ಟಿಗೆ ಸಲುಗೆಯಿಂದ ವರ್ತಿಸಿದಕ್ಕೆ ಅಜ್ಜ ಕ್ಷಮೆಯಾಚಿಸಿದ.

ರಾಜ ನೇರವಾಗಿ ತನ್ನ ಮನದಿಚ್ಚೆಯನ್ನು ತಿಳಿಸಿದ, ಸಂಜೀವಿನಿಯನ್ನು ಮದುವೆಯಾಗಲು ನಿಮ್ಮ ಒಪ್ಪಿಗೆ ಇದೆಯ ಎಂದು ಕೇಳಿದ.  ಇದು ಸಾಧ್ಯವೇ ಮೊದಲು ಅಚ್ಚರಿ ಪಟ್ಟ ಅಜ್ಜನ ಖುಷಿಗೆ ಪಾರವೇ ಇಲ್ಲ. ಆಕೆಯು ಒಪ್ಪಿದ್ದಾಯಿತು, ರಾಜನ ಇಚ್ಚೆಯಂತೆ ಮದುವೆಯು ನೆರವೇರಿತು.

ಸಂಜೀವಿನಿ ರಾಣಿಯಾಗಿ ಕೆಲ ತಿಂಗಳು ಕಳೆದಿದೆ, ರಾಜನ ಆಸ್ಥಾನಕ್ಕೆ ಕೆಲಸ ಕೇಳಿಕೊಂಡು ಆಶ್ರಯ ನೀಡುವಂತೆ ಒಂದು ಕುಟುಂಬ ಬಂದಿದೆ. ರಾಣಿಯಲ್ಲಿ ಕೇಳುವಂತೆ ದ್ವಾರ ಪಾಲಕ ಹೇಳಿದ್ದಾನೆ. ಹೇಗೋ ಅನುಮತಿ ಕೇಳಿ ರಾಣಿಯನ್ನು ಬೇಟಿಯಾದರು ,

ರಾಜು ತಮ್ಮ ವೃತ್ತಾಂತ ಹೇಳುತ್ತಾ…

ನನಗೊಬ್ಬ ಮಗನಿದ್ದಾನೆ , ಆತನನ್ನು ಬಹಳ ಸೌಕರ್ಯದಿಂದ ಮುದ್ದಾಗಿ ಸಾಕಿದ್ದೆವು, ಕಲಿಯಲು ದೂರದ ಗುರುಕುಲಕ್ಕೆ ಕಳಿಸಿದೆವು, ಆದರೆ ಆತ ಅಲ್ಲಿ ಸರಿ ವಿದ್ಯೆ ಕಲಿಯದೆ ಗುರುಗಳಿಂದ ತಪ್ಪಿಸಿ ಪುಂಡು  ಪೋಕರಿಗಳ ಸಹವಾಸದಿಂದ ಜೂಜು, ಕುಡಿತ ಕಲಿತುಕೊಂಡ, ನಮ್ಮನ್ನು ಸಾಕುತ್ತಾನೆ ಅಂದುಕೊಂಡ ಆತನೇ ಬೀದಿ ಪಾಲು ಮಾಡಿದ್ದಾನೆ. ಮನೆಯ ವಸ್ತುಗಳನ್ನೆಲ್ಲಾ ಮಾರಿ ಖಾಲಿ ಮಾಡಿದ್ದಾನೆ. ಹಿಂದೆ ಗಂಡು ಮಗು ಅನ್ನೊ ವ್ಯಾಮೋಹದಿಂದ ಅವನ ಅಜ್ಜ ಅವನಿಗೆ ಆಗಲೇ ‘ವಿಲ್ಲ್’ನಲ್ಲಿ ಮನೆ  ಆಸ್ತಿ ಬರೆದಿಟ್ಟರು….

ಇಷ್ಟೆಲ್ಲ ಆಕೆಯ ಗಂಡ ಹೇಳುವಾಗ ತ್ರಿವೇಣಿಯ ಕಣ್ಣು ಬೇರೆಯೆ ಏನೊ ಕಥೆ ಹೇಳುತ್ತಿತ್ತು, ಆಕೆ ಹೇಳಿಯೆ ಬಿಟ್ಟಳು , ಅತ್ತೆ ಮಾವನ ಗಂಡು ಮಗುವಿನ ವ್ಯಾಮೋಹ, ಹೆಣ್ಣು ಮಕ್ಕಳ ಮೇಲಿನ ತಿರಸ್ಕಾರ, ಆ ಹೆಣ್ಣು ಮಗುವನ್ನು ದೇವಾಲಯದಲ್ಲಿ ಬಿಟ್ಟು ಬಂದದ್ದು… ಎಲ್ಲವನ್ನೂ ಒಂದೇ ಉಸಿರಲ್ಲಿ ಉಸುರಿ ಕಣ್ಣ ನೀರು ಜಾರದಂತೆ ಉಜ್ಜಿಕೊಂಡಳು, ಏನೊ ನಿರಾಳತೆ ಆಕೆಯ ಮುಖದಲ್ಲಿ ಇದೆಲ್ಲಾ ಅಜ್ಜ ಅಂದು ರಾಜನಿಗೆ ಹೇಳುವುದನ್ನು ಕೇಳಿಸಿಕೊಂಡಿದ್ದಳು.

ಆ ಕ್ಷಣ ರಾಣಿಗೆ ಏನೋ ಮಮಕಾರದ ಸೆಳೆತ.. ಎದುರಿರುವವಳು ನನ್ನ ಅಮ್ಮನೇ ಎಂಬಂತೆ.., ಆಕೆಯ ಮನದಾಳದ ಸೆಳೆತ ಕೇಳಿದ ಕಥೆ  ಮುಂದಿರುವವರ ವ್ಯಥೆಗಳನ್ನು ಜೋಡಿಸಿಬಿಟ್ಟಿತ್ತು. ರಾಣಿಗೆ ಇದು ತನ್ನದೇ ಕುಟುಂಬವೆಂಬ ಅರಿವಾಯಿತು. ಏನೂ ಹೇಳದೆ ಕೆಲಸಕ್ಕೆ ನೇಮಿಸಿದಳು, ಬೇಡವೆಂದು ಎಸೆದ ಹೆಣ್ಣೆ ದಿನನಿತ್ಯ ಅನ್ನ ಹಾಕುವಂತಾಯಿತು. ಇದೆ ಅಲ್ಲವೆ ವಿಧಿಯ ವಿಪರ್ಯಾಸ.

“ಹೆಣ್ಣು ಸಂಸಾರದ ಕಣ್ಣು” ಸಂಸ್ಕಾರ, ನಡತೆ ಚೆನ್ನಾಗಿದ್ದರೆ. ಸಂಸಾರ ನಿಸ್ಸಾರ ಆಗೋದಿಲ್ಲ. ದೇವರ ವರವನ್ನು ಬೇಡವೆನ್ನೋದಕ್ಕೆ ನಾವ್ಯಾರು, ಭೇದ ಭಾವಗಳ ಬಣ್ಣ ಬಣ್ಣದ ಕನ್ನಡಿ ಧರಿಸಿ ನೋಡೊ ಜನಕ್ಕೆ ಜಗ ಜಗಮಗಿಸ ಬಹುದು , ಆ ಬಣ್ಣಗಳು ಧರಿಸಿದ ಕನ್ನಡಿಯದ್ದೆ ಹೊರತು ಜಗದಲ್ಲಿಲ್ಲ.. ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ ಕಾಲಾಯ ತಸ್ಮೈ ನಮಃ ಏನಂತೀರಿ?

  • ದಿನೇಶ ಎಂ, ಹಳೆನೇರೆಂಕಿ
Advertisement

Udayavani is now on Telegram. Click here to join our channel and stay updated with the latest news.

Next