Advertisement

Karnataka: ದೇವಾಲಯಗಳ ಮೇಲಿನ ಸರಕಾರದ ಕಪಿಮುಷ್ಟಿಗೆ ಕೊನೆ ಎಂದು?

12:51 AM Jan 29, 2024 | Team Udayavani |

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಎ ವರ್ಗದ ಅನೇಕ ದೇಗುಲಗಳ ವ್ಯವಸ್ಥಾಪನ ಮಂಡಳಿಯ ಅವಧಿ ಮುಗಿದಿದ್ದು ಹೊಸ ಸಮಿತಿ ರಚನೆಯ ಉದ್ದೇಶದಿಂದ ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಆಡಳಿತದಲ್ಲಿರುವ ಸರಕಾರ ತನ್ನ ಪಕ್ಷದ ನಂಟಿರುವವರನ್ನೇ ಈ ಸಮಿತಿಗೆ ನೇಮಿಸುವುದು ಸಾಮಾನ್ಯ. ಡೊಡ್ಡ ದೇವಾಲಯಗಳ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ತೆರೆಮರೆಯಲ್ಲಿ ಈಗಾಗಲೇ ರಾಜಕಾರಣಿಗಳ ಹಗ್ಗ ಜಗ್ಗಾಟ ನಡೆದಿರುವ ವರದಿ ಇದೆ. ಹಿಂದೂ ದೇವಾಲಯಗಳಲ್ಲಿ ರಾಜಕಾರ ಣಿಗಳ ಪಾರುಪತ್ಯಕ್ಕೆ ಕೊನೆ ಯಾವಾಗ ಎನ್ನುವ ಪ್ರಶ್ನೆ ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತದೆ.

Advertisement

ದೇವರ ಅಸ್ತಿತ್ವವನ್ನೇ ನಂಬದ ನಾಸ್ತಿಕ/ಸೆಕ್ಯುಲರ್‌ ಸರಕಾರಗಳೂ ಆಸ್ತಿಕರ ಶ್ರದ್ಧಾಕೇಂದ್ರಗಳಾದ ದೇವಾಲಯಗಳನ್ನು ನಿಯಂತ್ರಿಸುತ್ತಾ ಬಂದಿವೆ. ರಾಜಕಾರಣಿಗಳು ತಮ್ಮ ಚೇಲಾಗಳನ್ನು ಧರ್ಮದರ್ಶಿಗಳ ಕುರ್ಚಿಯಲ್ಲಿ ಆಸೀನರಾಗುವಂತೆ ಮಾಡಲು ನಡೆಸುವ ಗುದ್ದಾಟ ಇತ್ತೀಚೆಗಂತೂ ರೇಜಿಗೆ ಹುಟ್ಟಿಸುವಷ್ಟು ಮೇರೆ ಮೀರಿದೆ. ಸರಕಾರದಿಂದ ನೇಮಕಗೊಳ್ಳುವ ಧರ್ಮದರ್ಶಿಗಳು ತಮ್ಮ ನೇಮಕದೊಂದಿಗೆ ಅಭಿನಂದನೆಯ ದೊಡ್ಡ ಕಟೌಟುಗಳನ್ನು ಹಾಕಿ ಕೊಳ್ಳುವುದು, ಕ್ಷೇತ್ರಕ್ಕೆ ಬರುವ ಗಣ್ಯರೊಂದಿಗೆ ಫೋಟೋಗೆ ಪೋಸು ಕೊಡುವುದರಲ್ಲಿ ಸಂತೋಷ ಕಾಣುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ!

ಪ್ರಮುಖ ಹಿಂದೂ ದೇವಾಲಯಗಳು ವರ್ಷದಿಂದ ವರ್ಷಕ್ಕೆ ಆದಾಯ ವೃದ್ಧಿ ದಾಖಲಿಸಿದರೂ ಕ್ಷೇತ್ರದಲ್ಲಿ ಯಾತ್ರಿಕರ ಸೌಲಭ್ಯ ಮಾತ್ರ ಸುಧಾರಣೆ ಕಾಣದೇ ನೂರಾರು ಕಿಲೋ ಮೀಟರ್‌ ದೂರದಿಂದ ಬರುವ ಬಡ ಯಾತ್ರಿಕರು ಅರೆ ಹೊಟ್ಟೆ ಉಣ್ಣಬೇಕಾದ, ಯಾವುದೋ ಅಂಗಡಿ-ಮುಂಗಟ್ಟುಗಳ ಮುಂದೆ ರಾತ್ರಿ ಕಳೆದು ಹೋಗಬೇಕಾದ ಸ್ಥಿತಿ ಇದೆ. ಶೌಚ, ಸ್ನಾನಾದಿಗಳಂತಹ ಮೂಲಸೌಲಭ್ಯವಂತೂ ಕೇಳಲೇಬಾರದು ಎನ್ನುವಂತಿದೆ. ತುಂಬಿ ಹರಿಯುವ ಗಠಾರಗಳು, ನೈರ್ಮಲ್ಯವಿಲ್ಲದ ಬೀದಿಗಳು, ಪಾರ್ಕಿಂಗ್‌ ಸೌಲಭ್ಯವಿಲ್ಲದ ವಸತಿ ಸಮುಚ್ಚಯಗಳು. ತಾಪತ್ರಯ ಒಂದೆರಡಲ್ಲ.

ಆದರೆ ಕರಾವಳಿ ಜಿಲ್ಲೆಗಳಲ್ಲಿ ಸರಕಾರದ ನಿಯಂತ್ರಣದಿಂದ ಹೊರತಾದ ಕೆಲವು ದೇಗುಲಗಳಲ್ಲಿ ಅತ್ಯುತ್ತಮ ಎನಿಸುವ ವ್ಯವಸ್ಥೆ ಕಂಡವರ ಮನದಲ್ಲಿ ಸರಕಾರಿ ನಿಯಂತ್ರಣದ ಔಚಿತ್ಯದ ಪ್ರಶ್ನೆ ಸ್ವಾಭಾವಿಕವಾಗಿಯೇ ಉದಿಸದೇ ಇರದು. ಅಷ್ಟು ಮಾತ್ರವಲ್ಲದೆ ಭಕ್ತರಿಗೆ ಆವಶ್ಯವಿರುವ ಮೂಲಸೌಕರ್ಯ, ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆಗಳೊಂದಿಗೆ ಈ ದೇಗುಲಗಳು ಭಕ್ತರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಈ ದೇಗುಲಗಳನ್ನು ಸಂದರ್ಶಿಸಿದ ಭಕ್ತರು ಕೂಡ ನೆಮ್ಮದಿಯಿಂದ ದೇವರ ದರ್ಶನಗೈದು ನಿರಾಳರಾಗಿ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಗುಲಗಳು ಯಾವುದೇ ಹಣಕಾಸು ಅಕ್ರಮಗಳಿಗೆ ಎಡೆ ಇಲ್ಲದಂತೆ ಪಾರದರ್ಶಕವಾಗಿ ಕಾರ್ಯ ನಿರ್ವಹಿ ಸುತ್ತಿರುವುದು ಇವುಗಳ ಮತ್ತೂಂದು ಹೆಗ್ಗಳಿಕೆ.

ಈ ಹಿನ್ನೆಲೆಯಲ್ಲಿ ಆಗಾಗ್ಗೆ ಹಿಂದೂ ದೇವಾ ಲಯಗಳ ಮೇಲೆ ಸರಕಾರದ ನಿಯಂತ್ರಣ ಕೊನೆಗೊಳ್ಳಲಿ ಎನ್ನುವ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ದೇವಾಲಯಗಳ ಹುಂಡಿಯ ಹಣವನ್ನು ಸರಕಾರ ದುರುಪಯೋಗ ಪಡಿಸಿ ಕೊಳ್ಳುತ್ತಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಹುಂಡಿಯ ಹಣದಲ್ಲಿ ವಾಹನಗಳನ್ನು ಖರೀದಿಸುವುದು ಹಾಗೂ ಅದನ್ನು ಅಧಿಕಾರಿಗಳು ಮತ್ತೆಲ್ಲೋ ಬಳಕೆ ಮಾಡಿಕೊಳ್ಳುವ ದೃಷ್ಟಾಂತಗಳು ಆಗಾಗ್ಗೆ ಕೇಳಿ ಬರುವುದು ಆಸ್ತಿಕರ ಕೆಂಗಣ್ಣಿಗೆ ಕಾರಣವಾಗಿದೆ. ದೇವಾಲಯಗಳ ಆದಾಯ ಅಲ್ಲಿನ ಮೂಲಸೌಕರ್ಯ ವೃದ್ಧಿ, ದಾಸೋಹ ಮತ್ತಿತರ ಸತ್ಕಾರ್ಯಗಳಿಗೆ ವಿನಿಯೋಗವಾಗಲಿ ಎನ್ನುವ ಭಕ್ತರ ಕೂಗು ತಥ್ಯವಿಲ್ಲದ್ದೇನಲ್ಲ.

Advertisement

ಕರಾವಳಿ ಜಿಲ್ಲೆಗಳ ಸರಕಾರದ ನಿಯಂತ್ರಣದಿಂದ ಹೊರತಾದ ಕೆಲವು ದೇಗುಲಗಳಲ್ಲಿ ಅತ್ಯುತ್ತಮ ಎನಿಸುವ ವ್ಯವಸ್ಥೆ ಕಂಡವರ ಮನದಲ್ಲಿ ಸರಕಾರಿ ನಿಯಂತ್ರಣದ ಔಚಿತ್ಯದ ಪ್ರಶ್ನೆ ಸ್ವಾಭಾವಿಕವಾಗಿಯೇ ಉದಿಸದೇ ಇರದು.

ಇಹದ ಬದುಕಿನಲ್ಲಿ ಶಾಂತಿ ಹಾಗೂ ಪರದಲ್ಲಿ ಮೋಕ್ಷಕ್ಕಾಗಿಯೇ ಮನುಷ್ಯ ಧರ್ಮ-ದೇವರ ಶರಣು ಹೋಗುವುದು ಸಾಮಾನ್ಯ. ವಿಜ್ಞಾನ- ತಂತ್ರಜ್ಞಾನ ಅದೆಷ್ಟು ಮುಂದುವರಿದರೂ ಅಲೌಕಿಕ ಶಕ್ತಿಯ ಅಗಾಧತೆಯನ್ನು ಅರಿಯಲು ಮನುಷ್ಯನಿಗೆ ಸಾಧ್ಯವಾಗಿಲ್ಲ. ಆದ್ದರಿಂದಲೇ ದೇವರ ಆಲಯಗಳು ಭಕ್ತ ಸಾಗರದಿಂದ ತುಂಬಿ ತುಳುಕುತ್ತಿವೆ. ಧರ್ಮವನ್ನು ನಾಗರಿಕರ ಖಾಸಗಿ ಬದುಕು ಎನ್ನುವುದನ್ನು ಸಂವಿಧಾನ ಒಪ್ಪಿದರೂ ಸರಕಾರದ ಹಿಡಿತದಲ್ಲಿ ಸಿಲುಕಿ ನಮ್ಮ ದೇವಾಲಯಗಳು ಅವ್ಯವಸ್ಥೆಯ ಆಗರವಾಗಿವೆ. ದೇವಾಲಯಗಳ ವ್ಯವಸ್ಥಾಪನ ಮಂಡಳಿಗಳಿಗೆ ನೇಮಕವಾಗುವವರು ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆಗಮಿಸುವ ಭಕ್ತರಲ್ಲಿ ದೇವರನ್ನು ಕಾಣುವಂತಾಗಲಿ.

ಹಿಂದೂ ದೇವಾಲಯಗಳ ಮೇಲೆ ಸರಕಾರದ ನಿಯಂತ್ರಣ ಕೊನೆಗೊಳ್ಳಲಿ ಎನ್ನುವ ಕೂಗು ಹೊಸದೇನಲ್ಲ. ದೇವಾಲಯಗಳ ಹುಂಡಿಯ ಹಣವನ್ನು ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ಆರೋಪವೂ ಇಂದು ನಿನ್ನೆಯದಲ್ಲ. ದೇವಾಲಯಗಳ ಆದಾಯ ಅಲ್ಲಿನ ಮೂಲಸೌಕರ್ಯ ವೃದ್ಧಿ, ದಾಸೋಹ ಮತ್ತಿತರ ಸತ್ಕಾರ್ಯಗಳಿಗೆ ವಿನಿಯೋಗವಾಗಲಿ ಎನ್ನುವ ಭಕ್ತರ ಆಗ್ರಹ ಸದುದ್ದೇಶದಿಂದ ಕೂಡಿದ್ದಾಗಿದೆ. ಸರಕಾರದ ನಿಯಂತ್ರಣದಿಂದ ಹೊರತಾದ ಕರಾವಳಿ ಜಿಲ್ಲೆಗಳಲ್ಲಿನ ಕೆಲವು ದೇಗುಲಗಳಲ್ಲಿರುವ ಅತ್ಯುತ್ತಮ ಎನಿಸುವ ವ್ಯವಸ್ಥೆಯನ್ನು ಕಂಡವರ ಮನದಲ್ಲಿ ಸರಕಾರಿ ನಿಯಂ ತ್ರಣದ ಔಚಿತ್ಯದ ಬಗ್ಗೆ ಪ್ರಶ್ನೆ ಮೂಡದೇ ಇರಲಾರದು.

 ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next