Advertisement

ಸಚಿವರಾಗುವ ಆಸೆ, ಖಾತೆಗಳಿಗೆ ಮಹದಾಸೆ

11:52 PM Feb 01, 2020 | Team Udayavani |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತವಾಗುತ್ತಿದ್ದಂತೆ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬೆನ್ನು ಬಿದ್ದಿದ್ದಾರೆ. ಶುಕ್ರವಾರ ರಾತ್ರಿ ದೆಹಲಿಯಿಂದ ಪಕ್ಷದ ವರಿಷ್ಠರಿಂದ ಗ್ರೀನ್‌ ಸಿಗ್ನಲ್‌ ಜತೆಗೆ ಸಂದೇಶ ಹೊತ್ತು ತರುತ್ತಿದ್ದಂತೆ ಆಕಾಂಕ್ಷಿಗಳ ದಂಡು ಶನಿವಾರ ಬೆಳ್ಳಂಬೆಳಗ್ಗೆ ಯಡಿಯೂರಪ್ಪ ನಿವಾಸಕ್ಕೆ ಲಗ್ಗೆ ಇಟ್ಟಿತು.

Advertisement

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಅವರು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತನಾಡಿದರೆ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಉಮೇಶ್‌ ಕತ್ತಿ ಮುಖ್ಯಮಂತ್ರಿಯವರ ನಿವಾಸಕ್ಕೆ ಆಗಮಿಸಿ ಚರ್ಚಿಸಿದರು. ಈ ಮಧ್ಯೆ, ರಮೇಶ್‌ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಕೊಟ್ಟ ಮಾತಿನಂತೆ ಹನ್ನೊಂದು ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮಹೇಶ್‌ ಕುಮಟಳ್ಳಿ ಅಥವಾ ಶ್ರೀಮಂತ ಪಾಟೀಲ್‌ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೊಟ್ಟು ಮತ್ತೂಬ್ಬರಿಗೆ ನಿಗಮ ಮಂಡಳಿ ಸ್ಥಾನ ಕೊಡಲಾಗುವುದು ಎಂಬ ಪ್ರಸ್ತಾಪದ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದರು ಎಂದು ಹೇಳಲಾಗಿದೆ. ಮತ್ತೂಂದೆಡೆ ಸಂಪುಟದಲ್ಲಿ ಸ್ಥಾನ ಪಡೆಯುವುದು ಖಚಿತವಾಗುತ್ತಿದ್ದಂತೆ ಅರ್ಹ ಶಾಸಕರು ಪ್ರಬಲ ಖಾತೆಗೆ ಬೇಡಿಕೆ ಇಟ್ಟಿದ್ದಾರೆ.

ನಗರಾಭಿವೃದ್ಧಿ ಖಾತೆ ಮೇಲೆ ಬೈರತಿ ಬಸವರಾಜ್‌, ಬೆಂಗಳೂರು ಅಭಿವೃದ್ಧಿ (ಬಿಡಿಎ, ಬಿಬಿಎಂಪಿ ಸೇರಿ) ಖಾತೆ ಮೇಲೆ ಎಸ್‌. ಟಿ.ಸೋಮಶೇಖರ್‌ , ನೀರಾವರಿ ಅಥವಾ ಸಮಾಜ ಕಲ್ಯಾಣ ಖಾತೆ ಮೇಲೆ ರಮೇಶ್‌ ಜಾರಕಿಹೊಳಿ ಕಣ್ಣಿಟ್ಟು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿದ್ದಾರೆಂದು ಹೇಳಲಾಗಿದೆ. ಡಾ.ಕೆ.ಸುಧಾಕರ್‌, ಆನಂದ್‌ಸಿಂಗ್‌, ಗೋಪಾಲಯ್ಯ, ಬಿ.ಸಿ.ಪಾಟೀಲ್‌ ಸಹ ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದಿದ್ದಾರೆ. ಆನಂದ್‌ಸಿಂಗ್‌ ಈ ಸಂಬಂಧ ಮುಖ್ಯಮಂತ್ರಿಯವರನ್ನು ಶನಿವಾರ ಸಂಜೆ ಭೇಟಿ ಮಾಡಿ ಚರ್ಚಿಸಿದರು.

ಯಡಿಯೂರಪ್ಪ ಅವರು ಸಚಿವಾಕಾಂಕ್ಷಿಗಳ ಸಭೆ ಕರೆದು ಶನಿವಾರ ಮಾತನಾಡುತ್ತಾರೆಂದು ಹೇಳಲಾಗಿತ್ತಾದರೂ ಕೇಂದ್ರ ಬಜೆಟ್‌ ಹಾಗೂ ಪೂರ್ವ ನಿಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ. ಭಾನುವಾರ ಈ ಬಗ್ಗೆ ಚರ್ಚಿಸಬಹುದು. ಜತೆಗೆ, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿ ಪ್ರಮುಖ ಸಚಿವರ ಜತೆ ದೆಹಲಿಯಲ್ಲಿ ಅಮಿತ್‌ ಶಾ, ಜೆ.ಪಿ.ನಡ್ಡಾ ಅವರೊಂದಿಗೆ ನಡೆದ ಮಾತುಕತೆಯ ಮಾಹಿತಿ ನೀಡಿ ಅವರ ಸಂದೇಶ ಸಹ ತಿಳಿಸಿದ್ದಾರೆ ಎನ್ನಲಾಗಿದೆ.

Advertisement

ಪುನಾರಚನೆ ಆಗತ್ತಾ? ಅಮಿತ್‌ ಶಾ ಹಾಗೂ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಅವರಿಗೆ ಕೆಲವೊಂದು ಸಲಹೆ ನೀಡಿದ್ದಾರೆ. ಇದೇ ಕಾರಣಕ್ಕೆ ನಾನು ಕೆಲವು ನಾಯಕರ ಜತೆ ಚರ್ಚಿಸಿ ಮತ್ತೂಮ್ಮೆ ಅಮಿತ್‌ ಶಾ ಅವರೊಂದಿಗೂ ಮಾತನಾಡಿ ಅಂತಿಮಗೊಳಿಸುತ್ತೇನೆಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅಮಿತ್‌ ಶಾ ಹಾಗೂ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಅವರಿಗೆ ನೀಡಿರುವ ಸಲಹೆಯಾ ದರೂ ಏನು ಎಂಬುದೇ ಕುತೂಹಲ ಮೂಡಿಸಿದೆ. ಸಂಪುಟ ವಿಸ್ತರಣೆ ಜತೆಗೆ ಸಣ್ಣ ಪ್ರಮಾಣದ ಪುನಾರಚನೆಯೂ ನಡೆಯುವುದೇ ಎಂಬ ಅನುಮಾನವೂ ಉಂಟಾಗಿದೆ.

ಪುನಾರಚನೆ ಆಗಿದ್ದೇ ಆದರೆ ಯಾರನ್ನು ಕೈ ಬಿಡಲಾಗುವುದು ಎಂಬ ಆತಂಕವೂ ಸಚಿವರಿಗಿದೆ. ಸಿ.ಸಿ.ಪಾಟೀಲ್‌, ಪ್ರಭು ಚೌವ್ಹಾಣ್‌ ಸೇರಿ ಕೆಲವರನ್ನು ಕೈ ಬಿಡಲಾಗುವುದು ಎಂಬ ವದಂತಿಯೂ ಹಬ್ಬಿದೆ. ಇದರ ನಡುವೆಯೇ ಶನಿವಾರ ಸಚಿವ ಸಿ.ಸಿ.ಪಾಟೀಲ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಯಡಿಯೂರಪ್ಪ ಅವರು ಆಪ್ತರ ಬಳಿ ಹೇಳಿರುವ ಪ್ರಕಾರ ಬಹುತೇಕ ಸೋಮವಾರವೇ ಸಂಪುಟ ವಿಸ್ತರಣೆಯಾಗಬಹುದು ಎಂದು ಬಿಜೆಪಿಯ ನಾಯಕರು ಹೇಳುತ್ತಾರೆ.

ನನಗೆ ಪ್ರಬಲ ಖಾತೆ ದೊರೆ ಯುವ ನಿರೀಕ್ಷೆಯಿದೆ. ನಗರಾಭಿವೃದ್ಧಿ ಖಾತೆ ಸಿಕ್ಕರೆ ಸಂತೋಷ. ನಗರಾಭಿವೃದ್ಧಿ ಖಾತೆಯಲ್ಲಿ ಕೆಲಸ ಮಾಡಬೇಕೆಂಬ ಆಸೆಯಿದೆ. ಮುಖ್ಯಮಂತ್ರಿಯವರ ತೀರ್ಮಾನಕ್ಕೆ ಬಿಟ್ಟಿದ್ದು.
-ಬೈರತಿ ಬಸವರಾಜ್‌, ಸಚಿವಾಕಾಂಕ್ಷಿ

ಮುಖ್ಯಮಂತ್ರಿ ಯವರು ನನ್ನನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆಯಿದೆ. ಹೀಗಾಗಿ, ಸಂಪುಟ ವಿಸ್ತರಣೆ ಸಂಬಂಧ ಬೇರೆ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ.
-ಮಹೇಶ್‌ ಕುಮಟಳ್ಳಿ, ಸಚಿವಾಕಾಂಕ್ಷಿ

Advertisement

Udayavani is now on Telegram. Click here to join our channel and stay updated with the latest news.

Next