Advertisement

ಶಾಲೆಗಳಲ್ಲಿ “ಜಲವರ್ಷ’ಕ್ಕೆ ಅಣಿಯಾದ ಶಿಕ್ಷಣ ಇಲಾಖೆ

12:12 AM Jul 14, 2019 | Sriram |

ವಿಶೇಷ ವರದಿ –ಮಹಾನಗರ: ರಾಜ್ಯದಲ್ಲಿ ಮಳೆ ಕೊರತೆಯ ಅಪಾಯ ಎದುರಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರಕಾರಿ ಶಾಲಾ ಮಕ್ಕಳಿಗೆ ನೀರಿನ ಮಹತ್ವ ತಿಳಿಸಲು ಮುಂದಾಗಿದೆ. ಇದಕ್ಕಾಗಿ ಈ ಶೈಕ್ಷಣಿಕ ಅವಧಿ ಪೂರ್ಣ “ಜಲವರ್ಷ’ ಆಚರಣೆಗೆ ನಿರ್ಧರಿಸಿದೆ.

Advertisement

ಜಲದ ಮೂಲವನ್ನು ಅರಿಯುವ ಜತೆಗೆ ನೀರಿನ ಮೌಲ್ಯವನ್ನು ತಿಳಿಯುವುದು, ನೀರಿನ ಸದ್ಬಳಕೆ, ಜಲ ಮಾಲಿನ್ಯಗೊಳ್ಳದಂತೆ ಕ್ರಮ ಕೈಗೊಳ್ಳುವುದು, ಹೊಸ ಜಲಮೂಲಗಳನ್ನು ನಿರ್ಮಿಸುವುದು, ಜಲ ಸಂರಕ್ಷಣೆ ಕುರಿತು ಮಕ್ಕಳಲ್ಲಿ, ಪೋಷಕರಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಆಚರಣೆಯ ಉದ್ದೇಶ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯಾದ್ಯಂತ ಈ ಆಚರಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಸಿರು ಕರ್ನಾಟಕ ಕಾರ್ಯಕ್ರಮದಡಿ ಅರಣ್ಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸಹಕಾರದಿಂದ ಶಾಲಾ ಆವರಣ, ಲಭ್ಯ ವಿರುವ ಶಾಲಾ ಭೂಮಿ ಯಲ್ಲಿ ಹಣ್ಣಿನ ಗಿಡಗಳು, ಔಷಧೀಯ ಸಸ್ಯಗಳು ಸೇರಿದಂತೆ ಇತರ ಗಿಡಗಳನ್ನು ನೆಡಲಾಗುವುದು.

ಜಲಜಾಗೃತಿಗೆ ಸ್ಪರ್ಧೆ
ಪ್ರತಿಭಾ ಕಾರಂಜಿ ಸಂದರ್ಭ ಜಲಮೂಲ ಸಂರಕ್ಷಣೆ, ಹಸುರೀಕರಣ ಇತ್ಯಾದಿ ವಿಷಯ ಗಳನ್ನು ಒಳಗೊಂ ಡಂತೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಆಶುಭಾಷಣ, ವೇಷಭೂಷಣ, ಕಿರು ನಾಟಕ, ರಸಪ್ರಶ್ನೆ, ಚರ್ಚಾಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗುವುದು.

ಜಾಗೃತಿ ಜಾಥಾ
ಶಾಲಾ ಪ್ರಾರ್ಥನೆಯ ವೇಳೆ ಜಲ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ತೀರ್ಮಾನಿಸಿದ್ದು, ಈಗಾಗಲೇ ಇರುವ ವಿಜ್ಞಾನ ಕ್ಲಬ್‌, ಇಕೋಕ್ಲಬ್‌ಗಳು ಶಾಲಾ ಸಂಸತ್ತು ನಡೆಸುವ ಕಾರ್ಯಕ್ರಮಗಳಲ್ಲಿ ಜಲ ಚಕ್ರ, ಜಲ ಪುನರ್ಬಳಕೆ, ಜಲಸಂರಕ್ಷಣೆ ಬಗ್ಗೆಯೂ ಅರಿವು ಮೂಡಿಸಲಾಗುವುದು. ಪ್ರಸಕ್ತ ವರ್ಷದಲ್ಲಿ ಶಾಲೆಯ ಸುತ್ತಮುತ್ತಲ ಗ್ರಾಮ/ವಾರ್ಡ್‌/ಪಟ್ಟಣ ಪ್ರದೇಶಗಳಲ್ಲಿ ಜನಸಾಮಾನ್ಯರ ಅರಿವಿಗಾಗಿ ನೀರಿನ ಜಾಗೃತಿ ಜಾಥಾಗಳನ್ನು ಏರ್ಪಡಿಸಲಾಗುತ್ತದೆ.

Advertisement

ಶಾಲೆಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ
ಜಲವರ್ಷದ ಅಂಗವಾಗಿ ಗ್ರಾ.ಪಂ.ಯ ನರೇಗಾ ಯೋಜನೆಯಡಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ, ಇಂಗುಗುಂಡಿಯನ್ನು ಅಳವಡಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸರಕಾರಿ ಶಾಲೆಯಲ್ಲಿ ಈಗಾಗಲೇ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ.

ಉಭಯ ಜಿಲ್ಲೆಗಳಲ್ಲಿ ಜಲವರ್ಷ ಆಚರಣೆ
ದ.ಕ. ಜಿಲ್ಲೆಯಲ್ಲಿ 916 ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, 169 ಪ್ರೌಢ ಶಾಲೆಗಳಿವೆ. ಉಡುಪಿ ಜಿಲ್ಲೆಯಲ್ಲಿ 259 ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, 106 ಪ್ರೌಢಶಾಲೆಗಳಿವೆ. ಒಟ್ಟಾರೆ ಉಭಯ ಜಿಲ್ಲೆಗಳಲ್ಲಿ 1,541 ಸ.ಹಿ.ಪ್ರಾ. ಮತ್ತು ಹಿ.ಪ್ರಾ. ಶಾಲೆಗಳಿವೆ. ಅಲ್ಲದೆ 275 ಪ್ರೌಢಶಾಲೆಗಳಿವೆ.

ಜಲವರ್ಷ ಕಾರ್ಯಕ್ರಮದ ಸಲುವಾಗಿ ಶಾಲೆಗಳಲ್ಲಿ ನೀರಿನ ಮಹತ್ವ ಸಾರುವ ಗೋಡೆಬರಹಗಳನ್ನು ಬರೆಸುವುದು, ಆಡಿಯೋ, ವೀಡಿಯೋಗಳನ್ನು ಮಕ್ಕಳಿಗೆ ಪ್ರದರ್ಶಿಸುವುದು, ಜಲ ಮತ್ತು ಪರಿಸರ ತಜ್ಞರನ್ನು ಶಾಲೆಗೆ ಆಹ್ವಾನಿಸಿ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಕಾರ್ಯಕ್ರಮ ಇತ್ಯಾದಿಗಳನ್ನು ನಡೆಸಲಾಗುವುದು.

 ನೀರಿನ ಜಾಗೃತಿ
ನೀರಿನ ಸಂರಕ್ಷಣೆಯ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು 2019ನೇ ಶೈಕ್ಷಣಿಕ ವರ್ಷವನ್ನು ಜಲವರ್ಷವನ್ನಾಗಿ ಆಚರಿಸಲಾಗುತ್ತಿದೆ. ಶಾಲಾ ಮಟ್ಟದಲ್ಲಿ ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
– ವೈ.ಶಿವರಾಮಯ್ಯ,ದ.ಕ.ಡಿಡಿಪಿಐ

 ನೀರಿನ ಮಹತ್ವ ತಿಳಿಸುವಿಕೆ
ಮಕ್ಕಳಲ್ಲಿ ಜಲಸಾಕ್ಷರತೆ ಮೂಡಿಸುವ ಉದ್ದೇಶದಿಂದ ಈ ಶೈಕ್ಷಣಿಕ ವರ್ಷ ಪೂರ್ತಿ ಜಲವರ್ಷವನ್ನಾಗಿ ಆಚರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರಿಸರ, ನೀರಿನ ಮಹತ್ವ ತಿಳಿಸುವುದು ಇದರ ಉದ್ದೇಶ.
 - ಶೇಷಶಯನ ಕೆ.,ಉಡುಪಿ ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next