Advertisement

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

12:53 AM Oct 23, 2021 | Team Udayavani |

ಬೆಂಗಳೂರು: ಕಂದಾಯ ಮತ್ತು ಅರಣ್ಯ ಇಲಾಖೆ ನಡುವೆ ನಡೆದಿರುವ ಮಾತುಕತೆಯಂತೆ ರಾಜ್ಯದ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಹಾಗೆಯೇ ಕುಮ್ಕಿ, ಜಮ್ಮಾ, ಸೊಪ್ಪಿನ ಬೆಟ್ಟ ಇತ್ಯಾದಿ ಜಮೀನುಗಳ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥ ಮಾಡಲಿದ್ದೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಸಹಿತ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಕುಮ್ಕಿ, ಜಮ್ಮಾ, ಸೊಪ್ಪಿನ ಬೆಟ್ಟ ಮೊದಲಾದ ಜಮೀನುಗಳ ಸಮಸ್ಯೆ ಇದೆ. ಇಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವವರಿಗೆ ಜಮೀನಿನ ಹಕ್ಕುಪತ್ರ ನೀಡುವಲ್ಲಿ ಸಮಸ್ಯೆಯಾಗುತ್ತಿದೆ. ಇದರ ವ್ಯಾಜ್ಯ ಸುಪ್ರೀಂ ಕೋರ್ಟ್‌ ತನಕವೂ ಹೋಗಿದೆ. ಹೀಗಾಗಿ ಅಲ್ಲಿ ವಾಸವಾಗಿ ರುವವರಿಗೆ ಜಮೀನಿನ ಹಕ್ಕು ಪತ್ರವನ್ನು ಸರಕಾರದ ಮಾರ್ಗಸೂಚಿ ದರದಂತೆ ನೀಡುವ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದೇವೆ ಎಂದು “ಉದಯವಾಣಿ ಸಂವಾದ’ದಲ್ಲಿ ಸಚಿವರು ಹೇಳಿದರು.

ತಲೆಮಾರುಗಳಿಂದ ಗೇರು ಬೆಳೆದು ಕೊಂಡು ಬರುತ್ತಿದ್ದವರಿಂದ ಜಮೀನು ವಾಪಸ್‌ ಪಡೆದಿದ್ದರಿಂದ ಗೇರು ಬೆಳೆ ಯಲು ತೊಂದರೆ ಆಗಿತ್ತು. ಹಿಂದೆ ಗೇರು ಬೆಳೆಯುತ್ತಿದ್ದವರಿಗೆ ಆ ಜಮೀನನ್ನು ಗೇರು ಬೆಳೆಯಲು ನೀಡಲು ನಿರ್ಧರಿಸಿ ದ್ದೇವೆ. ಇದಕ್ಕಾಗಿ ಸರಕಾರದ ಮಾರ್ಗ ಸೂಚಿ ದರವನ್ನು ಅವರಿಂದ ಪಡೆಯ ಲಾಗುವುದು ಎಂದರು.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಅನೇಕ ಜನರು ವಾಸವಾಗಿದ್ದು, ಅವರಿಗೂ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವೆ ಸುಮಾರು 9 ಲಕ್ಷ ಹೆಕ್ಟೇರ್‌ ಪ್ರದೇಶ ಗೊಂದಲದಲ್ಲಿದೆ. ಅದರಲ್ಲಿ 6 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಕಂದಾಯ ಇಲಾಖೆ ವ್ಯಾಪ್ತಿಗೆ ಬಂದ ಅನಂತರ ಅಲ್ಲಿ ಅನಧಿಕೃತವಾಗಿ ವಾಸ ವಾಗಿರುವ ಮತ್ತು ಉಳುಮೆ ಮಾಡುತ್ತಿರುವ ರೈತ ರಿಗೆ ಸರಕಾರದ ಮಾರ್ಗಸೂಚಿ ದರದಂತೆ ಜಮೀನು ನೀಡ ಲಾಗುವುದು. ಅಲ್ಲದೆ ಅವರು ವಾಸಿಸುವ ಮನೆಗಳನ್ನು ಅವರ ಹೆಸರಿಗೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಮನೆ ಬಾಗಿಲಿಗೆ ಪಿಂಚಣಿ
ಈಗ ಎಲ್ಲ ಫ‌ಲಾನುಭವಿಗಳ ಆಧಾರ್‌ಗೆ ಲಿಂಕ್‌ ಮಾಡಿದ್ದ ರಿಂದ ನೇರವಾಗಿ ಪ್ರತೀ ತಿಂಗಳೂ ಅವರ ಖಾತೆಗೆ ಹಣ ಜಮೆಯಾಗುತ್ತಿದೆ. ಇದರಿಂದ ಸುಮಾರು 400 ಕೋಟಿ ರೂ. ಉಳಿ ತಾಯವಾಗಿದೆ. 60 ವರ್ಷ ತುಂಬಿದವರ ಪಟ್ಟಿ ನೇರವಾಗಿ ಸರಕಾರದ ಬಳಿ ಲಭ್ಯವಾಗುವುದರಿಂದ ಪ್ರತೀ ವರ್ಷ ಅವರ ಮನೆ ಗಳಿಗೆ ಪಿಂಚಣಿ ತಲುಪಿಸಲಾಗುವುದು. ಈ ವರ್ಷ ಹೊಸ ದಾಗಿ 2.5 ಲಕ್ಷ ಜನರಿಗೆ ಪಿಂಚಣಿ ನೀಡಲಾಗುತ್ತಿದೆ ಎಂದರು.

Advertisement

ಇದನ್ನೂ ಓದಿ:ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

“ಜನರ ಬಳಿಗೆ ಸರಕಾರ’ ಪರಿಕಲ್ಪನೆ
ಜನರ ಬಳಿಗೆ ಜಿಲ್ಲಾಧಿಕಾರಿಗಳು ತೆರಳಿದರೆ ಹೆಚ್ಚಿನ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತದೆ ಎನ್ನುವ ಕಾರಣದಿಂದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಯೋಜನೆ ಜಾರಿಗೆ ತಂದಿದ್ದೇನೆ. ಈ ಕಾರ್ಯಕ್ರಮದಿಂದ ಜನರಿಗೆ ಸರಕಾರದ ಯೋಜನೆಗಳು ನೇರವಾಗಿ ತಲುಪಬೇಕೆನ್ನುವುದು ನನ್ನ ಮುಖ್ಯ ಉದ್ದೇಶ ಎಂದು ಸಚಿವ ಅಶೋಕ್‌ ಹೇಳಿದರು.

ಕಂದಾಯ ಗ್ರಾಮ ಯೋಜನೆಗೆ
ಎಲ್ಲ ಜನವಸತಿ ಪ್ರದೇಶ 
ರಾಜ್ಯದಲ್ಲಿರುವ ಹಟ್ಟಿ, ತಾಂಡಾ, ದೊಡ್ಡಿ ಸಹಿತ ಎಲ್ಲ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಜನವಸತಿ ಪ್ರದೇಶಗಳು ಕಂದಾಯ ವ್ಯಾಪ್ತಿಯಿಂದ ಹೊರಗುಳಿದಿದ್ದು, ಇದರಿಂದ ಅಲ್ಲಿನ ನಿವಾಸಿಗಳಿಗೆ ಸರಕಾರದ ಸವಲತ್ತುಗಳು ದೊರೆಯುತ್ತಿಲ್ಲ. ಹೀಗಾಗಿ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಗೌಳಿ ದೊಡ್ಡಿಗಳ ಸಹಿತ ಕಂದಾಯ ಗ್ರಾಮದಿಂದ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಠ 50 ಮನೆ ಮತ್ತು 150 ಜನರಿರುವ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುತ್ತಿದೆ ಎಂದರು.

ಗ್ರಾಮಕ್ಕೊಂದು ಶ್ಮಶಾನ
ರಾಜ್ಯದ ಪ್ರತೀ ಗ್ರಾಮದಲ್ಲಿ ಶ್ಮಶಾನ ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಅದಕ್ಕಾಗಿ ಜಮೀನು ಗುರುತಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಾವರಿ ವ್ಯಾಪ್ತಿಗೆ ಒಳಪಟ್ಟ ಜಿಲ್ಲೆಗಳಲ್ಲಿ ಸರಕಾರಿ ಜಮೀನು ಇಲ್ಲದೆ ಶ್ಮಶಾನ ನಿರ್ಮಾಣ ಕಷ್ಟವಾಗುತ್ತಿದೆ. ಅದಕ್ಕಾಗಿ ಕನಿಷ್ಠ 1 ಎಕರೆ ಜಮೀನು ಖರೀದಿಸಿ ಸ್ಥಳ ಗುರುತಿಸಲು ಸೂಚಿಸಲಾಗಿದ್ದು, ಅದಕ್ಕಾಗಿ ಎಲ್ಲ ಜಿಲ್ಲಾಧಿಕಾರಿಗಳಿ ತಲಾ 2 ಕೋಟಿ ರೂ. ನೀಡಲಾಗಿದೆ ಎಂದು ಸಚಿವ ಆರ್‌. ಅಶೋಕ್‌ ತಿಳಿಸಿದರು.

ಕ್ರಾಂತಿಕಾರಿ 79 ಎ, ಬಿ
ಕೃಷಿ ಭೂಮಿಯನ್ನು ಕೃಷಿಕರಲ್ಲದವರು ಖರೀದಿ ಸಲು ಅಡ್ಡಿಯಾಗಿದ್ದ ಭೂ ಕಂದಾಯ ಕಾಯ್ದೆಯ ಕಲಂ 79ಎ ಮತ್ತು ಬಿ ಸೆಕ್ಷನ್‌ ರದ್ದುಗೊಳಿಸುವ ನಿರ್ಧಾರ ಕ್ರಾಂತಿಕಾರಕ. ಇದರಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತಿದ್ದು, ಕೃಷಿ ಭೂಮಿಯ ಬೆಲೆ ಹೆಚ್ಚಳವಾಗಿದೆ, ಕೃಷಿ ಆದಾಯವೂ ಹೆಚ್ಚಾಗಿದೆ ಎಂದು ಸಚಿವ ಆರ್‌. ಅಶೋಕ್‌ ಪ್ರತಿಪಾದಿಸಿದರು.

ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ಕಲ್ಪಿಸಿದ್ದರಿಂದ ಐಟಿ, ಬಿಟಿ ಉದ್ಯೋಗಿಗಳೂ ಹಳ್ಳಿಗಳಿಗೆ ತೆರಳಿ ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿ ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ. ಇದರಿಂದ ಕೃಷಿ ಆದಾಯವೂ ಹೆಚ್ಚಳವಾಗುತ್ತಿದೆ ಎಂದರು.

ಈ ಕಾಯ್ದೆ ತಿದ್ದುಪಡಿ ಮೂಲಕ ಉದ್ದಿಮೆದಾರರು ನೇರವಾಗಿ ರೈತರಿಂದ ಜಮೀನು ಖರೀದಿ ಮಾಡಲು ಅವಕಾಶ ಒದಗಿಸಲಾಗಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿದೆ. ಉದ್ಯಮಿಗಳು ಶೀಘ್ರವಾಗಿ ಕೈಗಾರಿಕೆ ಆರಂಭಿ ಸಲು ಅನುಕೂಲವಾಗಿದೆ. ಕೊರೊನಾ ಕಾಲದಲ್ಲಿಯೂ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬಂದಿದೆ ಎಂದರು.

ರೈತರನ್ನು ಕಪಿಮುಷ್ಠಿಯಲ್ಲಿ ಇರಿಸಿದವರು ಭೂ ಕಂದಾಯ ಕಾಯ್ದೆಯ 79ಎ ಮತ್ತು ಬಿ ಸೆಕ್ಷನ್‌ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈ ಕಾಯ್ದೆ ತಿದ್ದುಪಡಿ ಯಿಂದ ರೈತರಿಗೆ ಅನುಕೂಲವಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next