Advertisement

ಸತ್ತವರು ಚಿಕ್ಕಮಗಳೂರು ಮೂಲದ ನಕ್ಸಲರು?

11:24 PM Oct 29, 2019 | Team Udayavani |

ಚಿಕ್ಕಮಗಳೂರು: ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅಗಳಿ ಗ್ರಾಮದ ಮಂಚಕಟ್ಟಿ ಅರಣ್ಯ ಪ್ರದೇಶದಲ್ಲಿ ಸೋಮವಾರ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) “ಥಂಡರ್‌ ಬೋಲ್ಟ್’ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಹತರಾದ ಇಬ್ಬರು ನಕ್ಸಲರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು ಎಂದು ಹೇಳಲಾಗಿದೆ. ಈ ಸುದ್ದಿಯನ್ನು ಮಂಗಳವಾರ ಮಧ್ಯಾಹ್ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ದೃಢಪಡಿಸಿದ್ದರು. ಬಳಿಕ ಸಂಜೆ ಹೊತ್ತಿಗೆ ಹತರಾದವರು ತಮಿಳುನಾಡು ಮೂಲದವರು ಎಂದು ಗೊತ್ತಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

ಆದರೆ, ಇನ್ನೊಂದು ಮೂಲಗಳ ಪ್ರಕಾರ, ಅವರ ಕುಟುಂಬದವರನ್ನು ಕೇರಳಕ್ಕೆ ಕರೆದೊಯ್ದು ಕಳೇಬರವನ್ನು ಗುರುತಿಸಿದ ನಂತರವಷ್ಟೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ನಕ್ಸಲರ ಗುಂಪು ಸಭೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಎನ್‌ಎಫ್ ತಂಡ, ಕಾರ್ಯಾಚರಣೆಗೆ ಮುಂದಾದಾಗ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ, ನಡೆಸಿದ ಪ್ರತಿದಾಳಿಯಲ್ಲಿ ಸಿಪಿಎಂ (ಮಾ ರ್ಕ್ಸಿಸ್ಟ್‌) ಪಕ್ಷದ ಭವಾನಿ ದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್‌.ಸುರೇಶ್‌ ಹಾಗೂ ಕಾರ್ತಿ ಸೇರಿ ಮೂರ್‍ನಾಲ್ಕು ನಕ್ಸಲರು ಹತರಾಗಿದ್ದಾರೆ ಎಂದು ಹೇಳಲಾಗಿತ್ತು.

ವಿವಿಧೆಡೆ ಪ್ರಕರಣ ದಾಖಲು: ಈ ಪೈಕಿ ಶ್ರೀಮತಿ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದವರು. 2008ರಿಂದ ಮಲೆ ನಾಡಿನ ನಕ್ಸಲ್‌ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಇನ್ನು, ಸುರೇಶ್‌ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮ ದವರಾಗಿದ್ದು, 2004ರಲ್ಲೇ ನಕ್ಸಲ್‌ ಚಳವಳಿಗೆ ಸೇರ್ಪ ಡೆ ಗೊಂಡಿದ್ದರು. ಸುರೇಶ್‌ ಮೇಲೆ ಚಿಕ್ಕಮಗ ಳೂರು ಜಿಲ್ಲೆಯ ಕುದುರೆಮುಖ, ಶೃಂಗೇರಿ, ಆಲ್ದೂರು ಪೊಲೀಸ್‌ ಠಾಣೆಗಳಲ್ಲಿ 21 ಪ್ರಕರಣಗಳಿದ್ದು, ಶ್ರೀಮತಿ ವಿರುದ್ಧ ಕುದುರೆಮುಖ, ಶೃಂಗೇರಿ ಪೊಲೀಸ್‌ ಠಾಣೆ ಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಶ್ರೀಮತಿ ಹಾಗೂ ಸುರೇಶ್‌ ಆರಂಭದಲ್ಲಿ ಪ್ರಗತಿಪರ ಚಳವಳಿಗಳಲ್ಲಿ ಗುರುತಿಸಿಕೊಂಡಿ ದ್ದವರು. ಆದಿವಾಸಿಗಳು, ದಲಿತರು, ರೈತ ಪರ ಹೋರಾಟಗಳು ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹೋರಾಟಗಳ ನಂತರ ಮಲೆನಾಡಿನಲ್ಲಿ ಸಕ್ರಿಯವಾಗಿದ್ದ ನಕ್ಸಲ್‌ ಚಳವಳಿ ಸೇರಿ ಭೂಗತರಾಗಿದ್ದರು. ವಿವಿಧ ನಕ್ಸಲ್‌ ತಂಡಗಳಲ್ಲಿ ಗುರುತಿಸಿಕೊಂಡಿದ್ದರು. ಇವರಿಬ್ಬರ ಭಾವಚಿತ್ರಗಳನ್ನು ವಿವಿಧೆಡೆ ಪ್ರಕಟಿಸಿ ಸುಳಿವು ನೀಡುವಂತೆ ಪೊಲೀಸ್‌ ಇಲಾಖೆ ಕೋರಿತ್ತು.

ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಆದರೆ, ಹೊರ ರಾಜ್ಯಗಳ ನಕ್ಸಲ್‌ ಗುಂಪುಗಳನ್ನು ಸೇರಿಕೊಂಡಿರಬಹುದು ಎಂಬ ಮಾಹಿತಿ ದೊರೆತಿತ್ತು ಎಂದು ಹೇಳಲಾಗಿದೆ. ಮಲೆನಾಡಿನಲ್ಲಿ ನಕ್ಸಲ್‌ ಚಳವಳಿಯಲ್ಲಿ ಸಕ್ರಿಯರಾಗಿದ್ದವರ ಪೈಕಿ ಕೆಲವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರಿಂದ ಹಾಗೂ ಇನ್ನೂ ಕೆಲವರು ಸರಕಾರದ ಶರಣಾಗತಿ ಪ್ಯಾಕೇಜ್‌ನಡಿ ಮುಖ್ಯವಾಹಿನಿಗೆ ಬಂದಿದ್ದರಿಂದ ಸುರೇಶ್‌ ಹಾಗೂ ಶ್ರೀಮತಿ ಕಳೆದ ಎರಡು ವರ್ಷಗಳಿಂದ ಕೇರಳದಲ್ಲಿ ನಕ್ಸಲ್‌ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

Advertisement

ಈ ನಡುವೆ, ಇಬ್ಬರು ನಕ್ಸಲರ ಹತ್ಯೆ ವದಂತಿ ಹಿನ್ನೆಲೆಯಲ್ಲಿ ಎಎನ್‌ಎಫ್‌ ಸಿಬ್ಬಂದಿಯವರು ನಕ್ಸಲ್‌ಪೀಡಿತ ತಾಲೂಕಾಗಿರುವ ಶೃಂಗೇರಿಯ ಅರಣ್ಯ ಪ್ರದೇಶಗಳಲ್ಲಿ ಮಂಗಳವಾರ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದರು. ಶ್ರೀಮತಿ ಹುಟ್ಟೂ ರಾದ ಶೃಂಗೇರಿಯ ಬೆಳಗೋಡು ಕೂಡಿಗೆ ಗ್ರಾಮದ ಸುತ್ತಮುತ್ತ ಕೂಂಬಿಂಗ್‌ ನಡೆಸಿದ್ದಾ ರೆಂದು ತಿಳಿದು ಬಂದಿದೆ. ಇನ್ನೊಂದೆಡೆ, ಸುರೇಶನ ಮೃತದೇಹವನ್ನು ಚಿಕ್ಕಮಗಳೂರಿಗೆ ತರಲು ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಸಹಕರಿಸಬೇಕು ಎಂದು ಆತನ ಸಹೋದರ ಮನವಿ ಮಾಡಿದ್ದರು.

ಹತರ ಸಂಖ್ಯೆ 4ಕ್ಕೇರಿಕೆ: ಪಾಲಕ್ಕಾಡ್‌: ಕೇರಳದ ಅಟ್ಟಪಾಡಿಯ ದಟ್ಟಾರಣ್ಯ ದಲ್ಲಿ ವಿಶೇಷ ಥಂಡರ್‌ಬೋಲ್ಟ್ ಪೊಲೀಸರು ನಡೆಸಿದ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಮತ್ತೂಬ್ಬ ಮಾವೋವಾದಿ ಮೃತಪಟ್ಟಿದ್ದು, ಮೃತ ನಕ್ಸಲರ ಸಂಖ್ಯೆ ಮಂಗಳವಾರ 4ಕ್ಕೇರಿದೆ. ಸೋಮ ವಾರ ನಡೆದ ಕಾರ್ಯಾಚರಣೆ ವೇಳೆ ಒಬ್ಬ ಮಹಿಳೆ ಸೇರಿ ಮೂವರು ನಕ್ಸಲರನ್ನು ಹೊಡೆದುರುಳಿಸ ಲಾಗಿತ್ತು. ಮಂಗಳವಾರ ಬೆಳಗ್ಗೆ ಆ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾಗ ಮತ್ತೂಮ್ಮೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮತ್ತೂಬ್ಬ ನಕ್ಸಲನನ್ನು ಹತ್ಯೆಗೈಯ್ಯಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ಪಾಲಕ್ಕಾಡ್‌ ಜಿಲ್ಲೆ ಅಗಳಿ ಗ್ರಾಮದ ಮಂಚಕಟ್ಟಿ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತರಾಗಿರುವ ನಕ್ಸಲೀಯರಲ್ಲಿ ಜಿಲ್ಲೆಯವರು ಮೃತಪಟ್ಟಿರುವುದು ದೃಢಪಟ್ಟಿಲ್ಲ.
-ಹರೀಶ್‌ ಪಾಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next