Advertisement

ಪುರಭವನದ ಎದುರು ಪಾದಚಾರಿಗಳಿಗೆ ಅಪಾಯ

10:10 PM Feb 15, 2020 | mahesh |

ನಗರದ ಪುರಭವನದ ಎದುರಿನ ರಸ್ತೆ ಸದಾ ವಾಹನ, ಜನದಟ್ಟಣೆ ಇರುವ ಪ್ರದೇಶ. ಟೌನ್‌ಹಾಲ್‌ ಎದುರಿನ ಪಕ್ಕದ ಕಾಲುಹಾದಿಯಲ್ಲಿ ಬಂದು ಲೇಡಿಗೋಷನ್‌, ಸೆಂಟ್ರಲ್‌ ಮಾರ್ಕೆಟ್‌ ಮೊದಲಾದ ಕಡೆಗಳಿಗೆ ಹೋಗುವವರು ಮತ್ತು ಅದೇ ಹಾದಿಯಲ್ಲಿ ವಾಪಸ್‌ ಬರುವವರು ಇಲ್ಲಿ ರಸ್ತೆ ದಾಟಲು ಪರದಾಡುವ ಸ್ಥಿತಿ ಇದೆ. ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಕಡೆಯಿಂದ ಹೊರಡುವ ಬಸ್‌ ಹಾಗೂ ಇತರ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತವೆ.

Advertisement

ಪ್ರಸ್ತುತ ಪುರಭವನದ ಬಲ ಭಾಗದಲ್ಲಿ ಪಾದಚಾರಿಗಳು ರಸ್ತೆ ದಾಟಲು ಅಂಡರ್‌ಪಾಸ್‌ ನಿರ್ಮಾಣವಾಗುತ್ತಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಎ.ಬಿ. ಶೆಟ್ಟಿ ಸರ್ಕಲ್‌ನಿಂದ ಕ್ಲಾಕ್‌ಟವರ್‌ ಕಡೆಗೆ ಸಂಚಾರ ನಿಷೇಧಿಸಲಾಗಿದೆ. ಇದರ ಪರಿಣಾಮವಾಗಿಯೂ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಕಡೆಯಿಂದ ಹಂಪನಕಟ್ಟೆ ಕಡೆಗೆ ಸಾಗುವ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಪುರಭವನದ ಬಲಭಾಗದಲ್ಲಿ ಅಂಡರ್‌ಪಾಸ್‌ ನಿರ್ಮಾಣ ಸ್ವಾಗತಾರ್ಹ. ಆದರೆ ಪುರಭವನದ ಎದುರು ಕೂಡ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಅನುಕೂಲವಾಗುವಂತೆ ವ್ಯವಸ್ಥೆ ಬೇಕಾಗಿದೆ. ಇಲ್ಲಿ ಝೀಬ್ರಾ ಕ್ರಾಸ್‌ ಕೂಡ ಇಲ್ಲ. ವಾಹನಗಳ ವೇಗ ತಗ್ಗಿಸಲು ಹಂಪ್ಸ್‌ ಕೂಡ ಇಲ್ಲ. ಸಂಚಾರಿ ಪೊಲೀಸ್‌ ಸಿಬಂದಿಯೂ ನಿಗಾ ವಹಿಸುತ್ತಿಲ್ಲ. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ರಸ್ತೆ ದಾಟಲು ಭಾರೀ ತೊಂದರೆ ಪಡುತ್ತಿದ್ದಾರೆ. ತಾತ್ಕಾಲಿಕವಾಗಿ ಇಲ್ಲಿ ಪೊಲೀಸರನ್ನು ನಿಯೋಜಿಸಿ ಅವರು ರಸ್ತೆ ದಾಟುವವರಿಗೆ ನೆರವಾಗುವಂತೆ ಕ್ರಮ ಕೈಗೊಳ್ಳಬೇಕು. ಇತ್ತ ಅಂಡರ್‌ಪಾಸ್‌ ಕಾಮಗಾರಿ ಪೂರ್ಣಗೊಂಡ ಅನಂತರ ಟೌನ್‌ಹಾಲ್‌ ಮುಂಭಾಗದಲ್ಲಿ ಕೂಡ ಏನಾದರೂ ಶಾಶ್ವತ ವ್ಯವಸ್ಥೆ ಮಾಡಿ ಪಾದಚಾರಿಗಳಿಗೆ ನೆರವಾಗಬೇಕು. ಅಂತೆಯೇ ಲೇಡಿಗೋಷನ್‌ ಭಾಗದಲ್ಲಿಯೂ ಮುಖ್ಯರಸ್ತೆಯನ್ನು ಆಕ್ರಮಿಸಿಕೊಂಡಿರುವ ವ್ಯಾಪಾರಿ ಮಳಿಗೆಗಳನ್ನು ತೆರವುಗೊಳಿಸಬೇಕು. ಫ‌ುಟ್‌ಪಾತ್‌ ನಿರ್ಮಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next