Advertisement

ಇಂದ್ರಾಣಿ ನದಿಯನ್ನು ಶುದ್ಧವಾಗಿರಿಸಲು ಎಲ್ಲರ ಸಹಕಾರ ಅಗತ್ಯ

11:21 PM Mar 08, 2020 | Sriram |

ಇಂದ್ರಾಣಿ ನದಿ ಶುದ್ಧೀಕರಣಕ್ಕೆ ಎಲ್ಲರ ಸಹಕಾರ ಬೇಕು ಎಂಬುದು ಎಷ್ಟು ಮುಖ್ಯವೋ ಅದಕ್ಕೆ ಪೂರಕವಾದ ಯೋಜನೆಗಳ ಜಾರಿಗೆ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯೂ ಅಗತ್ಯ. ಹಾಗೆಯೇ ನದಿ ಇನ್ನಷ್ಟು ಅಶುದ್ಧಗೊಳ್ಳದಂತೆ ತಡೆಯಲು ಜನರ ಸಹಕಾರವೂ ಅವಶ್ಯ. ಈ ಸಂಬಂಧ ಜನರು ನೀಡಿರುವ ವಿವಿಧ ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

ಬೇರೆ ಪ್ರದೇಶಗಳಿಗೆ ಹೋಗಿ ನೋಡಲಿ
ಇಲ್ಲಿ ಒಳನಾಡು ಜಲಸಾರಿಗೆ ನಿಗಮ ಅವರೂ ನಗರಸಭೆ ಜತೆ ಸೇರಿ ಕೆಲಸ ಮಾಡಬೇಕು ಎಂಬ ಇಚ್ಛಾಶಕ್ತಿಯನ್ನೇ ಇವತ್ತಿನವರೆಗೆ ತೋರಿಸಿಲ್ಲ, ಇನ್ನು ಕೆಲಸ ಎಲ್ಲಿ ಬಂತು? ಇವರೆಲ್ಲ ಒಮ್ಮೆ ಬೇರೆ ಪ್ರದೇಶಗಳಿಗೆ ಹೋಗಿ ನೋಡಲಿ. ಹತ್ತಿರದ ಹಾಸನದಲ್ಲಿ ನೀರಿನ ಮೂಲಕ್ಕೆ ಒಂದು ಚೂರೂ ಕಸ ಹಾಕಲ್ಲ. ಸುಶಿಕ್ಷಿತರ ಜಿಲ್ಲೆಯ ಜನ, ಬೇರೆಯವರಿಗೆ ಬುದ್ಧಿ ಹೇಳುವ ಕೆಲವರು ಕಸ ತೆಗೆದುಕೊಂಡು ಹೋಗಲು ಮನೆ ಹತ್ತಿರ ಬರುತ್ತೇವೆ ಎಂದರೂ ಕೊಡುವುದಿಲ್ಲ. ಅದಕ್ಕೊಂದು ಕನಿಷ್ಠ ಮೊತ್ತ ಕೊಡಬೇಕಾಗಿ ಬಂದರೆ ಭಾರೀ ಪ್ರತಿಭಟನೆಗೆ ನಿಲ್ಲುತ್ತಾರೆ ಎಂದರೆ ವಿದ್ಯಾವಂತರ ನಾಡಿಗೆ ಮಾಡಿದ ಅಪಚಾರ ಎಂದೇ ನಾವು ಭಾವಿಸಬೇಕು.
-ರಾಜೇಶ್‌, ಆದಿಉಡುಪಿ

ಮೂಲ ಸೌಕರ್ಯ ವೃದ್ಧಿಯಾಗಲಿ
ಇಂದ್ರಾಣಿ ನದಿಯ ಉಗಮಸ್ಥಾನದಿಂದ ಸಮುದ್ರ ಸೇರುವ ನದಿಯ ಎರಡು ದಂಡೆಗೆ ಸಿಮೆಂಟ್‌ನ ತಡೆಗೋಡೆಯನ್ನು ನಿರ್ಮಾಣ ಮಾಡಿದರೆ ಅಕ್ರಮವಾಗಿ ನದಿಗೆ ಕೊಳಚೆ ನೀರು ಬಿಡುವವರನ್ನು ಪತ್ತೆ ಹಚ್ಚಿ ನದಿಯನ್ನು ಸ್ವಚ್ಚವಾಗಿ ಇಡಬಹುದು.
 -ಸತೀಶ್‌, ಉಡುಪಿ

ಥೇಮ್ಸ್‌ನಂತೆ ಹಾಳಾಗದಿರಲಿ, ಶುದ್ಧಗೊಳ್ಳಲಿ
20 ವರುಷಗಳ ಹಿಂದೆ ಸ್ನಾನ ಮಾಡಲು ಬಟ್ಟೆ ಒಗೆಯಲು ಕೃಷಿ ನಡೆಸಲು ಉಪಯೋಗಿಸುತ್ತಿದ್ದ ಉತ್ತಮ ಗುಣಮಟ್ಟದ ನೀರನ್ನು ಇಂದು ನಾವು ಯಾವುದಕ್ಕೂ ಉಪಯೋಗಿಸುವಂತಿಲ್ಲ. ಸುತ್ತಮುತ್ತಲಿನ ವಾತಾವರ‌ಣದೊಂದಿಗೆ ಅಂತರ್ಜಲವನ್ನು ಹಾಳುಗೆಡುವುತ್ತಿದೆ ಎಂಬ ವಾಸ್ತವವೇ ಶೋಚನೀಯ. ತ್ಯಾಜ್ಯ ನೀರಿನಿಂದಾಗಿ ಬಾವಿಯನ್ನು ಕಳೆದುಕೊಂಡಿದೇªವೆ. ಲಂಡನಿನ ಥೇಮ್ಸ್‌ ನದಿ ಕಲುಷಿತಗೊಂಡು ಕಾಲರಾ ರೋಗ ಬಂದಂತೆ ಮುಂದೊಂದು ದಿನ ಉಡುಪಿಯಲ್ಲಿ ಸಾಂಕ್ರಾಮಿಕ ರೋಗಗಳ ಮೂಲ ಇಂದ್ರಾಣಿ ಆಗುವಲ್ಲಿ ಎರಡು ಮಾತಿಲ್ಲ .
-ರಾಜಶ್ರೀ ಪ್ರಸನ್ನ, ಉಪನ್ಯಾಸಕಿ, ತೆಂಕನಿಡಿಯೂರು ಕಾಲೇಜು

ನಮ್ಮ ಸಹಕಾರವೂ ಅವಶ್ಯ
ಇಂದ್ರಾಣಿ ಶುದ್ಧೀಕರಣ ಕುರಿತ ಸರಣಿ ಲೇಖನಗಳು ಸಮಸ್ಯೆಯ ನಿಜ ಸ್ವರೂಪವನ್ನು ವಿವರಿಸಿತು. ಮೊದಲು ಮೂರ್‍ನಾಲ್ಕು ದಿನ ಲೇಖನ ಪ್ರಕಟಿಸುತ್ತೀರಿ, ಒಂದೆರಡು ಘೋಷಣೆಗಳು ಕೇಳುತ್ತವೆ. ಬಳಿಕ ಮತ್ತೆ ಅದೇ ಕಥೆ ಎಂದುಕೊಂಡಿದ್ದೆವು. ಆದರೆ ಈ ಬಾರಿ ಹಾಗಾಗಲಿಲ್ಲ. ಸತತವಾಗಿ ಸಮಸ್ಯೆಯ ಬಹು ಸ್ವರೂಪವನ್ನು ವಿವರಿಸಿದ್ದು, ಈ ನಿಟ್ಟಿನಲ್ಲಿ ನಾಗರಿಕರಾದ ನಾವೂ ಯೋಚಿಸುವಂತೆ ಮಾಡಿತು. ನಮ್ಮ ದೃಷ್ಟಿಕೋನವೂ ಬದಲಾಗಬೇಕಿದೆ. ಇಲ್ಲವಾದರೆ ಇಂದ್ರಾಣಿ ಇರಲಿ, ನಮ್ಮ ಬಾವಿಯನ್ನೂ ಉಳಿಸಿಕೊಳ್ಳಲಾಗದು. ನಾನು ಮಣಿಪಾಲದವನು. ನಿತ್ಯವೂ ಮಣ್ಣಪಳ್ಳದ ಸುತ್ತ ವಾಯು ವಿಹಾರಕ್ಕೆ ಹೋಗುತ್ತೇನೆ. ರವಿವಾರ ಮತ್ತು ರಜಾದಿನಗಳಂದು ಕೆರೆ ಸುತ್ತಮುತ್ತ ಸ್ವತ್ಛಗೊಳಿಸುತ್ತೇವೆ. ಆದರೆ ಮರುದಿನವೇ ಕಸ ತುಂಬಿಕೊಳ್ಳುತ್ತದೆ. ಬೇಸರದ ಸಂಗತಿಯೆಂದರೆ, ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳೇ ತಮ್ಮ ಸುತ್ತಲಿನ ಪ್ರದೇಶವನ್ನು ಸ್ವತ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸ್ವತ್ಛತಾ ಅಭಿಯಾನ ಆರಂಭಿಸಿದರೂ ನಾಗರಿಕರಾದ ನಾವೂ ಸಹಕರಿಸಬೇಕು. ಇಲ್ಲವಾದರೆ ಅದು ವ್ಯರ್ಥ. ಪ್ರತಿಯೊಬ್ಬರೂ ಅವರ ಮನೆಯ ಪರಿಸರವನ್ನು ಸ್ವತ್ಛವಾಗಿಡಲು ವಾರಕ್ಕೆ ಒಮ್ಮೆಯಾದರೂ ಶ್ರಮದಾನ ನಡೆಸಿದರೆ ಎಷ್ಟೋ ಉಪಕಾರವಾಗುತ್ತದೆ. ಆಡಳಿತಗಾರರೂ ನದಿಯಂಥ ಜಲಮೂಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ನಾಗರಿಕರಾದ ನಾವೂ ನದಿ ಮತ್ತು ಜಲಮೂಲಗಳ ಸಂರಕ್ಷಣೆಗೆ ಸಹಕರಿಸಬೇಕು.
-ನವೀನ್‌ ಶೆಟ್ಟಿ, ಮಣಿಪಾಲ

Advertisement

ನಾವೂ ಸಹಕರಿಸೋಣ
ಇಂದ್ರಾಣಿ ನದಿಯ ಸ್ಥಿತಿಗತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಉಡುಪಿಯ ನಾಗರಿಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ “ಉದಯವಾಣಿ ಸುದಿನ ತಂಡ’ಕ್ಕೆ ಅಭಿನಂದನೆಗಳು. ಇಂದು ಎಲ್ಲ ಇಲಾಖೆಗಳಿಗೆ ಇದರ ಪರಿಸ್ಥಿತಿಯ ಅರಿವಾಗಿದೆ. ಆದರೂ ಸುಮ್ಮನೆ ಇದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ನಾಗರಿಕರಾದ ನಾವು ನಮ್ಮ ಮನೆ ಸಮೀಪದ ನದಿ ಅಥವಾ ನೀರು ಹರಿದು ಹೋಗುವ ಜಾಗದಲ್ಲಿ ಕಸವನ್ನು ಬಿಸಾಡದೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ನಾವು ನಮ್ಮ ಮನೆಯನ್ನು ಸರಿಪಡಿಸಿದರೆ ಆಡಳಿತ ಯಂತ್ರವೂ ತನ್ನಿಂದ ತಾನೆ ಸರಿಯಾಗುತ್ತದೆ.
ರಾಬರ್ಟ್‌ ಪಾçಸ್‌, ರಾಜೀವ ನಗರ ನಿಟ್ಟೂರು

ನದಿ ಉಳಿಸಲು ಪ್ರಯತ್ನಿಸೋಣ
ಪತ್ರಿಕೆಯ ಪ್ರಯತ್ನ ಶ್ಲಾಘನೀಯ. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಬರಹಗಳೇ ಪತ್ರಿಕೆಯ ಜೀವಾಳ. ಇಂತಹ ಜನಪರ ಕಾಳಜಿಯ ವರದಿಗಳು ಶಾಶ್ವತ ಪರಿಹಾರ ಕಾಣಬೇಕಾದರೆ ನಾಗರಿಕರು, ಸಂಘಸಂಸ್ಥೆಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಮಠಾಧೀಶರು ಮತ್ತು ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದರೆ ಮಾತ್ರ ಈ ಕಾರ್ಯ ಸಾಧ್ಯ. ನದಿಗಳನ್ನು ದೇವರೆಂದು ಪೂಜಿಸುವವರು ನಾವು. ಆದರೆ ಕಸ, ಪ್ಲಾಸ್ಟಿಕ್‌, ತ್ಯಾಜ್ಯವನ್ನು ನದಿಗೆ ಸುರಿದು ಅದನ್ನು ಮಲೀನ ಮಾಡುತ್ತೇವೆ. ಯುಜಿಡಿಯ ಅವೈಜ್ಞಾನಿಕ ಕಳಪೆ, ಕಾಮಗಾರಿಗಳು ನಡೆಯುವಾಗ ನಮಗೆ ಸಂಬಂಧ ಪಟ್ಟದ್ದಲ್ಲ ಎಂದು ಸುಮ್ಮನಾಗುತ್ತೇವೆ. ಪಶು, ಪಕ್ಷಿಗಳಿಗೆ ನೀರುಣಿಸುವ, ಕುಡಿಯುವ ನೀರಿನ ಸೆಲೆಯಾಗಿರುವ, ಉಡುಪಿಯ ಜೀವನದಿ ಇಂದ್ರಾಣಿಯನ್ನು ಉಳಿಸಲು ನಾವೆಲ್ಲರೂ ಪ್ರಯತ್ನಿಸೋಣ.
-ಪಾಡುರಂಗ, ಮಲ್ಪೆ

ಇಂದ್ರಾಣಿ ಶುದ್ಧಗೊಳ್ಳಲಿ
ಇಂದ್ರಾಣಿ ನದಿಯ ಸಮಸ್ಯೆಯ ಕುರಿತು ನಗರಸಭೆ ಹಾಗೂ ಜನಪ್ರತಿನಿಧಿಗಳು, ಸಂಘಸಂಸ್ಥೆಗಳಿಗೆ ಉದಯವಾಣಿ ವರದಿ ಮನವರಿಕೆ ಮಾಡಿಕೊಟ್ಟಿದೆ. ಬಾಲ್ಯದ ದಿನದಲ್ಲಿ ನಾವು ಇದೇ ಇಂದ್ರಾಣಿ ನದಿಯಲ್ಲಿ ಈಜಿದ್ದು ನೆನಪಿದೆ. ಒಂದಷ್ಟು ಗೆಳೆಯರ ಜತೆ ಈಜುತ್ತಾ ನೀರಡಿಯಲ್ಲಿ ದೂರ ಹೋಗಿ ಎದ್ದಿದ್ದು ನೆನಪಿದೆ. ಅಂದು ತುಂಡು ಉಡುಗೆಯಲ್ಲಿ ರೈತರು ಏತದ ನೀರನ್ನು ಸೇದುತ್ತಿದ್ದದ್ದು ಕಣ್ಣಿಗೆ ಕಾಣುತ್ತಿದೆ. ಆ ಏತ ಶಬ್ದ ಸರಿಯಾಗಿ ನೆನಪಿದೆ. ಅಂದರೆ ಇಂದ್ರಾಣಿ ಈ ಭಾಗದ ಕೃಷಿಗೆ ಜೀವನದಿಯಾಗಿತ್ತು. ಮಹಿಳೆಯರು ಬಟ್ಟೆಯನ್ನು ಇದೇ ನೀರಿನಲ್ಲಿ ತೊಳೆಯುತ್ತಿದ್ದರು, ಬಟ್ಟೆ ತೊಳೆಯಲು ಶುದ್ಧ ನೀರಿನ ಅಗತ್ಯವಿದ್ದು, ಈ ನೀರು ಶುದ್ಧವಿತ್ತು ಎಂಬುದಕ್ಕೆ ಇದು ಉದಾಹರಣೆ. ಈ ನದಿ ಮತ್ತೆ ನಮ್ಮೆದುರಲ್ಲಿ ಮೈ ತುಂಬಿ ಹರಿಯುವಂತಾಗಲಿ. ಒಂದು ವೇಳೆ “ಇಂದ್ರಾಣಿ ಉಳಿಸಿ’ ವಿಷಯದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸ್ಪರ್ಧೆ ನಡೆಸಿದರೆ ಅದಕ್ಕೆ ನಮ್ಮ ಮಣಿಪಾಲ ಸ್ಕೂಲ್‌ ಆಫ್ ಆರ್ಟ್‌ನ ಸಹಕಾರ ಇರುತ್ತದೆ.
-ಪಿ.ಎನ್‌. ಆಚಾರ್ಯ
ನಿರ್ದೇಶಕರು, ಮಣಿಪಾಲ ಸ್ಕೂಲ್‌ ಆಫ್ ಆರ್ಟ್‌

ಜಾಗೃತಿ ಮೂಡಿದರೆ ಇಂದ್ರಾಣಿ ಸ್ವತ್ಛ
ಇಂದ್ರಾಣಿ ನದಿಯ ಈಗಿನ ಸ್ಥಿತಿಯ ಕಂಡಾಗ ತುಂಬಾ ಬೇಸರವಾಗುತ್ತಿದೆ. ಬಾಲ್ಯದ ದಿನಗಳಲ್ಲಿ ನಮಗೆ ಓದಲು ಆಟವಾಡಲು ಈಜಾಡಲು ನೆಚ್ಚಿನ ತಾಣವಾಗಿದ್ದ ಇಂದ್ರಾಣಿಯ ಮಡಿಲು, ಇದೀಗ ಹತ್ತಿರ ಸುಳಿಯಲೂ ಅಸಹ್ಯ ವಾಗಿದೆ. ಶುಭ್ರ ನೀರಿನ ಶುದ್ದ ಜಲಮೂಲವಾಗಿದ್ದ ಇಂದ್ರಾಣಿಯ ಮೂಲ ರೂಪದಲ್ಲೇ ರಕ್ಷಿಸಲು ಪಣತೊಡ ಬೇಕಾಗಿದೆ. ಅದಕ್ಕಾಗಿ ಹೋರಾಡುತ್ತಿರುವ ಸಮಾನ ಮನಸ್ಕ ತಂಡದೊಂದಿಗೆ ಉದಯವಾಣಿ ಸುದಿನ ತಂಡವೂ ಜತೆಯಾಗಿದ್ದು ಜನಜಾಗೃತಿಯೊಂದಿಗೆ ಜನಸಾಮಾನ್ಯರು, ಜನಪ್ರತಿನಿಧಿಗಳು ಜನಸೇ°ಹಿ ಸಂಘಗಳು ಕೈ ಜೋಡಿಸಬೇಕಾಗಿದೆ. ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿದರೆ ಇಂದ್ರಾಣಿ ಮೂಲ ರೂಪವನ್ನು ಪಡೆಯಲು ಸಾಧ್ಯವಿದೆ.
-ಪೂರ್ಣಿಮಾ ಜನಾರ್ದನ್‌, ಸಾಹಿತಿ, ಕೊಡವೂರು

ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ
ಉದಯವಾಣಿಯಲ್ಲಿ ಪ್ರಕಟಗೊಳ್ಳುತ್ತಿದ್ದ ಇಂದ್ರಾಣಿಯ ಕರುಣಾಕತೆಯ ಸರಣಿಯನ್ನು ದಿನಾ ಓದುತ್ತಿದ್ದೆ. ನಾವು ಬಾಲ್ಯದಲ್ಲಿ ಈಜಾಡುತ್ತಿದ್ದ ನದಿ ಇದಾಗಿತ್ತು. ಬಡ ಮೀನುಗಾರರಿಗೆ, ಮರಳು ಕಾರ್ಮಿಕರಿಗೆ ಈ ನದಿ ಜೀವನದ ಸೆಲೆಯಾಗಿತ್ತು. ಆದರೆ ಇಂದು ಈ ನದಿ ಚಿಂತಾಜನಕ ಸ್ಥಿತಿಗೆ ತಲುಪಲು ಜನಪ್ರತಿನಿಧಿಗಳು, ನಗರಸಭೆಯ ಅಧಿಕಾರಗಳ ನಿರ್ಲಕ್ಷ್ಯವೇ ಕಾರಣ. ಇವರೆಲ್ಲ ಇನ್ನಾದರೂ ನಿದ್ದೆಯಿಂದ ಎಚ್ಚೆತ್ತುಕೊಂಡರೆ ಈ ನದಿಯನ್ನು ಮೊದಲಿನಂತೆ ಜನೋಪಯೋಗಿ ಜೀವನದಿಯಾಗಿ ಪರಿವರ್ತಿಸಬಹುದಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅತೀ ಮುಖ್ಯ. -ಶಿವರಾಮ ಕಲ್ಮಾಡಿ, ಕೆನರಾ ಬ್ಯಾಂಕ್‌ ನಿವೃತ್ತ ಉದ್ಯೋಗಿ

ನ್ಯಾಯಾಲಯದ ಆದೇಶ ಸ್ಪಷ್ಟ ಉಲ್ಲಂಘನೆ
ಇಂದ್ರಾಣಿ ಸಮಸ್ಯೆ ಪ್ರಭುತ್ವ ಮತ್ತು ಪ್ರಜಾ ನಿರ್ಮಿತ ಸಮಸ್ಯೆ. ನದಿ ಎಂದರೆ ಸಂಸ್ಕೃತಿ ಮತ್ತು ನಾಗರಿಕತೆಗಳ ಉಗಮ ಸ್ಥಾನ. ಶುದ್ಧೀಕರಿಸಿದ ಅಥವಾ ಶುದ್ಧೀಕರಿಸದ, ಯಾವುದೇ ಘನ ಅಥವಾ ದ್ರವ ತ್ಯಾಜ್ಯವನ್ನು ನದಿ, ಕಾಲುವೆ, ಕೆರೆಗಳಿಗೆ ಬಿಡಬಾರದೆಂದು ನ್ಯಾಯಾಲಯದ ಸ್ಪಷ್ಟ ಆದೇಶವನ್ನೇ ಉಡುಪಿ ನಗರಸಭೆ ಉಲ್ಲಂಘಿಸಿರುವುದು ನ್ಯಾಯಾಂಗ ನಿಂದನೆಯ ಪರಮಾವಧಿ. ಈಗಲೂ ನದಿಗೆ ಕಲುಷಿತ ನೀರು ಬಿಡುವುದಿಲ್ಲ ಎಂಬ ಹೇಳಿಕೆ ಜನಪ್ರತಿನಿಧಿಗಳಿಂದಾಗಲಿ, ನಗರಾಡಳಿತದಿಂದಾಗಲಿ ಬರುತ್ತಿಲ್ಲ. ಕೇವಲ ಶುದ್ಧೀಕರಣಕ್ಕೆ ಆದ್ಯತೆ, ಪ್ರಯತ್ನ ಎಂಬ ಹೇಳಿಕೆಗಳು ಬರುತ್ತಿದೆಯಷೇr. ಇದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಜಾಣ ಕುರುಡತನ. ಎಸ್‌ಟಿಪಿ ಮತ್ತು ವೆಟ್‌ವೆಲ್‌ಗ‌ಳ ನೀರನ್ನು ಪೈಪ್‌ಲೈನ್‌ ಮೂಲಕ ಕರಾವಳಿ ಬೈಪಾಸ್‌ನಿಂದ ಮಲ್ಪೆ ರಸ್ತೆಯ ಮುಖೇನ ಸಮುದ್ರಕ್ಕೆ ಸೇರಿಸುವ ಕೆಲಸವಾದರೆ ಮಾತ್ರ ಸಮಸ್ಯೆಗೆ ಪರಿಹಾರ ದೊರಕಿತು.
-ಬಾಲಕೃಷ್ಣ ಕೊಡವೂರು,
ಅಧ್ಯಕ್ಷರು, ನವಸುಮ ರಂಗಮಂಚ

Advertisement

Udayavani is now on Telegram. Click here to join our channel and stay updated with the latest news.

Next