Advertisement

ತುಳು ಭವನ ಮೊದಲ ಹಂತದ ನಿರ್ಮಾಣ ಕಾಮಗಾರಿ ಆರಂಭ

07:44 PM Apr 20, 2019 | sudhir |

ಕಾಸರಗೋಡು: ಬಹುನಿರೀಕ್ಷಿತ ಕೇರಳ ತುಳು ಅಕಾಡೆಮಿಯ ತುಳು ಭವನ ನಿರ್ಮಾಣ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಶನಿವಾರ ಅಧಿಕೃತ ಚಾಲನೆ ದೊರಕುವುದರೊಂದಿಗೆ ತುಳುವ ಪ್ರೇಮಿಗಳಲ್ಲಿ ಹರ್ಷ ವ್ಯಕ್ತಗೊಂಡಿದೆ.

Advertisement

ಕೇರಳ ತುಳು ಅಕಾಡೆಮಿಯ ತುಳು ಭವನದ ಶಿಲಾನ್ಯಾಸ ಕಾರ್ಯಕ್ರಮ ಕೇರಳ ವಿಧಾನ ಸಭೆಯ 1000 ದಿನದ ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 27ರಂದು ಕೇರಳ ವಿಧಾನಸಭಾ ನಾಯಕ ರಾಮಕೃಷ್ಣನ್‌ ಅವರು ನೆರವೇರಿಸಿದ್ದರು.

ಮಂಜೇಶ್ವರದಲ್ಲಿ 2007 ರಲ್ಲಿ ಅಂದಿನ ಮುಖ್ಯಮಂತ್ರಿ ವಿ.ಎಸ್‌.ಅಚ್ಚುತಾನಂದನ್‌ ಅವರು ಕೇರಳ ತುಳು ಅಕಾಡೆಮಿಯನ್ನು ನೂತನವಾಗಿ ಅಸ್ಥಿತ್ವಕ್ಕೆ ತಂದು ಉದ್ಘಾಟಿಸಿದ್ದರು. ಅಂದಿನ ಮಂಜೇಶ್ವರ ಶಾಸಕ ನ್ಯಾಯವಾದಿ ಸಿ.ಎಚ್‌. ಕುಂಞಿಂಬು ತುಳುನಾಡಿನ ಅಭಿವೃದ್ಧಿಯ ಕನಸುಗಳೊಂದಿಗೆ ಪ್ರತ್ಯೇಕ ಮುತುವರ್ಜಿ ವಹಿಸಿ ಕೇರಳ ತುಳು ಅಕಾಡೆಮಿಗೆ ಚಾಲನೆ ನೀಡಿದ್ದರು. ಹೊಸಂಗಡಿ ಸಮೀಪದ ಕಡಂಬಾರ್‌ ಗ್ರಾಮದ ದುರ್ಗಿಪಳ್ಳದಲ್ಲಿ ಒಂದು ಎಕರೆ ಸ್ಥಳವನ್ನು ಒದಗಿಸಿತ್ತು. ಆದರೆ ಬಳಿಕದ ಸುದೀರ್ಘ‌ 11 ವರ್ಷ ಅಕಾಡೆಮಿಯ ಕಾರ್ಯಚಟುವಟಿಕೆಗಳು ಸಂಪೂರ್ಣ ಸ್ತಬ್ದಗೊಂಡು ತುಳು ಭವನ ನಿರ್ಮಾಣ ಮರೀಚಿಕೆ ಎಂಬಂತಾಗಿತ್ತು.

ಈ ಮಧ್ಯೆ ರಾಜ್ಯ ಸರಕಾರದ ಸಾವಿರ ದಿನಗಳ ವಿವಿಧ ಯೋಜನೆಗಳ ಕಾರ್ಯಕ್ರಮದಡಿ ತುಳು ಭವನ ನಿರ್ಮಾಣಕ್ಕಾಗಿ ಹೊಸ ಆಶಾಕಿರಣ ದೊಂದಿಗೆ ಕಳೆದ ಫೆ.27 ರಂದು ಶಂಕುಸ್ಥಾಪನೆ ನಿರ್ವಹಿಸಿ ಎಲ್ಲರ ಅಚ್ಚರಿಗೆ ಕಾರಣವಾಯಿತು. ಸರಕಾರದ ಅನುದಾನ ದಲ್ಲಿ ಇದೀಗ ಮೊದಲ ಹಂತದ ಕಾಮಗಾರಿಗೆ ಶನಿವಾರ ಅಧಿಕೃತ ಚಾಲನೆ ನೀಡಲಾಯಿತು. ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರದ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಆರು ತಿಂಗಳೊಳಗೆ ಮೊದಲ ಹಂತದ ಕಾಮಗಾರಿ ಪೂರ್ತಿಗೊಳಿಸಿ ಉದ್ಘಾಟನೆಯಾಗಲಿದೆ ಎಂದು ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ್‌ ಎಂ. ಸಾಲಿಯಾನ್‌ ತಿಳಿಸಿರುವರು. ಮೊದಲ ಹಂತದಲ್ಲಿ 25 ಲಕ್ಷ ರೂ.ಗಳ ಅನುದಾನದಲ್ಲಿ ಅಕಾಡೆಮಿಗೆ ಕಾರ್ಯಾಲಯ ಮತ್ತು ಸಭಾಂಗಣ ನಿರ್ಮಾಣಗೊಳ್ಳಲಿದೆ. ಕಾಮಗಾರಿಯ ಉಸ್ತುವಾರಿಯ ಜವಾಬ್ದಾರಿ ನಿರ್ಮಿತಿ ಕೇಂದ್ರದ ಆಭಿಯಂತರ ಶರತ್‌ ಹಾಗೂ ಕೇರಳ ತುಳು ಅಕಾಡೆಮಿಯ ಕಾರ್ಯದರ್ಶಿ ವಿಜಯ ಕುಮಾರ್‌ ಪಾವಳ ಇವರಿಗೆ ನೀಡಲಾಗಿದೆ.

ಗಡಿನಾಡಿಗೆ ಹೆಮ್ಮೆ
ಕರ್ನಾಟಕದ ಭಾಗವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿಹೋದ ಬಳಿಕ ಕೇರಳ ಸರಕಾರದ ಮಲತಾಯಿ ಧೋರಣೆಗೊಳಗಾಗಿ ನಿರ್ಲಕ್ಷ್ಯಕ್ಕೊಳಗಾಗಿರುವುದೇ ಹೆಚ್ಚು. ಹೇಳಿಕೊಳ್ಳುವಂತಹ ಬಹುದೊಡ್ಡ ಯೋಜನೆಗಳಾಗಲಿ, ನೆರವುಗಳಾಗಲಿ ಗಡಿನಾಡಿಗೆ ಈವರೆಗೆ ದೊರಕಿಲ್ಲ. ಈ ಮಧ್ಯೆ 2007ರಲ್ಲಿ ಕೇರಳ ತುಳು ಅಕಾಡೆಮಿ ಎಂಬ ವಿಶೇಷ ಯೋಜನೆ ಭಾರೀ ಕುತೂಹಲದಿಂದ ಸರಕಾರ ಜಾರಿಗೆ ತಂದಿತ್ತು. ಆದರೆ ಬಳಿಕ ನಡೆದ ಚುನಾವಣೆಯಲ್ಲಿ ಅಚ್ಯುತಾನಂದನ್‌ ಅವರ ಸರಕಾರ ಅಧಿಕಾರ ಕಳೆದುಕೊಂಡು, ಬಳಿಕ ಯುಡಿಎಫ್‌ ನೇತೃತ್ವದ ಸರಕಾರ ಅಧಿಕಾರಕ್ಕೇರಿತ್ತು.

Advertisement

ಯುಡಿಎಫ್‌ ಸರಕಾರವು ತುಳು ಅಕಾಡೆಮಿ, ತುಳುಭವನ ನಿರ್ಮಾಣ ಸಹಿತ ಹಲವು ಮಹತ್ವದ ಯೋಜನೆಗಳನ್ನು ನಿರ್ಲಕ್ಷಿಸುವ ಮೂಲಕ ಭರವಸೆಯ ಗೋಪುರಗಳನ್ನು ಕೆಡವಲಾಗಿತ್ತು. ದುರ್ಗಿಪಳ್ಳದಲ್ಲಿ ಅಂದು ಸರಕಾರ ಖರೀದಿಸಿದ್ದ ತುಳು ಭವನ ನಿರ್ಮಾಣದ ನಿವೇಶನ ಹಾಳುಕೊಂಪೆಯಾಗಿ ಮಾರ್ಪಾಡಾಗಿತ್ತು.

ಇದೀಗ ಸರಕಾರವು ಅಕಾಡೆಮಿಯ ಸಮಿತಿಗೆ ಹೆಚ್ಚು ಕ್ರಿಯಾತ್ಮಕವಾದ ಸದಸ್ಯರುಗಳನ್ನು ನೇಮಿಸುವ ಮೂಲಕ ತುಳುವರಿಗೆ ನ್ಯಾಯ ಒದಗಿಸಲು ಮನಮಾಡಿರುವುದು ಇನ್ನಷ್ಟು ಭರವಸೆಗೆ ಕಾರಣವಾಗಿದೆ.

ಶನಿವಾರ ದುರ್ಗಿಪಳ್ಳದಲ್ಲಿ ನಡೆದ ಮೊದಲ ಹಂತದ ಕಾಮಗಾರಿ ಚಾಲನಾ ಸಂದರ್ಭ ಅಕಾಡೆಮಿ ಅಧ್ಯಕ್ಷ ಎಂ. ಉಮೇಶ ಸಾಲ್ಯಾ, ಕಾರ್ಯದರ್ಶಿ ವಿಜಯಕುಮಾರ್‌ ಪಾವಳ, ಮಾಜಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಗಾರ್‌, ಕೃಷ್ಣ ಶೆಟ್ಟಿಗಾರ್‌ ಹೊಸಂಗಡಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ ಕಾರ್ಯದರ್ಶಿ ಕೆ.ಆರ್‌.ಜಯಾನಂದ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next