Advertisement

ಪ್ರಜಾಪ್ರಭುತ್ವದ ಶೋಭೆ ಕಸಿಯುವ ಮತಯಂತ್ರ ವಿಶ್ವಾಸಾರ್ಹತೆ ಗೊಂದಲ

11:10 PM Jun 06, 2019 | Team Udayavani |

ಯಾವುದೋ ಪೆಟ್ಟಿಗೆಗಳನ್ನು ಸಾಗಿಸುವ ವೀಡಿಯೋ ಮುಂದಿಟ್ಟು ಮತಯಂತ್ರಗಳನ್ನೇ ಸಾಗಿಸಲಾಗಿದೆ ಎನ್ನುವುದು, ಅಧಿಕಾರಿಗಳು ಸಮರ್ಥನೆ ನೀಡಿದರೂ ಇಡೀ ವ್ಯವಸ್ಥೆಯತ್ತ ಬೆರಳು ತೋರಿಸುವುದು, ಇದೇ ಕಾರಣ ಮುಂದಿಟ್ಟು ಬ್ಯಾಲೆಟ್‌ಗಾಗಿ ಆಗ್ರಹಿಸೋದು ಅಪಾಯಕಾರಿಯೇ.

Advertisement

ದೇಶದಲ್ಲಿ ಮತದಾನ ಯಂತ್ರ ಬಳಕೆಯನ್ನು ಸಾರ್ವತ್ರಿಕಗೊಳಿಸಿ ಒಂದೂವರೆ ದಶಕ ಸಂದರೂ ಇದರ ಬಗ್ಗೆ ನಾವು ಈಗಲೂ ಸಂಶಯ ಹೊಂದಿರುವುದು ನೋವಿನ ಸಂಗತಿ. ನಿಜವಾಗಿಯೂ ಯಂತ್ರದಲ್ಲಿ ಸಮಸ್ಯೆಯಿದೆಯೇ ? ಯಂತ್ರದಲ್ಲಿ ದಾಖಲಾಗುವ ಮತಗಳನ್ನು ತಿರುಚುವ ಸಾಧ್ಯತೆ ಇದೆಯೇ ? ಅಥವಾ ಸೋಲು ಒಪ್ಪಿಕೊಳ್ಳಲಾಗದ ಮನಸ್ಥಿತಿಯೊಂದೇ ನಮ್ಮ ಮತದಾನ ಯಂತ್ರವನ್ನು ಸಂಶಯದ ಕೂಪವಾಗಿ ಪರಿವರ್ತಿಸುತ್ತಿದೆಯೇ ?

ಮತದಾನ ಯಂತ್ರವು ದೇಶಕ್ಕೆ ಸರಕಾರಿ ಸ್ವಾಮ್ಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸಂಸ್ಥೆಯ ಕೊಡುಗೆಯಾಗಿದ್ದು, ಪ್ರಸ್ತುತ ಸುಮಾರು 10 ಲಕ್ಷದಷ್ಟು ಯಂತ್ರಗಳನ್ನು ಇದು ಸರಬರಾಜು ಮಾಡುತ್ತಿದೆ. 1990ರಲ್ಲಿ ಮತದಾನ ಯಂತ್ರವನ್ನು ದೇಶಕ್ಕೆ ಪರಿಚಯಿಸಲಾಯಿತಾದರೂ ಅದನ್ನು ಚುನಾವಣೆಯಲ್ಲಿ ಬಳಸಲು ಆರಂಭಿಸಿರುವುದು 1998ರ ಹೊತ್ತಿಗೆ. ಅದನ್ನು ಏಕಾಏಕಿಯಾಗಿ ಜಾರಿಗೆ ತಂದಿಲ್ಲ. ಅದರ ಸಾಧಕ – ಬಾಧಕ ತಿಳಿದುಕೊಂಡ ಬಳಿಕ ಎಲ್ಲರ ಒಪ್ಪಿಗೆ ಪಡೆದೇ ಸ್ವೀಕರಿಸಲಾಗಿದೆ. 1998- 2001ರ ಅವಧಿಯಲ್ಲಿ ದೇಶದಲ್ಲಿ ಹಂತಹಂತವಾಗಿ ಮತದಾನ ಯಂತ್ರದ ಬಳಕೆಯನ್ನು ಚುನಾವಣೆಯಲ್ಲಿ ಮಾಡಲಾಯಿತು. 2004ರ ಬಳಿಕ ಇದನ್ನು ಸಾರ್ವತ್ರಿಕಗೊಳಿಸಿ, ಪ್ರತಿಯೊಂದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಯಂತ್ರದ ಮೂಲಕವೇ ನಡೆಸಲಾಯಿತು. ಅಂದಿನಿಂದ ಸುಮಾರು 15 ವರ್ಷಗಳ ಕಾಲ ಈ ಯಂತ್ರದ ಮೂಲಕವೇ ಕೆಲವು ಪಕ್ಷಗಳ ಸರಕಾರಗಳು ರಾಜ್ಯ ಮತ್ತು ಕೇಂದ್ರದಲ್ಲಿ ಬಂದಿವೆ. ಎರಡು ಅವಧಿಗೆ ಯುಪಿಎಯನ್ನು ಮತ್ತು ಎರಡು ಅವಧಿಗೆ ಎನ್‌ಡಿಎಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದಿರುವುದು ಇದೇ ಯಂತ್ರಗಳು.

ಈ ಯಂತ್ರಗಳ ಮೂಲಕ ಮತದಾನ ಮಾಡುವುದರ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂಬ ಕಾರಣಕ್ಕಾಗಿ ನಿಧಾನವಾಗಿ ವಿವಿಪ್ಯಾಟ್‌ ಎಂಬ ಪೂರಕ ವ್ಯವಸ್ಥೆಯನ್ನು ಮತ್ತೂಂದು ಯಂತ್ರದ ಮೂಲಕ ಮಾಡಲಾಯಿತು. ಇದರ ಮೂಲಕ ನಾವು ಯಾವ ಪಕ್ಷಕ್ಕೆ ಮತ್ತು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಮತದಾನ ಮಾಡಿದ ವ್ಯಕ್ತಿಗೆ 7 ಸೆಕೆಂಡುಗಳ ಕಾಲ ವೀಕ್ಷಿಸಲು ಸಾಧ್ಯವಿದೆ. ಅದರಲ್ಲಿ ತಪ್ಪು ಕಂಡು ಬಂದಲ್ಲಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗೆ ತಿಳಿಸಿ ಷರತ್ತುಬದ್ಧವಾದ ಮರುಮತದಾನ ಮಾಡಲೂ ಅವಕಾಶವಿದೆ. ಈ ವ್ಯವಸ್ಥೆಯನ್ನು 2013ರಲ್ಲಿ ನಾಗಾಲ್ಯಾಂಡ್‌ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಮತ್ತು 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲೂ ಬಳಸಲಾಯಿತು. 2014 ಲೋಕಭಾ ಚುನಾವಣೆ ಸಂದರ್ಭದಲ್ಲಿ ಆಯ್ದು 8 ಲೋಕಸಭಾ ಕ್ಷೇತ್ರಗಳಲ್ಲೂ ( ಲಕ್ನೋ, ಗಾಂಧಿನಗರ, ಬೆಂಗಳೂರು ದಕ್ಷಿಣ, ಚೆನ್ನೆç ಸೆಂಟ್ರಲ್‌, ಜಾಧವಪುರ, ರಾಯ್‌ಪುರ, ಪಟ್ನಾ ಮತ್ತು ಮಿಜೋರಾಂ) ಬಳಸಲಾಯಿತು. ಈ ಬಾರಿ, ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ದೇಶದೆಲ್ಲೆಡೆ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಯಂತ್ರದ ಮೂಲಕ ನಡೆಯುವ ಮತದಾನದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಕೇಳಿ ಬಂತು ಅಪಸ್ವರ: 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆಯಲ್ಲಿ ನಿರೀಕ್ಷೆಗೂ ಮೀರಿದ ಬಹುಮತ ಪಡೆದಾಗ ಮತದಾನ ಯಂತ್ರದ ಮೇಲೆ ವಿಪಕ್ಷಗಳು ಸಂಶಯ ವ್ಯಕ್ತಪಡಿಸಿದವು. ಈ ಬಳಿಕ ಕೆಲವು ರಾಜ್ಯಗಳ ಚುನಾವಣೆಯೂ ನಡೆದಾಗಲೂ ಇಂಥ ಸಂಶಯದ ಮಾತುಗಳು ಕೇಳಿ ಬಂದಿದ್ದವು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸಹಿತ ಎಲ್ಲ ಪಕ್ಷಗಳಿಗೂ ಅಧಿಕಾರ ಸಿಕ್ಕಿತ್ತು. ಆದರೆ ಬಿಜೆಪಿ ಸಿಂಹಪಾಲು ಪಡೆದುಕೊಂಡಿದ್ದರಿಂದ ಬಿಜೆಪಿ ಹೊರತುಪಡಿಸಿದ ಪಕ್ಷಗಳು ಸಂಶಯ ವ್ಯಕ್ತಪಡಿಸಿದ್ದುದು ಈ ಬಾರಿಯೂ ಲೋಕಸಭಾ ಚುನಾವಣೆ ವರೆಗೂ ಮುಂದುವರಿದಿದೆ. ಮತದಾನೋತ್ತರ ಸಮೀಕ್ಷೆಯ ಫ‌ಲಿತಾಂಶ ಪ್ರಕಟವಾದ ಬೆನ್ನಿಗೇ 20ಕ್ಕೂ ಮಿಕ್ಕಿದ ವಿಪಕ್ಷಗಳು ಮತದಾನ ಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿವೆ.

Advertisement

ವಿವಿಪ್ಯಾಟ್‌ನಿಂದಲೂ ಸಂಶಯ ದೂರವಾಗಿಲ್ಲ: ವಿವಿಪ್ಯಾಟ್‌ ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕವೂ ಕೆಲವು ಪಕ್ಷಗಳ ಸಂಶಯ ದೂರವಾಗಲಿಲ್ಲ. ಅದು ಮತ್ತಷ್ಟು ಹೆಚ್ಚಾಯಿತು. ಮತದಾನ ಯಂತ್ರ ಮತ್ತು ವಿವಿಪ್ಯಾಟ್‌ ಮತಗಳ ನಡುವೆ ತಾಳೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂತು. ಅದಕ್ಕೆ ಪೂರಕವಾಗಿ ಅವರು ತಮ್ಮದೇ ಅದಂಥ ಕೆಲವು ವಾದವನ್ನೂ ಮುಂದಿಡುತ್ತಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು, ಭಾರತ್‌ ಎಲೆಕ್ಟ್ರಾನಿಕ್ಸ್‌ನ ಅಧಿಕಾರಿಗಳು ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಭಾಗವಹಿಸಿದ ಅಧಿಕಾರಿಗಳು ಬೇರೆ ಬೇರೆ ರೀತಿಯಲ್ಲಿ ಸಂಶಯ ನಿವಾರಣೆ ಮಾಡಲು ಮುಂದಾದರೂ ಆಕ್ಷೇಪ ಎತ್ತುವವರ ಸಂಶಯ ದೂರವಾಗಲೇ ಇಲ್ಲ. ಬ್ಯಾಲೆಟ್‌ ಪೇಪರ್‌ನಲ್ಲೇ ಚುನಾವಣೆ ನಡೆಯಬೇಕು ಎಂಬ ಆಗ್ರಹ ಹಲವು ಪಕ್ಷಗಳಿಂದ ಕೇಳಿ ಬರಲಾರಂಭಿಸಿವೆ. ಆದರೆ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸುವುದು ಸದ್ಯ ಕಷ್ಟ ಎಂಬ ವಾದ ಇದಕ್ಕೆ ಸರಿಯಾದ ಉತ್ತರವಾಗದು. ಯಂತ್ರದ ಕಾರಣದಿಂದಾಗಿ ಅಥವಾ ಯಾವುದೋ ಒಂದು ಪಕ್ಷ ಅಥವಾ ಮೈತ್ರಿಕೂಟಕ್ಕೆ ಸಹಕಾರಿಯಾಗುವಂಥ ಉದ್ದೇಶಪೂರ್ವಕವಾಗಿ ಜನಾದೇಶ ಪಡೆಯಲು ಸಾಧ್ಯ ಎಂದಾದರೆ ನಾವು ಯಂತ್ರ ಬಳಕೆಯನ್ನೇ ಮುಂದುವರಿಸುವುದು ಸರಿಯಲ್ಲ.

ಬಿಜೆಪಿ ಅಥವಾ ಎನ್‌ಡಿಎಗೆ ಭರ್ಜರಿ ಬಹುಮತ ಸಿಕ್ಕಿದೆ, ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿದೆ ಎಂಬ ಮಾತ್ರಕ್ಕೆ ಮತಯಂತ್ರ ಸರಿಯಿಲ್ಲ ಎಂದು ಹೇಳ್ಳೋದು ಮೂರ್ಖತನವಾಗುತ್ತದೆ. ಬಿಜೆಪಿಗೆ ಮುಸ್ಲಿಮರ ಮತ ಬೀಳ್ಳೋದೇ ಅಸಾಧ್ಯ ಎಂಬ ನಂಬಿಕೆಯೇ ಪ್ರಶ್ನಾರ್ಹ. ಈಗ ಪ್ರಗತಿ ಪರವಾದಂಥ ಆಡಳಿತಕ್ಕೆ ಬೆಂಬಲಿಸುವ ಜನರ ಸಂಖ್ಯೆ ಹೆಚ್ಚಾಗುತ್ತದೆ. ಕೋಮುವಾದ ನಮ್ಮನ್ನು ನಿಧಾನವಾಗಿ ಕೊಲ್ಲುತ್ತದೆ ಎಂಬುದು ಜನರಿಗೆ ಗೊತ್ತಾಗಿ ಹೋಗಿದೆ. ಬಿಜೆಪಿಯೂ ಈ ಬಾರಿ ರಾಮಮಂದಿರದ ವಿಷಯವನ್ನೇ ಪ್ರಸ್ತಾಪಿಸದೆ ಕೇವಲ ಅಭಿವೃದ್ಧಿಯ ವಿಷಯದಲ್ಲೇ ಚುನಾವಣೆಯನ್ನು ಎದುರಿಸಿದೆ. ಯಾವ ರಥಯಾತ್ರೆಯೂ ಇಲ್ಲ. ಅಚ್ಚೇದಿನದ ಮಾತು ಮಾತ್ರ ಕೇಳಿ ಬಂದಿತ್ತು. ಆದ್ದರಿಂದಲೇ ಈ ರೀತಿಯ ಜನಾದೇಶ ಸಿಕ್ಕಿರಬಹುದು ಎಂದು ಯಾಕೆ ನಾವು ಭಾವಿಸಬಾರದು?

ಯುಪಿಎಗೆ ಎರಡು ಬಾರಿ ಬಹುಮತ ಸಿಕ್ಕಿದಾಗಲೂ ಬಿಜೆಪಿ ಮತಯಂತ್ರದ ಬಗ್ಗೆ ಆಕ್ಷೇಪವೆತ್ತಿಲ್ಲ. 2009ರಲ್ಲಿ ಬಿಜೆಪಿ ಗೆದ್ದೇ ಬಿಡುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಕಳಪೆ ಸಾಧನೆ ಮಾಡಿತ್ತು. ಈಗ ಅನುಮಾನ ವ್ಯಕ್ತಪಡಿಸುವವರಿಗೆ ಆಗ ಯಾಕೆ ಮತಯಂತ್ರದ ಬಗ್ಗೆ ಯಾಕೆ ಸಂಶಯ ಬಂದಿಲ್ಲ? ದಿಲ್ಲಿಯಲ್ಲಿ ಆಮ್‌ ಆದ್ಮಿ ಕ್ಲೀನ್‌ ಸ್ವೀಪ್‌ ಮಾಡಿದಾಗ, ದೇಶದಿಂದ ಕಾಂಗ್ರೆಸ್‌ ನಿರ್ಮೂಲನೆ ಮಾಡುತ್ತೇವೆ ಎನ್ನುತ್ತಾ ಅಮಿತ್‌ ಶಾ ಅವರು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಚುನಾವಣೆ ಎದುರಿಸಿ ಹೀನಾಯವಾಗಿ ಆಡಳಿತವನ್ನು ಕಳೆದುಕೊಂಡಾಗ ಯಾಕೆ ಸಂಶಯ ಬಂದಿಲ್ಲ? ಆಗ ಈ ಎರಡು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರಕಾರ ಇತ್ತು. ಕೇರಳದಲ್ಲಿ ಶಬರಿಮಲೆ ವಿವಾದದಲ್ಲಿ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಒಂದು ಸ್ಥಾನವೂ ಸಿಕ್ಕಿಲ್ಲ. ಇಲ್ಲಿ ಕಾಂಗ್ರೆಸ್‌ ಮೈತ್ರಿಕೂಟ ಭರ್ಜರಿ 19 ಸ್ಥಾನಗಳನ್ನು ಗೆದ್ದಿರುವುದು ಇದೇ ಮತಯಂತ್ರದಿಂದಲ್ಲವೇ?

ಮತಯಂತ್ರದ ವಿರುದ್ಧ ದನಿ ಎತ್ತುವವರ ಕೆಲವು ಆರೋಪ ತೀರಾ ಬಾಲಿಶವಾದುದು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಯಾವುದೋ ಪೆಟ್ಟಿಗೆಗಳನ್ನು ಸಾಗಿಸುವ ವೀಡಿಯೋ ಮುಂದಿಟ್ಟು ಮತಯಂತ್ರಗಳನ್ನೇ ಸಾಗಿಸಿ ತಿರುಚಲಾಗುತ್ತಿದೆ ಎಂದು ಹೇಳ್ಳೋದು, ಅಧಿಕಾರಿಗಳು ಸ್ಪಷ್ಟವಾಗಿ ಸಮರ್ಥನೆ ನೀಡಿದರೂ ಮತ್ತೆ ಮತ್ತೆ ಸಣ್ಣಪುಟ್ಟ ವಿಷಯಗಳನ್ನು ಮುಂದಿಟ್ಟು ಇಡೀ ವ್ಯವಸೆªಯತ್ತಲೇ ಬೆರಳು ತೋರಿಸೋದು, ಸ್ಥಳೀಯ ಸಂಸ್ಥೆಗಳ ಫ‌ಲಿತಾಂಶವನ್ನು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಫ‌ಲಿತಾಂಶಕ್ಕೆ ಹೋಲಿಸಿ ಮತಯಂತ್ರವನ್ನು ಸಂಶಯಿಸೋದು, ಇದೇ ಕಾರಣ ಮುಂದಿಟ್ಟು ಬ್ಯಾಲೆಟ್‌ ಪೇಪರ್‌ಗಾಗಿ ಆಗ್ರಹಿಸೋದು ಮತ್ತಷ್ಟು ಅಪಾಯಕಾರಿಯೇ. ಮತಯಂತ್ರಗಳನ್ನೇ ಸಾಗಿಸುವ ಆರೋಪ ಮಾಡುವವರು ಬ್ಯಾಲೆಟ್‌ ಪೇಪರ್‌ ಮೇಲೆ ಅದ್ಹೇಗೆ ಅತಿಯಾದ ವಿಶ್ವಾಸ ಹೊಂದಿದ್ದಾರೋ?

ಅದೇನೇ ಇದ್ದರೂ ಮತಯಂತ್ರ ವಿರೋಧಿಗಳ ಆರೋಪವು ಜನರಲ್ಲೂ ಒಂದು ರೀತಿಯ ಗೊಂದಲ ಮೂಡಿಸುತ್ತಿದೆ. ಆದ್ದರಿಂದ ಇದಕ್ಕೆಲ್ಲ ತರ್ಕಬದ್ಧ ಅಂತ್ಯ ಹಾಡಬೇಕಾಗಿದೆ. ಮತಯಂತ್ರ ವಿರೋಧಿಗಳಲ್ಲಿ ಇರುವಂಥ ಸಂಶಯವನ್ನು ಬೇರು ಸಹಿತ ಕಿತ್ತೂಗೆಯಲು ಅಧಿಕಾರಿಗಳು ಪೂರಕ ವೇದಿಕೆ ಸೃಷ್ಟಿಸಬೇಕಾಗಿದೆ. ಅವರ ಪ್ರತಿಯೊಂದು ಸಂಶಯವನ್ನೂ ಪೂರಕ ಸಾಕ್ಷ್ಯಾಧಾರ ಸಹಿತ ನಿವಾರಣೆ ಮಾಡೋಡು ಸರಕಾರ ಮತ್ತು ಚುನಾವಣಾ ಆಯೋಗದ ಕರ್ತವ್ಯವಾಗಬೇಕು. ಆರೋಪ ಮತ್ತು ಸಮರ್ಥನೆ ಒಂದೇ ವೇದಿಕೆಯಲ್ಲಿ ಪರಿಣಿತ ತಾಂತ್ರಿಕ ತಜ್ಞರ ಉಪಸ್ಥಿತಿಯಲ್ಲಿ ಆಗುವುದು ಒಳಿತು. ಸದ್ಯೋಭವಿಷ್ಯದಲ್ಲಿ ನಡೆಯಲಿರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಿಂತ ಮೊದಲೇ ಇಂಥದ್ದೊಂದು ಕೆಲಸವಾಗಲಿ. ಆ ಚುನಾವಣೆಯನ್ನು ಎಲ್ಲ ಪಕ್ಷಗಳ ವಿಶ್ವಾಸ ಮತ್ತು ಒಪ್ಪಿಗೆ ಪಡೆದೇ ಮತಯಂತ್ರದ ಮೂಲಕವೇ ಮುಂದಿನ ಚುನಾವಣೆ ನಡೆಯುವಂತಾಗಬೇಕಾಗಿದೆ.

ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next