Advertisement

ಮಕ್ಕಳನ್ನು ಮಾನಸಿಕವಾಗಿ ಸಿದ್ಧಗೊಳಿಸುವುದೇ ಸವಾಲು

02:33 PM Oct 25, 2021 | Team Udayavani |

ಕೋವಿಡ್‌ ಅವಧಿಯಲ್ಲಿ ಮಕ್ಕಳ ಕಲಿಕಾ ಚಟುವಟಿಕೆಗಳು ಸ್ಥಗಿತಗೊಳ್ಳದಂತೆ ಮಾಡುವಲ್ಲಿ ಸರಕಾರ, ಶಿಕ್ಷಣ ಇಲಾಖೆ ಮತ್ತು ಶಿಕ್ಷಕ ವರ್ಗ ಹರಸಾಹಸಪಟ್ಟಿದೆ. ಬದಲಾದ ಪರಿಸ್ಥಿತಿಗನುಗುಣವಾಗಿ ಪುಟಾಣಿ ಮಕ್ಕಳೂ ಕಲಿಕೆಗೆ ತಂತ್ರಜ್ಞಾನವನ್ನು ಅವಲಂಬಿಸಬೇಕಾದ ಸನ್ನಿವೇಶ ಸೃಷ್ಟಿಯಾಯಿತು. ಈ ಎಲ್ಲ ಉಪಕ್ರಮಗಳೂ ಮಕ್ಕಳನ್ನು ಕಲಿಕೆಯತ್ತ ಹಿಡಿದಿಟ್ಟುಕೊಳ್ಳುವಲ್ಲಿ ಭಾಗಶಃ ಯಶಸ್ಸು ಕಂಡಿತು. ಆದರೆ ಇವೆಲ್ಲವೂ ತಾತ್ಕಾಲಿಕ ವಿಧಾನಗಳಾಗಿದ್ದವೇ ಹೊರತು ಇವುಗಳಿಗೇ ಜೋತು ಬೀಳಲಾಗದು. ಕೊನೆಗೂ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭಗೊಂಡಿದ್ದು ಈ ಹಿಂದಿನಂತೆ ಬೋಧನೆ ನಡೆಯಲಿದೆ. ಆದರೆ ಕಳೆದ ಎರಡು ವರ್ಷಗಳ ಬೆಳವಣಿಗೆಗಳನ್ನು ಅವಲೋಕಿಸಿದಾಗ ತಂತ್ರಜ್ಞಾನ ವ್ಯವಸ್ಥೆಯಿಂದ ಮಕ್ಕಳ ಮನಸ್ಸನ್ನು ಮತ್ತೆ ಭೌತಿಕ ತರಗತಿಗಳತ್ತ ಸೆಳೆದು ಅವರ ಗಮನವನ್ನು ಕಲಿಕೆಯತ್ತಲೇ ಕೇಂದ್ರೀಕರಿಸುವಂತೆ ಮಾಡುವುದೇ ಶಿಕ್ಷಕರ ಮುಂದಿರುವ ಬಲುದೊಡ್ಡ ಸವಾಲು. ಅಷ್ಟು ಮಾತ್ರವಲ್ಲದೆ ಮನೆಯ ವಾತಾವರಣದಲ್ಲಿನ ಕಲಿಕೆಯಿಂದ ಶಾಲಾ ಕೊಠಡಿಯೊಳಗಿನ ಕಲಿಕೆಗೆ ಮಕ್ಕಳನ್ನು ಒಗ್ಗಿಕೊಳ್ಳುವಂತೆ ಮಾಡಬೇಕಿದೆ. ಒಟ್ಟಾರೆ ಮಕ್ಕಳನ್ನು ಮತ್ತೆ ಶಾಲಾ ಶಿಕ್ಷಣಕ್ಕೆ ಮಾನಸಿಕವಾಗಿ ಸಜ್ಜುಗೊಳಿಸುವ ಹೊಣೆಗಾರಿಕೆ ಶಿಕ್ಷಕರು ಮತ್ತು ಹೆತ್ತವರ ಮೇಲಿದೆ.

Advertisement

ಕಲಿಕೆ ನಿಂತ ನೀರಲ್ಲ. ಗಂಗೆಯಷ್ಟು ಆಳ, ತುಂಗೆಯಷ್ಟು ವಿಸ್ತಾರ, ಕಾವೇರಿಯಷ್ಟು ಚಲನಶೀಲ. ಸಾತ್ವಿಕತೆಯನ್ನು ಸ್ಪುರಿಸುವ ಕಾರಂಜಿ. ಕಲಿಕೆಯಲ್ಲಿ ಮಗು, ಮಾಧ್ಯಮ, ಮಾರ್ಗದರ್ಶನ, ವಿಷಯಗಳ ಮರುಪೂರಣ, ಅಗತ್ಯ ಹಿಮ್ಮಾಹಿತಿ ಎಲ್ಲವೂ ಮುಖ್ಯ. ಅಕಸ್ಮಾತ್‌ ಒಂದು ಕೊಂಡಿ ಕಳಚಿದರೂ ಕಲಿಕೆಯ ಸಮತೋಲನಕ್ಕೆ ಧಕ್ಕೆ ಬರುತ್ತದೆ.

ಕೋವಿಡ್‌ ಕಾಲದಲ್ಲಿ ಶಾಲಾಮಕ್ಕಳು ಅಪ್ಪ-ಅಮ್ಮ, ಅಜ್ಜ-ಅಜ್ಜಿ, ನೆರೆಕರೆಯವರೊಂದಿಗೆ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಬೆರೆತಿದ್ದಾರೆ ಮತ್ತು ಕಲಿತಿದ್ದಾ ರೆ. ಬದುಕಿನಲ್ಲಿ ಎದುರಾಗುವ ಆಹಾರ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ವಸ್ತು ಪೂರೈಕೆಯಲ್ಲಿ ವ್ಯತ್ಯಯ ಮುಂತಾದ ಆಗುಹೋಗುಗಳನ್ನು, ಸಿಹಿ-ಕಹಿಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದಾ ರೆ. ಜತೆಗೆ ಮನೆ ಕೆಲಸದ ಮೂಲಕ ಹೆತ್ತವರಿಗೆ ಸಹಾಯ, ಅಗತ್ಯ ವಸ್ತುಗಳನ್ನು ಅಂಗಡಿಯಿಂದ ತರುವಷ್ಟರ ಮಟ್ಟಿಗೆ ಪ್ರಬುದ್ಧರಾಗಿದ್ದಾ ರೆ. ಕಲಿಕಾ ವಿಚಾರವಾಗಿ ಸಾಮಾನ್ಯ ವ್ಯವಹಾರ ಜ್ಞಾನ, ಸಂವಹನ, ಸಹಕಾರ ಮನೋಭಾವನೆಗಳಂತಹ ಗುಣಗಳನ್ನು ರೂಢಿಸಿಕೊಂಡಿದ್ದಾರೆ. ರೇಡಿಯೋ ಪಾಠಗಳು, ದೂರದರ್ಶನದ ಸಂವೇದ ತರಗತಿಗಳು, ಆನ್‌ಲೈನ್‌ ಕಲಿಕಾ ಚಟುವಟಿಕೆಗಳೆಂಬ ಸೇತುವೆಯ ಮೂಲಕ ವಿದ್ಯಾಗಮ, ಪರ್ಯಾಯ ಶೈಕ್ಷಣಿಕ ಯೋಜನೆಯೊಂದಿಗೆ ಜ್ಞಾನವೃದ್ಧಿಗಾಗಿ ಮನ ತೆರೆದಿದ್ದಾರೆ. ಶಿಕ್ಷಣ ಇಲಾಖೆ ಕೂಡ ಪ್ರತೀ ಹಂತದಲ್ಲೂ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಚಿಂತನೆ ನಡೆಸುತ್ತಿದೆ. ಕಲಿಕೆಯ ನಡುವಿನ ಅಂತರ ಕಡಿಮೆ ಮಾಡಲು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ, ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸುವ ಜತೆಗೆ ಪಾಲಕರ ಅಭಿಪ್ರಾಯಗಳ ಕ್ರೋಡೀಕರಣದಂತಹ ಬೇರೆ ಬೇರೆ ಕವಲುಗಳಲ್ಲಿ ಪ್ರಯತ್ನ ನಡೆಸುತ್ತಿದೆ. ನಮ್ಮ ಶಿಕ್ಷಕರು ಸಹ ಮಗುವಿನೊಂದಿಗೆ ಮಗುವಾಗಿ, ಸಹವರ್ತಿಯಾಗಿ, ಸ್ನೇಹಿತರಾಗಿ ಮಾರ್ಗದರ್ಶಕರಾಗಿ ತಮ್ಮ ವೃತ್ತಿ ಬದ್ಧತೆ ತೋರಿದ್ದಾ ರೆ. ಬೇರೆ ಬೇರೆ ತಂತ್ರಜ್ಞಾನಗಳನ್ನು ಕಲಿತು ಪಾಠ ಪ್ರವಚನಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿದ್ದಾ ರೆ. ಆದರೂ ಎಲ್ಲೋ ಒಂದಿಷ್ಟು ತೊಡರುಗಳು ಕಲಿಕೆಯ ಪರಿಪೂರ್ಣತೆಗೆ ಅಡ್ಡಿಯಾದದ್ದಂತೂ ಸಹಜ.

ಒಂದು ಸುಂದರವಾದ ದೇವಾಲಯದಲ್ಲಿ ದೇವರ ಮೂರ್ತಿಯೇ ಇಲ್ಲದಿದ್ದರೆ ಆ ದೇವಾಲಯಕ್ಕೆಲ್ಲಿ ಕಳೆ, ಹೂವುಗಳಿಲ್ಲದ ಹೂದೋಟ ಎಷ್ಟು ಸುಂದರವಾಗಿ ಕಾಣಲು ಸಾಧ್ಯ? ಹೊಸತನ್ನು ಅರಸುವ ಮುದ್ದು ಕಂದಮ್ಮಗಳ ಕಲರವರಹಿತ ತರಗತಿ ಕೋಣೆಗಳಿಗೆಲ್ಲಿ ಬೆಲೆ? ಇವೆಲ್ಲವೂ ಹೆತ್ತವರಾಗಿ, ಶಿಕ್ಷಕರಾಗಿ ನಮ್ಮ ಮುಂದಿರುವ ಪ್ರಶ್ನೆಗಳು. ಕೋವಿಡ್‌ನ‌ ಉತ್ತರ ಕಾಲದಲ್ಲಿ ಪ್ರಸ್ತುತ ಸರಕಾರವು ತರಗತಿಗಳನ್ನು ಭೌತಿಕವಾಗಿ ನಿರ್ದಿಷ್ಟ ಮಾರ್ಗಸೂಚಿಗಳೊಂದಿಗೆ ಪ್ರಾರಂಭಿಸಿದೆ. ಸುಮಾರು 18 ತಿಂಗಳುಗಳ ಅನಂತರ ಪ್ರಾಥಮಿಕ ಶಿಕ್ಷಣ ಆರಂಭಗೊಂಡಿದೆ. ವಿದ್ಯಾರ್ಥಿಗಳ ಆಗಮನದ ಈ ಪರ್ವಕಾಲವು ಒಂದು ಐತಿಹಾಸಿಕ ಕ್ಷಣ ಎಂದರೂ ತಪ್ಪಾಗಲಾರದು. ಈ ಸಂದರ್ಭದಲ್ಲಿ ಮಕ್ಕಳಲ್ಲಿ ಜ್ಞಾನವನ್ನು ಅರಳಿಸುವ ಕೆಲಸ ಶಿಕ್ಷಕರು, ಹೆತ್ತವರಿಂದ ಆಗಬೇಕು. ತರಗತಿ ಪ್ರತ್ಯೇಕತೆಗೆ ಮಾತ್ರ ನಾಲ್ಕು ಗೋಡೆಗಳು ಸಾಕ್ಷಿಯಾಗಬೇಕು. ಕಲಿಯುತ್ತಿರುವ ಶಿಕ್ಷಣ ಗೋಡೆಗಳ ಒಳ ಹೊರಗೆ, ವಿಶಾಲ ಜಗತ್ತಿಗೆ ಮಗು ತನ್ನನ್ನು ಒಡ್ಡಿಕೊಳ್ಳುವಂತಿರಬೇಕು. ಈ ನಿಟ್ಟಿನಲ್ಲಿ ಶಿಶು ಪೂರಕ, ಶಿಶುಕೇಂದ್ರಿತ ವ್ಯವಸ್ಥೆ ಕಲ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯ ಕೂಡ ಹೌದು. ಗಣಿತ ಸೂತ್ರಗಳು, ವಿಜ್ಞಾನ ಸಮೀಕರಣಗಳು, ಸಮಾಜದ ಇತಿಹಾಸ, ಭಾಷೆಯ ಓದು-ಬರಹ ಮಾತ್ರವಲ್ಲದೆ ಮುಂದೆ ತನ್ನ ಬದುಕನ್ನು ಕಟ್ಟಿಕೊಳ್ಳುವ, ನೆಚ್ಚಿಕೊಳ್ಳುವ, ಆವಿಷ್ಕರಿಸುವ ವೃತ್ತಿಪರ ಶಿಕ್ಷಣದತ್ತ ಚಿತ್ತ ಹರಿಸಬೇಕು.

ಇದನ್ನೂ ಓದಿ:ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

Advertisement

ಈ ತನಕದ ಶಿಕ್ಷಣದಲ್ಲಿ ನಾವು ಅಂಕಗಳೊಂದಿಗೆ ಗುದ್ದಾ ಡಿಯೇ ಮೆಚ್ಚುಗೆ ಪಡೆಯಬೇಕಿತ್ತು. ಒಂದು ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳಲು ಅಂಕಗಳೇ ಮಾನದಂಡವಾಗಿತ್ತು. ಕಡಿಮೆ ಅಂಕ ಪಡೆದವನಲ್ಲಿಯೂ ಇರುವ ಕೌಶಲವನ್ನು ಗಣನೆಗೆ ತೆಗೆದುಕೊಂಡಿಲ್ಲ. ಪರೀಕ್ಷೆ ಎಂಬ ನಿರೀಕ್ಷೆಯಲ್ಲೇ ಶಿಕ್ಷಣ ಪೂರೈಸಬೇಕಿದೆ. ಕೇವಲ ಅಂಕಗಳ ನಿರೀಕ್ಷೆಯಿಂದ ಮಗುವಿಗೆ ಎಡೆಬಿಡದೆ ಬರೆಯುವ ಒತ್ತಡದ ಜತೆಗೆ ಅಂಕಗಳು ರಾಶಿಯಾಗಿ ಬೀಳುತ್ತವೆ ಎಂಬ ಕುರುಡು ವಿಶ್ವಾಸಗಳಿಂದ ಮಗುವಿನ ಮೈಮನಸ್ಸುಗಳನ್ನು ಥಳಿಸುವುದು ಎಷ್ಟು ಸಮಂಜಸ?. ಮುಂದೆ ನದಿ ಇದೆಯೆಂದು ನಡೆಯುವ ದಾರಿಯ ಹೊಯಿಗೆಯಲ್ಲಿ ಮಗುವನ್ನು ತೆವಳಿಸುವ ಕಾರ್ಯ ನಿಜಕ್ಕೂ ಅವೈಜ್ಞಾನಿಕ. ಮಗು ಸ್ವಇಚ್ಛೆಯಿಂದ ಓದಿ ಬರೆದಾಗ ಮಾತ್ರ ನಾವು ಆತನಿಂದ ಉತ್ತಮ ಫ‌ಲಿತಾಂಶವನ್ನು ನಿರೀಕ್ಷಿಸಬಹುದು.

ದೀರ್ಘ‌ಕಾಲದ ರಜೆಯ ಅನಂತರ ಮಕ್ಕಳಷ್ಟೇ ಶಿಕ್ಷಕರು ಕೂಡಾ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಹಳ ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳ ಕಲಿಕೆಯನ್ನು ಅನುಕೂಲಿಸುವ ದೃಷ್ಟಿಯಿಂದ ವಿವಿಧ ಯೋಜನೆಗಳು, ಯೋಚನೆಗಳನ್ನು ರೂಪಿಸಿಕೊಂಡಿದ್ದಾ ರೆ. ಸರಳ ಹಾಗೂ ಪ್ರಾಯೋಗಿಕ ಕಲಿಕೋಪಕರಣಗಳನ್ನು ತಯಾರಿಸಿಕೊಂಡಿದ್ದಾ ರೆ. ಈ ಸುದೀರ್ಘ‌ ರಜಾ ಅವಧಿಯಲ್ಲಿ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಶಿಕ್ಷಕರ ಮುಂದಿರುವ ಸವಾಲೇ ಸರಿ. ಕೋವಿಡ್‌ ಕಾಲದಲ್ಲಿ ಆನ್‌ಲೈನ್‌ ಪಾಠ, ನೋಟ್ಸ್‌ಗಳನ್ನು ಬರೆದುಕೊಳ್ಳುವುದು ಮುಂತಾದ ಕಲಿಕಾ ಚಟುವಟಿಕೆಗಳಿಗೆ ಮೊಬೈಲ್‌ ಒಂದು ಮಾಧ್ಯಮವಾಗಿ ಬಿಟ್ಟಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಮಕ್ಕಳಿಗೆ ನಾವೇ ಮೊಬೈಲ್‌ ಅನ್ನು ಅವರ ಕೈಗೆ ನೀಡುತ್ತಿದ್ದೇವೆ. ಮೊಬೈಲ್‌ನ ದಾಸ್ಯತನದಿಂದ ವಿದ್ಯಾರ್ಥಿಗಳನ್ನು ಬಿಡಿಸುವುದು ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಸುಲಭದ ಮಾತಲ್ಲ. ಮನೆಯ ವಾತಾವರಣದಿಂದ ಶಾಲಾ ಪರಿಸರಕ್ಕೆ ಹೊಂದಿಕೊಳ್ಳಲು ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕಿದೆ. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸ್ವತ್ಛತೆಯ ಕಡೆ ಗಮನಹರಿಸಲು ತಿಳಿಹೇಳಬೇಕಿದೆ. ಸಾಮಾಜಿಕ ಅಂತರವು ಒಂದು ನಿತ್ಯ ವಿಧಿಯಂತಿರಬೇಕು. ಮಾಸ್ಕ್ ಧರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅರಿಯಬೇಕು. ಮಾನಸಿಕವಾಗಿ ಪ್ರಬುದ್ಧತೆಯನ್ನು ಸಾಧಿಸಲು ಶಾಲೆ ಮತ್ತು ಸಮಾಜ ಸಹಕರಿಸಬೇಕು. ಕೊನೆಯದಾಗಿ ಇನ್ನಾದರೂ ಜಗತ್ತಿಗೆ ಬಂದ ಕಂಟಕ ತೊಲಗಿ ವಿದ್ಯಾರ್ಥಿಗಳ ಶಿಕ್ಷಣ ಸುಗಮ ಹಾದಿಯನ್ನು ಹಿಡಿಯಲಿ. ಗುರು ಮತ್ತು ಗುರಿ ಒಂದೇ ದಿಕ್ಕಿನಲ್ಲಿ ಸಾಗಲಿ. ವಿದ್ಯಾರ್ಥಿಗಳ ಭವಿಷ್ಯ ಉತ್ತಮ ಯಶಸ್ಸನ್ನು ಕಾಣಲಿ ಎಂಬುದೇ ಎಲ್ಲರ ಹಾರೈಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next