Advertisement

ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿದ ಆರೋಪಿಯ ಸೆರೆ

12:37 PM Oct 23, 2018 | Team Udayavani |

ಬೆಂಗಳೂರು: ಒಂದು ವರ್ಷದ ಹಿಂದೆ ಮೃತಪಟ್ಟಿದ್ದ ಚಿರತೆಯ ಚರ್ಮ ಮಾರಾಟ ಮಾಡಲು ಯತ್ನಿಸ್ತಿದ ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಕುಮಾರ್‌ (35) ಎಂಬಾತನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿ ಕುಮಾರ್‌ನನ್ನು ಭಾನುವಾರ ಬಂಧಿಸಿರುವ ಪೊಲೀಸರು, ಆತನಿಂದ ಲಕ್ಷಾಂತರ ರೂ. ಮೌಲ್ಯದ ಚಿರತೆ ಚರ್ಮ ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಹಾಗೂ ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ, ನ್ಯಾಯಾಲಯದ ಅನುಮತಿ ಮೇರೆಗೆ 4 ದಿನಗಳ ಕಾಲ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ಆರೋಪಿ ಕುಮಾರ್‌ ಇದೇ ಮೊದಲ ಬಾರಿ ಚಿರತೆ ಚರ್ಮ ಮಾರಾಟಕ್ಕೆ ಬಂದಿದ್ದಾಗಿ ಹೇಳುತ್ತಿದ್ದಾನೆ. ಆತನಿಗೆ, ಚಿರತೆ ಚರ್ಮ ಸಿಕ್ಕಿದ್ದು ಹೇಗೆ, ಆತನೇ ಚಿರತೆ ಕೊಂದಿದ್ದನೇ ಅಥವಾ ಬೇರೊಬ್ಬರಿಂದ ಚರ್ಮ ಪಡೆದುಕೊಂಡು ಮಾರಲು ಬಂದಿದ್ದನೇ, ಆತನ ಈ ಕೃತ್ಯದ ಹಿಂದೆ ಬೇರೆ ಯಾರಾದೂ ಇದ್ದಾರೆಯೇ ಎಂಬ ಅಂಶಗಳ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಆರೋಪಿಯ ಬಳಿ ದೊರೆತಿರುವ ಚರ್ಮ ಗಮನಿಸಿದರೆ, ಚಿರತೆ ಒಂದು ವರ್ಷದ ಹಿಂದೆ ಮೃತಪಟ್ಟಿರುವ ಸಾಧ್ಯತೆಯಿದೆ. ಚಿರತೆ ಕೊಂದವರು ಯಾರು ಎಂಬ ಬಗ್ಗೆ ಮಾಹಿತಿ ಗೊತ್ತಾಗಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು. ಇದೇ ವರ್ಷ ಜುಲೈನಲ್ಲಿ ಜಿಂಕೆ ಹಾಗೂ ಚಿರತೆ ಚರ್ಮ ಮಾರಾಟ ಮಾಡಲು ಯತ್ನಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದರು.

48 ಲಕ್ಷ ರೂ.ಗೆ ವ್ಯವಹಾರ ಮುಗಿಸಿದ್ದ ಆರೋಪಿ: ಕಳೆದ ಕೆಲವು ದಿನಗಳ ಹಿಂದೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಚಿರತೆ ಚರ್ಮ ಮಾರಾಟ ಮಾಡಲು ವ್ಯಕ್ತಿಯೊಬ್ಬ ಯತ್ನಿಸುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಲು ಆರಂಭಿಸಿ ಕುಮಾರ್‌ ಮೊಬೈಲ್‌ ನಂಬರ್‌ ಪಡೆದುಕೊಳ್ಳಲಾಯಿತು. ಬಳಿಕ, ಆತನಿಗೆ ಗ್ರಾಹಕರ ಸೋಗಿನಲ್ಲಿ ಕರೆ ಮಾಡಿ, ಚಿರತೆ ಚರ್ಮ ಬೇಕಿದೆ ಎಂದು ಕೇಳಿದೆವು.

Advertisement

ಆರಂಭದಲ್ಲಿ ನನ್ನ ಬಳಿ ಇಲ್ಲ ಎಂದು ಹೇಳಿದನಾದರೂ, ಸ್ವಲ್ಪ ಹೊತ್ತಿನ ಮಾತುಕತೆ ಬಳಿಕ ಒಪ್ಪಿಕೊಂಡು, 50 ಲಕ್ಷ ರೂ. ಬೆಲೆ ಹೇಳಿದ್ದ. ಬಳಿಕ ಮಾತು ಕತೆಯಲ್ಲಿ 48 ಲಕ್ಷ ರೂ.ಗೆ ಚಿರತೆ ಚರ್ಮ ತಂದು ಕೊಡಲು ಒಪ್ಪಿಕೊಂಡಿದ್ದ. ಈ ಮಾಹಿತಿ ಆಧರಿಸಿ ಕಾರ್ಯಚರಣೆ ನಡೆಸಿದ ಸಿಬ್ಬಂದಿ, ಆತನನ್ನು ಬಂಧಿಸಿ ಚರ್ಮ ಜಪ್ತಿ ಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next