Advertisement

ಕವಿಗಳು ಎಚ್ಚರದ ಪರಿವೆಯ ಕರೆ ಗಂಟೆ

05:50 PM Dec 21, 2021 | Team Udayavani |

ಕಲಬುರಗಿ: ಕಾವ್ಯ ಈ ಕ್ಷಣದ ವೀಕ್ಷಣೆಯಿಂದ ಅದೇನನ್ನೋ ದರ್ಶಿಸುವಂತಿರಬೇಕು. ಕವಿಗಳಾದವರು ಎಚ್ಚರದ ಪರಿವೆಯ ಕರೆ ಗಂಟೆಗಳಾಗಬೇಕು ಎಂದು ಹಿರಿಯ ಕವಿ ಡಾ|ಎಚ್‌.ಎಸ್‌. ಶಿವಪ್ರಕಾಶ ಹೇಳಿದರು.

Advertisement

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ “ಹೋಗಿ ಬನ್ನಿ ಋತುಗಳೇ’ (ನಾಲ್ಕು ದಶಕದ ಕವಿತೆಗಳು) ಸಂವಾದ ಮತ್ತು ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವ ಮಾರುಕಟ್ಟೆಯ ಸಂದರ್ಭದಲ್ಲಿ ಬದುಕುತ್ತಿರುವ ಈ ಸಮಯದಲ್ಲಿ ಪುಣ್ಯಕೋಟಿ ಬರೆದ ಕವಿ “ದೇಶಿ ಕವಿ’ಯೋ ಅಥವಾ “ವಿಶ್ವ ಕವಿ’ಯೋ ಎಂಬುದು ನಿರ್ಣಯಿಸಬಾರದು. ನಾವೇ ವಿಶ್ವದ ಭಾಗವಾದಾಗ ಮಾತ್ರ ಅದು ಕಾಣುತ್ತದೆ. ಎಲ್ಲವೂ ಇಲ್ಲಿ ಅನಿಮಿತ್ತವಾಗಿದೆ. ನಾವು ಏನಿದ್ದೇವೆ?, ಹೇಗಿದ್ದೇವೆ ಎಂಬುದನ್ನು ಜನ ಗಮನಿಸುತ್ತಾರೆ ಎಂದು ತಿಳಿಸಿದರು.

ಇಲ್ಲಿ ಎಲ್ಲವೂ ಇದೆ, ಏನೂ ಇಲ್ಲ. ಅಕ್ಕಮಹಾದೇವಿ, ಕಾರ್ಲ್ ಮಾರ್ಕ್ಸ್ನಂತವರ ಸಾಹಿತ್ಯ ಸಾರ್ವಕಾಲಿಕವಾಗಿದೆ. ಕವಿಗಳು ಮರಗಿಡಗಳ ಜತೆಗೆ ಬದುಕುತ್ತಾರೆ, ಸಂವಹನ ಮಾಡುತ್ತಾರೆ. ಆಗ ಮಾತ್ರ ಸಾರ್ವಕಾಲಿಕರಾಗಬಹುದು. ಚರಿತ್ರೆ ಒಂದು ಸ್ಥಿತಿಯಿಂದ ಉನ್ನತ ಸ್ಥಿತಿಗೆ ಹೋಗುತ್ತದೆ. ಬುದ್ಧ, ಬಸವ, ಏಸುಕ್ರಿಸ್ತರ ಸಾವಿರಾರು ವರ್ಷಗಳ ತತ್ವಗಳು ಸ್ಥಾನಪಲ್ಲಟವಾದರೂ ಹೊಸ ಚರಿತ್ರೆಯೊಂದಿಗೆ ಜೋಡಿಸಿಕೊಂಡು ಔನ್ನತ್ಯಕ್ಕೆ ಏರುತ್ತವೆ ಎಂದರು.

ಕೃತಿ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಡಾ|ಸಿರಾಜ್‌ ಅಹ್ಮದ್‌ ಮಾತನಾಡಿ, ಶಿವಪ್ರಕಾಶ ಅವರ ವೈವಿಧ್ಯಮಯ ಕಾವ್ಯಗಳಲ್ಲಿ ಸಾರ್ವಕಾಲಿಕ. ಸರ್ವವ್ಯಾಪಿ ಗುಣಗಳಿದ್ದು, ಕನ್ನಡ ಕಾವ್ಯ ವಿಸ್ತಾರಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು. ಎಚ್‌. ಎಸ್‌. ಶಿವಪ್ರಕಾಶರ ಕಾವ್ಯಕ್ಕೆ ಚಲಿಸುವ, ಹರಿಯುವ ಆಹ್ವಾನೆಗೊಳಿಸುವ ಶಕ್ತಿಯಿದೆ. ಕನ್ನಡ ಸಂವೇದನೆ ಸಂವರ್ಧನೆಗೊಂಡಿದೆ. ಕಾವ್ಯ ಬದುಕಿನ ಎಲ್ಲವನ್ನು ಹಾಸು ಹೊಕ್ಕು, ಮಿಳಿತಗೊಂಡಂತಿದೆ. ಇವರ ದೇಶಿ ಅನುಭವಕ್ಕೆ ಪರಿಯೇ ಇಲ್ಲ. ಆಯುಧಗಳಿಲ್ಲದ, ಹಿಂಸೆ ಇಲ್ಲದ ಸಂಸ್ಕತಿಯನ್ನು ಹುಡುಕಾಡುವ ಗುಣ ಲಕ್ಷಣಗಳು ಇವರ ಕಾವ್ಯಕ್ಕಿದ್ದು, ಸಂಸ್ಕೃತಿ, ಚರಿತ್ರೆ, ಪ್ರಭುತ್ವವನ್ನು ಪುನರುಜ್ಜೀವನಗೊಳಿಸುವ ಆಶಯ ಹೊಂದಿದ “ಅಮೆಜಾನ್‌’ ಕವಿ ಶಿವಪ್ರಕಾಶ ಎಂದು ವರ್ಣಿಸಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚೆನ್ನಬಸವಣ್ಣ, ಶಿವಪ್ರಕಾಶರ ಶತಮಾನದ ಕಾವ್ಯ ಹಾಗೂ ಈಗಿನ ನಾಲ್ಕು ದಶಕದ ಕಾವ್ಯ ಅವಲೋಕಿಸಿದಾಗ, ಅವರೊಬ್ಬ ಎಚ್ಚರದ ಕವಿ ಎಂಬುದು ರುಜುವಾತಾದಂತಿದೆ. ಯಾವುದೇ ಎಲ್ಲೆ, ಚೌಕಟ್ಟಿಗೆ ಒಳಪಡದ ಸೀಮಾತೀತ ಕವಿಯಾಗಿದ್ದು, ತಮ್ಮದೇ ಆದ ಕಾವ್ಯ ಮಾರ್ಗವನ್ನು ಅವರು ಕಂಡುಕೊಂಡಿದ್ದಾರೆ ಎಂದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ
ಡಾ|ಬಸವರಾಜ ಡೋಣೂರ, ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ|ಎಚ್‌.ಟಿ. ಪೋತೆ ಮಾತನಾಡಿದರು. ಪ್ರಾಧ್ಯಾಪಕ ಡಾ|ವಿಕ್ರಮ್‌ ವಿಸಾಜಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ರಾಮ ಹೊಲ್ಕಲ್‌ ಶ್ರೀಶೈಲ್‌ ನಾಗರಾಳ ಸೇರಿ ಹಲವರು ಪಾಲ್ಗೊಂಡಿದ್ದರು.

ಬಹುತ್ವ ಮತ್ತು ಏಕತ್ವದ ಕುರಿತು ನಮ್ಮಲ್ಲಿ ಇನ್ನೂ ಸ್ಪಷ್ಟತೆಗಳಿಲ್ಲ. ಹೀಗಾಗಿ ದ್ವಂದ್ವಾತ್ಮಕ ಭಾಷೆಗಳನ್ನು ಬಳಸುತ್ತಿದ್ದೇವೆ. ಡೋಂಗಿತನ ಬಹುದೊಡ್ಡದಾಗಿ ಕಾಣುತ್ತಿದೆ. ಆದರೆ, ಏಕತ್ವ ಇಲ್ಲದೆ ಬಹುತ್ವ ಇರಲು ಸಾಧ್ಯವೇ ಇಲ್ಲ.
ಡಾ|ಎಚ್‌.ಎಸ್‌.ಶಿವಪ್ರಕಾಶ,
ಹಿರಿಯ ಕವಿ

ಕನ್ನಡಕ್ಕೆ ವಿಶ್ವಮನ್ನಣೆ ತಂದು ಕೊಟ್ಟವರಲ್ಲಿ ಡಾ|ಎಚ್‌.ಎಸ್‌. ಶಿವಪ್ರಕಾಶ ಕೂಡ ಒಬ್ಬರಾಗಿದ್ದು, ಬಹುತ್ವವನ್ನು ಕಾವ್ಯಾನುಭವವಾಗಿಸಿಕೊಂಡು ಕನ್ನಡದ ಸಮದರ್ಶಿತ್ವವನ್ನು ಪ್ರಕಟಿಸಿದ್ದಾರೆ.
ಪ್ರೊ|ಎಚ್‌.ಟಿ.ಪೋತೆ,
ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ, ಗುವಿವಿ

Advertisement

Udayavani is now on Telegram. Click here to join our channel and stay updated with the latest news.

Next