Advertisement
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸ ಮತ ಕಳೆದುಕೊಂಡರೆ, ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ನಿಂದ ಪರ್ಯಾಯ ನಾಯಕತ್ವದಲ್ಲಿ ವಿಶ್ವಾಸ ಮಂಡನೆಗೂ ಅವಕಾಶವಿದೆ. ಹೀಗಾಗಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೆ ರಾಜ್ಯಪಾಲರ ಮುಂದೆ ಪ್ರಸ್ತಾಪ ಮಂಡಿಸುವ ಕುರಿತು ಚರ್ಚೆ ನಡೆಸಿದೆ ಎನ್ನಲಾಗುತ್ತಿದೆ.
Related Articles
Advertisement
ಕುಮಾರಸ್ವಾಮಿಯವರು ಸೋಮವಾರವೂ ಬಹುಮತ ಸಾಬೀತು ಪಡಿಸಲು ವಿಳಂಬ ಧೋರಣೆ ಅನುಸರಿಸಿದರೆ, ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಅಮಾನತಿನಲ್ಲಿಟ್ಟು, ನಂತರ ಬೇರೆ ಪಕ್ಷಕ್ಕೆ ಬಹುಮತ ಸಾಬೀತಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಆ ಸಂದರ್ಭದಲ್ಲಿ ಸದ್ಯ ರಾಜೀನಾಮೆ ಸಲ್ಲಿಸಿರುವ 16 ಜನ ಶಾಸಕರ ರಾಜೀನಾಮೆಗಳು ಅಂಗೀಕಾರವಾಗದೇ ಇರುವುದರಿಂದ ಅವರು ತಾಂತ್ರಿಕವಾಗಿ ಈಗಲೂ ಆಯಾ ಪಕ್ಷಗಳ ಸದಸ್ಯರಾಗಿದ್ದಾರೆ.
ಕುಮಾರಸ್ವಾಮಿ ಸರ್ಕಾರದ ಮೇಲೆ ತಮಗೆ ವಿಶ್ವಾಸವಿಲ್ಲವೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅವರು ಇದುವರೆಗೂ ಬಹಿರಂಗವಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿಲ್ಲ. ಹೀಗಾಗಿ, ಪರ್ಯಾಯ ನಾಯಕತ್ವ ಎಂದರೆ ಅವರು ಬರಬಹುದೆಂದು ಹೇಳಲಾಗುತ್ತಿದೆ. ಸೋಮವಾರ ಆದಷ್ಟು ಸರ್ಕಾರ ಉಳಿಸಿಕೊಳ್ಳಲು ಇರುವ ಸಾಧ್ಯತೆಗಳನ್ನು ಬಳಸಿಕೊಳ್ಳುವುದು. ಕೊನೆಯದಾಗಿ ಬಿಜೆಪಿ ಅಧಿಕಾರ ಹಿಡಿಯುವ ಪ್ರಸ್ತಾಪ ಮಾಡುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ಮಾಡುವ ಯೋಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅತೃಪ್ತರು ಬರುವುದು ಅನುಮಾನ: ಮತ್ತೂಂದೆಡೆ ಅತೃಪ್ತ ಶಾಸಕರ ನಡೆ ಅತ್ಯಂತ ಮಹತ್ವದ್ದಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ಮಾಡಿದರೂ, ಮುಂಬೈನ ಹೊಟೇಲ್ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ವಿಶ್ವಾಸ ಮತ ಯಾಚನೆಗೆ ಬರುತ್ತಾರಾ ಎಂಬ ಅನುಮಾನವೂ ಇದೆ. ಕಾಂಗ್ರೆಸ್ನವರು ಆರೋಪಿಸಿರುವಂತೆ ಅವರು ಬಿಜೆಪಿಯವರ ಹಿಡಿತದಲ್ಲಿಯೇ ಇದ್ದರೆ, ಕುಮಾರಸ್ವಾಮಿ ಸರ್ಕಾರ ಪತನವಾಗಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗುವವರೆಗೂ ಅವರು ಮುಂಬೈ ಬಿಟ್ಟು ವಾಪಸ್ ಬರುವುದು ಅನುಮಾನ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಅತೃಪ್ತರಿಗೆ ಕಂಟಕ: ಈಗಾಗಲೇ ಕಾಂಗ್ರೆಸ್ ವಿಪ್ ಜಾರಿ ಮಾಡಿದ್ದರೂ, ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಸದನಕ್ಕೆ ಹಾಜರಾಗದೇ ಹೊರಗುಳಿಯುವ 15 ಶಾಸಕರಿಗೆ ಸುಪ್ರೀಂಕೋರ್ಟ್ ರಕ್ಷಣೆ ನೀಡಿದೆ. ಆದರೆ, ಈ ಸರ್ಕಾರ ಪತನವಾದ ನಂತರವೂ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತರ ರಾಜೀನಾಮೆ ಅಂಗೀಕರಿಸದೇ ಹಾಗೆಯೇ ಉಳಿಸಿಕೊಂಡಿದ್ದರೆ, ಬಿಜೆಪಿ ಮೊದಲು ಸ್ಪೀಕರ್ ಬದಲಾವಣೆಗೆ ಮುಂದಾಗಬಹುದು. ಆ ಸಂದರ್ಭದಲ್ಲಿಯೂ ಅತೃಪ್ತರಿಗೆ ಮೈತ್ರಿ ಪಕ್ಷಗಳು ರಮೇಶ್ಕುಮಾರ್ ಪರ ಮತ ಚಲಾಯಿಸುವಂತೆ ವಿಪ್ ನೀಡುವ ಸಾಧ್ಯತೆ ಇದೆ. ಆಗಲೂ ಗೈರು ಹಾಜರಾದರೆ, ಕಾಂಗ್ರೆಸ್ ಅವರ ಶಾಸಕತ್ವ ಅನರ್ಹಗೊಳಿಸುವಂತೆ ಸ್ಪೀಕರ್ಗೆ ಮತ್ತೂಂದು ದೂರು ನೀಡಬಹುದು.
* ಶಂಕರ್ ಪಾಗೋಜಿ