Advertisement

ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ: ಎಸ್ಎಂಕೆ ಗೆ ಹೆಚ್ ಡಿಕೆ ಟಾಂಗ್

04:13 PM May 19, 2022 | Team Udayavani |

ಬೆಂಗಳೂರು: ಭಾರಿ ಮಳೆಯಿಂದ ಜಲಾವೃತ ಆದ ಬಳಿಕ ಬ್ರ್ಯಾಂಡ್ ಬೆಂಗಳೂರು ಉಳಿಸುವ ಬಗ್ಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರಕ್ಕೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಟಾಂಗ್ ನೀಡಿದ್ದಾರೆ.

Advertisement

ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾತನಾಡಿ, ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಬೆಂಗಳೂರಿಗೆ ಬ್ರ್ಯಾಂಡ್ ಎಲ್ಲಿತ್ತು ? ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ. ಅವರು ಬಂದು ಬ್ರ್ಯಾಂಡ್ ಬೆಂಗಳೂರಿನ ಹೆಸರನ್ನು ಹೈಜಾಕ್ ಮಾಡಿದ್ದರು. ಬರೀ ಸೂಟು ಬೂಟು ಹಾಕಿಕೊಂಡರೆ ಬ್ರಾಂಡ್ ಬೆಂಗಳೂರು ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಮಳೆ ಅವಾಂತರ: ‘ಬೆಂಗಳೂರು ಬ್ರ್ಯಾಂಡ್’ ಉಳಿಸಿಕೊಳ್ಳಲು ಸಿಎಂಗೆ ಎಸ್.ಎಂ. ಕೃಷ್ಣ ಪತ್ರ

ಫೋಟೋ ತೆಗೆಸಿಕೊಳ್ಳುವುದಕ್ಕೆ ನಗರ ಪ್ರದಕ್ಷಿಣೆ ಮಾಡಬೇಡಿ

ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ದಾಖಲೆಯ ಮಳೆ ಸುರಿಯುತ್ತಿದೆ. ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ದೊಡ್ಡ ಅನಾಹುತಗಳ ಬಗ್ಗೆ ಗಮನ ಸೆಳೆಯುವ ಬಗ್ಗೆ ಮಾಧ್ಯಮಗಳು ಶ್ರಮ ಹಾಕಿವೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ದುಡ್ಡನ್ನು ಹೊಡೆಯುವ ಶಾಸಕರಿಗೆ ಸರ್ಕಾರ ಹಣ ಕೊಟ್ಟಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನ ಸಚಿವರಿಗೆ ಕೊಡದೆ ಸಿಎಂ ಬಳಿ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಜನ ನೀರಲ್ಲಿ ಮುಳುಗಿ ಸಾಯುತ್ತಿದ್ದಾರೆ. ನಿನ್ನೆ ಆರ್ ಆರ್ ನಗರಕ್ಕೆ ಒಂದು ಕಡೆ ಮಾತ್ರ ಭೇಟಿ ಕೊಟ್ಟು, ಚಿಕ್ಕಮಗಳೂರಿನ ಶಾಸಕನ ಸರ್ಟಿಫಿಕೇಟ್ ಕೊಡುವುದಕ್ಕೆ ಹೋಗಿದ್ದರು. ಇವತ್ತು ಕಾಟಾಚಾರ ಪ್ರದಕ್ಷಿಣೆ ಮಾಡಿ ಜನರಿಂದ ಕದ್ದು ಮುಚ್ಚಿ ಬಂದಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಮಳೆಯಾದರೂ ಶಾಸಕರು ಅಧಿಕಾರಿಗಳ ಸಭೆ ಕರೆದಿಲ್ಲ. ಅಧಿಕಾರಿಗಳ ಸಭೆ ಕರೆದು ಏನಾದರೂ ಸೂಚನೆ ಕೊಟ್ಟಿದ್ದಾರಾ? ಎಂದು ಕಿಡಿ ಕಾರಿದರು.

Advertisement

ಬೆಂಗಳೂರು ಮಹಾನಗರದಲ್ಲಿ ಸಪ್ತ ಸಚಿವರಂತೆ ಏಳು ಸಚಿವರು ಇದ್ದಾರೆ. ಇಷ್ಟು ಜನ ಇಟ್ಟುಕೊಂಡು ನಗರದ ಜನತೆಗೆ ಏನು ಸಂದೇಶ ಕೊಡುತ್ತಿದ್ದಾರೆ. ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ತೆಗೆದುಕೊಂಡು ಹೋದರು. ಆ ಹಣವನ್ನು ಯಾರಿಗೆ ಕೊಟ್ಟಿದ್ದಾರೆ..?
ಬರೀ ಫೋಟೋ ತೆಗೆಸಿಕೊಳ್ಳುವುದಕ್ಕೆ ನಗರ ಪ್ರದಕ್ಷಿಣೆ ಮಾಡಬೇಡಿ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.

ಕಂದಾಯ ಸಚಿವರ ಕ್ಷೇತ್ರದಲ್ಲಿ ಎಷ್ಟು ಕೆರೆ ನುಂಗಿ ಹಾಕಿದ್ದಾರೆ?

ಪುಟ್ಟೇನಹಳ್ಳಿ ಕೆರೆ ನಾಶಗೊಳಿಸಿ ಜೆಪಿ ನಗರ ಡಾಲರ್ಸ್ ಕಾಲೋನಿ ಅಂತ ಮಾಡಿಕೊಂಡರು. ಈ ಹಿಂದೆ ನಾನು ೧೪ ತಿಂಗಳು ಸಿಎಂ ಆಗಿದ್ದಾಗ ಇದನ್ನು ಸ್ವಚ್ಛ ಮಾಡುವ ಶಕ್ತಿ ಇರಲಿಲ್ಲ. ಯಾಕೆಂದರೆ ಆಗ ನನಗೆ ಅದರ ಸ್ವಾತಂತ್ರ್ಯವೇ ಇರಲಿಲ್ಲ. ಆಗ ನಗರಾಭಿವೃದ್ಧಿ ಸಚಿವರು, ಉಪ ಮುಖ್ಯಮಂತ್ರಿ ಆದವರು ಅವರೇ ಸಭೆ ಕರೆಯಬೇಕಿತ್ತು. ನಾನು ಮುಖ್ಯಮಂತ್ರಿಯಾದರೂ ಕೂಡ ಸುಮ್ಮನೆ ಇರಬೇಕಿತ್ತು. ಬೆಂಗಳೂರಿಗೆ ಸಂಬಂಧಿಸಿದಂತೆ ಸಭೆ ಕರೆಯೋ ಹಾಗಿರಲಿಲ್ಲ. ಆ ರೀತಿಯ ಸಂದರ್ಭ ಇತ್ತು. ಕಂದಾಯ ಸಚಿವರ ಕ್ಷೇತ್ರದಲ್ಲಿ ಎಷ್ಟು ಕೆರೆ ನುಂಗಿ ಹಾಕಿದ್ದಾರೆ? ಎಂದು ಆರ್. ಅಶೋಕ್ ವಿರುದ್ಧ ಕಿಡಿ ಕಾರಿದರು.

ಅಧಿಕಾರಿಗಳನ್ನು ಬೈಯ್ದಿದ್ದಾರೆ, ಏನು ಪ್ರಯೋಜನ ?

ರಾಯಚೂರಿನ ಬಿಜೆಪಿ ಎಂಎಲ್ಎಯೊಬ್ಬ ಅಧಿಕಾರಿಯ ಮೇಲೆ ಯಾವ್ಯಾವ ಪದಬಳಕೆ ಮಾಡಿದ್ದಾರೆ. ಚೀಫ್ ಇಂಜಿನಿಯರ್ ಗೆ ಎಂತಹ ಶಬ್ದ ಬಳಕೆ ಮಾಡಿದ್ದಾರೆ? ಶಾಸಕರು ಹೇಳಿದರೆ ಬಿಲ್ ಮಂಜೂರು ಮಾಡಬೇಕಾಗಿರುವುದಂತೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದೆ. ರಾಜ್ಯಸಭೆಗೆ ಬಿಜೆಪಿಯಿಂದ ಅರ್ಜಿ ಹಾಕಿದ ವ್ಯಕ್ತಿಯೊಬ್ಬರ ಮನೆಗೇ ನೀರು ನುಗ್ಗಿದೆ ಎಂದು ಕಿಡಿ ಕಾರಿದರು.

ದೂರ ಉಳಿದವರ ಮನವೊಲಿಕೆ

ಕಳೆದ ಮೂರು ವರ್ಷದಲ್ಲಿ ಪಕ್ಷದ ಒಂದಷ್ಟು ಜನ ದೂರ ಉಳಿದಿದ್ದಾರೆ. ಅವರ ಮನವೊಲಿಸಲು ಸಲಹೆ ಬಂದಿದೆ. ಇದಕ್ಕೆ ವೇದಿಕೆ ಸೃಷ್ಟಿಸುವ ಬಗ್ಗೆ ತೀರ್ಮಾನವಾಗಿದೆ. ಪಕ್ಷದ ಸಂಘಟನೆ ಕುರಿತೂ ಚರ್ಚೆಯಾಗಿದೆ. ಪರಿಷತ್ ಗೆ ಒಬ್ಬರನ್ನ ಆಯ್ಕೆ ಮಾಡಬೇಕು. ಅದರ ಸಂಪೂರ್ಣ ತೀರ್ಮಾನವನ್ನ ದೇವೇಗೌಡರಿಗೆ ಬಿಡಲಾಗಿದೆ. ರಾಜ್ಯಸಭೆಗೆ ನಾಲ್ಕನೇ ಅಭ್ಯರ್ಥಿಗೆ ಎರಡು ಪಕ್ಷಗಳಿಗೆ ಯಾವುದೇ ಸಂಖ್ಯಾಬಲ ಇಲ್ಲ.
ಹಾಗಾಗಿ ನಮ್ಮ ಪಕ್ಷಕ್ಕೆ ಒಂದು ಸ್ಥಾನ ಇದೆ. ಇದರ ಬಗ್ಗೆಯೂ ದೇವೇಗೌಡರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next