Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನ ಕೊಂದವನಿಗೆ ಗುಂಡೇಟು

12:03 PM Sep 27, 2018 | Team Udayavani |

ಬೆಂಗಳೂರು: ಯಲಹಂಕ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಅರುಣ್‌ಕುಮಾರ್‌ ಕೊಲೆಪ್ರಕರಣದ ಇಬ್ಬರು ಆರೋಪಿಗಳನ್ನು ವಿಶೇಷ ತಂಡ ವಶಕ್ಕೆ ಪಡೆದಿದ್ದು, ಆ ಪೈಕಿ ಒಬ್ಬನ ಮೇಲೆ ಗುಂಡುಹಾರಿಸಿ ಬಂಧಿಸಲಾಗಿದೆ. ಮನೋಜ್‌ ಅಲಿಯಾಸ್‌ ಕೆಂಚ, ಮಂಜೇಗೌಡ ಬಂಧಿತರು. ತಲೆ ಮರೆಸಿಕೊಂಡಿರುವ ರಘು, ನಂದನ್‌ ಸೇರಿ ಮೂವರ ಬಂಧನಕ್ಕೆ ಬಲೆ ಬೀಸಿದೆ.

Advertisement

ಆರೋಪಿಗಳು ಚಿಕ್ಕಜಾಲ ಸಮೀಪದ ಸೇತುವೆ ಕೆಳಗೆ ಅವಿತುಕೊಂಡಿದ್ದ ಬಗ್ಗೆ ದೊರೆತ ಮಾಹಿತಿ ಆಧರಿಸಿ ಬುಧವಾರ ಮುಂಜಾನೆ 5.30ರ ಸುಮಾರಿಗೆ, ಯಲಹಂಕ ಇನ್ಸ್‌ಪೆಕ್ಟರ್‌ ಮಂಜೇಗೌಡ ಹಾಗೂ ವಿದ್ಯಾರಣ್ಯಪುರ ಠಾಣೆಯ ಇನ್ಸ್‌ಪೆಕ್ಟರ್‌ ರಾಮಮೂರ್ತಿ ನೇತೃತ್ವದ ವಿಶೇಷ ತನಿಖಾ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ಅಧಿಕಾರಿಗಳನ್ನು ನೋಡಿದ ಆರೋಪಿ ಮನೋಜ್‌, ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಹಿಡಿಯಲು ಹೋದ ಪೇದೆಗಳಾದ ಮಹದೇವಸ್ವಾಮಿ ಹಾಗೂ ಉದಯ್‌ ಕುಮಾರ್‌ಗೆ ಡ್ರ್ಯಾಗರ್‌ನಿಂದ ಇರಿಯಲು ಮುಂದಾಗಿದ್ದಾನೆ.

ಈ ವೇಳೆ ಅಧಿಕಾರಿಗಳಿಬ್ಬರು ಗಾಳಿಯಲ್ಲಿ ಗುಂಡುಹಾರಿಸಿ ಶರಣಾಗುವಂತೆ ಸೂಚಿಸಿದರೂ, ಆರೋಪಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆತ್ಮ ರಕ್ಷಣೆ ಉದ್ದೇಶದಿಂದ ಇನ್ಸ್‌ಪೆಕ್ಟರ್‌ಗಳಾದ ಮಂಜೇಗೌಡ ಹಾಗೂ ರಾಮಮೂರ್ತಿ, ತಮ್ಮ ಸರ್ವೀಸ್‌ ರಿವಾಲ್ವರ್‌ನಿಂದ ಮನೋಜ್‌ನ ಎಡಗೈ ಹಾಗೂ ಎಡಗಾಲಿಗೆ ಒಂದೊಂದು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಕೆಳಗೆ ಬಿದ್ದ ಮನೋಜ್‌ನನ್ನು ವಶಕ್ಕೆ ಪಡೆಯುಯತ್ತಿದ್ದಂತೆ ಮತ್ತೋರ್ವ ಆರೋಪಿ ಮಂಜೇಗೌಡ ಶರಣಾದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿ ಕೆಂಚ ಮೂರು ಕೊಲೆ ಯತ್ನ ಸೇರಿ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈ ಹಿಂದೆ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಉಳಿದ ಆರೋಪಿಗಳ ಜತೆ ಗುಂಪು ಕಟ್ಟಿಕೊಂಡಿದ್ದ ಎಂದು ಅಧಿಕಾರಿ ಹೇಳಿದರು.

ಹಣ, ಹಳೆ ದ್ವೇಷಕ್ಕೆ ಕೊಲೆ ಶಂಕೆ
ಆರೋಪಿ ಕೆಂಚ, ಕೊಲೆಯಾದ ಅರುಣ್‌ಕುಮಾರ್‌ನಿಂದ ಸಾಲ ಪಡೆದಿದ್ದ. ಹಣದ ವ್ಯವಹಾರ ಸಂಬಂಧ ಒಮ್ಮೆ ಜಗಳ ನಡೆದಿದೆ ಎಂದು ತಿಳಿದು ಬಂದಿದ್ದು, ವೈಯಕ್ತಿಕ ದ್ವೇಷದಿಂದ ಕೊಲೆಗೈದಿರುವ ಸಾಧ್ಯತೆಯಿದೆ. ಆರೋಪಿ ಮನೋಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಳಿಕೆ ಪಡೆದುಕೊಳ್ಳಬೇಕಿದೆ. ತಲೆ ಮರೆಸಿಕೊಂಡಿರುವ ಮೂವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸೆ.23ರ ರಾತ್ರಿ 12:30ರ ಸುಮಾರಿಗೆ ಅಲ್ಲಾಳಸಂದ್ರದ ಸಮೀಪ ಐವರು ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯಲಹಂಕ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಅರುಣ್‌ ಕುಮಾರ್‌ನನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಈ ವೇಳೆ ಆರೋಪಿಗಳಿಂದ ತಪ್ಪಿಸಿಕೊಂಡಿದ್ದ ಮೃತ ಅರುಣ್‌ ಕುಮಾರ್‌ನ ಸಂಬಂಧಿ ಅಭಿಷೇಕ್‌, ಯಲಹಂಕ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next