Advertisement

 ಬಿಜೆಪಿ- ಸಮಾಜವಾದಿ ಪಕ್ಷ ಪ್ರಣಾಳಿಕೆ ಬಿಡುಗಡೆ: ಭರವಸೆಗಳ ಮಹಾಪೂರ

12:47 AM Feb 09, 2022 | Team Udayavani |

ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ 2 ದಿನಗಳು ಬಾಕಿಯಿರುವಂತೆಯೇ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿಯ “ಲೋಕ ಕಲ್ಯಾಣ ಸಂಕಲ್ಪ ಪತ್ರ 2022′ ಅನ್ನು ಅನಾವರಣಗೊಳಿಸಿದರೆ  ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ “ಸಮಾಜವಾದಿ ವಚನ ಪತ್ರ’ವನ್ನು ಬಿಡುಗಡೆ ಮಾಡಿದ್ದಾರೆ.

Advertisement

ಬಿಜೆಪಿ
ಲವ್‌ ಜೆಹಾದ್‌ಗೆ 10 ವರ್ಷ ಜೈಲು
1. ನೀರಾವರಿಗೆ ಉಚಿತ ವಿದ್ಯುತ್‌, ಗೋಧಿ, ಅಕ್ಕಿಯ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯಲ್ಲಿ ಸುಧಾರಣೆ
2. ಕಬ್ಬು ಬೆಳೆಗಾರರಿಗೆ ಪಾವತಿ ವಿಳಂಬವಾದರೆ ಸಕ್ಕರೆ ಮಿಲ್‌ಗಳು ಬಡ್ಡಿ ಸೇರಿಸಿ ನೀಡುವ ವ್ಯವಸ್ಥೆ
3. ಲವ್‌ ಜೆಹಾದ್‌ ಮಾಡಿದವರಿಗೆ 10 ವರ್ಷ ಜೈಲು, 1 ಲಕ್ಷ ರೂ. ದಂಡ
4. 60 ದಾಟಿದ ಮಹಿಳೆಯರಿಗೆ ಪ್ರಯಾಣ ಉಚಿತ
5. ಹೆಚ್ಚು ಅಂಕ ಪಡೆಯುವ ಹೆಣ್ಣುಮಕ್ಕಳಿಗೆ ಉಚಿತ ಸ್ಕೂಟಿ
6. ರಾಂಪುರ, ಅಜಂಗಢ, ಕಾನ್ಪುರ, ಬಹ್ರೈಚ್‌ನಲ್ಲೂ ಉಗ್ರ ನಿಗ್ರಹ ಕಮಾಂಡೋ ಕೇಂದ್ರ ಸ್ಥಾಪನೆ
7.ಅಯೋಧ್ಯೆಯಲ್ಲಿ ಶ್ರೀರಾಮ ಮತ್ತಿತರ ಧಾರ್ಮಿಕ ವಿಚಾರಗಳ ಸಂಶೋಧನೆಗೆ ರಾಮಾಯಣ ವಿವಿ
8.ಹೋಳಿ, ದೀಪಾವಳಿ ವೇಳೆ ಪಿಎಂ ಉಜ್ವಲ ಯೋಜನೆ ಫ‌ಲಾನುಭವಿಗಳಿಗೆ ಉಚಿತ ಎಲ್‌ಪಿಜಿ

ಸಮಾಜವಾದಿ
2025ಕ್ಕೆ ರೈತರು ಸಾಲಮುಕ್ತ

1. ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ನೀರಾವರಿಗೆ ಉಚಿತ ವಿದ್ಯುತ್‌, ಬಡ್ಡಿರಹಿತ ಸಾಲ, ವಿಮೆ, ಪಿಂಚಣಿ.
2. ಕಬ್ಬು ಬೆಳೆಗಾರರಿಗೆ 15 ದಿನಗಳಲ್ಲೇ ಪಾವತಿ. ಅಗತ್ಯವಿದ್ದರೆ ಇದಕ್ಕಾಗಿ ನಿಧಿ ಸ್ಥಾಪನೆ
3. 2025ರ ವೇಳೆಗೆ ರೈತರನ್ನು ಸಾಲ ಮುಕ್ತಗೊಳಿಸುವ ಋಣ ಮುಕ್ತ ಕಾನೂನು ಜಾರಿ
4. ಗ್ರಾಮೀಣ ಉದ್ಯೋಗ ಖಾತ್ರಿ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಕಾಯ್ದೆ ಜಾರಿ
5. ಪೊಲೀಸ್‌ ಇಲಾಖೆ ಸೇರಿ ಎಲ್ಲ ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ
6. ಪ್ರಾಥಮಿಕದಿಂದ ಸ್ನಾತಕೋತ್ತರದವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ
7. 12ನೇ ತರಗತಿ ಪಾಸಾಗುವ ಎಲ್ಲ ವಿದ್ಯಾರ್ಥಿನಿಯರಿಗೆ 35,000 ರೂ.
8. ಸಮಾಜವಾದಿ ಪಿಂಚಣಿಯಡಿ ಹಿರಿಯ ನಾಗರಿಕರು, ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ 18,000 ರೂ.

ಶೇ.26 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌
ಗೋವಾದಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ ಶೇ.26ರಷ್ಟು ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ ಎಂದು ವರದಿಯೊಂದು ಹೇಳಿದೆ. ಅತೀ ಹೆಚ್ಚು ಕ್ರಿಮಿನಲ್‌ ಕೇಸುಗಳನ್ನು ಕಾಂಗ್ರೆಸ್‌ ಅಭ್ಯರ್ಥಿಗಳು ಎದುರಿಸುತ್ತಿದ್ದರೆ, 2ನೇ ಸ್ಥಾನದಲ್ಲಿ ಎಂಜಿಪಿ ಮತ್ತು 3ನೇ ಸ್ಥಾನದಲ್ಲಿ ಬಿಜೆಪಿ ಇದೆ ಎಂದೂ ವರದಿ ಹೇಳಿದೆ.

Advertisement

ಬಿಜೆಪಿಯಿಂದ ಹಲವು ಆಶ್ವಾಸನೆ: ಮುಂದಿನ 10 ವರ್ಷಗಳಲ್ಲಿ ಗೋವಾವನ್ನು 50 ಶತಕೋಟಿ ಡಾಲರ್‌ ಆರ್ಥಿಕತೆಯನ್ನಾಗಿ ರೂಪಿಸುತ್ತೇವೆ ಎಂಬ ಆಶ್ವಾಸನೆಯನ್ನು ಬಿಜೆಪಿ ನೀಡಿದೆ. ಮಂಗಳವಾರ ಬಿಡುಗಡೆಯಾದ ಪ್ರಣಾಳಿಕೆಯಲ್ಲಿ, ಪ್ರತೀ ಮನೆಗೆ ತಲಾ 3 ಉಚಿತ ಎಲ್‌ಪಿಜಿ ಸಿಲಿಂಡರ್‌, ಗಣಿಗಾರಿಕೆ ಚಟುವಟಿಕೆ ಪುನರಾರಂಭ, ಎಲ್ಲರಿಗೂ ಮನೆ ನಿರ್ಮಿಸುವುದಾಗಿ ವಾಗ್ಧಾನ ಮಾಡಿದೆ.

ನವ ಪಂಜಾಬ್‌ಗೆ ಬದ್ಧ
ಬಿಜೆಪಿ ಮತ್ತು ಎನ್‌ಡಿಎ ಸದಾ ಸಿಕ್ಖರ ಸಂಪ್ರದಾಯದ ಪರ ನಿಂತಿದೆ. ರಾಜ್ಯಕ್ಕೆ ಇತರ ಪಕ್ಷಗಳ ಟೊಳ್ಳು ಆಶ್ವಾಸನೆಗಳ ಅಗತ್ಯವಿಲ್ಲ. ನಾವು ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಯ ಮೂಲಕ “ನವ ಪಂಜಾಬ್‌’ ಸ್ಥಾಪನೆಯ ಗುರಿ ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಲುಧಿಯಾನಾ ಮತ್ತು ಫ‌ತೇಹ್‌

ಗಢ‌ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಅವರು, “ನಮಗೆ ಸಿಕ್ಖರ ಸಂಪ್ರದಾಯದ ಬಗ್ಗೆ ಗೌರವವಿದೆ. ಕಾಂಗ್ರೆಸ್‌ ಕರ್ತಾರ್ಪುರ ಸಾಹಿಬ್‌ ಅನ್ನು ಭಾರತದಲ್ಲಿ ಉಳಿಸಿಕೊಳ್ಳಲಿಲ್ಲ. ಆದರೆ ನಾವು ಕರ್ತಾರ್ಪುರಕ್ಕೆ ಹೋಗುವ ದಾರಿಯನ್ನು ತೆರೆದೆವು’ ಎಂದಿದ್ದಾರೆ.

ಸಂಕಲ್ಪ ಪತ್ರ: ಬಿಜೆಪಿ-ಪಿಎಲ್‌ಸಿ-ಅಕಾಲಿ(ಸಂಯುಕ್ತ) ಮೈತ್ರಿಕೂಟವು ಮಂಗಳವಾರ ಗ್ರಾಮೀಣ ಪ್ರದೇಶಗಳಿಗೆ 11 ಅಂಶಗಳ ಸಂಕಲ್ಪ ಪತ್ರ ಬಿಡುಗಡೆ ಮಾಡಿದೆ. ಸುಸ್ಥಿರ ಕೃಷಿ ಮತ್ತು ಸಾವಯವ ಕೃಷಿಗಾಗಿ 5 ಸಾವಿರ ಕೋಟಿ ರೂ.ಗಳ ಬಜೆಟ್‌, ಉಚಿತ ಮಳೆಕೊಯ್ಲು ಘಟಕಗಳ ಸ್ಥಾಪನೆಯ ಭರವಸೆ ನೀಡಲಾಗಿದೆ.

ವಿಪಕ್ಷಗಳಿಂದ ಹಗಲುಗನಸು
ಲಕ್ನೋ: ಪಶ್ಚಿಮ ಉತ್ತರಪ್ರದೇಶದಲ್ಲಿ ಮತಗಳ ವಿಭಜನೆಯಾಗುತ್ತದೆ ಎಂದು ವಿಪಕ್ಷಗಳು ಹಗಲುಗನಸು ಕಾಣುತ್ತಿವೆ. ಆದರೆ ಅವರನ್ನು ಈ ಪ್ರದೇಶದ ಮತದಾರರು ಕಳೆದ ಚುನಾವಣೆಯಂತೆಯೇ ಈ ಬಾರಿಯೂ ಸೋಲಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಮಂಗಳವಾರ ರಾಂಪುರ, ಬದೌನ್‌ ಮತ್ತು ಸಂಭಾಲ್‌ ಜಿಲ್ಲೆಗಳಲ್ಲಿ ಮತದಾರರನ್ನು ಉದ್ದೇಶಿಸಿ ವರ್ಚುವಲ್‌ ರ್ಯಾಲಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಆಶ್ವಾಸನೆಗಳನ್ನೂ ಈಡೇರಿಸಲಿದೆ. ಹಿಂದೆ ಯೂ ಈಡೇರಿಸಿದೆ ಎಂದಿದ್ದಾರೆ. ಫೆ.10ರ ಮೊದಲ ಹಂತದಲ್ಲೇ ಈ ಜಿಲ್ಲೆಗಳಲ್ಲಿ ಮತದಾನ ನಡೆಯಲಿವೆ.

ಪ್ರಚಾರ ಅಂತ್ಯ
ಉತ್ತರಪ್ರದೇಶದಲ್ಲಿ ಫೆ.10ರಂದು(ಗುರುವಾರ) ಮೊದಲ ಹಂತದ ಮತದಾನ ನಡೆಯಲಿದ್ದು, ಮಂಗಳವಾರ ಸಂಜೆಯೇ ಪ್ರಚಾರ ಅಂತ್ಯಗೊಂಡಿದೆ. ಒಟ್ಟಾರೆ 403 ಸೀಟುಗಳ ಪೈಕಿ 11 ಜಿಲ್ಲೆಗಳ 58 ಅಸೆಂಬ್ಲಿ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಚುನಾವಣ ಆಯೋಗದ ನಿಯಮದ ಪ್ರಕಾರ, ಪ್ರತಿ ಹಂತದ ಮತದಾನಕ್ಕೂ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತದೆ.

ಡ್ರಗ್‌ಮುಕ್ತ ಮಣಿಪುರಕ್ಕಾಗಿ ಹೋರಾಟ
ಮಣಿಪುರದ ಡ್ರಗ್‌ ದೊರೆಗಳ ವಿರುದ್ಧ ಹೋರಾಟ ಮಾಡಿ ಹೆಸರುವಾಸಿಯಾದ ಮಾಜಿ ಪೊಲೀಸ್‌ ಅಧಿಕಾರಿ ತೌನೋಜಾಮ್‌ ಬೃಂದಾ ಈಗ ರಾಜ್ಯವನ್ನು ಡ್ರಗ್‌ಮುಕ್ತಗೊಳಿಸುವ ಪಣದೊಂದಿಗೆ ಚುನಾವಣ ಕಣಕ್ಕಿಳಿದಿದ್ದಾರೆ. 4 ವರ್ಷಗಳ ಹಿಂದೆ ಅವರಿಗೆ ಪೊಲೀಸ್‌ ಶೌರ್ಯ ಪದಕವೂ ದೊರೆತಿತ್ತು. ಯೈಸ್ಕಾಲ್‌ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುತ್ತಿದ್ದಾರೆ. ರಾಜ್ಯವನ್ನು ಉಳಿಸಬೇಕಾದ ತುರ್ತು ಅಗತ್ಯತೆಯಿರುವ ಕಾರಣವೇ ನಾನು ಹೆಚ್ಚುವರಿ ಎಸ್‌ಪಿ ಹುದ್ದೆಗೆ ರಾಜೀನಾಮೆ ನೀಡಿ ಬಂದಿದ್ದೇನೆ ಎನ್ನುತ್ತಾರೆ ಬೃಂದಾ.

ಪಶ್ಚಿಮ ಬಂಗಾಲದ ಮಾದರಿಯಲ್ಲೇ ಉತ್ತರಪ್ರದೇಶದಲ್ಲೂ ಬಿಜೆಪಿ ಮತ್ತು ಎಸ್‌ಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಎಸ್‌ಪಿ ಗೆಲುವು ಸಾಧಿಸುತ್ತದೆ. ಬಂಗಾಲದಲ್ಲಿ ಸಾಧ್ಯ ಎಂದಾದರೆ, ಉತ್ತರಪ್ರದೇಶದಲ್ಲೂ ಸಾಧ್ಯ.
-ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ

 

Advertisement

Udayavani is now on Telegram. Click here to join our channel and stay updated with the latest news.

Next