Advertisement

ಬಿಜೆಪಿ ನಾಯಕರಿಗಿದೆ ಸೇನಾಪತಿಯ ಗುಣ

02:25 AM May 25, 2019 | sudhir |

2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯ ಸಾಧನೆಯನ್ನು ಕೊಂಡಾಡುತ್ತಿರುವ ವಿಶ್ವಾಸ್‌, ಅಮೇಠಿಯಲ್ಲಿನ ಸ್ಮತಿ ಇರಾನಿ ಸಾಧನೆಯನ್ನೂ ಕೊಂಡಾಡಿದ್ದಾರೆ. ರಾಹುಲ್‌ ಗಾಂಧಿ ಉತ್ತಮವಾಗಿ ಸ್ಪರ್ಧಿಸಿದ್ದರಾದರೂ, ಅನೇಕ ಕಾಂಗ್ರೆಸ್‌ ನಾಯಕರು ಅವರಿಗೆ ಹೊರೆಯಾಗಿ ಪರಿಣಮಿಸಿಬಿಟ್ಟರು ಎಂದೂ ವಿಶ್ಲೇಷಣೆ ಮಾಡಿದ್ದಾರೆ.

Advertisement

– ನರೇಂದ್ರ ಮೋದಿ ಸರ್ಕಾರ ಪೂರ್ಣ ಬಹುಮತ ಪಡೆದಿದೆ. ಈ ಗೆಲುವನ್ನು ಹೇಗೆ ನೋಡುತ್ತೀರಿ?
-ನಾನು ಫ‌ಲಿತಾಂಶ ಹೊರಬೀಳಲು ಆರಂಭವಾದಾಗಿನಿಂದ ಒಂದು ಟ್ರೆಂಡ್‌ ಗಮನಿಸುತ್ತಿದ್ದೇನೆ. ಒಂದು ಪಾರ್ಟಿಗೆ ಸ್ಪಷ್ಟ ಬಹುಮತ ಸಿಕ್ಕಿದೆ ಎಂದಮೇಲೆ ಅದನ್ನು ಗೌರವದಿಂದ ಒಪ್ಪಿಕೊಳ್ಳುವ ಬದಲು ಅನೇಕರು “ಈಗ ದೇಶಕ್ಕೆ ಏನಾಗಿಬಿಡುತ್ತದೋ, ದೇಶ ಯಾವ ಹಾದಿಯಲ್ಲಿ ಸಾಗುತ್ತದೋ’ ಎಂದೆಲ್ಲ ಋಣಾತ್ಮಕವಾಗಿ ಮಾತನಾಡುತ್ತಿದ್ದಾರೆ. ಹಾಗೆಲ್ಲ ಮಾತನಾಡಬಾರದು. ಸಂಸತ್ತಿಗೆ ಪ್ರವೇಶಿಸಿದವರಿಗೆ ನೀವು ಅವಮಾನ ಮಾಡುತ್ತೀರಿ ಎಂದರೆ, ನೀವು ಅವರನ್ನು ಆರಿಸಿ ಕಳುಹಿಸಿದ ಜನರಿಗೆ ಅವಮಾನ ಮಾಡುತ್ತಿದ್ದೀರಿ ಎಂದರ್ಥ. ಇನ್ನು ಕಾಂಗ್ರೆಸ್‌ ವಿಷಯಕ್ಕೆ ಬಂದರೆ ಪ್ರತಿಪಕ್ಷವು ಬಲಿಷ್ಠವಾಗಿ ಇರಬೇಕಿತ್ತು ಎಂದು ನನಗನಿಸುತ್ತದೆ. ರಾಹುಲ್‌ ಗಾಂಧಿ ಪಕ್ಷವನ್ನು ಮೇಲೆತ್ತಲು ಬಹಳ ಶ್ರಮಿಸಿದರು. ಆದರೆ ಕಾಂಗ್ರೆಸ್‌ನಲ್ಲಿ 30-40 ವರ್ಷದಿಂದ ಕುಳಿತುಕೊಂಡಿರುವ ಅನೇಕ ನಾಯಕರು ಪಕ್ಷಕ್ಕೆ ಎಷ್ಟು ಹೊರೆಯಾಗಿದ್ದಾರೆ ಎಂದರೆ ಇವರ ಭಾರವನ್ನೆಲ್ಲ ಹೊತ್ತು ರಾಹುಲ್‌ ಮತ್ತು ಪ್ರಿಯಾಂಕಾ ಬೆಟ್ಟ ಹತ್ತಲು ಪ್ರಯತ್ನಿಸಿದರಾದರೂ ಅವರಿಗೆ ಸಾಧ್ಯವಾಗಲಿಲ್ಲ.

– ರಾಹುಲ್‌ ಗಾಂಧಿ ಈ ಬಾರಿ ಚುನಾವಣೆಯಲ್ಲಿ ತುಂಬಾ ಚೆನ್ನಾಗಿ ಸ್ಪರ್ಧಿಸಿದರು ಎಂದು ಜನರು ಹೇಳುತ್ತಿದ್ದಾರೆ, ಆದರೆ ಫ‌ಲಿತಾಂಶ ಬೇರೆಯದ್ದೇ ಕಥೆ ಹೇಳುತ್ತದಲ್ಲವೇ?
-ಮೋದಿ ಸಂಘದ ಪ್ರಚಾರಕರಾಗಿದ್ದವರು, ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿ ಅನುಭವ ಇರುವವರು…ಒಟ್ಟಾರೆಯಾಗಿ ಅವರೊಬ್ಬ ಅನುಭವಿ ರಾಜಕಾರಣಿ. ಇತ್ತ ರಾಹುಲ್‌ ಉತ್ತಮ ವಾಗಿಯೇ ಸ್ಪರ್ಧಿಸಿದರು, ಚೆನ್ನಾಗಿಯೇ ಬೌಲಿಂಗ್‌ ಮಾಡಿದರು. ಆದರೆ ಎದುರು ಸಚಿನ್‌ ತೆಂಡೂಲ್ಕರ್‌ರಂಥ ಅನುಭವಿ, ನಿಷ್ಣಾತ ಬ್ಯಾಟ್ಸ್‌ಮನ್‌ ಇದ್ದಾಗ ಯಾವುದೇ ಬೌಲರ್‌ಗೂ ಅವರನ್ನು ಸೋಲಿಸುವುದು ಕಷ್ಟವಾಗುತ್ತದಲ್ಲವೇ? ರಾಹುಲ್‌ ಗಾಂಧಿ ಬೇಸರ ಮಾಡಿಕೊಳ್ಳಬಾರದು, ಅವರಿಗಿನ್ನೂ ಸಮಯವಿದೆ.

– ಕಾರ್ಯಕರ್ತರೊಂದಿಗಿನ ಒಡನಾಟದ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವ್ಯತ್ಯಾಸವೇನಿದೆ?
-ಬಿಜೆಪಿ ಗೆಲುವಿನ ನಂತರ ಅಮಿತ್‌ ಶಾ ಆಡಿದ ಮಾತುಗಳನ್ನು ನಾನು ಗಮನಿಸುತ್ತಿದ್ದೆ. ಅವರು ಕೇರಳ ಮತ್ತು ಕರ್ನಾಟಕದಲ್ಲಿ ಕೊಲೆಯಾದ ಬಿಜೆಪಿಯ ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಪಶ್ಚಿಮ ಬಂಗಾಳದ ಕಾರ್ಯಕರ್ತರಿಗೆ ಧೈರ್ಯ ತುಂಬುವಂಥ ಮಾತನ್ನಾಡಿದರು. ನಾನು ಎಣಿಸಿದೆ, ಒಟ್ಟು ಏಳು ಬಾರಿ ಅವರು “ಬಂಗಾಳದಲ್ಲಿ, ಬಂಗಾಳದಲ್ಲಿ’ ಎನ್ನುವ ಪದ ಬಳಸಿದರು. ಇದರಿಂದ ಏನಾಗುತ್ತದೆ ಗೊತ್ತೇ? ತೃಣಮೂಲ ಕಾಂಗ್ರೆಸ್‌ನ ಗೂಂಡಾಗಳಿಂದ ನೋವನುಭವಿಸಿ, ಖನ್ನರಾಗಿರುವ ಬಿಜೆಪಿಯ ಕಾರ್ಯಕರ್ತರಿಗೆ ಧೈರ್ಯ ಬರುತ್ತದೆ. ಅಲ್ಲೆಲ್ಲೋ ಕುಳಿತಿದ್ದರೂ ಕೂಡ ಈ ರೀತಿಯ ಮಾತುಗಳನ್ನು ಕೇಳಿ ಅವರಿಗೆ “ನಮ್ಮ ನಾಯಕರು ನಮ್ಮೊಂದಿಗಿದ್ದಾರೆ, ನಮ್ಮ ಅಧ್ಯಕ್ಷರು ನಮ್ಮೊಂದಿಗಿದ್ದಾರೆ. ನಾವು ಭಯಪಡುವ ಅಗತ್ಯವಿಲ್ಲ’ ಎಂಬ ಧೈರ್ಯ ಬರುತ್ತದೆ. ತಮ್ಮ ಹಿಂಬಾಲಕರ ಮನೋಬಲ ಹೆಚ್ಚಿಸುವ ಈ ರೀತಿಯ “ಸೇನಾಪತಿಯ ಗುಣ’ ಬಿಜೆಪಿಯವರಿಗೆ ಇದೆ. ಏಕೆಂದರೆ ಈ ಬಿಜೆಪಿಯವರು ಒಳ್ಳೆಯ ಸಂವಹನಕಾರರು.

– ನೀವು 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತವರು. ಸ್ಮತಿ ಇರಾನಿ ಈ ಬಾರಿ ರಾಹುಲ್‌ರನ್ನು ಅವರ ಅಖಾಡದಲ್ಲೇ ಸೋಲಿಸಿದ್ದಾರೆ…
-ಮೊದಲನೆಯದಾಗಿ, ನಾನು ಸ್ಮತಿ ಇರಾನಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಲಿನ ನೋವನ್ನು, ಕಷ್ಟವನ್ನು ನಾನು ಬಲ್ಲೆ. 2014ರಲ್ಲಿ ನಾನು ನಾಲ್ಕನೇ ಸ್ಥಾನ ಪಡೆದಿದ್ದೆ, ಸ್ಮತಿ ಇರಾನಿ 2ನೇ ಸ್ಥಾನ ಪಡೆದಿದ್ದರು. ಮುಂದೆ ಕೇಂದ್ರ ಮಂತ್ರಿಮಂಡಲದ ಭಾಗವಾದ ಅವರು ತಮ್ಮ ಶಕ್ತಿ ಮತ್ತು ಶ್ರದ್ಧೆಯನ್ನು ಅಮೇಠಿಯಲ್ಲಿ ಹೂಡಿಕೆ ಮಾಡಿದರು. ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು, ಅನೇಕ ಕೆಲಸಗಳನ್ನು ಮಾಡಿಸಿಕೊಟ್ಟರು. ಐದು ವರ್ಷಗಳಲ್ಲಿ ಜನರನ್ನು ಬಿಟ್ಟು ಹೋಗಲಿಲ್ಲ. ಇದೆಲ್ಲದರ ಫ‌ಲ ಈಗ ಅವರಿಗೆ ಸಿಕ್ಕಿದೆ. ಇನ್ನೊಂದೆಡೆ ರಾಹುಲ್‌ ಗಾಂಧಿ ಅಮೇಠಿಯು ತಮ್ಮ ಸಾಂಪ್ರದಾಯಿಕ ಕ್ಷೇತ್ರವೆಂಬ ಭಾವನೆಯಲ್ಲಿ ಅಲ್ಲಿ ಬೇಸಿಕ್‌ ಸಂಗತಿಗಳ ಮೇಲೂ ಗಮನ ಕೊಟ್ಟಿಲ್ಲ. ಈಗ ನೋಡಿ, ಅಮೇಠಿಯಲ್ಲಿ ಚಿಕ್ಕ ಅಂತರದಿಂದ ಅವರು ಸೋತಿದ್ದಾರೆ. ನಮ್ಮದೇ ಕ್ಷೇತ್ರ ಏನು ಮಾಡದಿದ್ದರೂ ನಡೆಯುತ್ತದೆ ಅಂತ ಮತದಾರರನ್ನು ಟೇಕನ್‌ ಫಾರ್‌ ಗ್ರಾಂಟೆಡ್‌ ತೆಗೆದುಕೊಳ್ಳಬಾರದು ಎಂಬ ಪಾಠ ರಾಹುಲ್‌ರ ಈ ಸೋಲಿನಲ್ಲಿ ಇದೆ.

Advertisement

– ನೀವು ಆಮ್‌ ಆದ್ಮಿ ಪಾರ್ಟಿಯನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರು. ನಿಮ್ಮ ಪಕ್ಷವನ್ನು ಪರ್ಯಾಯ ರಾಜಕೀಯ ವ್ಯವಸ್ಥೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಈ ಬಾರಿ ದೆಹಲಿಯ ಎಲ್ಲಾ ಏಳೂ ಸ್ಥಾನಗಳಲ್ಲೂ ಆಪ್‌ ಸೋತಿದೆ. ಹಾಗಿದ್ದರೆ, ಆಪ್‌ನ ಪರಿಕಲ್ಪನೆಯೇ ಸೋತಿದೆ ಎಂದು ನಿಮಗೆ ಅನಿಸುತ್ತದೆಯೇ?
-ಇತಿಹಾಸವು ಪ್ರತಿಬಾರಿಯೂ ನಮಗೆ ಅವಕಾಶ ಕೊಡುವುದಿಲ್ಲ. ವಾಜಪೇಯಿಯವರಿಗೆ ಇತಿಹಾಸವು ಒಂದು ಅವಕಾಶ ಕೊಟ್ಟಿತು, ಆ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಂಡರು. ನರೇಂದ್ರ ಮೋದಿಯವರಿಗೂ ಇತಿಹಾಸ ಮತ್ತೂಂದು ಅವಕಾಶ ಕೊಟ್ಟಿತ್ತು, ಅವರು ಪ್ರತಿ ಕ್ಷಣವೂ ಆ ಅವಕಾಶಕ್ಕಾಗಿ ಸನ್ನದ್ಧರಾಗಿದ್ದರು. ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ನಾನು ದುಡಿಯುತ್ತೇನೆ ಎಂದವರು ಹೇಳುತ್ತಿದ್ದಾರೆ. ನಮಗೂ(ಆಪ್‌ ಪಕ್ಷಕ್ಕೆ) ಇತಿಹಾಸವು ಪರ್ಯಾಯ ರಾಜಕೀಯ ವ್ಯವಸ್ಥೆಯ ಅವಕಾಶವನ್ನು ಕೊಟ್ಟಿತ್ತು. ದುರದೃಷ್ಟವಶಾತ್‌ ಈ ಅವಕಾಶವು ಒಬ್ಬ ಅಸುರಕ್ಷಿತ ಭಾವನೆಯ, ಮಾನಸಿಕವಾಗಿ ದುರ್ಬಲವಾಗಿರುವ ವ್ಯಕ್ತಿಯ ಕೈಗೆ ದಕ್ಕಿಬಿಟ್ಟಿತು. ಆ ವ್ಯಕ್ತಿ(ಕೇಜ್ರಿವಾಲ್‌) ತಮ್ಮ ಸುತ್ತಲಿದ್ದ ಜನರನ್ನೆಲ್ಲ ದೂರಮಾಡಿ ಕೊಂಡುಬಿಟ್ಟರು. ಆಪ್‌ನ ಮೇಲೆ ಕೋಟ್ಯಂತರ ಜನ ಕನಸುಕಟ್ಟಿಕೊಂಡಿದ್ದರು. ಆ ಕನಸೀಗ ಭಂಗವಾಗಿದೆ. ಹಿಂದೂ ಸ್ತಾನದ ಆ ಪರಿವರ್ತನೆಯ ಕನಸನ್ನು ಕೊಂದ ಅಪರಾಧಿ ಪಟ್ಟ ಅರವಿಂದ್‌ ಕೇಜ್ರಿವಾಲ್‌ ಹೊತ್ತಿದ್ದಾರೆ. ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕಿದೆ, ಕೇಜ್ರಿವಾಲ್‌ ನಶೆಯಲ್ಲಿ ಇದ್ದಾರೆ. ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಅಗತ್ಯವಿದೆ!

– ಇನ್ನೂ 8-9 ತಿಂಗಳಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗಳಿವೆ. ಫ‌ಲಿತಾಂಶ ಏನಾಗಬಹುದು?
-ಈಗ ಅಖಾಡ ಬದಲಾಗಿದೆ, ಈಗ ಆಪ್‌ ಗೆಲ್ಲುವುದು ಬಹಳ ಕಷ್ಟ.
(ಕೃಪೆ-ಎಬಿಪಿ ನ್ಯೂಸ್‌)

– ಡಾ.ಕುಮಾರ್‌ ವಿಶ್ವಾಸ್‌

Advertisement

Udayavani is now on Telegram. Click here to join our channel and stay updated with the latest news.

Next