Advertisement

ಬಿಜೆಪಿ ಮೀಸಲಾತಿ ವಿರೋಧಿ ಪಕ್ಷ : ಸಿದ್ದರಾಮಯ್ಯ

07:45 PM Oct 12, 2021 | Team Udayavani |

ಬೆಂಗಳೂರು: ಗೊಂಡ, ರಾಜಗೊಂಡ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ನಾಗರಿಕ‌ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವಹಿಸಿ ಹೊರಡಿಸಿರವ ಆದೇಶ ವಾಪಸ್ ಪಡೆಯುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಮೀಕ್ಷೆಯ ವರದಿ ಜಾರಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ವರೆಗೆ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನೀಡುತ್ತಿತ್ತು, ಇದನ್ನು ಬಿಜೆಪಿ ಸರ್ಕಾರ ಬದಲಾವಣೆ ಮಾಡಿ ಮೊದಲು ಸಿ.ಆರ್.ಇ ಸೆಲ್ ಗೆ ಕಳುಹಿಸಬೇಕು, ಅವರು ಪರಿಶೀಲನೆ ಮಾಡಿ ನಂತರ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು, ಆ  ವರದಿ ಆಧರಿಸಿ ಜಿಲ್ಲಾಧಿಕಾರಿಗಳು ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಬದಲಾಯಿಸಿದೆ. ಈ ನಿಯಮದ ಅಗತ್ಯವೇನಿತ್ತು? ಕೂಡಲೇ ಆದೇಶವನ್ನು ವಾಪಾಸು ಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಿ.ಆರ್.ಇ ಸೆಲ್ ಗೆ ಕಳುಹಿಸೋದು ಎಂದರೆ ಜನರಿಗೆ ಕಿರುಕುಳ ನೀಡೋದು ಎಂದರ್ಥ. ಜನರ ದಾರಿ ತಪ್ಪಿಸಲು ಬಿಜೆಪಿಯವರು ನಾಟಕ ಮಾಡುತ್ತಾರೆ. ಎಲ್ಲೋ ಕೂತು ಹೇಳಿಕೆ ಕೊಡೋದಲ್ಲ, ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ. ನಾನು ಈ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಮಹತ್ವ ಸಿಗಬೇಕು ಎಂಬ ಕಾರಣಕ್ಕೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನೀಡಿದೆವು. ಇದು ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಮಹತ್ವದ ನಿರ್ಧಾರ ಕೈಗೊಂಡದ್ದು ನಮ್ಮ ಸರ್ಕಾರ. ರೂ. 170 ಕೋಟಿ ಅನುದಾನವನ್ನು ಈ ಆಯೋಗಕ್ಕೆ ನೀಡಿದೆ. 1.60 ಲಕ್ಷ ಶಿಕ್ಷಕರ ಮೂಲಕ ಅತ್ಯಂತ ವೈಜ್ಞಾನಿಕವಾಗಿ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆ ನಡೆಸಿದ ಶಿಕ್ಷಕರಲ್ಲಿ ಎಲ್ಲಾ ಜಾತಿ, ಸಮುದಾಯ, ಧರ್ಮಕ್ಕೆ ಸೇರಿದವರು ಇದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಾಬ್ದಾರಿಯ ಮಾತುಗಳನ್ನು ಆಡಬಾರದು. ಇದು ನಾನು ಹೇಳಿ ಬರೆಸಿದ ವರದಿ ಎಂದರೆ ಯಾರಾದ್ರೂ ನಂಬುತ್ತಾರ? ಪಟ್ಟಣ ಪ್ರದೇಶ ಹೊರತುಪಡಿಸಿ, ಗ್ರಾಮೀಣ ಕರ್ನಾಟಕದಲ್ಲಿ ನೂರಕ್ಕೆ ನೂರರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.

ಇದು ಯಾವ ಜಾತಿಯ ವಿರುದ್ಧವೂ ಅಲ್ಲ, ಪರವಾಗಿಯೂ ಅಲ್ಲ. ವರದಿಯನ್ನು ಏನಿದೆ ಎಂಬ ಬಗ್ಗೆ ನನಗೆ ಈ ವರೆಗೆ ಮಾಹಿತಿಯೂ ಇಲ್ಲ. ನಮ್ಮ‌ ಅಧಿಕಾರಾವಧಿಯಲ್ಲಿ ವರದಿ ಪೂರ್ಣಗೊಂಡಿದ್ದರೆ ನಮ್ಮ ಸರ್ಕಾರ ಸ್ವೀಕರಿಸುತ್ತಿರಲಿಲ್ಲವೇ? ಈಶ್ವರಪ್ಪ ಎಂಬ ಪೆದ್ದನಿಗೆ ಇಷ್ಟೂ ಅರ್ಥವಾಗಲ್ವಾ? ಸೆಕ್ರೆಟರಿ ಸಹಿ ಮಾಡಿಲ್ಲ ಎಂಬ ಕುಂಟು ನೆಪ ಕೊಡ್ತಿದ್ದಾರೆ, ಸದಸ್ಯರ ಸಹಿ ಕಡ್ಡಾಯ ಇದೆ, ಸೆಕ್ರೆಟರಿ ಸಹಿ ಅಗತ್ಯವಿಲ್ಲ. ಒಂದುವೇಳೆ ಒಬ್ಬ ಸೆಕ್ರೆಟರಿ ಹೋದರೆ ಇನ್ನೊಬ್ಬನ ಬಳಿ ಸಹಿ ಮಾಡಿಸಿ ವರದಿ ಸ್ವೀಕರಿಸಲು ಸರ್ಕಾರಕ್ಕೆ ಬಂದಿರೋದೇನು?

Advertisement

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಅವರ ಬಳಿ ವರದಿ ಸ್ವೀಕರಿಸಿ ಎಂದು ಹೇಳಿದೆ. ಅದಕ್ಕವರು ಒಪ್ಪಿ ಸಭೆ ಕರೆದು, ವರದಿ ಸ್ವೀಕರಿಸುವ ವಿಚಾರ ಚರ್ಚೆಸಿದರು. ಇದಾದ ಕೂಡಲೇ ಕುಮಾರಸ್ವಾಮಿ ಅವರು ಪುಟ್ಟರಂಗ ಶೆಟ್ಟಿಯವರನ್ನು ವರದಿ ಸ್ವೀಕರಿಸಿದರೆ ಮಂತ್ರಿ ಪದವಿಯಿಂದ ಕಿತ್ತುಹಾಕ್ತೀನಿ ಎಂದು ಹೆದರಿಸಿ, ಸ್ವೀಕರಿಸದಂತೆ ಮಾಡಿದ್ರು.

ಈಗ ಸಿದ್ದರಾಮಯ್ಯ ಅವರೇ ಹೇಳಿ ಬರೆಸಿದ್ದಾರೆ, ಇದನ್ನು ಸದನದಲ್ಲಿ ಏಕೆ ಪ್ರಸ್ತಾಪಿಸಲ್ಲ ಎಂದು ಕುಮಾರಸ್ವಾಮಿ ಅವರು ನನ್ನನ್ನೇ ಪ್ರಶ್ನೆ ಮಾಡ್ತಾರೆ. ಮುಂದೆ ಡಿಸೆಂಬರ್ ನಲ್ಲಿ ಅಧಿವೇಶನ ನಡೆಯುತ್ತೆ ಆಗ ಆರಂಭದಲ್ಲೇ ಈ ವಿಚಾರದ ಬಗ್ಗೆ ಪ್ರಶ್ನಿಸುತ್ತೇನೆ. ನಾನು ಹೇಳ್ತಿರೋದು ಸತ್ಯ, ಹಾಗಾಗಿ ನಾನು ಯಾರಿಗೆ ಏಕೆ ಹೆದರಲಿ? ಸತ್ಯ ಹೇಳಲು, ಸತ್ಯದ ಪರ ಹೋರಾಡಲು ಹೆದರಬಾರದು.

ನಾನು ಅಧಿಕಾರಕ್ಕೆ ಹಿಂಬಾಗಿಲ ರಾಜಕಾರಣ ಮಾಡಿಲ್ಲ. ಅಧಿಕಾರ ಇರಲಿ, ಹೋಗಲಿ ಎಂದೂ ನಾನು ನಂಬಿರುವ ತತ್ವ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡಿಲ್ಲ, ಮುಂದೆಯೂ ರಾಜಿಯಾಗಲ್ಲ. ಇಷ್ಟು ನನ್ನ ಬಗ್ಗೆ ನನಗೆ ಸ್ಪಷ್ಟತೆ ಇದೆ.

ವರದಿ ಸೋರಿಕೆಯಾಗಿದೆ ಎಂಬ ಸುಳ್ಳು, ಇದರಲ್ಲಿ ಒಂದಷ್ಟು ಜಾತಿಗಳಿಗೆ ಅನ್ಯಾಯವಾಗಿದೆ ಎಂಬ ಇನ್ನೊಂದು ಸುಳ್ಳು ಹೀಗೆ ವರದಿ ಬಗ್ಗೆ ಬರೀ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ವರದಿ ಸೋರಿಕೆಯಾಗಿದ್ದರೆ ಅದರ ಮಾಹಿತಿ ಮತ್ತು ಸಾಕ್ಷಿ ತೋರಿಸಿ ನೋಡೋಣ. 55 ಮಾನದಂಡಗಳನ್ನು ಆಧಾರವಾಗಿ ಇಟ್ಟುಕೊಂಡು ವರದಿ ತಯಾರಿಸಲಾಗಿದೆ. ಇಷ್ಟೊಂದು ವೈಜ್ಞಾನಿಕವಾಗಿ ಎಲ್ಲಾ ಜಾತಿಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿರುವುದು ಭಾರತದಲ್ಲೇ ನಮ್ಮಲ್ಲಿ ಮೊದಲು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರವೇ ಜಾತಿ ಆಧಾರಿತ ಸಮೀಕ್ಷೆ ನಡೆಸುವಂತೆ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಮೀಕ್ಷೆ ಮಾಡಲಾಗಿತ್ತು. ನಂತರ ಇಂತಹ ಸಮೀಕ್ಷೆ ನಡೆಯಲೇ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಬಿಟ್ಟರೆ ಬೇರೆ ಯಾವ ಜಾತಿಗಳ ಬಗ್ಗೆಯೂ ನಿರ್ಧಿಷ್ಟ ಮಾಹಿತಿ ಇಲ್ಲ.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದಿವೆ ಆದರೂ ನಮ್ಮಲ್ಲಿ ಅಸಮಾನತೆ ಜೀವಂತವಾಗಿದೆ. ಈ ತಳ ಸಮುದಾಯಗಳ ಜನರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕೋ ಬೇಡವೋ? ಅವರ ಅಭಿವೃದ್ಧಿಗೆ ಗಕನ ನೀಡದೆ ಹೋದರೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹೇಗೆ? ಸಮ ಸಮಾಜ ನಿರ್ಮಾಣವಾಗುವುದು ಹೇಗೆ? ಇದಕ್ಕಾಗಿ ಅಂಕಿ ಅಂಶಗಳು ಬೇಕು. ಗೊಂಡ, ರಾಜಗೊಂಡ, ಲಿಂಗಾಯತ, ವಾಲ್ಮೀಕಿ ಸಮಾಜ ಹೀಗೆ ಎಲ್ಲಾ ಸಮಾಜದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಯ ಬಗ್ಗೆ ಮಾಹಿತಿ ಬೇಕು. ಆಗ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸಲು ಅನುಕೂಲವಾಗುತ್ತದೆ. ಸಮೀಕ್ಷೆಯ ಮುಖ್ಯ ಉದ್ದೇಶ ಇದೆ ಆಗಿದೆ.

ಯಾವುದೇ ಒಂದು ಜಾತಿ ತಾವು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಬೇಕು ಎಂದು ಕೇಳಿದಾಗ ಮೊದಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅರ್ಜಿ ಹಾಕಬೇಕು. ನಂತರ ಆಯೋಗ ಅದನ್ನು ತುಲನೆ ಮಾಡಿ, ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಈ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತೆ. ಇದು ಈಗಿರುವ ಕಾನೂನು. ಈ ನಿರ್ಣಯ ಕೈಗೊಳ್ಳುವ ಹಕ್ಕನ್ನು ರಾಜ್ಯಗಳಿಗೆ ಬಿಡಬೇಕು ಎಂದು ಇತ್ರೀಚೆಗೆ ಸಂಸತ್ತಿನಲ್ಲಿ ಕಾನೂನು ಅಂಗೀಕಾರವಾಗಿದೆ.

ಕೋಲಿ ಸಮಾಜವನ್ನು ಎಸ್.ಟಿ ಗೆ ಸೇರಿಸಬೇಕು, ತಳವಾರ, ಪರಿವಾರ, ಕಾಡುಗೊಲ್ಲರನ್ನು ಎಸ್.ಸಿ ಗೆ ಸೇರಿಸಬೇಕು, ಗೊಂಡ, ರಾಜಗೊಂಡ ಸಮುದಾಯವನ್ನು ಎಸ್.ಟಿ ಗೆ ಸೇರಿಸಬೇಕು ಎಂದು ಶಿಫಾರಸು ಮಾಡಿದ್ದು ನಮ್ಮ ಸರ್ಕಾರ. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದೆ, ಆಗ ಕೆಲವರು ಗೊಂಡ, ರಾಜಗೊಂಡ, ಕಾಡು ಕುರುಬ, ಜೇನು ಕುರುಬ, ತಳವಾರ, ನಾಯ್ಕ, ನಾಯಕ ಎಂಬ ಬೇರೆ ಬೇರೆ ಸರ್ಟಿಫಿಕೇಟ್ ತಗೊಂಡಿದ್ದಾರೆ, ಅವರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ, ಶಿಕ್ಷೆಗೆ ಒಳಪಡಿಸದೆ, ಕ್ರಮಿನಲ್ ಕೇಸ್ ಇದ್ದರೆ ಅದನ್ನು ವಾಪಸ್ ಪಡೆದು ಯಥಾಸ್ಥಿತಿಯನ್ನು ಮುಂದುವರೆಸಬೇಕು ಎಂದು ಆದೇಶ ನೀಡಲು ಶ್ರಮಿಸಿದ್ದು ನಾನು ಮತ್ತು ಸಚಿವರಾಗಿದ್ದ ವೀರಣ್ಣ ಅವರು. ಇದು ಜಾರಿಯಾಗಿದ್ದು ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ.

 

1994-95 ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲಾಯಿತು. ಇದಕ್ಕಾಗಿ ಒಂದು ಸಂಪುಟ ಉಪಸಮಿತಿ ರಚನೆ ಮಾಡಲಾಗಿತ್ತು. ಆ ಉಪಸಮಿತಿಯಲ್ಲಿ ನಾನು, ಎಂ.ಪಿ ಪ್ರಕಾಶ್, ಸಿಂಧ್ಯಾ, ನಾಣಯ್ಯ, ಬೈರೇಗೌಡ ಅವರು ಸದಸ್ಯರಾಗಿದ್ದೆವು. ನಾನು ಪ್ರೊ. ರವಿವರ್ಮ ಕುಮಾರ್ ಅವರ ಜೊತೆ ನಿರಂತರ ಚರ್ಚೆ ನಡೆಸಿ, ಮೀಸಲಾತಿ ಪ್ರಮಾಣ ನಿಗದಿ ಮಾಡಿದ್ದೆ. ಜೊತೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದ್ದು ನಮ್ಮ ಸಮಿತಿ. ಇದನ್ನು ವಿರೋಧಿಸಿದವರು ಬಿಜೆಪಿಯ ರಾಮಾ ಜೋಯಿಸ್. ಬಿಜೆಪಿ ಮೀಸಲಾತಿ ವಿರೋಧಿ ಎನ್ನಲು ಇಂತಹಾ ಸಾಕಷ್ಟು ನಿದರ್ಶನಗಳಿವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next