Advertisement

ಕೋಟೆ ಕೊತ್ತಲ ಹೇಳಿವೆ ನೀರಿನ ಪಾಠ!

08:05 PM Nov 03, 2019 | Lakshmi GovindaRaju |

ಶತ್ರು ದಾಳಿಗಳಿಂದ ರಾಜ್ಯ ಸಂರಕ್ಷಣೆಗೆ ರಾಜರು ಕೋಟೆ ಕಟ್ಟಿಸಿದ್ದಾರೆ. ಮಣ್ಣು, ಇಟ್ಟಿಗೆ, ಕಲ್ಲು, ಗಾರೆ, ಮರ ಬಳಸಿ ರಕ್ಷಣಾ ಗೋಡೆ ಎಬ್ಬಿಸಿದ್ದಾರೆ. ಅರಮನೆ ಆಡಳಿತವಷ್ಟೇ ಅಲ್ಲ, ಗ್ರಾಮ ರಕ್ಷಣೆಗೂ ಕೋಟೆಗಳು ಉದಯಿಸಿವೆ. ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು? ಎನ್ನುವ ಮಾಹಿತಿ ಒದಗಿಸುವ ಇತಿಹಾಸ ಇದಲ್ಲ, ಜಲ ಸಂರಕ್ಷಣೆಯ ವಿಚಾರದಲ್ಲಿ ಅವರು ಏನಾಗಿದ್ದರೆಂಬ ನೋಟ ಇಲ್ಲಿದೆ.

Advertisement

ಕೋಳಿ ಕೂಗು ಕೇಳುವ ಜಾಗಗಳಲ್ಲೆಲ್ಲ ಇಲ್ಲಿ ಕೋಟೆಗಳಿವೆ. ಕೆನರಾ ಜಿಲ್ಲೆಯ ಭೂಗೋಳ ಎಂಬ ಕ್ರಿ.ಶ. 1905ರ ಪುಸ್ತಕದಲ್ಲಿ ಒಂದು ಪಾಠದ ಸಾಲು ಇದು. ಕರಾವಳಿ, ಘಟ್ಟ, ಮಲೆನಾಡು, ಅರೆಮಲೆನಾಡು ಪ್ರಾಂತ್ಯಗಳ ಕೆನರಾ ಜಿಲ್ಲೆ (ಇಂದಿನ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ) 2- 3ನೇ ಶತಮಾನಗಳಿಂದಲೂ ರಾಜ ಆಳ್ವಿಕೆಯ ನೆಲ. ಅರಬ್ಬಿ ಸಮುದ್ರ ಹಾಗೂ ಪಶ್ಚಿಮ ಘಟ್ಟಗಳು ರಕ್ಷಣೆಯ ಪ್ರಾಕೃತಿಕ ಸಹಜ ವಿನ್ಯಾಸಗಳು.

ಬೆಟ್ಟದಿಂದ ಹರಿದು ಬರುವ ನೇತ್ರಾವತಿ, ಸುವರ್ಣ, ಸೀತಾ, ಗುರುಪುರ, ಕುಮಾರಧಾರ, ಶರಾವತಿ, ಅಘನಾಶಿನಿ, ಗಂಗಾವಳಿ, ಕಾಳಿ ಸೇರಿದಂತೆ ಹಲವು ನದಿಗಳಂತೂ ನೀರ ಗಡಿಯಿಂದ ಭೂಮಿಯನ್ನು ಬಂಧಿಸಿ ಕೋಟೆಯ ಪರಿಕಲ್ಪನೆ ಮೂಡಿಸಿವೆ. ಇಂಥ ನೆಲೆಯಲ್ಲಿ ಸಮುದ್ರತಟದಿಂದ ಗುಡ್ಡದ ಎತ್ತರದವರೆಗೆ ಕೋಟೆಗಳಿವೆ. ತಗ್ಗಿನಲ್ಲಿ ತೀವ್ರ ನೀರಿನ ಸಮಸ್ಯೆಯಿದ್ದರೂ, ಮಹಾ ಬೆಟ್ಟದೆತ್ತರದ ಮೇದಿನಿ, ಕೊಂಕಿಕೋಟೆಗಳಲ್ಲಿ ನೀರಿರುವ ತಾಣಗಳು ಇಂದಿಗೂ ಇವೆ. “ಕೋಟೆ ಜಲ’ ಈ ಕಾರಣಕ್ಕಾಗಿಯೇ ಕುತೂಹಲ ಹುಟ್ಟಿಸುತ್ತದೆ.

ಕೋಟೆ ಕಟ್ಟಿ ರಾಜ್ಯವಾಳು: ಶೈವ ತಂತ್ರದ ಭಾಗವಾದ “ಸಾಮ್ರಾಜ್ಯ ಲಕ್ಷ್ಮೀ ಪೀಠಿಕಾ’ದಲ್ಲಿ 8 ವಿಧಗಳ ಕೋಟೆಗಳ ಪ್ರಸ್ತಾಪ ಇದೆಯಂತೆ! ಗಿರಿದುರ್ಗ, ವನದುರ್ಗ, ಗಹ್ವರದುರ್ಗ, ಜಲದುರ್ಗ, ಕರ್ದಮ ದುರ್ಗ, ಮಿಶ್ರದುರ್ಗ, ನರದುರ್ಗ, ಕಾಷ್ಟದುರ್ಗವೆಂಬ ಭಾಗವದು. ಪುನಃ ಗಿರಿ ದುರ್ಗ ಮಾದರಿಯಲ್ಲಿಯೇ ಭದ್ರಮ್‌, ಅತಿಭದ್ರಮ್‌, ಚಂದ್ರ, ಅರ್ಧಚಂದ್ರ, ನಾಭ, ಸುನಾಭ, ರುಚಿರಮ್‌, ವರ್ಧಮಾನಮ್‌ ಎಂಬ 8 ಪ್ರಕಾರಗಳಿವೆ. ಕೋಟೆ ವಿನ್ಯಾಸ, ಸ್ಥಳ, ರಕ್ಷಣಾ ತಂತ್ರಗಳ ವಿಶೇಷತೆ ಗಮನಿಸಿ ಹೀಗೆ ಹೆಸರಿಸಲಾಗಿದೆ. ಧಾನ್ವ ದುರ್ಗ ನೀರಿಲ್ಲದ ಕೋಟೆಯಾಗಿದೆ. ಸಾಮಾನ್ಯವಾಗಿ ಇನ್ನುಳಿದ ಎಲ್ಲ ಕೋಟೆಗಳು ನೀರು ನಂಬಿ ಜನಿಸಿವೆ.

ಕನ್ನಡ ನಾಡಿನ ಕೋಟೆಗಳಿಗೆ ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಶಾತವಾಹನರು, ಹೊಯ್ಸಳ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಗಂಗ, ಯಾದವ, ವಿಜಯನಗರ, ಆದಿಲ್‌ ಶಾ, ಮರಾಠಾ, ಹೈದರ್‌, ಟಿಪ್ಪು, ಮೈಸೂರು ಒಡೆಯರು, ಕೆಳದಿ, ಸೋಂದಾ, ಗೇರುಸೊಪ್ಪ, ಕಿತ್ತೂರು ದೇಸಾಯಿ, ಸವಣೂರು ನವಾಬ, ಘೋರ್ಪಡೆ, ಪಟವರ್ಧನ ಹೀಗೆ ಸಣ್ಣಪುಟ್ಟ ರಾಜ ಸಂಸ್ಥಾನಗಳೂ ಕೋಟೆ ಕಟ್ಟಿಯೇ ರಾಜ್ಯವಾಳಿವೆ. “ದುರ್ಗಗಳಿಲ್ಲದ ರಾಜನು ಬಿರುಗಾಳಿಗೆ ಸಿಲುಕಿದ ಚದುರಿದ ಮೋಡಗಳಂತೆ’ ಎಂದ ಅಭಿಲಾತಾರ್ಥ ಚಿಂತಾಮಣಿ ಗ್ರಂಥ ಕೋಟೆಯ ಮಹತ್ವ ಹೇಳಿದೆ.

Advertisement

ಶತಮಾನಗಳ ಹಿಂದೆಯೇ ಜಲಸಂರಕ್ಷಣೆ: ಕೋಟೆ ಬಾವಿ, ಕೋಟೆ ಕೆರೆ, ಆನೆ ಹೊಂಡ, ಕುದುರೆ ಹಳ್ಳ ಮುಂತಾದ ಹೆಸರುಗಳಿಂದ ಕೋಟೆ ಸನಿಹದ ಜಲ ತಾಣಗಳನ್ನು ನೋಡಬಹುದು. ಎತ್ತರದಲ್ಲಿ ನಿಂತು ಶತ್ರು ಆಗಮನ ವೀಕ್ಷಿಸುವ ಅನುಕೂಲ ಕೋಟೆಯ ಕೊತ್ತಲದಲ್ಲಿದೆ. ರಾಜರು, ರಾಜ ಪರಿವಾರ, ಕುದುರೆ, ಆನೆ, ಒಂಟೆ, ಹೇರೆತ್ತು, ಕಾಲಾಳುಗಳೆಲ್ಲರ ಅನುಕೂಲಕ್ಕೆ ನೀರು ಮುಖ್ಯ. ಬನವಾಸಿಯ ಕದಂಬರ ಕೋಟೆ, ವರದಾ ನದಿಯನ್ನು ಬಳಸಿದೆ, ಹಾನಗಲ್‌ದಲ್ಲಿಯೂ ಇದೇ ನದಿಯ ನೆರವಿದೆ.

ಬಳ್ಳಾರಿಯ ಉಚ್ಚಂಗಿ ದುರ್ಗ, ಗಡೇಕೋಟೆ, ಜರಿಮಲೆ, ವೀರನದುರ್ಗ, ಕರಡಿದುರ್ಗ ಅಲ್ಲಿನ ಗಿರಿದುರ್ಗಗಳು. ಕಮಲಾಪುರ ಕೆರೆ, ಕೃಷ್ಣರಾಯ ಸಮುದ್ರ ಕೆರೆಗಳು ವಿಜಯನಗರ ಸಾಮ್ರಾಜ್ಯದ ಪ್ರಮುಖ ಕೋಟೆ ಕೆರೆಗಳು. ಮಳೆ ನೀರನ್ನು ಕೆರೆ, ಬಾವಿಗಳಲ್ಲಿ ಹಿಡಿದು ಗೆಲ್ಲುವ ತಂತ್ರವಿದೆ. ಕೋಟೆ ರಚನೆಯ ಆರಂಭದಲ್ಲಿ ನೆಲದಲ್ಲಿ ದೊಡ್ಡ ಕಂದಕ ತೆಗೆದು, ಪಕ್ಕದಲ್ಲಿ ಏರಿಸುತ್ತ ಕೋಟೆ ಕಟ್ಟಲಾಗುತ್ತಿತ್ತು.

40- 50 ಮೀಟರ್‌ ಅಗಲದಲ್ಲಿ ಮಣ್ಣಿನ ಏರಿಯನ್ನು ನೂರಾರು ಮೀಟರ್‌ ಎತ್ತರಕ್ಕೆ ಹಾಕಿ, ಅಲ್ಲಿ ಮರ ಗಿಡ ಬೆಳೆಸುವ ಮಾದರಿಗಳಿದ್ದವು. ಹತ್ತಾರು ಕಿಲೋಮೀಟರ್‌ ಉದ್ದದಲ್ಲಿ ಮಣ್ಣು ತೆಗೆದ ಕಂದಕಗಳು ಮಳೆ ನೀರನ್ನು ಕೋಟೆಯ ಸುತ್ತ ಹಿಡಿದಿಟ್ಟು ಜಲದುರ್ಗವಾಗಿಸಿ ಇಂಗಿಸಿದ ಪರಿಣಾಮ, ಕೋಟೆ ಕೆರೆ, ಬಾವಿಗಳಿಗೆ ಜೀವ ಬಂದು ಅಂತರ್ಜಲ ಉಳಿದಿದೆ. ಇಂಗುಗುಂಡಿ, ಜಲಕೊಯ್ಲು, ಮಳೆ ನೀರು ಸಂರಕ್ಷಣೆಯ ಕೆಲಸವನ್ನು ಕಲ್ಲುಗುಡ್ಡದ ಕೋಟೆಗಳಲ್ಲಿ ಶತಮಾನಗಳ ಹಿಂದೆಯೇ ಅಳವಡಿಸಲಾಗಿದೆ.

ಕೋಟೆಗಳನ್ನು ಹೊರಕೋಟೆ, ಒಳಕೋಟೆಗಳೆಂದು ಗೋಡೆ ಗಡಿಯಿಂದ ಗುರುತಿಸಲಾಗುತ್ತದೆ. ಕೋಟೆಯ ಒಳಗಡೆ ಅಥವಾ ಹೊರಗಡೆ ಕೆರೆಗಳಿರುವುದು ಸಾಮಾನ್ಯ. ಒಂದು ಆವರಣಕ್ಕೆ ಸುತ್ತ ಭದ್ರತೆ ದೊರಕಿದಾಗ ಒಳಗಡೆ ಸುರಿಯುವ ಮಳೆ ನೀರು, ನಿಶ್ಚಿತ ದಾರಿಗಳಲ್ಲಿ ಹರಿದರಷ್ಟೇ ನಿರ್ಮಿಸಿದ ರಚನೆ ಉಳಿಯುತ್ತದೆ. ಆದರೆ, ಇಲ್ಲಿ ಹರಿಯುವ ನೀರನ್ನು ಸರಾಗ ಹೊರಗಡೆ ಕಳಿಸಿದರೆ ದೈನಂದಿನ ಬಳಕೆಗೆ ಸಮಸ್ಯೆಯಾಗುತ್ತದೆ.

ಕೋಟೆಗೆ ನೀರು ಪೂರೈಸಲು ನದಿಗಳಿಂದ ಕಾಲುವೆ ನಿರ್ಮಾಣ ಕೌಶಲ ಇದೆಯಾದರೂ, ಅದು ನೆಲ ದುರ್ಗಕ್ಕೆ ಸೀಮಿತ. ಎತ್ತರದ ಬೆಟ್ಟಕ್ಕೆ ನೀರು ಏರಿಸುವುದಕ್ಕಿಂತ, ಅಲ್ಲಿರುವ ನೀರನ್ನು ಸಮರ್ಥವಾಗಿ ಉಳಿಸುವ ಪ್ರಜ್ಞೆ ರಚನಾ ವಿನ್ಯಾಸದಲ್ಲಿ ವನದುರ್ಗ, ಗಿರಿದುರ್ಗಗಳಲ್ಲಿ ಮೂಡಿದೆ. ಬೀದರ, ರಾಯಚೂರು, ಬಳ್ಳಾರಿ, ವಿಜಯಪುರ, ಕೋಲಾರದ ಇಂದಿನ ಬರದ ನೆಲೆಯಲ್ಲೂ ಶತ ಶತಮಾನಗಳ ಜಲದುರ್ಗಗಳಿವೆ, ಕೋಟೆಯಲ್ಲಿ ನೀರು ಹಿಡಿದು ರಾಜ್ಯ ಕಟ್ಟಿದ ಉದಾಹರಣೆಯಿದೆ.

ನೀರು ನುಂಗಿದ ನಗರಗಳು: ಕೊಳ್ಳೇಗಾಲದ ಕೋಟೆಕೆರೆ 37 ಹೆಕ್ಟೇರ್‌ ವಿಸ್ತೀರ್ಣವಿದೆ. ಕೆರೆ ದಂಡೆಯ ಉದ್ದವೇ 1120 ಮೀಟರ್‌! ದೊಡ್ಡ ಸಂಪಿಗೆ, ಕುರುಬನಕಟ್ಟೆ, ಸಿದ್ದಪ್ಪಾಜಿ ದೇಗುಲ, ಮೌನೇಶ್ವರ ಬೆಟ್ಟದ ಮಳೆ ನೀರಿನಿಂದಾಗಿ ಕೆರೆ ತುಂಬುತ್ತದೆ. ಸಾಮಾನ್ಯವಾಗಿ ಯಾವುದೇ ಕೆರೆ ಒಣಗಬಹುದು ಆದರೆ ಈ ಕೋಟೆ ಕೆರೆ ಸ್ಥಳ ಆಯ್ಕೆಯ ತಜ್ಞತೆಗೆ ಸಾಕ್ಷಿಯಾಗಿದ್ದು ಸಂಪೂರ್ಣ ಒಣಗಿದ ದಾಖಲೆ ಕಡಿಮೆಯೇ!

ಚಿತ್ರದುರ್ಗದ ಪಾಳೇಗಾರರ ಕಾಲದಲ್ಲಿ ನಿರ್ಮಿಸಿದ ಜಂಪಣ್ಣ ನಾಯಕನ ಕೋಟೆಕೆರೆ, ವಿಸ್ತೀರ್ಣದಲ್ಲಿ 130 ಹೆಕ್ಟೇರ್‌ ವಿಶಾಲವಾಗಿದೆ. 32 ಚದರ ಕಿಲೋಮೀಟರ್‌ ಪ್ರದೇಶಗಳಲ್ಲಿ ಸುರಿದ ಮಳೆ ನೀರು, ಹರಿದು ಬರುವ ಆಯಕಟ್ಟಿನ ಜಾಗದಲ್ಲಿದೆ. ಧಾರವಾಡದ ಹೊರಕೋಟೆಯ ಪ್ರದೇಶದಲ್ಲಿ ಕೊಪ್ಪದಕೆರೆ, ಹಾಲಕೆರೆ, ನೀಲಕೆರೆಗಳಿದ್ದವಂತೆ! ಈಗ ನಗರ ಎಲ್ಲವನ್ನೂ ನುಂಗಿ ಅವಶೇಷವೂ ಉಳಿದಿಲ್ಲ! ಗದಗ ಜಿಲ್ಲೆಯಲ್ಲಿ ಲಕ್ಕುಂಡಿ, ಮುಳಗುಂದ, ನರಗುಂದ, ಲಕ್ಷ್ಮೇಶ್ವರ ಕೋಟೆಗಳು ನೀರು ಹಿಡಿಯುವ ಸೂತ್ರ ಸಾರಿವೆ.

ಭೌಗೋಳಿಕ ಪರಿಸರಕ್ಕೆ ತಕ್ಕುದಾದ ಮಾರ್ಗ ಅನುಸರಿಸಿ ಕೋಟೆಗಳಲ್ಲಿ ನೀರು ನಿಲ್ಲಿಸಿದ ತಂತ್ರಗಳಿಂದ ಕಲಿಯುವುದು ಹಲವಿದೆ. ಚಿತ್ರದುರ್ಗ (ಚಿನ್ಮೂಲಾದ್ರಿ) ಕೋಟೆಯನ್ನೊಮ್ಮೆ ನೋಡಬೇಕು. ಜೋಗಿಮಟ್ಟಿಯಿಂದ ಸಂತೆಹೊಂಡವರೆಗಿನ ಸರಣಿಕೆರೆಗಳ ರಚನೆ ಅಭ್ಯಸಿಸಬೇಕು. ಮುಖ್ಯವಾಗಿ, ಕೋಟೆಯ ಲಾಲಬತ್ತೇರಿಯಿಂದ ಹರಿಯುವ ನೀರು ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿಯರ ಹೊಂಡದಿಂದ ಸಿಹಿನೀರಿನ ಹೊಂಡಕ್ಕೆ,

ದೊಡ್ಡಣ್ಣನ ಕೆರೆ ತುಂಬಿದ ಬಳಿಕ ತಿಮ್ಮಣ್ಣ ನಾಯಕನ ಕೆರೆಗೆ, ನಾಗರತೀರ್ಥಕ್ಕೆ ಒಡ್ಡು ಹಾಕಿದ ವಿಶೇಷ ಗಮನಿಸಿದರೆ ಕಲ್ಲುಬೆಟ್ಟದಲ್ಲಿ ನೀರು ಕಂಡ ಪ್ರಯತ್ನಗಳಿವೆ. ಕೊಪ್ಪಳದ ಕೋಟೆಯ ಕಲ್ಲು ಬೆಟ್ಟದ ನೀರನ್ನು ಹುಲಿ ಕೆರೆಯಲ್ಲಿ ಹಿಡಿದು ಕೋಟೆಯ ಸುತ್ತ ಕಂದಕದಲ್ಲಿ ನಿಲ್ಲಿಸಿದ ಜಲದುರ್ಗದ ಪರಿಕಲ್ಪನೆ ವಿಶೇಷವಿದೆ. ಹೊಲ ಗದ್ದೆ, ಗುಡ್ಡ ಬೆಟ್ಟಗಳಲ್ಲಿ ಕೃಷಿಯನ್ನಾಳುವ ನಾವು ಕೋಟೆಗಳ ಜಲಪಾಠ ಆಲಿಸಬೇಕಿದೆ.

ಮುಂದಿನ ಭಾಗ – 7: ಗುಡೇಕೋಟೆಯ ಜಲ ಚರಿತೆ

* ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next