Advertisement

ಡ್ರಗ್ಸ್‌  ಜಾಲದ ಮೂಲ ಮಟ್ಟ ಹಾಕಿಯೇ ಸಿದ್ಧ

02:23 AM Jul 08, 2019 | Sriram |

ಪೊಲೀಸ್‌ ಆಯುಕ್ತರಾಗಿ ಬೀದರ್‌ ಮೂಲದ ಸಂದೀಪ್‌ ಪಾಟೀಲ್‌ ಮಂಗಳೂರಿಗೆ ಬಂದು ಮೂರೂವರೆ ತಿಂಗಳಾಗಿದೆ. ಈ ಕಡಿಮೆ ಅಧಿಕಾರಾವಧಿಯಲ್ಲೇ ಸಾರ್ವಜನಿಕ ದೂರುಗಳಿಗೆ ಮೊದಲ ಆದ್ಯತೆ ನೀಡಿ, ಸಮಸ್ಯೆ ಗಳಿಗೆ ತುರ್ತು ಸ್ಪಂದಿಸಿ ಜನ ಪ್ರೀತಿ ಗಳಿಸುತ್ತಿದ್ದಾರೆ. ಇನ್ನೊಂದೆಡೆ ಕ್ರಿಮಿನಲ್‌ಗ‌ಳಿಗೆ ಖಾಕಿ ಬಿಸಿ ಏನು ಎಂಬುದನ್ನು ತೋರಿಸುತ್ತಿದ್ದಾರೆ. ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸಾಕಷ್ಟು ಭಂಗವುಂಟು ಮಾಡುತ್ತಿರುವ ಡ್ರಗ್ಸ್‌ ಮಾಫಿಯಾ ಮತ್ತು ಗೋ ಕಳ್ಳ ಸಾಗಣೆ ದಂಧೆಯ ಕಿಂಗ್‌ಪಿನ್‌ಗಳ ಬೆನ್ನು ಹತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ಸಂದೀಪ್‌ ಪಾಟೀಲ್‌ ನೀಡಿರುವ ವಿಶೇಷ ಸಂದರ್ಶನ ಇಲ್ಲಿದೆ.

Advertisement

ಪೊಲೀಸ್‌ ಆಯುಕ್ತರಾಗಿ ಮೂರೂವರೆ ತಿಂಗಳ ನಿಮ್ಮ ಕೆಲಸದ ಅನುಭವ ಹೇಗಿದೆ?
ಕರಾವಳಿ ಭಾಗದಲ್ಲಿ ಇದು ನನ್ನ ಮೊದಲ ಪೋಸ್ಟಿಂಗ್‌. ಮೂರೂವರೆ ತಿಂಗಳು ನನಗೆ ಬಹಳಷ್ಟು ಅನುಭವ ಕೊಟ್ಟಿದೆ. ಮಂಗಳೂರಿನಲ್ಲಿ ಗಲಾಟೆ, ರೌಡಿಸಂ ಜಾಸ್ತಿ; ಪೊಲೀಸರಿಗೆ ಅದು ನಿಭಾಯಿಸುವುದು ಕಷ್ಟ ಎಂಬೆಲ್ಲ ಭಾವನೆ ಹೊರಗೆ ಇದೆ. ಆದರೆ ಇಲ್ಲಿಗೆ ಬಂದ ಬಳಿಕ ಈ ಅಭಿಪ್ರಾಯ ತಪ್ಪು ಎನ್ನುವ ಅರಿವಾಗಿದೆ. ಇಲ್ಲಿನ ಜನತೆ ಶಿಸ್ತುಬದ್ಧ ಜೀವನ ಬಯಸುವವರು. ಸಣ್ಣಪುಟ್ಟ ಘಟನೆಗಳಾಗುವುದು ನಿಜ, ಅದು ಬೇರೆಡೆಯೂ ಇದೆ.

ನೀವು ಟ್ವಿಟರ್‌ನಂಥ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವುದು ಯಾಕೆ ?
ಟ್ವಿಟರ್‌, ವಾಟ್ಸ್‌ಆ್ಯಪ್‌ನಂಥ ಸೋಶಿಯಲ್‌ ಮೀಡಿಯಾದಿಂದ ಪೊಲೀಸ್‌ ಇಲಾಖೆಗೂ ಅನುಕೂಲಗಳಿವೆ. ಮೂಡುಬಿದಿರೆಯ ವ್ಯಕ್ತಿ ದೂರು ಹಿಡಿದು ಮಂಗಳೂರಿಗೆ ಬರುವ ಬದಲು ಟ್ವಿಟರ್‌, ವಾಟ್ಸ್‌ ಆ್ಯಪ್‌, ಇ-ಮೇಲ್‌ ಮೂಲಕ ಗಮನಕ್ಕೆ ತಂದರೆ ತತ್‌ಕ್ಷಣ ಕ್ರಮ ತೆಗೆದುಕೊಳ್ಳಬಹುದು. ಸಾರ್ವಜನಿಕರೊಬ್ಬರು ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಬಗ್ಗೆ ಹೀಗೆಯೇ ಗಮನ ಸೆಳೆದದ್ದರಿಂದ 52 ಲಕ್ಷ ರೂ. ದೊಡ್ಡ ಬೆಟ್ಟಿಂಗ್‌ ಜಾಲ ಭೇದಿಸುವುದಕ್ಕೆ ಸಾಧ್ಯವಾಗಿದೆ. ಜನರ ಅನುಕೂಲಕ್ಕಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯನಾಗಿದ್ದೇನೆ.

ನಿಮ್ಮ ಕಾರ್ಯವೈಖರಿ ಬಹಳ ಭಿನ್ನವಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಇದೆಯಲ್ಲವೇ?
ನನ್ನದು 2004ರ ಐಪಿಎಸ್‌ ಬ್ಯಾಚ್‌. ಜನ ಪೊಲೀಸ್‌ ಇಲಾಖೆ ಮೇಲೆ ಸಾಕಷ್ಟು ನಂಬಿಕೆ ಇರಿಸಿದ್ದಾರೆ. ಆ ನಂಬಿಕೆ ಉಳಿಸುವ ದಿಕ್ಕಿನಲ್ಲಿ ನಾವು ಕೆಲಸ ಮಾಡಬೇಕು. ಕಾನೂನು ವ್ಯಾಪ್ತಿಯಲ್ಲಿ ಜನರಿಗೆ ಸಹಾಯ ಮಾಡುವುದಕ್ಕೆ ಬಹಳ‌ಷ್ಟು ಅವಕಾಶ ನಮಗಿದೆ. ನಾವೆಲ್ಲ ಜನರ ಸೇವಕರಾಗಿರುವಾಗ ಮೊದಲು ಅವರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಬೇಕು. ನನ್ನ ಕಚೇರಿಯಲ್ಲಿಯೂ ಸಮಸ್ಯೆ-ದೂರು ನೀಡಲು ಬರುವವ‌ರನ್ನು ಮೊದಲು ಮಾತನಾಡಿಸಿ ಅನಂತರ ಬೇರೆ ಕೆಲಸದತ್ತ ಗಮನಹರಿಸುತ್ತಿದ್ದೇನೆ.

ಕರಾವಳಿಯಲ್ಲಿ ಮಾದಕ ದ್ರವ್ಯ ಜಾಲ ಆಳವಾಗಿ ಬೇರೂರಿದೆ ಎನ್ನುವುದನ್ನು ಒಪ್ಪಿಕೊಳ್ಳುವಿರಾ?
ಹೌದು; ಸಮಸ್ಯೆ ಇರುವುದನ್ನು ಮೊದಲು ನಾವು ಒಪ್ಪಿಕೊಳ್ಳಬೇಕು. ಗಾಂಜಾ ಸೇರಿದಂತೆ ಡ್ರಗ್ಸ್‌ ಮಾಫಿಯಾ ಕರಾವಳಿಯಲ್ಲಿ ವ್ಯಾಪಕವಾಗುತ್ತಿದ್ದು, ಅದರ ಮೂಲವನ್ನೇ ಪತ್ತೆ ಹಚ್ಚಿ ಸಂಪೂರ್ಣ ಮಟ್ಟ ಹಾಕುವ ಅನಿವಾರ್ಯ ಇದೆ. ನಾನು ಗಮನಿಸಿದಂತೆ, ಡ್ರಗ್ಸ್‌ ವ್ಯವಹಾರಕ್ಕೆ ಸ್ಥಳೀಯ ಗ್ಯಾಂಗ್‌ಗಳಿದ್ದು, ಈಗ ಅದರ ಬೆನ್ನು ಹತ್ತಿದ್ದೇವೆ. ಆದರೆ ಇದರ ಮೂಲವಿರುವುದು ಮುಂಬಯಿ, ಗೋವಾದಲ್ಲಿ. ಇದೊಂದು ಚೈನ್‌ ಸಿಸ್ಟಮ್‌ನಂತೆ ಕೆಲಸ ಮಾಡುತ್ತಿದ್ದು, ಅದರ ಕಿಂಗ್‌ಪಿನ್‌ ಎಲ್ಲಿಯೋ ಕುಳಿತು ನಿಯಂತ್ರಿಸುತ್ತಿದ್ದಾನೆ. ಮಂಗಳೂರಿನಲ್ಲಿ ವಿತರಕರಷ್ಟೇ ಇದ್ದು, ಅವರ ಮಾಹಿತಿ ಕಲೆ ಹಾಕಿದ್ದೇವೆ. ಕಿಂಗ್‌ಪಿನ್‌ಗಳ ಸುಳಿವು ಸಿಕ್ಕಿದೆ. ನಮ್ಮ ಪೊಲೀಸ್‌ ತಂಡವನ್ನು ಮುಂಬಯಿ-ಗೋವಾಕ್ಕೆ ಕಳುಹಿಸಿದ್ದೇವೆ. ಆದರೆ ಅಲ್ಲಿನ ಪೊಲೀಸರ ನೆರವು ಪಡೆದು ಡ್ರಗ್ಸ್‌ ಜಾಲದ ಮೂಲ ಭೇದಿಸುವುದಕ್ಕೆ ಕಾಲಾವಕಾಶ ಬೇಕು. ನಾನು ಕರಾವಳಿಯ ಡ್ರಗ್ಸ್‌ ಮಾಫಿಯಾವನ್ನು ಗಂಭೀರವಾಗಿ ಪರಿಗಣಿಸಿದ್ದು, ಅದನ್ನು ಸಂಪೂರ್ಣ ಮಟ್ಟ ಹಾಕುವ ತನಕ ಸುಮ್ಮನಿರುವುದಿಲ್ಲ.

Advertisement

ಮಾದಕ ದ್ರವ್ಯ ಮೂಲೋತ್ಪಾಟನೆ ವಿಚಾರದಲ್ಲಿ ಜನತೆ ನಿಮ್ಮ ಮೇಲೆ ಭರವಸೆ ಇರಿಸಬಹುದೇ?
ಡ್ರಗ್ಸ್‌ ಜಾಲದ ಬಗ್ಗೆ ಜನರಲ್ಲಿ, ಅದರಲ್ಲಿಯೂ ಯುವ ಜನತೆಗೆ ಅರಿವು ಮೂಡಿಸುವುದಕ್ಕೆ ಆರಂಭಿಸಿದ್ದು, ಈಗಾಗಲೇ ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದೇವೆ. ಆದರೆ ಪೋಷಕರಿಂದ ಪೂರ್ಣ ಸಹಕಾರದ ಅಗತ್ಯವಿದೆ. ಮನೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಸಂಶಯ ಬಂದರೆ ಅಥವಾ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸಿದರೆ, ಕೂಡಲೇ ನಮ್ಮನ್ನು ಸಂಪರ್ಕಿಸಿ ಮಾಹಿತಿ ಕೊಡಬೇಕು. ಇತ್ತೀಚೆಗೆ ಮೂರ್‍ನಾಲ್ಕು ಪ್ರಕರಣಗಳಲ್ಲಿ ವ್ಯಸನಕ್ಕೆ ಒಳಗಾದ ವಿಚಾರ ಮಕ್ಕಳ ಪೋಷಕರಿಗೂ ಗೊತ್ತಿರಲಿಲ್ಲ. ನಾವು ಸೆರೆಹಿಡಿದಾಗ, ಪೋಷಕರು “ನಮ್ಮ ಮಗ ಅಂಥಹವನಲ್ಲ’ ಎಂದಿದ್ದರು. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಸತ್ಯ ಬಯಲಾಗಿತ್ತು. ಹೀಗಾಗಿ ತಂದೆತಾಯಿ ಮತ್ತು ಅಧ್ಯಾಪಕರು ಈ ಬಗ್ಗೆ ಸ್ವಲ್ಪ ಮಾಹಿತಿ ಲಭಿಸಿದರೂ ನಮ್ಮೊಂದಿಗೆ ಹಂಚಿಕೊಳ್ಳಬೇಕು.

 ಕಾಲೇಜು ಕ್ಯಾಂಪಸ್‌ಗಳಲ್ಲಿ ಗಾಂಜಾ ಜಾಲವನ್ನು ಹೇಗೆ ಮಟ್ಟ ಹಾಕುವಿರಿ?
ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ದ್ರವ್ಯ ಜಾಲ ವ್ಯಾಪಿಸುತ್ತಿರುವುದು ಗಂಭೀರ ವಿಚಾರ. ಈ ಕಾರಣಕ್ಕೆ ಮೊದಲು ನಾವು ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಅಲ್ಲದೆ ಹಾಸ್ಟೆಲ್‌-ಪಿಜಿಗಳಲ್ಲಿ ಉಳಿದುಕೊಂಡಿರುವ ಮಕ್ಕಳ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿದ್ದೇವೆ. ಹಾಸ್ಟೆಲ್‌ ವಾರ್ಡನ್‌, ಪಿಜಿ ಮಾಲಕರನ್ನು ಕರೆದು ಸೂಚನೆ ಕೂಡ ನೀಡಿದ್ದು, ಏನೇ ಸುಳಿವು ಸಿಕ್ಕಿದರೂ ಅಂಥ ಪಿಜಿ-ಹಾಸ್ಟೆಲ್‌ ಮಾಲಕರ ವಿರುದ್ಧ ಕ್ರಮ ಜರಗಿಸಲಾಗುವುದು.

ಮೊದಲು ಎಚ್ಚರಿಕೆ, ಅನಂತರ ಕ್ರಮ; ಇದು ನಿಮ್ಮ ಕಾರ್ಯ ಶೈಲಿಯೇ?
ಸಾಮಾನ್ಯವಾಗಿ ಎಲ್ಲ ವಿಚಾರದಲ್ಲಿಯೂ ಒಮ್ಮೆ ಕರೆದು ಎಚ್ಚರಿಕೆ ಕೊಡುತ್ತೇನೆ. ಕಾನೂನು ಬಗ್ಗೆ ಗೊತ್ತಿಲ್ಲದಿದ್ದರೆ ಮನವರಿಕೆ ಮಾಡುತ್ತೇನೆ. ಅನಂತರವೂ ಅದನ್ನು ಮುಂದುವರಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ಅದೇ ಕಾರಣಕ್ಕೆ ಕ್ರಿಕೆಟ್‌ ಬೆಟ್ಟಿಂಗ್‌ ಬಗ್ಗೆ ಟ್ವೀಟ್‌ ಮಾಡಿದ್ದು, ಹಳೇ ರೌಡಿಗಳ ಪರೇಡ್‌ ಮಾಡಿಸಿದ್ದು.

ನೀವು ಈಗ ಅಕ್ರಮ ಗೋ ಕಳ್ಳ ಸಾಗಾಟ ಜಾಲದ ಮೂಲಕ್ಕೂ ಕೈ ಹಾಕಿದ್ದೀರಲ್ಲ?
ಗೋ ಕಳವು ಒಂದು ಅಪರಾಧವೇ. ಇಲ್ಲಿ ಇದರಿಂದಲೂ ಕಾನೂನು ಸುವ್ಯವಸ್ಥೆ ಭಂಗವಾಗುತ್ತಿದೆ. ಈ ಕಾರಣಕ್ಕೆ ಗೋವು ಕಳ್ಳಸಾಗಾಟ ಜಾಲದ ಬೆನ್ನು ಹತ್ತಿದ್ದು, ಈ ಹಿಂದೆ ಯಾರೆಲ್ಲ ಅದರಲ್ಲಿ ಭಾಗಿಯಾಗಿದ್ದಾರೆಯೋ ಅಂಥವರ ಪಟ್ಟಿ ಮಾಡಿದ್ದೇವೆ. ಹೊರ ಜಿಲ್ಲೆ-ರಾಜ್ಯದಲ್ಲಿರುವ ಗೋ ಕಳ್ಳರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅಲ್ಲಿನ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಹಲವು ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಜಿಲ್ಲೆಯಲ್ಲಿ ಈ ಕೃತ್ಯಕ್ಕೆ ಈಗಲೂ ಅವರೇ ಕಾರಣಕರ್ತರು.

ಗೋವು ದಂಧೆ ಮಟ್ಟ ಹಾಕಲು ಮುಂದಾಗುವ ಪೊಲೀಸ್‌ ಅಧಿಕಾರಿಗೆ ಎತ್ತಂಗಡಿ ಗ್ಯಾರಂಟಿ ಎನ್ನುವ ಮಾತಿದೆ; ನಿಮಗೂ ಈಗ ಅಂಥ ರಾಜಕೀಯ ಒತ್ತಡ ಬಂದಿದೆಯೇ ?
ನನಗೆ ಈ ವಿಚಾರವಾಗಿ ಯಾವುದೇ ಒತ್ತಡ ಬಂದಿಲ್ಲ. ಅಷ್ಟೇ ಅಲ್ಲ, ಮೂರೂವರೆ ತಿಂಗಳ ಅವಧಿಯಲ್ಲಿಯೂ ಯಾವುದೇ ರಾಜಕೀಯ ಒತ್ತಡ ಬಂದಿಲ್ಲ. ಹೀಗಾಗಿ ಇಲ್ಲಿ ಏನೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆಯೋ ಅವೆಲ್ಲವನ್ನೂ ಸಂಪೂರ್ಣ ನಿಯಂತ್ರಿಸುವುದಕ್ಕೆ ಕಾನೂನಿನಡಿ ಪ್ರಯತ್ನಿಸುತ್ತಿದ್ದೇನೆ.

 ಕೇವಲ ಮೂರೂವರೆ ತಿಂಗಳಲ್ಲಿ ಎರಡು ಶೂಟ್‌ಔಟ್‌ ಪ್ರಕರಣ ನಡೆದಿವೆ; ರೌಡಿಗಳಿಗೆ ಇದು ನಿಮ್ಮ ಎಚ್ಚರಿಕೆಯೇ ?
ಅಪರಾಧ ಅಥವಾ ರೌಡಿಸಂ ಜಾಸ್ತಿಯಾದರೆ ಜನಠಾಣೆಗೆ ಬರಲು ಭಯಪಡುತ್ತಾರೆ; ಅದು ಆಗ ಬಾರದು.ಬದಲಿಗೆ, ಪೊಲೀಸರ ಕ್ರಮಗಳು ಜನರಲ್ಲಿ ಧೈರ್ಯ ತುಂಬುವಂತಿರಬೇಕು. ಜನರಿಗೆ ಪೊಲೀಸರ ಬಗ್ಗೆ ಪ್ರೀತಿ -ನಂಬಿಕೆ; ಅಪರಾಧಿಗಳಿಗೆ ಪೊಲೀಸರ ಬಗ್ಗೆ ಭಯ – ಇದು ನನ್ನ ತಣ್ತೀ. ಆ ನಿಟ್ಟಿನಲ್ಲಿ ಕಾನೂನಿನಲ್ಲಿ ಏನೆಲ್ಲ ಅವಕಾಶವಿದೆಯೋ ಅದನ್ನೆಲ್ಲ ಮಾಡುತ್ತಿದ್ದೇವೆ. ತಲೆಮರೆಸಿ ಕೊಂಡಿರುವ ಹಲವು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದೇವೆ. ದುಬಾೖಯಂಥ ಹೊರ ದೇಶ ಗಳಲ್ಲಿಯೂ ಅನೇಕರು ತಲೆಮರೆಸಿ ಕೊಂಡಿದ್ದು, ಈಗಾಗಲೇ ಅಂಥವರ ಪಟ್ಟಿ ಮಾಡಿ ಅವರನ್ನೆಲ್ಲ ಹಿಡಿದು ತರುವ ಪ್ರಯತ್ನಗಳಾಗುತ್ತಿವೆ.

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ವಿರುದ್ಧ ನೀವು ಇಷ್ಟೊಂದು ಕಣ್ಣಿಟ್ಟಿರುವುದು ಏಕೆ?
ನನಗೆ ಕ್ರಿಕೆಟ್‌ ಮೇಲೆ ಬಹಳ ಪ್ರೀತಿ. ಆದರೆ ಈ ಬುಕ್ಕಿಗಳೆಲ್ಲ ಸೇರಿ ಅದನ್ನು ಹಾಳು ಮಾಡುವುದಕ್ಕೆ ನೋಡುತ್ತಿದ್ದಾರೆ. ಅಲ್ಲದೆ ಹಿಂದೆಯೂ ನೋಡಿದ್ದೇನೆ. ಬೆಟ್ಟಿಂಗ್‌ನಲ್ಲಿ ದುಡ್ಡು ಮಾಡುವುದು ಬರೀ ಬುಕ್ಕಿಗಳು. ಅಮಾಯಕರು ಸಾಕಷ್ಟು ಹಣ-ಆಸ್ತಿ ಕಳೆದುಕೊಂಡಿದ್ದಾರೆ. ಕೆಲವರು ಆತ್ಮಹತ್ಯೆ ಮಾಡುವ ಹಂತಕ್ಕೂ ಹೋಗಿದ್ದಾರೆ. ಹೀಗಾಗಿ ಬೆಟ್ಟಿಂಗ್‌ ದಂಧೆ ವಿರುದ್ಧ ಬಹಳ ಕಠಿನ ಕ್ರಮ ಕೈಗೊಂಡು ಅಂಥ ಕುಟುಂಬದವರಿಗೆ ಸಹಾಯ ಮಾಡುತ್ತಿದ್ದೇವೆ.

– ಸುರೇಶ್‌ ಪುದುವೆಟ್ಟು

 

Advertisement

Udayavani is now on Telegram. Click here to join our channel and stay updated with the latest news.

Next