Advertisement

ಪ್ರಶಸ್ತಿ ಪಡೆವ ಕನಸು ನನಸಾಗಲೇ ಇಲ್ಲ

01:05 AM Jul 22, 2019 | Lakshmi GovindaRaj |

ಬೆಂಗಳೂರು: ಆ ಹಿರಿಯ ಜೀವ ಸರ್ಕಾರದ ಗೌರವಕ್ಕಾಗಿ ಕಾದಿತ್ತು. ರಂಗಭೂಮಿ ಕ್ಷೇತ್ರದ ಉನ್ನತ ಪ್ರಶಸ್ತಿ (ಬಿ.ವಿ.ಕಾರಂತ ಹೆಸರಿನಲ್ಲಿ)ಗೆ ತನ್ನ ಹೆಸರನ್ನು ಸರ್ಕಾರ ಎಂದು ಘೋಷಿಸುತ್ತೋ ಎಂಬ ಕನವರಿಕೆಯಲ್ಲಿತ್ತು. ಆದರೆ ಸರ್ಕಾರದ ತಪ್ಪುಗಳಿಂದಾಗಿ ಕೊನೆಗೂ ಆ ಆಸೆ ಈಡೇರಲೇ ಇಲ್ಲ! ಪ್ರಸಕ್ತ ವರ್ಷ ಏಪ್ರಿಲ್‌ 1ರಂದು 67ರ ಹರೆಯದ ಆ ಹಿರಿಯ ಜೀವ ಇಹಲೋಕವನ್ನೇ ತ್ಯಜಿಸಿದ್ದು, ರಂಗಭೂಮಿ ಕ್ಷೇತ್ರದ ಶ್ರೇಷ್ಠ ಪ್ರಶಸ್ತಿ ಪಡೆಯುವ ಅವರ ಕನಸು “ಕನಸಾಗಿಯೆ ಉಳಿಯಿತು’.

Advertisement

ಇಂತಹ ಮನ ಮಿಡಿಯುವ ನೋವಿನ ಕಥೆಗೆ ಹಿರಿಯ ವೃತ್ತಿರಂಗಭೂಮಿ ಕಲಾವಿದೆ ದಿ.ಎಸ್‌.ಮಾಲತಿ ಸಾಗರ ಅವರ ಬದುಕು ಸಾಕ್ಷಿಯಾಗಿದೆ. ಈ ಹಿಂದೆ (ಫೆ.5ರಂದು) ಸಭೆ ಸೇರಿದ್ದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ್‌ ಮಾಸ್ತರ್‌ ನೇತೃತ್ವದ ಆಯ್ಕೆ ಸಮಿತಿ, 2018ನೇ ಸಾಲಿನ “ಡಾ.ಗುಬ್ಬಿವೀರಣ್ಣ ಮತ್ತು “ಬಿ.ವಿ.ಕಾರಂತರ’ ಪ್ರಶಸ್ತಿಗೆ ರಂಗಭೂಮಿ ಸಾಧಕರ ಹೆಸರನ್ನು ಅಂತಿಮಗೊಳಿಸಿತ್ತು.

ಹವ್ಯಾಸಿ ರಂಗಭೂಮಿ ಕಲಾವಿದರಿಗೆ ನೀಡಲಾಗುವ “ಬಿ.ವಿ.ಕಾರಂತ’ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಮಾಲತಿ ಸಾಗರ ಅವರ ಹೆಸರು ಈ ಪಟ್ಟಿಯಲ್ಲಿತ್ತು. ಆಯ್ಕೆ ಸಮಿತಿ ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪಟ್ಟಿಯನ್ನು ಹಸ್ತಾಂತರಿಸಿತ್ತು. ಆದರೆ ಸರ್ಕಾರ ರಂಗ ಸಾಧಕರ ಪಟ್ಟಿಯನ್ನು ತಕ್ಷಣ ಘೋಷಿಸಲೇ ಇಲ್ಲ.

ವಿಳಂಬಕ್ಕೆ ಕಾರಣಗಳೇನು?: ಫೆಬ್ರವರಿಯಲ್ಲಿ ಆಯ್ಕೆ ಸಮಿತಿ, ಪ್ರಶಸ್ತಿ ಪುರಸ್ಕೃತರ ಹೆಸರನ್ನು ಅಂತಿಮಗೊಳಿಸಿ ತಕ್ಷಣದಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದಾದ ಕೆಲ ದಿನಗಳಲ್ಲಿ ವಿವಿಧ ಚುನಾವಣೆಗಳು ಎದುರಾದವು. ಚುನಾವಣೆ ಬಳಿಕವೂ ಸರ್ಕಾರ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸುವ ಗೋಜಿಗೆ ಹೋಗಲೇ ಇಲ್ಲ.

ಆಯ್ಕೆ ಸಮಿತಿ ಬೇಸರ: ಇತ್ತೀಚೆಗಷ್ಟೇ ರಂಗವಲಯದ ವಿವಿಧ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಸರ್ಕಾರ ಘೋಷಿಸಿದೆ. ಆದರೆ ಮಾಲತಿ ಸಾಗರ ಹೆಸರು ಪಟ್ಟಿಯಲ್ಲಿರಲಿಲ್ಲ. ಮಾಲತಿ ಅವರು ಪ್ರಶಸ್ತಿ ಘೋಷಿಸುವ ಮೊದಲೇ ಮರಣ ಹೊಂದಿದ್ದರಿಂದ ಈ ಪ್ರಶಸ್ತಿಗೆ ಅವರನ್ನು ಪರಿಗಣಿಸಿಲ್ಲ ಎಂದು ಹೇಳಲಾಗುತ್ತಿದೆ.

Advertisement

ಆದರೆ ಸರ್ಕಾರದ ನಡೆಗೆ ಪ್ರಶಸ್ತಿ ಆಯ್ಕೆ ಸಮಿತಿ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥ ಶೇಖ್‌ ಮಾಸ್ತರ್‌, ಮಾಲತಿ ಅವರು ಬದುಕಿದ್ದಾಗಲೇ ಕಾರಂತ ಪ್ರಶಸ್ತಿಗೆ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ ಸರ್ಕಾರದ ವಿಳಂಬ ನೀತಿಯಿಂದಾಗಿ ಪ್ರಶಸ್ತಿ ಘೋಷಣೆ ತಡವಾಗಿದೆ. ಇದಕ್ಕೆ ಸರ್ಕಾರ ನೇರ ಹೊಣೆ ಎಂದು ಹೇಳಿದರು.

ಹವ್ಯಾಸಿ ರಂಗಭೂಮಿ ಕ್ಷೇತ್ರಕ್ಕೆ ಮಾಲತಿ ಸಾಗರ ಅವರ ಕೊಡುಗೆ ಅಪಾರ. ರಂಗತಂಡಗಳನ್ನು ಕಟ್ಟಿ ಅವರು ರಂಗಸೇವೆ ಮಾಡಿದ್ದಾರೆ. ಆ ಹಿನ್ನೆಲೆಯಲ್ಲೇ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಇದೊಂದು “ವಿಶೇಷ ಪ್ರಕರಣ’ಎಂದು ಸರ್ಕಾರ ಪರಿಗಣಿಸಿ ಮಾಲತಿ ಅವರಿಗೆ ಕಾರಂತ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ ಮನವಿ ಸಲ್ಲಿಕೆ: ಮಾಲತಿ ಅವರಿಗೆ ಬಿ.ವಿ.ಕಾರಂತ ಪ್ರಶಸ್ತಿ ನೀಡದೇ ಇರುವುದಕ್ಕೆ ರಂಗಭೂಮಿ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ನೇತೃತ್ವದ ಹಿರಿಯ ರಂಗಕರ್ಮಿಗಳ ನಿಯೋಗ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಪತ್ರವನ್ನು ಸಲ್ಲಿಸಿದೆ.

ಸರ್ಕಾರದ ವಿಳಂಬ ನೀತಿಯಿಂದಾಗಿ ಮಾಲತಿ ಅವರಿಗೆ ಪ್ರಶಸ್ತಿ ಕೈತಪ್ಪಿಹೋಗಿದೆ. ಆ ಹಿನ್ನೆಲೆಯಲ್ಲಿ ಕಾರಂತರ ಪ್ರಶಸ್ತಿಗೆ ಮಾಲತಿ ಅವರನ್ನು ಪರಿಗಣಿಸಬೇಕೆಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ಮಲ್ಲಿಕಾರ್ಜುನ ಕಾಡಕೋಳ ಆಗ್ರಹಿಸಿದ್ದಾರೆ.

ಆನಂದ ಪಟ್ಟಿದ್ದರು: ಕಾರಂತರ ಪ್ರಶಸ್ತಿಗೆ ಹೆಸರು ಅಂತಿಮಗೊಂಡಿರುವುದರಿಂದ ಅವರು ಖುಷಿಯಲ್ಲಿದ್ದರು. ನನ್ನ ಹೆಸರು ಕಾರಂತರ ಪ್ರಶಸ್ತಿಗೆ ಅಂತಿಮಗೊಂಡಿದೆಯಂತೆ ಎಂದು ಎಲ್ಲರಲ್ಲೂ ಹೇಳಿಕೊಳ್ಳುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಮಾಲತಿ ಅವರು ಏ.1ರಂದು ಇಹಲೋಕ ತ್ಯಜಿಸಿದರು. ಹೀಗಾಗಿ ಪ್ರಶಸ್ತಿ ಸ್ವೀಕರಿಸುವ ಆ ಆಸೆ ಕನಸಾಗಿಯೇ ಉಳಿಯಿತು ಎಂದು ಮಾಲತಿ ಅವರ ಪತಿ ಪುರುಷೋತ್ತಮ ತಲವಾಟ ಬೇಸರ ವ್ಯಕ್ತಪಡಿಸಿದರು.

ಹಿರಿಯ ಹವ್ಯಾಸಿ ರಂಗಭೂಮಿ ಕಲಾವಿದೆ ದಿ.ಎಸ್‌.ಮಾಲತಿ ಸಾಗರ ಅವರಿಗೆ ಕಾರಂತರ ಪ್ರಶಸ್ತಿ ನೀಡಬೇಕೆಂದು ಹಿರಿಯ ರಂಗಕರ್ಮಿಗಳು ಮನವಿ ಸಲ್ಲಿಸಿದ್ದಾರೆ. ಈ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.
-ಕೆ.ಎಂ.ಜಾನಕಿ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next