ತೆಕ್ಕಟ್ಟೆ: ಇಲ್ಲಿನ ಪ್ರಮುಖ ರಾ.ಹೆ.ಗುಡ್ಡೆಯಂಗಡಿ ಸಮೀಪದ ಚಲಿಸುತ್ತಿದ್ದ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಚರಂಡಿಗೆ ಪಲ್ಟಿಯಾಗಿ ಚಾಲಕ ಅಪಾಯದಿಂದ ಪಾರಾದ ಘಟನೆ ಜ.21ರಂದು ಸಂಭವಿಸಿದೆ.
ಜನ್ನಾಡಿ ಆಟೋ ತಂಗುದಾಣದ ಅಟೋ ಚಾಲಕ ಅಶೋಕ್ ಎನ್ನುವವರು ಇಲ್ಲಿನ ಹುಣ್ಸೆಮಕ್ಕಿಯಲ್ಲಿ ಪ್ರಯಾಣಿಕರನ್ನು ಬಿಟ್ಟು ಬಿದ್ಕಲ್ಕಟ್ಟೆ ಕಡೆಗೆ ಹಿಂದಿರುಗುತ್ತಿರುವ ಸಂದರ್ಭದಲ್ಲಿ ಏಕಾಏಕಿ ದನವೊಂದು ಅಡ್ಡಲಾಗಿ ಓಡಿ ಬಂದಿದ್ದು, ಪರಿಣಾಮ ರಿಕ್ಷಾ ಚಾಲಕ ವಾಹನ ನಿಯಂತ್ರಿಸುವ ಭರದಲ್ಲಿ ಆಯಾತಪ್ಪಿ ಚರಂಡಿಗೆ ಪಲ್ಟಿಯಾಗಿದೆ.
ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆಟೋ ಚಾಲಕ ಅಶೋಕ್ ಇತ್ತೀಚೆಗಷ್ಟೇ ಹೊಸದಾಗಿ ಅಟೋ ಖರೀದಿಸಿದ್ದರು ಎಂದು ಹೇಳಲಾಗಿದೆ.
ಸಾರ್ವಜನಿಕರ ಮಾನವೀಯ ಸ್ಪಂದನೆ : ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರಾದ ರಾಜೇಶ್ ಬಿದ್ಕಲ್ಕಟ್ಟೆ, ರಂಜಿತ್, ರಮೇಶ್, ಸಂದೀಪ್ ಸೌಡ, ಶರತ್, ಶ್ರೀಕಾಂತ್ ಸೌಡ ಹಾಗೂ ಕಿರಣ್ ಅವರು ತತ್ಕ್ಷಣವೇ ರಕ್ಷಣೆಗೆ ಧಾವಿಸಿ, ಆಟೋ ರಿಕ್ಷಾ ವನ್ನು ಮೇಲೆತ್ತುವ ಕಾರ್ಯದಲ್ಲಿ ಶ್ರಮಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.