Advertisement

ಚಿಲಿಪಿಲಿ ಶಿಬಿರದಲ್ಲಿ ಕಲಾ ಸಾಧನೆಯ ಗಟ್ಟಿ ದನಿ

06:00 AM May 25, 2018 | |

ಬಂಟ್ವಾಳದ ಪುಟ್ಟ ಊರು ಮಂಚಿಯಲ್ಲಿ  ಎರಡನೆಯ ವರ್ಷದ ಮಕ್ಕಳ ಬೇಸಿಗೆ ಶಿಬಿರವನ್ನು ವಿಭಿನ್ನವಾಗಿ ಅಷ್ಟೇ ಫ‌ಲಪ್ರದವಾಗಿ ನಡೆಸಿದೆ ಮಂಚಿಯ ಚಿಲಿಪಿಲಿ ತಂಡ. ಇದರ ಚಟುವಟಿಕೆಗಳನ್ನು ನೋಡಿದರೆ ಚಿಲಿಪಿಲಿಯಲ್ಲ, ಇದು ಗಟ್ಟಿ ದನಿ ಎಂದು ಹೇಳಬಹುದು. ಮೇ 16ರಿಂದ ಐದು ದಿನಗಳ ಕಾಲ ನಡೆದ ಈ ಶಿಬಿರಕ್ಕಾಗಿ ಲಯನ್ಸ್‌ ಕ್ಲಬ್‌ ಉಚಿತವಾಗಿ ತನ್ನ ಸಭಾಭವನವನ್ನು ಒದಗಿಸಿತ್ತು. ಸ್ಥಳೀಯ ಮಕ್ಕಳಲ್ಲದೆ ದೂರದ ಊರುಗಳಿಂದಲೂ ಇಲ್ಲಿ ಕಲೆಯೊಂದನ್ನು ಕಲಿತುಕೊಳ್ಳಲು ಬಂದಿದ್ದ ಮಕ್ಕಳಿಗೆ ನಿರಾಶೆಯಾಗಿರಲಿಲ್ಲ. ಕಾರಣ ಮಕ್ಕಳೊಂದಿಗೆ ಮಕ್ಕಳಾಗಿ ತಮ್ಮಲ್ಲಿರುವ ಕಲಾ ಕೌಶಲವನ್ನು ಅವರ ಬೆರಳುಗಳಿಗೆ ವರ್ಗಾಯಿಸಲು ಕಾದು ನಿಂತ ಪರಿಣತ ತರಬೇತುದಾರರು. ಚಿತ್ರಕಲೆ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಖಂಡಿಗ ಜಲವರ್ಣ, ಪೆನ್ಸಿಲ್‌ ಸ್ಕೆಚ್‌ ಮುಂತಾದ ಪದ್ಧತಿಗಳಲ್ಲಿ ಸರಳವಾಗಿ ಚಿತ್ರ ಬರೆಯುವ ಕ್ರಮವನ್ನು ವಿವರಿಸಿದ್ದು ಕೆಲವೇ ತಾಸುಗಳಲ್ಲಿ. ಮಕ್ಕಳು ಕಲಿತುಕೊಂಡು ಶಿಬಿರ ನಡೆಯುವ ಸಭಾಭವನದ ಗೋಡೆಯ ತುಂಬ ತಾವು ಬರೆದ ವೈವಿಧ್ಯಮಯ ಚಿತ್ರಗಳನ್ನು ತೂಗಾಡಿಸಿಸಿದರು. ಕಣ್ಣಿಗೆ ಹಬ್ಬವಾಗುವಂತಹ ಚಿತ್ರಗಳು ಮಕ್ಕಳ ಕಲ್ಪನಾ ಶಕ್ತಿಯಿಂದ ಸೃಷ್ಟಿಯಾಗಿ ನಿಂತವು.


ಪ್ರಭಾಕರ ಜೋಗಿ, ರೇಷ್ಮಾ ಕಜೆ ಇವರು ರಾಗಬದ್ಧವಾಗಿ  ಹಾಡುಗಳನ್ನು ಹೇಳಿಕೊಟ್ಟಿರುವುದು ಎಷ್ಟು ಮನದಟ್ಟಾಗಿತ್ತೆಂದರೆ ಆರು ವಯಸ್ಸಿನ ಹೆಣ್ಣುಮಗು ಸಂಸ್ಕೃತದ ಪ್ರಾರ್ಥನಾ ಗೀತೆಯನ್ನು ಸುಲಲಿತವಾಗಿ ಹಾಡಿ ತೋರಿಸಿದಳು. ವಸುಧಾ, ಹರ್ಷಿತಾ ಅವರು ಎರಡೇ ದಿನಗಳ ತರಬೇತಿ ನೀಡಿ ಹಲವು ಮಕ್ಕಳಿಂದ ಮಾಡಿಸಿದ ಸಮೂಹ ನೃತ್ಯಗಳು ಪ್ರಬುದ್ಧವಾಗಿದ್ದವು. ಒಂದೇ ತಂಡದ ಮಕ್ಕಳು ಬೇರೆ ಬೇರೆ ನೃತ್ಯಗಳನ್ನು ಅಳುಕಿಲ್ಲದೆ ಪ್ರದರ್ಶಿಸಿದರು. ಮೂಡಬಿದರೆಯಿಂದ ಬಂದಿದ್ದ ಅಕ್ಷಯ್‌ ಕಲಿಸಿದ್ದು ಹದ ಮಾಡಿದ ಜೇಡಿಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ಚಕಚಕನೆ ತಯಾರಿಸಬಲ್ಲ ಕೌಶಲವನ್ನು. ಇಲ್ಲಿ ಬಗೆಬಗೆಯ ಮಣ್ಣಿನ ವಿಗ್ರಹಗಳು, ಹಲವಾರು ಪರಿಕರಗಳನ್ನು ತಯಾರಿಸಿ ರಾಶಿ ಹಾಕಿದ ಮಕ್ಕಳಲ್ಲಿ ಕೆಲವರಾದರೂ ಈ ವರ್ಷ ಹಬ್ಬಗಳ ಸಾಲಿನಲ್ಲಿ ಗಣಪತಿಯನ್ನೋ ಶಾರದೆಯನ್ನೋ ತಯಾರಿಸಿ ಹಬ್ಬಕ್ಕೆ ಕಳೆ ನೀಡಿದರೆ ಅಚ್ಚರಿಯಿಲ್ಲ.

Advertisement

ಬಣ್ಣದ ಕಾಗದಗಳನ್ನು ಬಳಸಿ ನಾನಾ ಬಗೆಯ ಹೂ, ಮತ್ತಿತರ ವಸ್ತು ವಿಶೇಷಗಳನ್ನು ತಯಾರಿಸುವ ಕಲೆಯನ್ನೂ ಬೋಧಿಸಿದ್ದು ನಿಷ್ಣಾತ ಕೈಗಳು. ನಿವೃತ್ತ ಅಧ್ಯಾಪಕಿ ಶಾರದಾ ಎಸ್‌. ರಾವ್‌ ಮುಂಚೂಣಿಯಲ್ಲಿದ್ದರು. ಮುರಳಿಕೃಷ್ಣ, ಚೆನ್ನಕೇಶವ, ತಾರಾನಾಥ ಕೈರಂಗಳ, ಸುರೇಖಾ ಮೊದಲಾದವರು ಬೆರಳೆಣಿಕೆಯ ದಿನಗಳಲ್ಲಿ ಮಕ್ಕಳೊಳಗೆ ಹುದುಗಿದ್ದ ಕಲಾವಿದನನ್ನು ಹೊರ ತೆಗೆಯುವಲ್ಲಿ ಒಂದಿಲ್ಲೊಂದು ಕಲೆಯ ಗುಟ್ಟನ್ನು ಬಯಲಿಗಿಟ್ಟು ಗುರಿ ತಲುಪಿಸುವಲ್ಲಿ ಸಮರ್ಥರಾಗಿದ್ದರು. ಬೆಳಗ್ಗೆ ಒಂಭತ್ತರಿಂದ ಸಂಜೆ ನಾಲ್ಕೂವರೆಯ ತನಕ ನಡೆಯುತ್ತಿದ್ದ ಕಾರ್ಯಕ್ರಮವು ಯೋಗಾಭ್ಯಾಸದಿಂದಲೇ ಆರಂಭವಾಗುತ್ತಿದ್ದುದು ಯೋಗದಲ್ಲಿಯೂ ಮಕ್ಕಳಿಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ಸು ಪಡೆಯಿತು ಅನಿಸಿತು.    

 ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next