Advertisement

ರಂಗಕಲಾ ವಾರಿಧಿ ಕೆ.ವಿ. ಅಕ್ಷರ

11:20 AM Dec 29, 2017 | Team Udayavani |

ಉಡುಪಿಯ ರಂಗಭೂಮಿ ನಾಟಕ ಸಂಸ್ಥೆಯು ಕಳೆದ 52 ವರ್ಷಗಳಿಂದ ಎಡೆಬಿಡದೆ ನಾನಾ ಪ್ರಕಾರದ ರಂಗಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಪ್ರತೀವರ್ಷ ಕನ್ನಡ ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿರುವ, ರಂಗಕ್ಕೆ ಅಪಾರವಾದ ಕೊಡುಗೆ ನೀಡಿರುವ ಶ್ರೇಷ್ಠ ಕಲಾವಿದರಿಗೆ ರಂಗಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬಂದಿರುವುದು ಈ ಸಂಸ್ಥೆಗೆ ನವಿಲುಗರಿ ಮೂಡಿಸಿರುವ ಸಂಗತಿ.  ಈ ಬಾರಿಯ “ರಂಗಕಲಾ ವಾರಿಧಿ’ ಪ್ರಶಸ್ತಿಗೆ ಖ್ಯಾತ ರಂಗ ನಿರ್ದೇಶಕ, ನೀನಾಸಂ ಸಂಸ್ಥೆಯ ಕೆ. ವಿ. ಅಕ್ಷರ ಅವರು ಪಾತ್ರರಾಗಿರುವುದು ಅವರ ಅಭಿಮಾನಿಗಳಿಗೆ ತುಂಬ ಸಂತಸವನ್ನು ಉಂಟುಮಾಡಿದೆ. 2018ರ ಜನವರಿ 7ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ “ರಂಗಕಲಾ ವಾರಿಧಿ’ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

Advertisement

ಅಕ್ಷರ ಅವರು 1960ರ ಎ.24ರಂದು ಜನಿಸಿದರು. ತಂದೆ ಕೆ.ವಿ. ಸುಬ್ಬಣ್ಣ, ತಾಯಿ ಕೆ.ವಿ. ಶೈಲಜಾ. ಸುಬ್ಬಣ್ಣನವರು ಸಾಗರ ತಾಲೂಕಿನ ಹೆಗ್ಗೊಡಿನಂತಹ ಚಿಕ್ಕ ಹಳ್ಳಿಯಲ್ಲಿ ನೀಲಕಂಠೇಶ್ವರ ನಾಟಕ ಸಂಘ ಎಂಬ ಥಿಯೇಟರನ್ನು ಕಟ್ಟಿ ಅದರ ಅರಳುಗಂಧವನ್ನು ನಾಟಕ ತಂಗಾಳಿಯು ಎಲ್ಲೆಡೆ ಪಸರಿಸುವಂತೆ ಮಾಡಿದ ಮಹಾಸಾಹಸಿ. ಜಗತ್ತಿನಲ್ಲಿರುವ ಸುಸಜ್ಜಿತ ಮತ್ತು ಕಲಾತ್ಮಕವಾದ ಕೆಲವೇ ಕೆಲವು ಹಳ್ಳಿ ಥಿಯೇಟರುಗಳಲ್ಲಿ ನೀನಾಸಂ ಕೂಡ ಒಂದು. ತಂದೆಯ ಅಕ್ಕರೆ, ಸಂಸ್ಕೃತಿ, ರಂಗಸಂಸ್ಕಾರದ ನೆರಳಡಿ ಬೆಳೆದ ಕೆ.ವಿ. ಅಕ್ಷರ ಅವರು ಓರ್ವ ಅಪರೂಪದ ಅಪ್ರತಿಮ ಸಮಗ್ರ ನಿರ್ದೇಶಕ. ಸಾಮಾನ್ಯವಾಗಿ ನಾಟಕ ನಿರ್ದೇಶಕರು ಒಂದು ನಾಟಕವನ್ನು ಹೆಣೆಯಬೇಕಾದರೆ ಸಾಹಿತಿ, ಸಂಗೀತ ನಿರ್ದೇಶಕ, ಕೊರಿಯೊಗ್ರಫ‌ರ್‌ – ಹೀಗೆ ಯಾರನ್ನಾದರೂ ಒಬ್ಬರನ್ನು ಅವಲಂಬಿಸ ಲೇಬೇಕಾಗುತ್ತದೆ. ಆದರೆ ಇವರ ವಿಷಯದಲ್ಲಿ ಹೀಗಿಲ್ಲ. ಸಾಹಿತ್ಯ, ಸಂಗೀತ, ಚಿತ್ರ, ರಂಗಪರಿಕರ, ವಿನ್ಯಾಸ, ಕೊರಿಯೋಗ್ರಫಿ… ಹೀಗೆ ನಾಟಕದ ಸಮಗ್ರ ಶಿಲ್ಪವನ್ನು ಸ್ವತಃ ಕಲಾತ್ಮಕವಾಗಿ ಕಡೆದು ನಿಲ್ಲಿಸಬಲ್ಲ ಅದ್ಭುತ ಪ್ರತಿಭಾವಂತ. ನೀನಾಸಂ ಥಿಯೇಟರಿಗಾಗಿ ಹಾಗೂ ತಿರುಗಾಟಕ್ಕಾಗಿ ಗಿರೀಶ್‌ ಕಾರ್ನಾಡರ “ತುಘಲಕ್‌’, ಚಂದ್ರಶೇಖರ ಕಂಬಾರರ ಕಾದಂಬರಿಯನ್ನು ಆಧರಿಸಿದ “ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ’, “ಕ್ರಮವಿಕ್ರಮ’, “ಸೇತುಬಂಧನ’, “ಸ್ವಪ್ನವಾಸವದತ್ತ’, “ಮಾಲತಿ ಮಾಧವ’… ಹೀಗೆ 50ಕ್ಕೂ ಹೆಚ್ಚು ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ, ಐದು ನಾಟಕ ಕೃತಿಗಳನ್ನು ಬರೆದಿದ್ದಾರೆ. 

ಅಕ್ಷರ ಅವರು ಅತ್ಯುತ್ತಮವಾದ ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್‌ ನಾಟಕಗಳನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿ ನಿರ್ದೇಶಿಸಿದ್ದಾರೆ. ಕಳೆದ ವರ್ಷ (2016) ಸಂಸ್ಕೃತದಿಂದ ಕನ್ನಡಕ್ಕೆ ಅವರೇ ಅನುವಾದಿಸಿ, ನಿರ್ದೇಶಿಸಿದ ಭವಭೂತಿಯ “ಮಾಲತಿ ಮಾಧವ’ ಎಂಬ ನಾಟಕವನ್ನು ನೋಡಿ ನಾಟಕಪ್ರಿಯರು ಬೆಕ್ಕಸ ಬೆರಗಾಗಿದ್ದಾರೆ. ಅದರಲ್ಲಿ ಶಾಂತನದಿಯಂತೆ ಹರಿಯುವ ಭಾಷೆಯ ಲಯಬದ್ಧ ಗೇಯ ಕಾವ್ಯಾತ್ಮಕ ಸೊಗಡನ್ನು ಕೇಳಿದ ಕಿವಿಗಳು ಮರುಳಾಗಲೇಬೇಕು. ಮಾಲತಿ- ಮಾಧವರ ಪ್ರೇಮ ಪ್ರಸಂಗದಲ್ಲಿ ಮಧ್ಯವರ್ತಿಯಾಗುವ ಬೌದ್ಧ ಭಿಕ್ಷುವೊಬ್ಬಳ ಪಾತ್ರದ ಜೀವಂತಿಕೆ ಕಂಡವರನ್ನೆಲ್ಲ ಮಂತ್ರಮುಗ್ಧರನ್ನಾಗಿಸಿತ್ತು. ಆ ಪಾತ್ರವನ್ನು ಮಾಡಿದವರು ನಕ್ಷತ್ರ ಕಂಗಳಲ್ಲಿ ಬೆಳಕು ಭಾವಗಳನ್ನು ಸೂಸುತ್ತ, ಜೇನಿನಲ್ಲಿ ಅದ್ದಿದಂತಹ ಮಧುರ ಶಾಲೀನ ಕೋಮಲವಾದ ಜೀರ್‌ ಝೇಂಕರಿಸುವ ಶಾರೀರದ ದಿವ್ಯಾ ಹೆಗಡೆ. ಅರಳು ಸಿಡಿದಂತೆ ಮಾತಾಡುತ್ತ ನಡುನಡುವೆ ಉತ್ತರಾದಿಯ ಆಲಾಪ, ತಾನ್‌, ಮೀಂಡ್‌… ಬೆರೆತ ರಂಗಗೀತೆಯನ್ನು ಹಾಡುತ್ತ ರಾಗ ಸಮ್ಮೊàಹನಗೊಳಿಸಬಲ್ಲ ಇವರ ಆ ಪಾತ್ರದ ಜೀವಂತಿಕೆಯು ಕಂಡವರ ಮನದಲ್ಲಿ ಅಚ್ಚಳಿಯದೆ ಉಳಿಯಬಲ್ಲುದು. ಇವರು ಅಕ್ಷರ ಅವರ ಪತ್ನಿ. ಮಗ ಶಿಶಿರ, ಸೊಸೆ ನೇಹಾ ಹಾಗೂ ಮೊಮ್ಮಗ ಆದ್ಯರನ್ನೊಳಗೊಂಡ ಅಕ್ಷರರ ಮುದ್ದಾದ ಕುಟುಂಬವು ಹೆಗ್ಗೊàಡಿನ ಬಳಿಯ ಮುಂಡಿಗೆಸರದಲ್ಲಿ ಬೇರೂರಿದೆ. 

ತಮ್ಮ ಅಕ್ಷರ ಪ್ರಕಾಶನದ ಮೂಲಕ ರಂಗಕ್ಕೆ ಸಂಬಂಧ ಪಟ್ಟ 30ಕ್ಕೂ ಹೆಚ್ಚು ಕೃತಿಗಳನ್ನು ಬೆಳಕಿಗೆ ತಂದಿದ್ದಾರೆ. ಇವರೇ ಬರೆದಿರುವ “ರಂಗ ಪ್ರಪಂಚ’, “ಸಹ್ಯಾದ್ರಿ ಖಾಂಡ’ ಹಾಗೂ “ಮಾವಿನಮರದಲ್ಲಿ ಬಾಳೆಯಹಣ್ಣು’ ಎಂಬ ಮೂರು ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಗೆ ಪಾತ್ರವಾಗಿವೆ. ಜಗತ್ತಿನ ರಂಗಭೂಮಿಯಲ್ಲೇ ಪ್ರಾಚೀನವೆನಿಸಿರುವ ಗ್ರೀಕ್‌ ರಂಗಭೂಮಿಯಿಂದ ಆರಂಭಿಸಿ ಇಂದಿನ ಆಧುನಿಕ ರಂಗಭೂಮಿಯವರೆಗೂ ಕುಳಿತಲ್ಲಿಂದಲೇ ಪರ್ಯಟನೆ ಮಾಡಿಸುವ “ರಂಗ ಪ್ರಪಂಚ’ ಕೃತಿಯು ಜಾಗತಿಕ ರಂಗಭೂಮಿಗೆ ಒಂದು ಅಪರೂಪದ ಕೊಡುಗೆ. ರಂಗಕ್ಕೆ ಸಂಬಂಧಿಸಿದಂತೆ ಚಾರಿತ್ರಿಕ, ಸಾಹಿತ್ಯಕ, ಸಾಂಸ್ಕೃತಿಕ ಅಲೆಗಳನ್ನು ತನ್ನೊಡಲಲ್ಲಿ ಹಿಡಿದಿಟ್ಟಿರುವ ಈ ಕೃತಿಯು ಸಹೃದಯಿ ರಂಗಪ್ರೇಮಿಗಳ ಪ್ರೀತಿ ಗಳಿಸಿದೆ. 

ಅಕ್ಷರ ಅವರು ಸಾಗರದ ಎಲ್‌.ಬಿ. ಹಾಗೂ ಎಸ್‌.ಬಿ.ಎಸ್‌. ಕಾಲೇಜುಗಳಿಂದ ಇಂಗ್ಲಿಷ್‌ ಮತ್ತು ಕನ್ನಡ ಸಾಹಿತ್ಯದಲ್ಲಿ ಬಿ.ಎ. ಪದವಿ, ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ರಂಗ ತರಬೇತಿ ಪಡೆದಿದ್ದಾರೆ. ಅಲ್ಲದೆ ಬ್ರಿಟಿಷ್‌ ಕೌನ್ಸಿಲ್‌ ಸ್ಕಾಲರ್‌ಶಿಪ್‌ ಪಡೆದು ಇಂಗ್ಲೆಂಡಿನ ಯುನಿವರ್ಸಿಟಿ ಆಫ್ ಲೀಡ್ಸ್‌ನಲ್ಲಿ ರಂಗಕಲೆಯ ಕುರಿತು ಅಧ್ಯಯನ ಮಾಡಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ನೀನಾಸಂ ಥಿಯೇಟರಿನಲ್ಲಿ ರಂಗ ಶಿಕ್ಷಕರಾಗಿ, ರಂಗನಿರ್ದೇಶಕರಾಗಿ, ಆಡಳಿತಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಪುಣೆ, ದಾವಣಗೆರೆ, ಮಂಚಿಕೇರಿ, ಜೋಗ್‌ ಫಾಲ್ಸ್‌, ಮುಂಬೈ, ದಿಲ್ಲಿ… ಮುಂತಾದ ಕಡೆ ರಂಗ ವಿದ್ಯಾರ್ಥಿಗಳಿಗಾಗಿ ರಂಗಶಿಬಿರಗಳನ್ನು ನಡೆಸಿದ್ದಾರೆ, ರಂಗ ಉಪನ್ಯಾಸಗಳನ್ನು ನೀಡಿದ್ದಾರೆ.  

Advertisement

ಊರ ಸುತ್ತಲ ಯುವಕರಿಗೆ ತಂಡ ಕಟ್ಟಿಕೊಂಡು ಅವರದ್ದೇ ಕಲ್ಪನೆಯ ನಾಟಕಗಳನ್ನು ಹೆಣೆಯಲು; ನಾಟಕ, ಯಕ್ಷಗಾನ ಮಾತ್ರವಲ್ಲ, ಕಾಲದ ಹರಿವಿನಲ್ಲಿ ಅಳಿವಿನಂಚಿಗೆ ಸರಿಯುತ್ತಿರುವ ಸಣ್ಣ ಪುಟ್ಟ ಸ್ಥಳೀಯ ಜಾನಪದ ಕಲಾಪ್ರಕಾರಗಳನ್ನು ಜೀವಂತವಾಗಿರಿಸಲು “ಊರುಮನೆ ಉತ್ಸವ’ ಎಂಬ ಸ್ಥಳೀಯ ಉತ್ಸವವನ್ನು ಜಾತ್ರೆಯಂತೆ ನಡೆಸಿಕೊಂಡು ಬಂದಿರುವುದು ಅವರ ಕಲಾಪ್ರೀತಿಗೊಂದು ನಿದರ್ಶನ. ಬಹುಪಾಲು ಕಲಾವಿದರು ಪ್ರಚಾರ, ಜನಪ್ರಿಯತೆಯೆಂಬ ಬಿಸಿಲುಗುದುರೆಯ ಬೆನ್ನು ಹತ್ತಿ ಓಡುತ್ತಿರುವ ಈ ಆಧುನಿಕ ಸಂದರ್ಭದಲ್ಲಿ ಸಿನೆಮಾ, ಧಾರಾವಾಹಿಗಳಲ್ಲಿ ಅವಕಾಶಗಳು ಕೈಬೀಸಿ ಕರೆದರೂ ಹೋಗದೆ ನಾಟಕಗಳನ್ನೇ ಮಾಡಿಸುತ್ತ ರಂಗಭೂಮಿಯ ತೂಕವನ್ನು ಹೆಚ್ಚಿಸುತ್ತಿರುವ ಅಕ್ಷರ ಅವರ ಉನ್ನತವಾದ ಸರಳ ವ್ಯಕ್ತಿತ್ವವು ಯುವ ಕಲಾವಿದರಿಗೆ ಮಾದರಿ. 

ಉಡುಪಿಯ ರಂಗಭೂಮಿ ನಾಟಕ ಸಂಸ್ಥೆಯು ಕೊಡಮಾಡುವ ರಂಗಕಲಾ ವಾರಿಧಿ ಪ್ರಶಸ್ತಿ ಈ ವರ್ಷ ಹೆಸರಾಂತ ರಂಗಕರ್ಮಿ ಕೆ. ವಿ. ಅಕ್ಷರ ಅವರಿಗೆ ಸಲ್ಲುತ್ತಿದೆ. ಜನವರಿ 7ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ನಡೆಯುತ್ತದೆ.
 
 ಡಾ| ಕಾತ್ಯಾಯಿನಿ ಕುಂಜಿಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next