Advertisement

ಬದುಕುವ ಕಲೆ ಕಲಿಸಿದೆ ವೀರೇಶ್ವರ ಪುಣ್ಯಾಶ್ರಮ

01:36 PM Jun 17, 2022 | Team Udayavani |

ಗದಗ: ಬಹಳಷ್ಟು ಜನರು ಬೆಳಕನ್ನು ಪ್ರೀತಿ ಮಾಡುತ್ತಾರೆ. ಆದರೆ, ಉಭಯ ಶ್ರೀಗಳು ಕತ್ತಲನ್ನು ಪ್ರೀತಿ ಮಾಡಿ ಅಂಧ-ಅನಾಥ ಮಕ್ಕಳಿಗೆ ಬೆಳಕು ನೀಡಿದ್ದಾರೆ ಎಂದು ಉಜ್ಜಯಿನಿ ಪೀಠದ ಜ|ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಶ್ರೀಗಳು ಹೇಳಿದರು.

Advertisement

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳವರ 78ನೇ ಪುಣ್ಯಸ್ಮರಣೋತ್ಸವ, ಪದ್ಮಭೂಷಣ ಡಾ|ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 12ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ತ್ಯಾಗಿ, ಯೋಗಿ ಹಾಗೂ ಭೋಗಿಗಳಿದ್ದರೂ ಜನರು ತ್ಯಾಗಿ, ಯೋಗಿಗಳನ್ನು ಮರೆತಿಲ್ಲ. ಆದರೆ, ಭೋಗಿಗಳನ್ನು ಮರೆತಿದ್ದಾರೆ. ಭಗವಂತ ನೀಡಿದ ಕಷ್ಟಗಳಿಗೆ ಸಾಕಷ್ಟು ಜನರು ನರಳುತ್ತಾರೆ. ಉಭಯ ಗುರುಗಳಾದ ಪಂಡಿತ ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಕವಿ ಗವಾಯಿಗಳು ತಮ್ಮ ಅಂಧತ್ವವನ್ನು ಮರೆತು ನಕಾರಾತ್ಮಕವಾದ ಜೀವನವನ್ನು ಸಕಾರಾತ್ಮಕವಾಗಿ ಬದಲಾಯಿಸಿದ ಧೀಮಂತ ಉಭಯ ಗುರುಗಳಾಗಿದ್ದಾರೆ ಎಂದರು.

ಉಭಯ ಗುರುಗಳು ಅಂಗ ಪೂಜೆ ಮಾಡದೆ, ಲಿಂಗ, ಸಂಗೀತ, ಕಲೆಗಳನ್ನು ಪೂಜೆ ಮಾಡಿ ಅಂಧ-ಅನಾಥರಿಗೆ ದಾರಿ ತೋರಿಸುವ ಕೆಲಸ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಪಂಚಾಕ್ಷರ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ, ನೂತನವಾಗಿ ನಿರ್ಮಾಣಗೊಂಡ ಗಡ್ಡಿ ತೇರಿನ ರಥೋತ್ಸವ ಜರುಗುತ್ತಿರುವುದು ಸಂತಸ ತಂದಿದೆ. ಉಭಯ ಗುರುಗಳ ಕನಸನ್ನು ಕಲ್ಲಯ್ಯಜ್ಜನವರು ನನಸಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸೂಡಿ ಜುಕ್ತಿಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಯಲಬುರ್ಗಾದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಟ್ನೂರ ಬೃಹನ್ಮಠದ ಪಂಚಾಕ್ಷರ ಶಿವಾಚಾರ್ಯರು, ಮೈನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು, ಸವಣೂರಿನ ಚನ್ನಬಸವ ಶ್ರೀಗಳು, ಶಿಗ್ಗಾವಿಯ ಸಂಗನಬಸವ ಶ್ರೀಗಳು, ಬೈಲಹೊಂಗಲದ ಡಾ| ಮಹಾಂತಯ್ಯ ಸ್ವಾಮಿಗಳು ಆರಾದ್ರಿಮಠ, ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

Advertisement

ಪಂ| ರಾಜಗುರು ಗುರುಸ್ವಾಮಿ ಕಲಕೇರಿ, ಚಂದ್ರು ಬಾಳೀಹಳ್ಳಿಮಠ, ವೀರೇಶ ಕೂಗು, ಡಾ| ಸಂಗಮೇಶ್‌ ಕೊಳ್ಳಿಯವರ, ನಿಂಗಪ್ಪ ಕೆಂಗಾರ, ವಸಂತಗೌಡ್ರು ಪೋಲಿಸ್‌ಪಾಟೀಲ, ಅನೀಲ ಅಬ್ಬಿಗೇರಿ, ಪ್ರಶಾಂತ ಬಿ. ಶಾಬಾದಿಮಠ, ಜಯಕುಮಾರ ಹಿರೇಮಠ, ವಿ.ಎಸ್‌. ಮಾಳೇಕೊಪ್ಪಮಠ, ಪಿ.ಸಿ.ಹಿರೇಮಠ, ರಾಜಣ್ಣ ಹಂಗರಿಗಿ, ನಾಗಪ್ಪ ಚಿನಗೂಡಿ, ಪ್ರಶಾಂತ ನಾಯ್ಕರ ಅವರನ್ನು ಸನ್ಮಾನಿಸಲಾಯಿತು.

ಶ್ರೀಮಠದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರೀಜಿ ಹೆಡಿಗ್ಗೊಂಡ ಉಪಸ್ಥಿತರಿದ್ದರು. ಇದೇ ವೇಳೆ ಗದುಗಿನ ಗುರುವರ್ಯ ವಿಡಿಯೋ ಸಿಡಿ ಹಾಗೂ ಮತ್ತೂಮ್ಮೆ ಹುಟ್ಟಿ ಬಾ ಗುರು ಪುಟ್ಟರಾಜ ಸಿಡಿ ಬಿಡುಗಡೆ ಮಾಡಲಾಯಿತು.

ಡಾ|ಪಂ|ಪುಟ್ಟರಾಜ ಕವಿಗವಾಯಿಗಳ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಮಲ್ಲಯ್ಯಸ್ವಾಮಿ ಹಿರೇಮಠ ಪ್ರಾರ್ಥಿಸಿ, ನಾಗಯ್ಯಶಾಸ್ತ್ರಿ ವಡಗೇರ ನಿರೂಪಿಸಿ, ವಿರೇಶ ಕೂಗು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next