Advertisement

ವೃದ್ಧೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದವರ ಬಂಧನ

10:21 AM Jul 30, 2018 | Team Udayavani |

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಹೊರವಲಯದಲ್ಲಿ 65 ವರ್ಷದ ವೃದ್ಧೆ ಮೇಲೆ ಜು.26ರಂದು ಸಂಜೆ ಅತ್ಯಾಚಾರ ನಡೆಸಿ, ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು 48 ಗಂಟೆಯಲ್ಲಿ ಮಾಡಬೂಳ ಪೊಲೀಸರು ಬಂಧಿಸಿದ್ದಾರೆ. ಸೇಡಂ ತಾಲೂಕಿನ ಸೂರವಾರ್‌ ಗ್ರಾಮದ ಮಲ್ಲಪ್ಪ ಈಶ್ವರಪ್ಪ ತಳವಾರ (26), ದಂಡೋತಿ ಗ್ರಾಮದ ಗಜೇಂದ್ರ ಶಿವಶರಣಪ್ಪ ಬಲಮದೇವರ (24) ಬಂಧಿತ ಆರೋಪಿಗಳು.

Advertisement

ಇಬ್ಬರು ಗುರುವಾರ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿ ಕಂಠ ಪೂರ್ತಿ ಮದ್ಯ ಕುಡಿದಿದ್ದರು. ಇದೇ ಹೊತ್ತಿನಲ್ಲಿ ಹೊಲದ ಕೆಲಸ ಮುಗಿಸಿ ತಲೆ ಮೇಲೆ ಉರುವಲು ಕಟ್ಟಿಗೆಯ ಸಣ್ಣ ಮೂಟೆ ಹೊತ್ತುಕೊಂಡು ಮರಳಿ ಮನೆಗೆ ಬರುತ್ತಿದ್ದ 65ರ ವೃದ್ಧೆಯನ್ನು ಎಳೆದಾಡಿ ರಸ್ತೆಯ ಪಕ್ಕದಲ್ಲಿನ ತೆಗ್ಗಿನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ಮಲ್ಲಪ್ಪ ಈಶ್ವರಪ್ಪ ತಳವಾರ ಶುಕ್ರವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ಕೊಳವೆ ಬಾವಿ ಹತ್ತಿರ ರಕ್ತಸಿಕ್ತವಾದ ಮತ್ತು ಕೆಸರು ತಗುಲಿದ ಬಟ್ಟೆ ತೊಳೆದುಕೊಳ್ಳುತ್ತಿರುವುದನ್ನು ಗ್ರಾಮದ ಯುವಕರು ನೋಡಿದ್ದರು. ನಂತರ ಎಲ್ಲಿ ನನ್ನನ್ನು ಹಿಡಿಯುವರೋ ಎನ್ನುವ ಭಯದಿಂದ ಓಡಲು ಶುರು ಮಾಡಿದ್ದ.

ಈತನೇ ಕೊಲೆ ಮಾಡಿರಬೇಕು ಎಂದು ಶಂಕಿಸಿ ಯುವಕರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದರು. ಕೂಡಲೇ ಅಲ್ಲಿಂದ ಓಡಿ ಹೋದ ಆರೋಪಿ ಗ್ರಾಮದ ಕಾಗಿಣಾ ನದಿಯ ಹುಲ್ಲಿನಲ್ಲಿ ಅಡಗಿ ಕುಳಿತುಕೊಂಡಿದ್ದ. ಸ್ಥಳಕ್ಕೆ ಆಗಮಿಸಿದ ಮಾಡಬೂಳ ಪಿಎಸ್‌ಐ ಹುಸೇನ್‌ ಬಾಷಾ ಕೂಡಲೇ ಮಳಖೇಡ ಗ್ರಾಮದ ಹಂದಿ ಹಿಡಿಯುವರನ್ನು ಕರೆಯಿಸಿ ಸಿಬ್ಬಂದಿಯೊಂದಿಗೆ ಸಂಜೆವರೆಗೆ ಹುಡುಕಾಟ ನಡೆಸಿದ್ದರು. ಗ್ರಾಮದ ನೂರಾರು ಜನರು ಆರೋಪಿಯ ಹುಡುಕಾಟಕ್ಕೆ ಪೊಲೀಸರಿಗೆ ಸಾಥ್‌ ನೀಡಿದರು.

ಪೊಲೀಸರು ಸಿಡಿ ಮದ್ದು ಸಿಡಿಸಿ ಕಾರ್ಯಚರಣೆ ನಡೆಸಿದರು. ಆದರೆ, ನದಿಯಲ್ಲಿ ದಟ್ಟವಾಗಿ ಬೆಳೆದ ಜೇಕು ಮತ್ತು ಹುಲ್ಲಿನಲ್ಲಿ ಅಡಗಿ ಕುಳಿತ ಆರೋಪಿ ರಾತ್ರಿ ಹೊತ್ತಿನಲ್ಲಿ ಮಳಖೇಡ ಸಮೀಪದ ಬ್ರಿಡ್ಜ್ ಮೇಲಿಂದ ಸೇಡಂ ತಾಲೂಕಿನ ಸೂರವಾರ್‌ ಗ್ರಾಮಕ್ಕೆ ಹೋಗಿದ್ದ. ಆರೋಪಿ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಬಂಧಿಸಿದರು. ಇನ್ನೊಬ್ಬ ಆರೋಪಿ ಗಜೇಂದ್ರ ದಂಡೋತಿ ಗ್ರಾಮದಲ್ಲೇ ಸೆರೆಸಿಕ್ಕಿದ್ದಾನೆ.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ, ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಶಹಾಬಾದ ಡಿವೈಎಸ್ಪಿ ಕೆ. ಬಸವರಾಜ ಮಾರ್ಗದರ್ಶನದಲ್ಲಿ ಸಿಪಿಐ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಡಿ.ಬಿ ಕಟ್ಟಿಮನಿ ನೇತೃತ್ವದಲ್ಲಿ ಮಾಡಬೂಳ ಪಿಎಸ್‌ಐ ಹುಸೇನ್‌ ಬಾಷಾ ಅವರು ಸಿಬ್ಬಂದಿಗಳಾದ ಜಗನ್ನಾಥ ಪಾಟೀಲ, ಬಸಲಿಂಗಪ್ಪ, ರೌಫ್‌, ಮಂಜುನಾಥ ಕಾಶಿ, ಮಹ್ಮದ್‌ ಗೌಸ್‌, ವಿಠ್ಠಲ್‌ ಆರೋಪಿಗಳನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಡಬೂಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಿ ಪರಾಯಾಗಿದ್ದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಡಿದ ಅಮಲಿನಲ್ಲಿ ಅತ್ಯಾಚಾರವೆಸಗಿ ವೃದ್ಧೆಯನ್ನು ಕೊಲೆ ಮಾಡಿದ್ದಾರೆ.
 ಹುಸೇನ್‌ ಬಾಷಾ ಮಾಡಬೂಳ, ಪಿಎಸ್‌ಐ

ಗ್ರಾಮದ ಹೊರವಲಯದಲ್ಲಿ ಹೊಲದ ಕೆಲಸ ಮುಗಿಸಿಕೊಂಡು ಬರುತ್ತಿದ್ದ 65ರ ವೃದ್ಧೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ವಿಷಯ ತಿಳಿದು ಗ್ರಾಮದಿಂದ ಹೊಲಗಳಿಗೆ ಹೋಗುವ ಜನರು ಭಯಭೀತರಾಗಿದ್ದರು. ಪೊಲೀಸರು ಆರೋಪಿಗಳನ್ನು ಹಿಡಿದಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕು.
 ಅಬ್ದುಲ್‌ ಹಮೀದ್‌ ಯಾದಗಿರಿ, ದಂಡೋತಿ ಗ್ರಾಮದ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next