Advertisement

ಹಿಂದುಳಿದವರ ಅಭಿವೃದ್ಧಿಗೆ ಅರಸು ಶ್ರಮಿಸಿದ್ದರು

09:11 PM Aug 10, 2019 | Lakshmi GovindaRaj |

ಅರಸೀಕೆರೆ: ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎನ್ನುವ ಧ್ಯೇಯದಲ್ಲಿ ನಂಬಿಕೆಯಿಟ್ಟು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್‌ ಅರಸ್‌ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಬಣ್ಣಿಸಿದರು.

Advertisement

ನಗರದ ಯಾದಾಪುರ ರಸ್ತೆಯಲ್ಲಿರುವ ಜೇನುಕಲ್‌ ನಗರದಲ್ಲಿನ ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆವತಿಯಿಂದ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿನ ಡಿ.ದೇವರಾಜು ಅರಸು ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಭೂ ಸುಧಾರಣಾ ಕಾಯ್ದೆ ಜಾರಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ್‌ ಅರಸ್‌ ಅವರು ತಮ್ಮ ಕ್ರಾಂತಿಕಾರಕ ನಿರ್ಧಾರದಿಂದ ಉಳುವವನೇ ಭೂಮಿಯ ಒಡೆಯ ಎಂಬ ಭೂಸುಧಾರಣೆ ಕಾಯ್ದೆ ಜಾರಿಗೆ ತಂದು ಸಾವಿರಾರು ಎಕರೆ ಜಮೀನನ್ನು ಭೂ ಮಾಲೀಕರಿಂದ ಕಿತ್ತು ಭೂಮಿ ಉಳುತ್ತಿದ್ದ ರೈತರಿಗೆ ಹಂಚಿಕೆ ಮಾಡಿದರು ಎಂದು ಹೇಳಿದರು.

ಜೀತಪದ್ದತಿಯನ್ನು ಬುಡ ಸಮೇತ ಕಿತ್ತು ಹಾಕುವ ಮೂಲಕ ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎನ್ನುವ ಧ್ಯೇಯದಲ್ಲಿ ನಂಬಿಕೆಯಿಟ್ಟು, ಸಮಾಜದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ವಂಚಿತರಾಗಿ ಸೊರಗುತ್ತಿದ್ದ 33 ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನದಲ್ಲಿ ಹಿಂದುಳಿದ ವರ್ಗದ ಆಯೋಗವನ್ನು ರಚಿಸಿ ಆ ಮೂಲಕ ಅನೇಕ ಮಹತ್ವ ಪೂರ್ಣ ಕಾರ್ಯಕ್ರವನ್ನು ಜಾರಿಗೆ ತಂತ ಕೀರ್ತಿ ಡಿ.ದೇವರಾಜ್‌ ಅರಸ್‌ರವರಿಗೆ ಸಲ್ಲಬೇಕೆಂದರು ಎಂದರು.

ಯಾವುದೇ ಒಂದು ಸಮುದಾಯ ಪ್ರಗತಿಯ ಪಥದತ್ತ ಸಾಗಲು ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದನ್ನು ಮನಗಂಡ ಅವರು ಹಿಂದುಳಿದ ವರ್ಗಗಳ ಶಿಕ್ಷಣಕ್ಕಾಗಿ ಹಲವು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶೈಕ್ಷಣಿಕವಾಗಿ ಮುಂದುವರಿಯಲು ಮಹತ್ತರವಾದ ಕೊಡುಗೆ ನೀಡಿದ್ದರು. ದಲಿತ ಮತ್ತು ಹಿಂದುಳಿದ ವರ್ಗಗಳ ನೇತಾರರಾಗಿ ಹೊರ ಹೊಮ್ಮಿದರು ಎಂದು ಹೇಳಿದರು.

Advertisement

ಶೈಕ್ಷಣಿಕ ಕ್ಷೇತ್ರಕ್ಕೆ ಆದ್ಯತೆ: ತಾವು ಕ್ಷೇತ್ರದ ಶಾಸಕರಾಗಿ ಅಧಿಕಾರಕ್ಕೆ ಬಂದ ಮೇಲೆ ಬಡವರು ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಕ್ಷೇತ್ರದ ನಾಲ್ಕು ದಿಕ್ಕಿನ ಗಡಿಭಾಗ ದಲ್ಲಿ ಮೊರಾರ್ಜಿ ವಸತಿ ಶಾಲೆಗಳನ್ನ ಪ್ರಾರಂಭಿಸಿದ್ದೇನೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜಾತಿ ಜನಾಂಗಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಪ್ರೋತ್ಸಾಹ ಗ್ರಾಮೀಣ ಭಾಗದಲ್ಲಿ ನೂರಾರು ಸಮುದಾಯ ಭವನಗಳನ್ನು ವಿವಿಧ ಯೋಜನೆಗಳ ಮೂಲಕ ನಿರ್ಮಿಸಲಾಗಿದೆ.

ಅಂತೆಯೇ ಇಂದು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಕೋಟಿ ರೂ ವೆಚ್ಚದಲ್ಲಿ ಡಿ.ದೇವರಾಜು ಅರಸು ಭವನ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಲಾಗಿದೆ, ಇಲ್ಲಿನ ಸಭೆ ಸಮಾರಂಭಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲು ಸಹಕಾರಿಯಾಗಿದೆ ಎಂದು ಸಂತಸಪಟ್ಟರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮೋಹನ್‌ಕುಮಾರ, ದುಮ್ಮೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್‌, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರ್ಣಾಧಿಕಾರಿ ನಾರಾಯಣಪ್ಪ, ಕರ್ನಾಟಕ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಎಂಜಿನಿಯರ್‌ಗಳಾದ ಗಂಗಾಧರ ಮದನ್‌ಶಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next