Advertisement

ಅವನತಿಯತ್ತ ಪ್ರಾಚೀನ ಕಲ್ಮೇಶ್ವರ ದೇವಾಲಯ

07:07 AM Mar 11, 2019 | |

ಹುಮನಾಬಾದ: ಹೊಯ್ಸಳ ಶಿಲ್ಪಗಳಿಗೆ ಮಾದರಿಯಾದ ಮದನಿಕೆಯರ ಕೆತ್ತನೆ ಇರುವ ಜಲಸಂಗವಿ ಗ್ರಾಮದ ಕಲ್ಮೇಶ್ವರ ದೇವಾಲಯ ಸೂಕ್ತ ರಕ್ಷಣೆ ಇಲ್ಲದೆ ಉಂಡಾಡಿಗಳು ಹಾಗೂ ದುರ್ವೆಸನಿಗಳ ಕೇಂದ್ರವಾಗಿ ಪರಿಣಮಿಸಿದೆ.

Advertisement

ಕಲಾತ್ಮಕತೆ ಮತ್ತು ಐತಿಹಾಸಿಕ ಕಾರಣಗಳಿಂದ ಮಹತ್ವ ಪಡೆದಿರುವ ಶಿಲಾಬಾಲಿಕೆಯರು, ಪ್ರಾಚ್ಯವಸ್ತು, ಪ್ರವಾಸೋದ್ಯಮ ಇಲಾಖೆ ಜೊತೆಗೆ ಈ ಭಾಗದ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದಿನದಿಂದ ದಿನಕ್ಕೆ ಶಿಥಿಲಾವಸ್ಥೆ ತಲುಪುತ್ತಿದೆ. ದೇವಾಲಯ ಗೋಡೆಗಳಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಗಿಡಗಳು ಬೆಳೆದು, ಶಿಲ್ಪಗಳು ಶಿಥಿಲಗೊಳ್ಳುತ್ತಿವೆ. ಅದೆಷ್ಟೋ ಮೂರ್ತಿಗಳು ಸೂಕ್ತ ವ್ಯವಸ್ಥೆ ಕೊರತೆಯಿಂದ ಪ್ರಾಂಗಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಂಬಂಧಪಟ್ಟ ಇಲಾಖೆ ವಿಶೇಷ ಮುತುವರ್ಜಿ ವಹಿಸಿ, ಈ ಐತಿಹಾಸಿಕ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕಿದೆ.

ಕಲ್ಯಾಣ ಚಾಲುಕ್ಯ ದೊರೆ 6ನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯವು ವಿಶಿಷ್ಟ ಕಲಾಕೃತಿಯ ಮೂರ್ತಿ ನೋಡುಗರನ್ನು ಆಕರ್ಷಿಸುತ್ತಿವೆ. ಈ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಶ್ರೇಷ್ಟ ಪ್ರವಾಸಿ ತಾಣಗಳೆಂದು ಹೇಳಲಾಗುವ ಬೇಲೂರು-ಹಳೆಬೀಡು ದೇಗುಲಗಳ ನಿರ್ಮಾಣಕ್ಕೂ ಮುನ್ನವೇ ಈ ದೇವಾಲಯದ ಗೋಡೆಗಳ ಮದನಿಕೆಯರು ಕಾಣಿಸಿಕೊಂಡಿದ್ದರು ಎಂಬುದನ್ನು ಇತಿಹಾಸ ತಿಳಿಸುತ್ತದೆ. 

ಸದಾ ಪ್ರವಾಸಿಗರಿಂದ ತುಂಬಿ ತುಳುಕಬೇಕಾದ ಈ ಶಿಲ್ಪಕಲಾ ದೇವಾಲಯಕ್ಕೆ ಅಪೂರ್ಣ ಆವರಣಗೋಡೆ ಇರುವ ಕಾರಣ ಇಲ್ಲಿ ಜನರಿಗಿಂತ ಹಂದಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಂಶೋಧನಾ ವಿದ್ಯಾರ್ಥಿಗಳಿರಬೇಕಾದ ಈ ಪವಿತ್ರ ಸ್ಥಳದಲ್ಲಿ ಜೂಜು, ಕುಡಿತ ಮತ್ತು ಆಗಾಗ ರಾತ್ರಿ ಹೊತ್ತು ಅನೈತಿಕ ಚಟುವಟಿಕೆ ಕೂಡ ಇಲ್ಲಿ ನಡೆಯುತ್ತವೆ. ಪ್ರವಾಸಿಗರಿಗೆ ನೆರಳು ನೀಡಬೇಕಾದ ವಿಶಾಲ ಆಲದ ಮರದ ಕೆಳಗೆ ಗುಜರಿ ಸೇರಬೇಕಾದ ಟ್ರಾಕ್ಟರ್‌ ಮತ್ತಿತರ ಸಾಮಗ್ರಿಗಳು ತುಂಬಿವೆ. ಪ್ರಾಂಗಣದ ಮೂಲೆ ಒಂದರಲ್ಲಿ ಜನ ಮೂತ್ರ ವಿಸರ್ಜನೆ ಮಾಡುತ್ತಿರುವ ಕಾರಣ ಇಡೀ ಪರಿಸರದಲ್ಲಿ ದುರ್ನಾಥ ಹರಡಿದೆ. ಅಷ್ಟು ಸಾಲದೆಂಬುದಂತೆ ಊರುಲ್ಲಿ ಮನೆ ಕೆಡವಿದ, ಚರಂಡಿ ಸ್ವತ್ಛಗೊಳಿಸಿದ ತ್ಯಾಜ್ಯ ಕೂಡ ಇಲ್ಲಿ ಸಂಗ್ರಹವಾಗಿದೆ. 

ಆವರಣಗೋಡೆ ಅಪೂರ್ಣ ಸ್ಥಿತಿಯಲ್ಲಿ ಇರುವ ಕಾರಣ ಆಗಾಗ ವಿಷ ಜಂತುಗಳು ಸುತ್ತಾಡುತ್ತವೆ. ಪ್ರವಾಸಿಗರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ಆರಂಭಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಂಡಾಡಿಗಳು ಸಂಪೂರ್ಣ ಹಾಳು ಮಾಡಿದ್ದರಿಂದ ಅದೀಗ ಸಂಪೂರ್ಣ ಹಾಳಾಗಿದೆ.

Advertisement

ಐತಿಹಾಸಿಕ ಮಹತ್ವ ಪರಿಚಯಿಸುವ ಈ ದೇಗುಲ ಈ ಸ್ಥಿತಿಗೆ ತಲುಪಲು ಪ್ರಾಚ್ಯವಸ್ತು ಮತ್ತು ಪ್ರವಾಸೋದ್ಯಮ ಇಲಾಖೆ ತಾಳಿರುವ ನಿರ್ಲಕ್ಷ್ಯವೇ ಕಾರಣ. ಈ ಮಧ್ಯ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ, ಇದೇ ಜಿಲ್ಲೆಯವರೇ ಆದ ಯುವಜನ ಮತ್ತು ಕ್ರೀಡಾ ಖಾತೆ ಸಚಿವ ರಹಿಂಖಾನ್‌ ಸೇರಿ ಮೂವರು ಸಚಿವರಿದ್ದರೂ ಐತಿಹಾಸಿಕ ದೇವಸ್ಥಾನ ಅಭಿವೃದ್ಧಿ ಕಾಣದೇ ಇರುವುದು ನೋವಿನ ಸಂಗತಿ. ಈ ಎಲ್ಲದರ ಜೊತೆಗೆ ಜಿಲ್ಲಾ ಆಡಳಿತ ಇಂಥ ಕೇಂದ್ರಗಳ ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ಐತಿಹಾಸಿಕ ಸ್ಮಾರಕ ಪ್ರಿಯರ ಒತ್ತಾಸೆ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ದೇವಸ್ಥಾನ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.

ನಮ್ಮೂರ ಕಲ್ಮೇಶ್ವರ ಶಿಲ್ಪಕಲಾ ದೇಗುಲ ಬೇರಾವುದಾದರೂ ಜಿಲ್ಲೆಯಲ್ಲಿದ್ದಿದ್ದರೆ ಎಷ್ಟೆಲ್ಲ ಅಭಿವೃದ್ಧಿ ಆಗುತ್ತಿತ್ತು. ಬೀದರ ಜಿಲ್ಲೆಯ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳಿಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಹಿಂದೆ ಹೋದದ್ದು ಹೋಗಲಿ ಮುಂದಾದರೂ ನಮ್ಮ ಜಿಲ್ಲೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇಂಥ ಸ್ಮಾರಕಗಳ ಅಭಿವೃದ್ಧಿಗೊಳಿಸಲು ಮುಂದಾಗಬೇಕು.
 ಖಾಸೀಂ-ಅಲಿ, ಜಲಸಂಗವಿ ಗ್ರಾಮಸ್ಥ

ಪ್ರಾಚ್ಯವಸ್ತು ಮತ್ತು ಪ್ರವಾಸೋದ್ಯಮ ಇಲಾಖೆಗೆ ಈ ದೇವಸ್ಥಾನ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಆಗೊಮ್ಮೆ ಈಗೊಮ್ಮೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಬೆರಳೆಣಿಕೆಯಷ್ಟು ಸಂಶೋಧಕರು ಬರುತ್ತಾರೆ ಎಂಬ ಕಾರಣಕ್ಕಾಗಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆಲವರು ಹಾಳು ಮಾಡಿದ್ದಾರೆ. ದೇವಸ್ಥಾನ ಪ್ರಾಂಗಣ ಸ್ವತ್ಛತೆ ಇತ್ಯಾದಿ ಸಣ್ಣಪುಟ್ಟ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಬಗೆ ಹರಿಸುತ್ತೇವೆ. ಉಳಿದದ್ದನ್ನು ಸಂಬಂಧಪಟ್ಟ ಇಲಾಖೆಯವರೆ ಮಾಡಬೇಕು.
 ಸರಸ್ವತಿ ಘಂಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಜಲಸಂಗವಿ

„ಶಶಿಕಾಂತ ಕೆ. ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next