Advertisement

ಕೈಬಿಟ್ಟಿದ್ದ ಪಠ್ಯ ಮರು ಸೇರ್ಪಡೆ : ಶಿಕ್ಷಣ ಇಲಾಖೆಯಿಂದ ನಿರ್ಧಾರ

11:21 PM Oct 29, 2022 | Team Udayavani |

ಬೆಂಗಳೂರು : ಪಠ್ಯಪುಸ್ತಕ ಪರಿಷ್ಕರಣೆ ವೇಳೆ ದೇವನೂರು ಮಹಾದೇವ, ಜಿ.ರಾಮಕೃಷ್ಣ ಸಹಿತ 7 ಲೇಖಕರ ಪಠ್ಯಗಳನ್ನು ಕೈಬಿಟ್ಟಿದ್ದ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿಗೆ (2022-23) ಮಾತ್ರ ಅನ್ವಯವಾಗುವಂತೆ ಬೋಧಿಸಲು ನಿರ್ಧರಿಸಿದೆ.

Advertisement

2022-23ನೇ ಸಾಲಿಗೆ 1ರಿಂದ 10ನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿತ್ತು. ಈ ಸಂಬಂಧ 7 ಲೇಖಕರು/ಕವಿಗಳು ತಮ್ಮ ಪಾಠ/ಪದ್ಯಗಳಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆದ ಕಾರಣ ಅವುಗಳನ್ನು ಬೋಧನೆ-ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸ ದಂತೆ ಸೂಚಿಸಲಾಗಿತ್ತು.

ಬಳಿಕ ಈ ಲೇಖಕರ ಗದ್ಯ/ಪದ್ಯಗಳ ಪಠ್ಯ ವಿಷಯಗಳನ್ನು ಮುಂದು ವರಿಸುವಂತೆ ಸಾರ್ವಜನಿಕರು, ಪೋಷಕರು ಮತ್ತು ಕೆಲವು ಗಣ್ಯರು ಆಗ್ರಹಿಸಿದ್ದರು. ಅಲ್ಲದೆ, ವಿದ್ಯಾರ್ಥಿಗಳು ಈಗಾಗಲೇ ಈ ಪಠ್ಯ ವಿಷಯ ಗಳನ್ನು ಕಲಿತಿರುವುದರಿಂದ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪಠ್ಯ ಕೈಬಿಡುವುದು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರಿಯಾದ ಕ್ರಮವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷಕ್ಕೆ ಮಾತ್ರ ಈ ಪಠ್ಯ ವಿಷಯಗಳನ್ನು ಮುಂದುವರಿಸಲು ತಿಳಿಸಿದ್ದಾರೆ. ಹೀಗಾಗಿ, ಸೆ.23ರಂದು ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ.

ಪ್ರಸಕ್ತ ಸಾಲಿಗೆ ಮಾತ್ರ ಅನ್ವಯವಾಗುವಂತೆ ಬೋಧನೆ-ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ರಾಜ್ಯದ ಎಲ್ಲ ಶಾಲೆಗಳಿಗೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ.

ಸೇರ್ಪಡೆಗೊಂಡ ಪಠ್ಯಗಳು: 10ನೇ ತರಗತಿ- ಎದೆಗೆ ಬಿದ್ದ ಅಕ್ಷರ, (ದೇವನೂರು ಮಹಾದೇವ), ಭಗತ್‌ ಸಿಂಗ್‌- (ಡಾ| ಜಿ.ರಾಮಕೃಷ್ಣ), ಹಿಗೊಂದು ಟಾಪ್‌ ಪ್ರಯಾಣ (ಈರಪ್ಪ ಎಂ.ಕಂಬಳಿ), ಕಟ್ಟತೇವ ನಾವು (ಸತೀಶ್‌ ಕುಲಕರ್ಣಿ), ಏಣಿ (ಸುಕನ್ಯಾ ಮಾರುತಿ), 9ನೇ ತರಗತಿ- ಅಮ್ಮನಾಗುವುದೆಂದರೆ (ರೂಪಾ ಹಾಸನ), 6ನೇ ತರಗತಿ- ಡಾ| ರಾಜ್‌ಕುಮಾರ್‌ (ದೊಡ್ಡ ಹುಲ್ಲೂರು ರುಕ್ಕೋಜಿ ರಾವ್‌).

Advertisement

 

Advertisement

Udayavani is now on Telegram. Click here to join our channel and stay updated with the latest news.

Next