ತಿರುಪತಿ : ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 5.6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹರಕೆಯ ರೂಪದಲ್ಲಿ ಬುಧವಾರ ಅರ್ಪಿಸಿದ್ದಾರೆ.
ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟದ ವೇಳೆ ಹೊತ್ತಿದ್ದ ಹರಕೆ ಇದಾಗಿದ್ದು ,2014 ರಲ್ಲಿ ಪ್ರತ್ಯೇಕ ರಾಜ್ಯದ ಉದಯವಾಗಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಬಳಿಕ ಪತ್ನಿ,ಕುಟುಂಬ ಮತ್ತು ಸಂಪುಟದ ಸದಸ್ಯರೊಂದಿಗೆ ವೆಂಕಟೇಶ್ವರನ ಸನ್ನಿಧಿಗೆ ಬಂದು ಈ ಹರಕೆ ತೀರಿಸಿದ್ದಾರೆ.
ವೆಂಕಟೇಶ್ವರನಿಗೆ ಪವಿತ್ರ ಸಾಲಿಗ್ರಾಮ ಕಲ್ಲುಗಳಿಂದ ಮಾಡಿದ ಆಕರ್ಷಕ ಚಿನ್ನದ ಹಾರ, ಮಕರ ಕಂಠಾಭರಣ ಸೇರಿದಂತೆ 19 ಕೆ.ಜಿ ಚಿನ್ನದ ಆಭರಣಗಳನ್ನು ಪುರೋಹಿತರ ಮಂತ್ರಘೋಷಗಳೊಂದಿಗೆ ದೇವರಿಗೆ ಅರ್ಪಿಸಿದರು.
ವಿಪಕ್ಷ, ಸಾರ್ವಜನಿಕರ ವ್ಯಾಪಕ ಟೀಕೆ
Related Articles
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೆಸಿಆರ್ ಅವರು ವಿವಿಧ ದೇವಸ್ಥಾನಗಳಿಗೆ ಚಿನ್ನಾಭರಣಗಳನ್ನು ಹರಕೆ ರೂಪದಲ್ಲಿ ಸಲ್ಲಿಸುತ್ತಿದ್ದು, ಈ ಬಗ್ಗೆ ವ್ಯಾಪಕ ಟೀಕೆಗಳೂ ವ್ಯಕ್ತವಾಗಿದೆ. ಸರಕಾರಿ ಹಣವನ್ನು ಬಳಸಿ ಚಿನ್ನಾಭರಣಗಳನ್ನು ದೇವರಿಗೆ ಕೊಡುವ ಅಗತ್ಯ ಏನಿದೆ ಎಂದು ಹಲವರು ತಗಾದೆ ತೆಗೆದಿದ್ದಾರೆ.
ಚಿನ್ನಾಭರಣಗಳ ತಯಾರಿಗೆ ಸಮಿತಿಯನ್ನೇ ರಚಿಸಲಾಗಿದ್ದು , ಈ ಹಿಂದೆ ವಾರಂಗಲ್ನ ಭದ್ರಕಾಳಿಗೆ 3.65 ಕೋಟಿ ರೂ ಮೌಲ್ಯದ 11 ಕೆ.ಜಿ. ತೂಕದ ಕಿರೀಟವನ್ನು ಹರಕೆಯ ರೂಪದಲ್ಲಿ ನೀಡಲಾಗಿತ್ತು. ವಿಜಯವಾಡದ ಕನಕ ದುರ್ಗಾ ದೇವಾಲಯಕ್ಕೆ ಚಿನ್ನದ ಮೂಗುತಿಯನ್ನು ಹರಕೆಯ ರೂಪದಲ್ಲಿ ನೀಡಿದ್ದರು.
ವೈಯಕ್ತಿಕವಾಗಿ ಹೊತ್ತ ಹರಕೆ ತೀರಿಸಲು ಮುಜರಾಯಿ ಇಲಾಖೆಯ ಅಡಿ ಬರುವ ಶಿಥಿಲಗೊಂಡಿರುವ ದೇಗುಲಗಳ ನವೀಕರಣಕ್ಕಾಗಿ ಮೀಸಲಿಡಲಾಗುವ ಕಾಮನ್ ಗುಡ್ ಫಂಡ್ನ ಹಣವನ್ನು ಬಳಸಿರುವುಕ್ಕೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ.
ಎಲ್ಲಿಯಾದರೂ ತೆಲಂಗಾಣ ರಚೆನೆಯಾದ ಹೊರತಾಗಿಯೂ ಅವರು ಮುಖ್ಯಮಂತ್ರಿಯಾಗದೆ ಇದ್ದಿದ್ದರೆ ಹರಕೆ ಹೇಗೆ ತೀರಿಸುತ್ತಿದ್ದರು ಎಂದು ತೆಲಂಗಾಣ ಕಾಂಗ್ರೆಸ್ ವಕ್ತಾರ ದಾಸೋಜು ಶ್ರವಣ್ ಪ್ರಶ್ನಿಸಿದ್ದಾರೆ.