Advertisement

ಬೀದರ: ಟೆಕ್‌ಲ್ಯಾಬ್‌, ವರ್ಕ್‌ಶಾಪ್‌ ಲೋಕಾರ್ಪಣೆ

01:49 PM Jun 21, 2022 | Team Udayavani |

ಬೀದರ: ಕಲಿಕೆ ಜೀವನ ಪರ್ಯಂತ ಇದ್ದಾಗ ಮಾತ್ರ ನಮ್ಮ ಕೌಶಲ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಟಾಟಾ ಟೆಕ್‌ಲ್ಯಾಬ್‌ ಮತ್ತು ಟಾಟಾ ವರ್ಕ್‌ಶಾಪ್‌ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬೀದರ ಐಟಿಐ ಕಾಲೇಜಿಗೆ 30 ಕೋಟಿ ವೆಚ್ಚದಲ್ಲಿ ಟಾಟಾ ಸಂಸ್ಥೆಯವರು ಉತ್ತಮ ಉಪಕರಣಗಳನ್ನು ನೀಡಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿದ್ದಾರೆ. ಇಂದು ತಮಗೆ ಹಲವಾರು ಅವಕಾಶಗಳು ಇವೆ. ನಾವು ಇಂಜಿನಿಯರ್‌ ಕಲಿಯುವ ಆ ದಿನಗಳಲ್ಲಿ ಸಣ್ಣ-ಸಣ್ಣ ಮಶೀನ್‌ಗಳು ಇರುತ್ತಿದ್ದವು. ಇಂದು ತಾಂತ್ರಿಕತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹಾಗಾಗಿಯೇ ಜಗತ್ತು ವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು.

ಇಡೀ ಕರ್ನಾಟಕದಾದ್ಯಂತ ಪ್ರಧಾನಮಂತ್ರಿಗಳು 135 ಕಾಲೇಜುಗಳಿಗೆ ಈ ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ ಉದ್ಘಾಟನೆ ಮಾಡಿದ್ದಾರೆ. ತಮ್ಮ ಶಿಕ್ಷಣ ಪದವಿಗಳಿಗೆ ಸೀಮಿತವಾಗದೆ ಅದು ನಿರಂತರವಾಗಿ ಇರಬೇಕು. ಯಾವಾಗಲೂ ನಮ್ಮ ಗುರಿ ದೊಡ್ಡದಾಗಿರಬೇಕು. ಸಣ್ಣ ಗುರಿ ಇದ್ದರೆ ನಾವು ಉನ್ನತ ಹಂತಕ್ಕೆ ತಲುಪಲು ಆಗುವುದಿಲ್ಲ. ಕಾಲೇಜು ಮುಗಿದ ನಂತರ ತಾವು ಉನ್ನತ ಶಿಕ್ಷಣ ಪಡೆಯುವ ಮೂಲಕ ಇನ್ನು ಎತ್ತರಕ್ಕೆ ಬೆಳೆಯಬೇಕು ಮತ್ತು ತಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭವಾಗಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್‌ ಸಭಾಪತಿ ರಘುನಾಥರಾವ್‌ ಮಲ್ಕಾಪೂರೆ, ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಬಾಬು ವಾಲಿ ಮತ್ತು ಐಟಿಐ ಕಾಲೇಜಿನ ಪ್ರಾಂಶುಪಾಲ ಶಿವಶಂಕರ ಟೋಕರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next