ಲಕ್ನೋ: ಎಸ್ ಯುವಿ ಕಾರನ್ನು ನಿಲ್ಲಿಸಲು ನಿರಾಕರಿಸಿದ ಕಾರಣಕ್ಕೆ ಪ್ರತಿಷ್ಠಿತ ಮೊಬೈಲ್ ಕಂಪನಿ ಉದ್ಯೋಗಿಯನ್ನು ಪೊಲೀಸ್ ಗುಂಡಿಟ್ಟು ಹತ್ಯೆಗೈದ ಘಟನೆ ಉತ್ತರಪ್ರದೇಶದ ಗೋಮತಿನಗರ್ ಎಕ್ಸ್ ಟೆನ್ಶನ್ ನ ಮಕ್ದುಮ್ ಪುರ್ ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಮೊಬೈಲ್ ಕಂಪನಿಯ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ(38ವರ್ಷ) ಹಾಗೂ ಗೆಳೆಯ ಸನಾ ಖಾನ್ ಜೊತೆಯಾಗಿ ಎಸ್ ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮುಕ್ದುಮ್ ಪುರ್ ಪೊಲೀಸ್ ಔಟ್ ಪೋಸ್ಟ್ ಬಳಿ ಕಾನ್ಸ್ ಟೇಬಲ್ ಗಳಾದ ಪ್ರಶಾಂತ್ ಕುಮಾರ್ ಹಾಗೂ ಸಂದೀಪ್ ಕುಮಾರ್ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಕಾರು ವೇಗವಾಗಿ ಚಲಿಸಿ ಪೊಲೀಸ್ ಪ್ಯಾಟ್ರೋಲ್ ಬೈಕ್ ಗೆ ಡಿಕ್ಕಿ ಹೊಡೆದು, ಗೋಡೆಗೆ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಕಳ್ಳ ವ್ಯವಹಾರದ ಶಂಕೆಯಿಂದ ಕಾನ್ಸ್ ಟೇಬಲ್ ಪ್ರಶಾಂತ್ ಕುಮಾರ್ ಗುಂಡಿನ ದಾಳಿ ನಡೆಸಿದ್ದರು. ಅದು ಕಾರಿನ ಕಿಟಕಿ ಮೂಲಕ ತಿವಾರಿಯ ಎಡಭಾಗದ ಕುತ್ತಿಗೆ ಮತ್ತು ತಲೆ ಭಾಗಕ್ಕೆ ಗುಂಡು ಬಿದ್ದಿತ್ತು. ಕೂಡಲೇ ತಿವಾರಿಯನ್ನು ಆಸ್ಪತ್ರೆಗೆ ಕೊಂಡೊಯ್ದರು ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಕರಣದ ಸಂಬಂಧ ವಿರೋಧ ಪಕ್ಷ ಕಾಂಗ್ರೆಸ್ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಸಿಎಂ ಆದಿತ್ಯನಾಥ್ ಪ್ರತಿಕ್ರಿಯೆ ನೀಡಬೇಕು, ಅಲ್ಲದೇ ಸಿಬಿಐ ತನಿಖೆಗೆ ಆದೇಶ ನೀಡಬೇಕೆಂದು ಒತ್ತಾಯಿಸಿದೆ. ಇಲ್ಲವೇ ಅಗತ್ಯಬಿದ್ದರೆ ಎಸ್ ಐಟಿ ರಚಿಸಬೇಕೆಂದು ಹೇಳಿದೆ.
ಇದು ಪೊಲೀಸ್ ಎನ್ ಕೌಂಟರ್ ಅಲ್ಲ ಎಂದು ಸಿಎಂ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಅಗತ್ಯವಾಗಿದ್ದರೆ ಘಟನೆ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡುವುದಾಗಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ಗುಂಡಿನ ದಾಳಿ ಪ್ರಕರಣದ ಸಂಬಂಧ ಇಬ್ಬರು ಪೊಲೀಸರನ್ನು ಬಂಧಿಸಿರುವುದಾಗಿ ಹೇಳಿದರು.