ನಾಗಮಂಗಲ: ಜೆಡಿಎಸ್ ನಾಯಕರು ಮಾತ್ತೆತ್ತಿದರೆ ನಾನು ರೈತನ ಮಗ ಎಂದು ಕಣ್ಣೀರು ಹಾಕುತ್ತಾರೆ. ಕಣ್ಣೀರು ಬರುವುದು ಸಹಜ. ನಕ್ಕರೂ ಕಣ್ಣಲ್ಲಿ ನೀರು ಬರುತ್ತದೆ. ಅತ್ತರೂ ಕಣ್ಣಲ್ಲಿ ನೀರು ಬರುತ್ತದೆ. ಭಗವಂತ ನಿಮಗೆ ವರ ಅಥವಾ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಅವಕಾಶ ಸಿಕ್ಕಾಗ ನಾವು ಜನರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಜೆಡಿಎಸ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ನಾಗಮಂಗಲ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಈ ಜಿಲ್ಲೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿತ್ತು. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆದ ನಂತರ ನಿಮ್ಮ ಜಿಲ್ಲೆ ಜನರ ಜೀವನದಲ್ಲಿ ನಿಮ್ಮ ತಾಲೂಕಿನಲ್ಲಿ ಯಾವುದಾದರೂ ಬದಲಾವಣೆ ತಂದಿದ್ದಾರಾ?, ಈ ಜಿಲ್ಲೆಯ ಸಕ್ಕರೆ ಕಾರ್ಖಾನೆ, ನೀರಾವರಿ ವಿಚಾರ, ಸರ್ವತೋಮುಖ ಅಭಿವೃದ್ಧಿಗೆ ಏನಾದರೂ ಕೊಡುಗೆ ನೀಡಿದ್ದಾರಾ? ಇಲ್ಲ ಎಂದರು.
ಬಿಜೆಪಿಗೆ ಕಾಂಗ್ರೆಸ್ ವೈರಿ:
ಕುಮಾರಸ್ವಾಮಿ ಅವರು ನಾವು ಕೊಟ್ಟ ಬೆಂಬಲ ಉಳಿಸಿಕೊಳ್ಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬಂದಿದೆ. ಇದಕ್ಕೆ ಕಾರಣ ಯಾರು ಎಂದು ಆಲೋಚಿಸಬೇಕು. ಮೋದಿ ಅವರು ಮಂಡ್ಯಕ್ಕೆ ಬಂದಿದ್ದರು. ಅವರು ಕೇವಲ ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡಿದ್ದಾರೆಯೇ ಹೊರತು ಜೆಡಿಎಸ್ ಬಗ್ಗೆ ಒಂದೂ ಮಾತನಾಡಿಲ್ಲ. ಬಿಜೆಪಿಗೆ ಕಾಂಗ್ರೆಸ್ ವೈರಿಯೇ ಹೊರತು ಜೆಡಿಎಸ್ ಅಲ್ಲ ಎಂಬುದು ಅರ್ಥವಾಗಿದೆ ಎಂದರು.