Advertisement

ಸಂಸ್ಥೆಯ ಏಳ್ಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರ: ಇಂದ್ರಾಳಿ ದಿವಾಕರ ಶೆಟ್ಟಿ

03:00 PM Sep 12, 2021 | Team Udayavani |

ಡೊಂಬಿವಲಿ: ವಿದ್ಯಾರ್ಥಿಗಳ ಬದುಕಿಗೆ ಭದ್ರ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾಗಿದ್ದು, ಶಿಕ್ಷಣದ ಮುಖಾಂತರ ಸಮಾಜ ಪರಿವರ್ತಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಹೇಳಿದರು.

Advertisement

ಸೆ. 6ರಂದು ಬೆಳಗ್ಗೆ ಡೊಂಬಿವಲಿ ಕರ್ನಾಟಕ ಸಂಘ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಹೆತ್ತವರಂತೆ ನಮಗೆ ಜ್ಞಾನ ದಾಸೋಹ ನೀಡುವ ಮೂಲಕ ಬದುಕಲು ಕಲಿಸಿದ ಗುರುಗಳನ್ನು ಗೌರವಿಸಬೇಕು. ಮುಂಬಯಿ ಮಹಾನಗರದದಲ್ಲಿ ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ವಿದ್ಯಾಲಯ ಮತ್ತು ಮಂಜುನಾಥ ಮಹಾ ವಿದ್ಯಾಲಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ಇದಕ್ಕೆ ನಮ್ಮ ಶಿಕ್ಷಣ ಸಂಸ್ಥೆಯ ಶಿಕ್ಷಕರ ನಿರಂತರ ಪರಿಶ್ರಮ ಒಂದು ಕಾರಣವಾಗಿದೆ. ಪ್ರಸಕ್ತ ವರ್ಷದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ 7 ಮಂದಿ ಶಿಕ್ಷಕರು ಸೇವಾ ನಿವೃತ್ತರಾಗಿದ್ದು, ಅವರ ಸೇವೆಯನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ. ಅವರು ಸೇವೆಯಿಂದ ನಿವೃತ್ತರಾಗಿದ್ದರೂ ಸಂಸ್ಥೆಯ ಅಭಿವೃದ್ದಿಗೆ ಅವರ ಮಾರ್ಗದರ್ಶನ, ಸಹಕಾರ ಸದಾಯಿರಲಿ ಎಂದು ತಿಳಿಸಿ, ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಶುಭ ಹಾರೈಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ವ್ಹಿ. ಎಸ್‌. ಅಡಿಗಲ್‌ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಶಿಕ್ಷಣ ಪದ್ಧತಿಯಲ್ಲಿ ಬದಲಾಗಿದ್ದು ಝೂಮ್‌ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಆಡಳಿತ ಮಂಡಳಿ ಯಾವುದೇ ಶಿಕ್ಷಕರ ಸೇವೆಯನ್ನು ಕಡಿತ ಗೊಳಿಸದೆ, ಸಂಪೂರ್ಣ ವೇತನ ನೀಡುತ್ತಿರುವುದು ಪ್ರಶಂಸನೀಯ. ಎಲ್ಲ ಶಿಕ್ಷಕ ವೃಂದವು ಶಿಕ್ಷಣದ ಗುಣ ಮಟ್ಟವನ್ನು ಇನ್ನಷ್ಟು ಹೆಚ್ಚಿಸಿ ಸಂಸ್ಥೆಯ ಹೆಸರನ್ನು ಬೆಳಗಿಸಬೇಕು ಎಂದು ತಿಳಿಸಿ, ಸೇವಾ ನಿವೃತ್ತರಾದ ಶಿಕ್ಷಕರ ನಿವೃತ್ತಿ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ಇದನ್ನೂ ಓದಿ:ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ : ನಟ ಚೇತನ್

ಇದೆ ಸಂದರ್ಭದಲ್ಲಿ ಮಂಜುನಾಥ ವಿದ್ಯಾಲಯದ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಾದ ನರಸಿಂಹ ಪಡಸಲಗಿ, ಲಕ್ಷ್ಮಣ್‌ ಜಾಧವ, ಸುನೀತಾ ಜಬಾಡೆ, ಜಾನಕಿ ಗೌಡ, ಧೀರೇಂದ್ರ ಪುರೋಹಿತ, ದಿ| ರೋಹಿಣಿಗಲಗಲಿ ಅವರ ಪತಿಯನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ನೆನಪಿನ ಕಾಣಿಕೆ ಹಾಗೂ ಸಮ್ಮಾನ ಪತ್ರವನ್ನಿತ್ತು ಗೌರವಿಸಿದರು. ಸಮ್ಮಾನಿತರು ಸಂಸ್ಥೆಯ ಕೊಡುಗೆಯನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿಗಳಾದ ಡಾ| ವಿಜಯ ಎಂ. ಶೆಟ್ಟಿ, ದೇವದಾಸ್‌ ಎಲ್‌. ಕುಲಾಲ್‌, ಅಜೀತ ಉಮಾರಾಣಿ, ದಿನೇಶ್‌ ಕುಡ್ವ, ಚಿತ್ತರಂಜನ
ಅಳ್ವ, ಲೋಕನಾಥ ಶೆಟ್ಟಿ, ಡಾ| ವಿ. ಎಸ್‌. ಅಡಿಗಲ್‌, ರತ್ನಾ ಮುರಲೀಧರನ್‌, ಸುರೇಖಾ ಪಂಡಿತ್‌, ನಾಗಪ್ಪ ಪೂಜಾರಿ, ಕೋತಲಿ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Advertisement

ಗಣ್ಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಸ್ವಾಗತಿಸಿದರು. ಯಜ್ಞಾ ಕೋಟ್ಯಾನ್‌, ನಮಿತಾ ಶೆಟ್ಟಿ, ನೀತಾ ಮೋಜಿದಾ, ರೂಪಾಲಿ ಧರಶೀವಕರ ಅವರು ಸಮ್ಮಾನಪತ್ರ ವಾಚಿಸಿದರು. ನಿಲೀಮಾ ಕೋಡೋಲಿಕರ ನಿರೂಪಿಸಿದರು. ಅಜೀತ ಉಮಾರಾಣಿ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಆನಂದ ಶೆಟ್ಟಿ ಎಕ್ಕಾರು, ರಾಜೀವ್‌ ಭಂಡಾರಿ, ಜಗನ್ನಾಥ ಶೆಟ್ಟಿ, ಪ್ರಭಾಕರ ಶೆಟ್ಟಿ, ರವಿ ಸನಿಲ್‌, ವಿಮಲಾ ಶೆಟ್ಟಿ, ಯೋಗಿನಿ ಶೆಟ್ಟಿ, ಮಧುರಿಕಾ ಬಂಗೇರ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ
ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ಶಿಕ್ಷಣ ಸಂಸ್ಥೆಯಲ್ಲಿ ನುರಿತ ಶಿಕ್ಷಕ ವೃಂದವು ಆಧುನಿಕ ತಂತ್ರಜ್ಞಾನದ ಮುಖಾಂತರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸುಸಂಸ್ಕೃತರನ್ನಾಗಿಸುತ್ತಿರುವುದು ಹೆಮ್ಮೆಯ ಸಂಗತಿ. ಮಾಜಿ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ್‌ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಬಂದಿದ್ದು, ಈ ವರ್ಷ ನಮ್ಮ ಶಿಕ್ಷಣ ಸಂಸ್ಥೆಯ 7 ಶಿಕ್ಷಕರುತಮ್ಮ ಅಪ್ರತಿಮ ಸೇವೆ ಸಲ್ಲಿಸಿ ಸೇವಾನಿವೃತ್ತರಾಗು ತ್ತಿದ್ದು, ಅವರ ಗಣನೀಯ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಡೊಂಬಿವಲಿ ಕರ್ನಾಟಕ ಸಂಘವು ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದೆ. ಸಾವಿರಾರು ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿದ್ದು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದೇವೆ.
-ಸುಕುಮಾರ್‌ ಎನ್‌. ಶೆಟ್ಟಿ , ಕಾರ್ಯಾಧ್ಯಕ್ಷರು, ಕರ್ನಾಟಕ ಸಂಘ ಡೊಂಬಿವಲಿ

ಜನಮನ ಗೆದ್ದಿದೆ
ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಮಹಾಮಾರಿ ನಮಗೆ ಅಪಾರವಾದ ನೋವನ್ನು ನೀಡಿದೆ. ಆದರೂ ಕರ್ನಾಟಕ ಸಂಘವು ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಜನಮನ ಗೆದ್ದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಮ್ಮ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಂಸ್ಥೆಯ ಘನತೆ-ಗೌರವವನ್ನು ಹೆಚ್ಚಿಸಿದ್ದಾರೆ. ಇಂದು ಏಳು ಮಂದಿ ಶಿಕ್ಷಕವರು ನಿವೃತ್ತರಾಗುತ್ತಿದ್ದು, ಅವರ ಸಹಕಾರ ಸಂಸ್ಥೆಗೆ ಸದಾಯಿರಲಿ.
-ದೇವದಾಸ್‌ ಎಸ್‌. ಕುಲಾಲ್‌
ಉಪ ಕಾರ್ಯಾಧ್ಯಕ್ಷರು, ಕರ್ನಾಟಕ ಸಂಘ ಡೊಂಬಿವಲಿ

Advertisement

Udayavani is now on Telegram. Click here to join our channel and stay updated with the latest news.

Next