Advertisement

ಸತತ ಏಳು ಬಾರಿ ಗೆಲುವಿಗೆ ಶಿಕ್ಷಕರ ಆಶೀರ್ವಾದವೇ ಕಾರಣ

11:29 AM Mar 15, 2022 | Team Udayavani |

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಸತತ ಏಳು ಬಾರಿ ವಿಧಾನ ಪರಿಷತ್ತುಗೆ ಆಯ್ಕೆ ಮಾಡಿದ ಸಮಸ್ತ ಶಿಕ್ಷಕರಿಗೆ ಎಷ್ಟೊಂದು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ದೇಶದಲ್ಲಿಯೇ ದಾಖಲೆ ರೂಪದಲ್ಲಿ ಸುದೀರ್ಘ‌ ಕಾಲಾವಧಿಯ ವಿಧಾನ ಪರಿಷತ್ತು ಸದಸ್ಯ ಎಂಬ ದಾಖಲೆಗೆ ಶಿಕ್ಷಕರ ಆಶೀರ್ವಾದವೇ ಕಾರಣವಾಗಿದೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಇಲ್ಲಿನ ಲ್ಯಾಮಿಂಗ್ಟನ್‌ ಪ್ರೌಢಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕೇಂದ್ರ ಸಮಿತಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 1980ರಿಂದ ಇಲ್ಲಿವರೆಗೆ ಶಿಕ್ಷಕರ ಪ್ರತಿನಿಧಿಯಾಗಿ ಸತತ ಆಯ್ಕೆ ಮಾಡಿದ್ದೀರಿ, ಇದೀಗ ಎಂಟನೇ ಬಾರಿಗೆ ಆಯ್ಕೆಗೆ ನಿಮ್ಮೆಲ್ಲರ ಆಶೀರ್ವಾದ, ಬೆಂಬಲ ಅಗತ್ಯವಾಗಿದೆ. ಸುಮಾರು 42 ವರ್ಷಗಳಿಂದ ವಿಧಾನ ಪರಿಷತ್ತುನಲ್ಲಿ ನಿಮ್ಮ ಪ್ರತಿನಿಧಿಯಾಗಿ ಸಮಸ್ತ ಶಿಕ್ಷಕ ಸಮುದಾಯದ ಸಮಸ್ಯೆ-ನೋವುಗಳಿಗೆ ಧ್ವನಿ ಎತ್ತಿದ್ದೇನೆ.ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಶಿಕ್ಷಕರ ಇನ್ನಷ್ಟು ಬೇಡಿಕೆ, ಸಮಸ್ಯೆಗಳ ಬಗ್ಗೆ ಸದನದಲ್ಲಿ ಹೋರಾಟ ನಡೆಸಲು, ಸರಕಾರದ ಗಮನ ಸೆಳೆಯುವ ಕೆಲಸ ಮಾಡುವೆ ಎಂದರು.

ಮುಂಬರುವ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಟೀಕೆ-ಟಿಪ್ಪಣಿಗಳಿಗೆ ಒತ್ತು ನೀಡದೆ ಕಳೆದ 42 ವರ್ಷಗಳಲ್ಲಿ ಸಲ್ಲಿಸಿದ ಶಿಕ್ಷಕರ ಸೇವೆಯ ಶ್ರೀರಕ್ಷೆ ನನಗಿದೆ. ಶಿಕ್ಷಕರ ಪರ ಎತ್ತಿದ ಧ್ವನಿ, ಹೋರಾಟ, ಪ್ರಾಮಾಣಿಕ ಸೇವೆಯನ್ನು ಮುಂದಿಟ್ಟುಕೊಂಡು ಮತಯಾಚನೆಗೆ ಮುಂದಾಗೋಣ. ಚುನಾವಣೆ ವಿಚಾರದಲ್ಲಿ ಯಾರೂ ಧೃತಿಗೆಡುವುದು ಬೇಡ. ಶಿಕ್ಷಕರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ ಆತ್ಮ ತೃಪ್ತಿ ತಮಗಿದೆ ಎಂದರು.

ಕೇವಲ ಚುನಾವಣೆ ಬಂದಾಗಲಷ್ಟೇ ಶಿಕ್ಷಕರ ಬಗ್ಗೆ ಮಾತನಾಡುವ, ಅವರ ಬಗ್ಗೆ ಕಾಳಜಿ, ದಿಢೀರ್‌ ಪ್ರೀತಿ ತೋರುವ ಅಭ್ಯರ್ಥಿ ನಾನಲ್ಲ. ದಿನದ 24 ತಾಸು ಶಿಕ್ಷಕರ ಕೈಗೆ ಸಿಗುವ ಪ್ರತಿನಿಧಿ ನಾನೆಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ. ಕಳೆದ 42 ವರ್ಷಗಳಿಂದ ನನ್ನನ್ನು ಬಲ್ಲ ಎಲ್ಲ ಶಿಕ್ಷಕರಿಗೂ ಇದು ತಿಳಿದ ವಿಷಯ. ಶಿಕ್ಷಕರಿಗೆ ಇಲಿಯ್ಲವರೆಗೆ ಸಿಕ್ಕ ಸೌಲಭ್ಯಗಳೆಲ್ಲವೂ ನಾವೆಲ್ಲ ಸೇರಿ ಮಾಡಿದ ಹೋರಾಟದ ಫಲ ಎಂಬುದನ್ನು ಶಿಕ್ಷಕರು ಮರೆಯಬಾರದು. ಇತ್ತೀಚೆಗೆ ಹೋರಾಟಗಳು ಶಕ್ತಿ ಕಳೆದುಕೊಳ್ಳುತ್ತಿವೆ ಎಂಬಂತೆ ಭಾಸವಾಗುತ್ತಿದ್ದು, ಶಿಕ್ಷಕರು ಇದಕ್ಕೆ ಅವಕಾಶ ನೀಡಬಾರದು. ವಿಶೇಷವಾಗಿ ಹೊಸ ತಲೆಮಾರಿನ ಶಿಕ್ಷಕರು ಮುಂಬರುವ ಸವಾಲು-ಸಮಸ್ಯೆಗಳ ಬಗ್ಗೆ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು. ಸಂಘಟನೆಯಲ್ಲಿನ ಸಣ್ಣ-ಪುಟ್ಟ ಮನಸ್ತಾಪ, ವ್ಯತ್ಯಾಸಗಳನ್ನು ಮರೆತು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗೋಣ ಎಂದರು.

ಸತತ ಎಂಟನೇ ಬಾರಿಗೆ ಶಿಕ್ಷಕರ ಪ್ರತಿನಿಧಿಯಾಗಿ ಸ್ಪರ್ಧಿಸಲು ಅವಕಾಶ ನೀಡಿದ ವಿವಿಧ ಶಿಕ್ಷಕ ಸಂಘಟನೆಗಳ ಎಲ್ಲ ಪದಾಧಿಕಾರಿಗಳು, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವೆ ಎಂದು ಹೊರಟ್ಟಿ ಹೇಳಿದರು. ಸಂಘಟನೆ ಅವಿಭಜಿತ ಧಾರವಾಡ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಖಂಡರಾದ ಸಹಜಾನಂದ ದಂದರಗಿ, ಅನ್ನಪೂರ್ಣ ಗುಡ್ಡದ, ಜ್ಯೋತಿ ಪಾಟೀಲ, ಶ್ಯಾಮ ಮಲ್ಲನಗೌಡ, ಎಸ್‌.ಎಂ.ಅಂಗಡಿ, ಎಸ್‌.ಎಸ್‌.ಹುದ್ದಾರ, ಎಂ.ಟಿ.ಗೌಡ, ಎಚ್‌.ಪಿ.ಬಣಕಾರ, ಪ್ರಭಾಕರ ಬಂಟ್‌, ದಿನೇಶ ನೇತ್ರೇಕರ, ಎಸ್‌.ಆರ್‌.ಕಲಾದಗಿ, ಎಸ್‌.ಡಿ.ಮೂಡೆಣ್ಣರ, ಸಂತೋಷ ಪಾಟೀಲ, ಸಿ.ಎ.ಸಾವಳಗಿ, ಚಂದ್ರಶೇಖರ ಲೋನಿ, ಎನ್‌.ಎಚ್‌.ನಾವಲಗಟ್ಟಿ, ಬಿ.ಪಿ.ಹನಮಣ್ಣವರ, ರಮೇಶ ದೊಡ್ಡಮನಿ, ಗಣೇಶ ವಡ್ಡರ, ಎಸ್‌.ಎಸ್‌.ಗಡ್ಡದ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next