Advertisement
ಸಿಬಿಎಸ್ಇ ಪಠ್ಯಕ್ರಮ ಜಾರಿಯಾದರೆ ಪ್ರಥಮ ಮತ್ತು ದ್ವಿತೀಯ ಭಾಷೆ (ದ್ವಿಭಾಷಾ ಸೂತ್ರ) ಇರುವುದರಿಂದ ಸದ್ಯ ಸರ್ಕಾರಿ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿ ಶಿಕ್ಷಕರಿಗೆ ಇದರಿಂದ ಕೆಲಸವಿಲ್ಲದಂತಾಗುವ ಪ್ರಮೇಯವೇ ಹೆಚ್ಚು.ಹೀಗಾಗಿ, ಸರ್ಕಾರದ ಹೊಸ ಚಿಂತನೆ ನಮ್ಮ ಉದ್ಯೋಗಕ್ಕೆ ಕಂಟಕವಾಗಬಹುದು ಎಂಬುದು ಹಿಂದಿ ಶಿಕ್ಷಕರ ಆತಂಕ. ಏಕೆಂದರೆ ಪ್ರಸ್ತುತ ಹಿಂದಿ ಶಿಕ್ಷಕರಿಗೆ ನಿತ್ಯ ಮೂರು ತರಗತಿ ಪಾಠ ಮಾಡುವುದು ಮಾತ್ರ ಹೊಣೆಗಾರಿಕೆ. ಈ ಹಿನ್ನೆಲೆಯಲ್ಲಿ ಹಿಂದಿ ಶಿಕ್ಷಕರಲ್ಲಿ ಕೆಲವರು, ನಿತ್ಯವೂ ನಮಗೂ ಐದಾರು ತರಗತಿ ನಡೆಸಲು ಅವಕಾಶ ನೀಡಬೇಕು ಎಂಬ ಪ್ರಸ್ತಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಲೇ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಕ್ಕೆ ಸಿಬಿಎಸ್ಇ ಪಠ್ಯಕ್ರಮ ಅಳವಡಿಸಿದೆ. ಪ್ರಸ್ತಕ ಸಾಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಹಿಂದಿನ ಸಾಲಿನಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಬಿಎಸ್ಇ ಪಠ್ಯಕ್ರಮದಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಸಿಬಿಎಸ್ಇ ಪಠ್ಯಕ್ರಮ ಅಳವಡಿಸಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದ್ದು, ಮುಂದಿನ ವರ್ಷದಿಂದ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಈ ಪಠ್ಯಕ್ರಮದ ಅನುಷ್ಠಾನಕ್ಕೂ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ.
Related Articles
Advertisement
ದ್ವಿಭಾಷಾ ಸೂತ್ರ:ಒಂದು ವೇಳೆ ಮುಂದಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್ಇ ಪಠ್ಯಕ್ರಮ ಜಾರಿಗೆ ಬಂದರೆ, ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ತೃತೀಯ ಭಾಷೆ ಹಿಂದಿ, ಸಂಸ್ಕೃತ, ಮರಾಠಿ, ಉರ್ದು ಇತ್ಯಾದಿ ಎಂಬ ನಿಯಮ ಬದಲಾಗಲಿದೆ. ಸಿಬಿಎಸ್ಇ ಪಠ್ಯಕ್ರಮದಲ್ಲಿ ಸದ್ಯ ಅನುಸರಿಸುತ್ತಿರುವ ದ್ವಿಭಾಷಾ ಸೂತ್ರವೇ ಜಾರಿಗೆ ಬರಲಿದೆ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಪ್ರಥಮ ಭಾಷೆಯಾಗಿರುತ್ತದೆ. ಎರಡನೇ ಭಾಷೆ ಇಂಗ್ಲಿಷ್ ಆಗಿರುತ್ತದೆ. ಖಾಸಗಿ ಅಥವಾ ಅನುದಾನಿತ ಶಾಲೆ, ವಿವಿಧ ಮಾಧ್ಯಮದ ಶಾಲೆಯಲ್ಲಿ ಪ್ರಥಮ ಭಾಷೆ ಬದಲಾಗುತ್ತದೆ. ರಾಜ್ಯದ ಸುಮಾರು 22 ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಪ್ರಥಮ ಭಾಷೆಯಾದರೆ, ಇಂಗ್ಲಿಷ್ ದ್ವಿತೀಯ ಭಾಷೆಯಾಗಿದೆ. ತೃತೀಯ ಭಾಷೆಯಾಗಿ ಹಿಂದಿ ಅಥವಾ ಸಂಸ್ಕೃತ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಸಂಸ್ಕೃತ ಓದುತ್ತಿರುವ ಮಕ್ಕಳ ಸಂಖ್ಯೆ ತೀರ ಕಡಿಮೆ. ಇದು ಹಿಂದಿ ಶಿಕ್ಷಕರ ಭಯಕ್ಕೆ ಕಾರಣ. ಹಿಂದಿ ಶಿಕ್ಷಕರು ಸದ್ಯ ದಿನಕ್ಕೆ ಮೂರು ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಅದನ್ನು ಹೆಚ್ಚಿಸುವಂತೆ ಹಿಂದಿ ಶಿಕ್ಷಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರೌಢಶಾಲೆಗೆ ಸಿಬಿಎಸ್ಇ ಪಠ್ಯಕ್ರಮವನ್ನು ಅಳವಡಿಸುವ ಚಿಂತನೆ ನಡೆದಿರುವುದರಿಂದ ದ್ವಿಭಾಷಾ ಸೂತ್ರ ಜಾರಿಗೆ ಬರುವ ಸಾಧ್ಯತೆಯೂ ಇದೆ.
-ಫಿಲೋಮಿನಾ ಲೋಬೊ, ನಿರ್ದೇಶಕಿ, ಪ್ರೌಢ ಶಿಕ್ಷಣ – ರಾಜು ಖಾರ್ವಿ ಕೊಡೇರಿ