Advertisement

ಶಿಕ್ಷಕ-ಪದವೀಧರರ ಚುನಾವಣೆ: ನಾಳೆ ಮತದಾನ-ಸಕಲ ಸಿದ್ಧತೆ

02:51 PM Jun 12, 2022 | Team Udayavani |

ಬಾಗಲಕೋಟೆ: ಮೂರು ಜಿಲ್ಲೆ, 33 ವಿಧಾನಸಭೆ ಮತಕ್ಷೇತ್ರ ಸಹಿತ ಬಹು ವಿಸ್ತಾರ ಹೊಂದಿರುವ ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಜೂ. 13ರಂದು ಘಟಾನುಘಟಿ ಅಭ್ಯರ್ಥಿಗಳ ರಾಜಕೀಯ ಹಣೆಬರಹ ನಿರ್ಧಾರವಾಗಲಿದೆ.

Advertisement

ಹೌದು, ವಿಧಾನಪರಿಷತ್‌ ಮತಕ್ಷೇತ್ರಗಳಲ್ಲೇ ಅತ್ಯಂತ ವಿಸ್ತಾರ ಎನ್ನಲಾದ ಈ ಎರಡು ಕ್ಷೇತ್ರಗಳು, ಸುಮಾರು 600 ಕಿ.ಮೀಗೂ ಹೆಚ್ಚು ಪ್ರದೇಶ ಹೊಂದಿವೆ. ಈ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು, ಮತದಾರರನ್ನು ಮುಖತಃ ಭೇಟಿ ಮಾಡಿ, ಮತಯಾಚನೆ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಬಹುತೇಕ ಅಭ್ಯರ್ಥಿಗಳು, ತಮ್ಮ ತಮ್ಮ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಶಿಕ್ಷಕ-ಪದವೀಧರ, ವಕೀಲರ ಸಂಘಟನೆಗಳ ಪ್ರಮುಖರನ್ನೇ ನೆಚ್ಚಿಕೊಂಡು ಪ್ರಚಾರ ನಡೆಸುತ್ತಾರೆ. ಇಲ್ಲವೇ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಉದ್ಯಮದ ಸಿಬ್ಬಂದಿ ಬಳಸಿಕೊಂಡು ಗಟ್ಟಿಯಾದ ಪ್ರಚಾರ ಮಾಡುವುದು ವಾಡಿಕೆ. ಸದ್ಯ ಇದೇ ಮಾದರಿಯ ಪ್ರಚಾರ ನಡೆಸಲಾಗಿದೆ.

ಪದವೀಧರ ಕ್ಷೇತ್ರಕ್ಕೆ 11 ಜನ: ಪದವೀಧರ ಮತಕ್ಷೇತ್ರಕ್ಕೆ ಬಿಜೆಪಿಯಿಂದ ಹನುಮಂತ ನಿರಾಣಿ, ಕಾಂಗ್ರೆಸ್‌ನಿಂದ ಸುನೀಲ ಸಂಕ, ಸರ್ವ ಜನತಾ ಪಾರ್ಟಿಯಿಂದ ಜಿ.ಸಿ. ಪಟೇಲ್‌, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಯಲ್ಲಪ್ಪ ಕಲಕುಟ್ರಿ, ಪಕ್ಷೇತರರಾಗಿ ಆದರ್ಶಕುಮಾರ ಪೂಜಾರಿ, ಘಟಿಗೆಪ್ಪ ಮಗದುಮ್ಮ, ದೀಪಿಕಾ ಎಸ್‌, ನಿಂಗಪ್ಪ ಮಾರುತಿ ಭಜಂತ್ರಿ, ಭೀಮಸೇನ ಬಾಳಪ್ಪ ಬಾಗಿ, ಆರ್‌.ಆರ್‌. ಪಾಟೀಲ ಹಾಗೂ ಸುಭಾಸ ರಂಗಪ್ಪ ಕೋಟಿಕಲ್‌ ಸೇರಿ ಒಟ್ಟು 11 ಜನ ಕಣದಲ್ಲಿದ್ದಾರೆ.

ಶಿಕ್ಷಕ ಕ್ಷೇತ್ರಕ್ಕೆ 12 ಜನ ಹುರಿಯಾಳು: ಇನ್ನು ಶಿಕ್ಷಕರ ಮತಕ್ಷೇತ್ರಕ್ಕೆ ಬಿಜೆಪಿಯಿಂದ ಅರುಣ ಶಹಾಪುರ, ಕಾಂಗ್ರೆಸ್‌ನಿಂದ ಪ್ರಕಾಶ ಹುಕ್ಕೇರಿ, ಜೆಡಿಎಸ್‌ನಿಂದ ಚಂದ್ರಶೇಖರ ಲೋಣಿ, ಪಕ್ಷೇತರರಾಗಿ ಎನ್‌.ಬಿ. ಬನ್ನೂರ, ಅಪ್ಪಾಸಾಹೇಬ ಕುರಣಿ, ಶ್ರೀನಿವಾಸಗೌಡ ಗೌಡರ, ಬಸಪ್ಪ ಮಣಿಗಾರ, ಚಂದ್ರಶೇಖರ ಗುಡಸಿ, ಶ್ರೀಕಾಂತ ಪಾಟೀಲ, ಶ್ರೇಣಿಕ ಜಾಂಗಟೆ, ಸಂಗಮೇಶ ಚಿಕ್ಕನರಗುಂದ, ಜಯಪಾಲ ಪಾಟೀಲ ಸೇರಿದಂತೆ ಒಟ್ಟು 12 ಜನ ಸ್ಪರ್ಧೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಮತದಾರರು: ಜಿಲ್ಲೆಯಲ್ಲಿ 25,388 ಶಿಕ್ಷಕ ಮತದಾರರು, ಪದವೀಧರರ ಕ್ಷೇತ್ರಕ್ಕೆ 33,651 ಜನ ಮತದಾರರಿದ್ದಾರೆ. ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಪದವೀಧರರು 5675 ಜನರಿರುವ ಮೂಲಕ ಅತಿಹೆಚ್ಚು ಸಂಖ್ಯೆಯಲ್ಲಿದ್ದರೆ, ಜಮಖಂಡಿ ಕ್ಷೇತ್ರದಲ್ಲಿ 1850 ಜನರಿರುವ ಮೂಲಕ ಅತಿ ಕಡಿಮೆ ಮತದಾರರಿದ್ದಾರೆ. ಇನ್ನು ಶಿಕ್ಷಕರ ಮತಕ್ಷೇತ್ರದಲ್ಲಿ ಬೀಳಗಿ ತಾಲೂಕಿನ ಕೇವಲ 416 ಜನ ಮತದಾರರಿರುವ ಮೂಲಕ ಅತಿ ಕಡಿಮೆ ಮತದಾರರಿರುವ ತಾಲೂಕಾಗಿದ್ದರೆ, ಬಾದಾಮಿ ತಾಲೂಕಿನಲ್ಲಿ (ಗುಳೇದಗುಡ್ಡ ಸಹಿತ) 1647 ಜನ ಮತದಾರರಿದ್ದು, ಅತಿಹೆಚ್ಚು ಮತದಾರರಿದ್ದಾರೆ.

Advertisement

ಜಿಲ್ಲಾಡಳಿತದಿಂದ ತಯಾರಿ: ಶಿಕ್ಷಕರ ಮತ್ತು ಪದವೀಧರರ ಮತಕ್ಷೇತ್ರದ ಚುನಾವಣೆಗೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ತಲಾ 32 ಮತ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲೆಯಾದ್ಯಂತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆ ಕೇಂದ್ರ ಗುರುತಿಸಿದ್ದು, ಅದರಲ್ಲಿ ಅತಿಸೂಕ್ಷ್ಮ ಕೇಂದ್ರಗಳ ಸುತ್ತ ಬಂದೋಬಸ್ತ್, ವಿಡಿಯೋಗ್ರಾಫಿ, ಪೊಲೀಸ್‌ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಜೂ.13ರಂದು ಮತದಾನ ನಡೆಯಲಿದ್ದರೆ, ಜೂ.15ರಂದು ಮತ ಎಣಿಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next